ರಾಣಿ : ಆಧುನಿಕ ಭ್ರಷ್ಟ ಸರ್ಕಾರಗಳ ಮೂಲಮಂತ್ರವೇನು?
ರಾಜಾ : "ಅಭಿವೃದ್ಧಿಯೇ ಮೂಲಮಂತ್ರಾಯ ನಮ:" ಎನ್ನುವ ಬದಲು "ಗುಳುಂ ಗುಳುಂ ಲಂಚಾಯ ನಮ್ಮ: , ಹಗರಣಗಳೆ ಮೂಲ ಬಂಡವಾಳಾಯ ನಮ:" ಎಂಬುದೆ ಭ್ರಷ್ಟ ಸರ್ಕಾರಗಳ ಮೂಲಮಂತ್ರವಾಗಿದೆ.
೨) ರಾಜಾ💕ರಾಣಿ
ರಾಜಾ : "ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜೆಗಳೇ ನಡೆಸುವ ಸರ್ಕಾರ" ಎಂಬ ಹೇಳಿಕೆ ಎಲ್ಲಿ ಮಾಯವಾಗಿದೆ.
ರಾಣಿ : "ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕಾಗಿ, ಭ್ರಷ್ಟರಿಗೋಸ್ಕರ ಭ್ರಷ್ಟರೆ ನಡೆಸುವ ಸರ್ಕಾರ" ಎಂಬ ಮಾತು ನಿಜವಾಗಿರುವಾಗ ನೀ ಕೇಳಿದ ಮಾತು ಸತ್ತು ಸಮಾಧಿ ಸೇರಿದೆ.
೩) ರಾಜಾ💕ರಾಣಿ
ರಾಜಾ : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಾನ್ ಸ್ತ್ರೀ ಇರ್ತಾಳೆ. ಅದೇ ರೀತಿ ಹಾಳಾದ ಪ್ರತಿಯೊಬ್ಬನ ಹಿಂದೆ ಕೂಡ ಒಬ್ಬಳು ಸ್ತ್ರೀ ಇರುತ್ತಾಳಾ?
ರಾಣಿ : ಇದ್ದೇ ಇರ್ತಾಳೆ ಅಂತ ಖಚಿತವಾಗಿ ಹೇಳಕ್ಕಾಗಲ್ಲ. ಆದ್ರೆ ಇರುವ ಸಾಧ್ಯತೆ ಅಧಿಕವಾಗಿದೆ ಎಂಬುದು ಇತ್ತೀಚಿನ ಹುಚ್ಚು ಪ್ರೀತಿಯ ಅವಾಂತರಗಳಿಂದ ಸಾಬೀತಾಗುತ್ತದೆ. ಅಲ್ಲದೆ ಎಲ್ಲ ಅವನತಿಗಳು ಹೆಣ್ಣು, ಮಣ್ಣು, ಹೊನ್ನಿಗಾಗಿಯೇ ಅಂತಾ ಹಿರಿಯರೇ ಹೇಳಿದಾರಲ್ಲ...
೪) ರಾಜಾ💕ರಾಣಿ
ರಾಣಿ : ಈ ಕವಿಗಳೆಲ್ಲ ಸಿಗದಿರುವುದನ್ನು ಕವಿತೆಗಳಲ್ಲಿ ಆಸೆಪಡುತ್ತಾರೆ. ಮತ್ತೆ ಸಿಕ್ಕಿರುವುದನ್ನು ಕಥೆಗಳಲ್ಲಿ ದೂರುತ್ತಾರೆ ಯಾಕೆ?
ರಾಜಾ : ಏಕೆಂದರೆ ಕವಿಗಳು ಇತ್ತ ಕಡೆ ಆಶಾವಾದಿಗಳೂ ಅಲ್ಲ, ಅತ್ತ ಕಡೆ ನಿರಾಶಾವಾದಿಗಳೂ ಅಲ್ಲ. ಒಂದೆಡೆ ಸಂತೃಪ್ತರೂ ಅಲ್ಲ, ಮತ್ತೊಂದೆಡೆ ಅಸಂತೃಪ್ತರೂ ಅಲ್ಲ. ಪ್ರಶಸ್ತಿಯನ್ನು ಪಡೆಯುವ ಆತುರದಲ್ಲಿ ತೋಚಿದ್ದನ್ನು ಗೀಚುತ್ತಾರೆ. ಪ್ರತಿಭೆ ಇಲ್ಲದೆ ಪ್ರಖ್ಯಾತಿ ಪಡೆಯಲು ದೊಡ್ಡ ತತ್ವಜ್ಞಾನಿಯಂತೆ ಏನೇನೋ ಬರೆಯುತ್ತಾರೆ ಅಷ್ಟೇ ...
