ನಮ್ಮ ಸುತ್ತಮುತ್ತಲಿರುವ ಎಲ್ಲ ವಸ್ತುಗಳಿಂದ, ಎಲ್ಲ ವ್ಯಕ್ತಿಗಳಿಂದ ಕಲಿಯುವುದು ಸಾಕಷ್ಟಿದೆ. ಕೆಲವರು ತಂದೆ, ತಾಯಿ, ಬಂಧು, ಬಳಗ ಎಲ್ಲರೂ ಇದ್ದರೂ ಸಹ ಅನಾಥರಂತೆ ಬದುಕುತ್ತಾರೆ. ಅದಕ್ಕೆ ಹಲವಾರು ತಪ್ಪು ತಿಳುವಳಿಕೆ ಹಾಗೂ ವೈಮನಸ್ಸುಗಳೇ ಕಾರಣ. ಇನ್ನೂ ಕೆಲವರು ಎಲ್ಲರೂ ಇದ್ದರೂ ಅನಾಥಾಶ್ರಮದ ಸದಸ್ಯರಾಗಿರುತ್ತಾರೆ. ಆದರೆ ತನ್ನವರಂತಾ ಯಾರು ಇಲ್ಲದೆ ನಿಜವಾಗಿಯೂ ಅನಾಥರಾಗಿ ಹುಟ್ಟಿದವರು, ಎಲ್ಲರೂ ಇದ್ದು ಅನಾಥರಾಗಿರುವವರಿಗಿಂತ ಬಹಳ ಸಂತೋಷವಾಗಿರುತ್ತಾರೆ ಎಂಬುದು ನನಗೆ ಒಬ್ಬ ಅನಾಥ ಹುಡುಗನಿಂದ ಗೊತ್ತಾಯಿತು. ಅವನನ್ನು ಸ್ನೇಹಿತನಾಗಿ ಪರಿಚಯ ಮಾಡಿಕೊಂಡಾಗ ಅವನಿಂದ ಬದುಕನ್ನು ಪ್ರೀತಿಸುವ ಸ್ವಭಾವ ನನ್ನಲ್ಲಿ ಬಂದಿದೆ. ಅವನನ್ನು ನೋಡಿದಾಗಿನಿಂದ ನಾನು ನನ್ನಿಂದಾಗದ ಕೆಲಸಗಳಿಗೆ ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟಿರುವೆ. ಕಷ್ಟಗಳನ್ನು ಇಷ್ಟಪಟ್ಟು ಎದುರಿಸುವ ಕಲೆ ನನಲ್ಲಿ ಬಂದಿದೆ. ಅವನು ಕೂಡ ನನಗೊಂದು ಸ್ಪೂರ್ತಿ. ಅವನ ನೆನಪಲ್ಲಿ ಈ ಚಿಕ್ಕ ಕವಿತೆ...
" ನಾನು ಯಾವತ್ತೂ ತಾಯಿಯ
ಜೋಗುಳ ಕೇಳಿ ಮಲಗಲಿಲ್ಲ...
ಒಂದಿನಾನೂ ತಂದೆಯ
ಬೈಗುಳ ಕೇಳಿ ಎದ್ದೇಳಲಿಲ್ಲ...
ಏಕಾಂಗಿ ಜಗತ್ತಿನಲ್ಲಿ ನಾನೊಬ್ಬ ಅನಾಥ.
ಆದರೂ ನನಗೇನು ಬೇಜಾರಿಲ್ಲ...
ಸೂರಿಲ್ಲದೇ ಬೀದಿಯ ಮೇಲೆ
ಜೀವನ ಸಾಗಿಸೋರೆಲ್ಲ ನನ್ನ ಬಂಧುಗಳು ...
ದಿಕ್ಕಿಲ್ಲದ ಅನಾಥರೆಲ್ಲ ನನ್ನ ಸೋದರರು...
ಮಾಡದ ತಪ್ಪಿಗೆ ಮರೆಯಲಾಗದ ಶಿಕ್ಷೆಗೆ
ಗುರಿಯಾದವರೇ ನನ್ನ ಸ್ನೇಹಿತರು ...
ಹಸಿವಾದಾಗ ಕರೆದು ಕೈತುತ್ತು
ಕೊಟ್ಟವರೆಲ್ಲ ನನ್ನ ಸೋದರಿಯರು..
ನೊಂದವರೆಲ್ಲ ನನ್ನ ಆತ್ಮೀಯರು...
ಏನೋ ಪುಣ್ಯ ಮಾಡಿದೀರಿ. ಅದಕ್ಕೆ
ಆ ಪಾಪಿ ದೇವರು ನಿಮಗೆಲ್ಲಾ ಕೊಟ್ಟೌನೆ...
ಹೊಟ್ಟೆ ಹಸಿವು ನೀಗದಿದ್ದರೂ
ನನಗೆ ಜ್ಞಾನದ ಹಸಿವು ಸಾಕಷ್ಟು ನೀಗಿದೆ...
ನೊಂದವರ ನಗುವೇ ನನಗೆ ಸ್ಪೂರ್ತಿ...
ದೇವರ ಆರ್ಶೀವಾದವೇ ನನಗೆ ಶಕ್ತಿ...
ನಿಮ್ಮಂತೆ ನಾನು ಸಣ್ಣಪುಟ್ಟ
ಕಷ್ಟಗಳಿಗೆಲ್ಲ ಕುಗ್ಗಲ್ಲ...
ಹೇಡಿಯಂತೆ ನಾನು ಸಾಧಿಸದೆ ಸಾಯಲ್ಲ...
ನಾನು ಅನಾಥನೇ ಆದರೂ ನನಗೇನು ಬೇಜಾರಿಲ್ಲ.
ಯಾಕೇಂದರೆ ನನ್ನೊಂದಿಗೆ ದೇವರಿದ್ದಾನೆ..."