೫) ರಾಜಾ💕ರಾಣಿ
ರಾಜಾ : ವಿದ್ಯೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವೆಂದ್ಮೇಲೆ ನಾವೇಕೆ ಸರ್ಕಾರಿ ಶಾಲೆ ಬಿಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಕಾಲೇಜ್ ಸೇರಬೇಕು?
ರಾಣಿ : ಖಾಸಗಿ ಕಾಲೇಜ್ನವರು ಕಟ್ಟಿದ ಕಾಲೇಜ್ ಬಿಲ್ಡಿಂಗನ ಸಾಲ ತೀರಿಸಲು ಅವರಿಗೆ ಧನಸಹಾಯ ಮಾಡಿ ಅವರನ್ನು ಸಾಲದಿಂದ ಮುಕ್ತಗೊಳಿಸಲು....
೬) ರಾಜಾ💕ರಾಣಿ
ರಾಣಿ : ನಿನ್ನ ಅಂಕಲ್ ಅವರ ಭಾವಿ ಹೆಂಡ್ತಿಗಾಗಿ ತಾಜಮಹಲ್ ಕಟ್ತಾರೆ ಅಂತಾ ಅನ್ಕೊಂಡ್ರೆ ಅವರು ಮನೆ ಮುಂದೆ ಮೊದಲು ಶೌಚಾಲಯ ಕಟ್ಟುತ್ತಿದ್ದಾರಲ್ಲ ಯಾಕೆ?
ರಾಜಾ : ಬಯಲು ಶೌಚ ಒಂಥರಾ ಬಾಹ್ಯ ಅತ್ಯಾಚಾರವಿದ್ದಂತೆ ಎಂಬ ಸತ್ಯ ಅವರಿಗೆ ಅರಿವಾಗಿದೆ. ಅದಕ್ಕೆ ಶೌಚಾಲಯ ಕಟ್ತಿದಾರೆ....
೭) ರಾಜಾ💕ರಾಣಿ
ರಾಜಾ : ಯಾಕೆ ಜನರು ಆತನನ್ನು ಕಾರಣವಿಲ್ಲದೆ ಹೊಡೆದು ಬಡಿದು ಸಾಯಿಸಿದರು?
ರಾಣಿ : ಯಾಕೆಂದರೆ ಅವನು ಹಾಕಿಕೊಂಡ ಟೀ ಶರ್ಟ ಮೇಲೆ "Please Kill me" ಅಂತಾ ಬರೆದಿತ್ತು.
೮) ರಾಜಾ💕ರಾಣಿ
ರಾಣಿ : ಕೆಲವರು ಯಾಕೆ ಸದನದಲ್ಲಿ ಬ್ಲೂಫಿಲ್ಮ ನೋಡ್ತಾರೆ?
ರಾಜಾ : ಏಕೆಂದರೆ ಸದನದಲ್ಲಿ ಹೆಂಡ್ತಿ ಇರಲ್ಲ. ಅಲ್ಲಿಗೆ ಅವಳು ಬರೋದು ಇಲ್ಲ. ಒಂದು ವೇಳೆ ಮನೆಯಲ್ಲಿ ನೋಡಲು ಹೋಗಿ ಹೆಂಡ್ತಿ ಕೈಯಲ್ಲಿ ಸಿಕ್ಕಾಕೊಂಡ್ರೆ ರಾತ್ರಿ ಚಾಪೆ ಮೇಲೆ ಪಾಪಿ ಥರಾ ಒಂಟಿಯಾಗಿ ಮಲಗಬೇಕಾಗುತ್ತದೆ ಎಂಬ ಭಯದಿಂದ ಸದನಗಳಲ್ಲಿ, ಆಫೀಸ್ ಮೀಟಿಂಗಗಳಲ್ಲಿ ನಿದ್ದೆ ಮಾಡುವುದನ್ನು ಬಿಟ್ಟು ಅನಿಷ್ಟಗಳನ್ನು ನೋಡ್ತಾರೆ...
೯) ರಾಜಾ💕ರಾಣಿ
ರಾಜಾ : ಈ ರಾಜಕೀಯದವರಿಗೆ ಕೊನೆಯಲ್ಲಿ "ಗಳು, ವರು" ಎಂಬ ಬಹುವಚನ ಸೂಚಕಗಳನ್ನು ಬಳಸೋದ್ಯಾಕೆ? ಉದಾಹರಣೆಗಾಗಿ;
ಸಚಿವ ಒಬ್ಬನೇ ಇದ್ದರೂ ಸಚಿವರು.
ಮಂತ್ರಿ ಒಬ್ಬನೇ ಇದ್ದರೂ ಮಂತ್ರಿಗಳು
ರಾಣಿ : ಅವರು ಹೇಳೊದೊಂದು, ಮಾಡೊದೊಂದು. ಅವರು ದ್ವಿಮುಖ ಹಾವಿನಂತೆ ವರ್ತಿಸುತ್ತಾರೆ. ಅವರಿಗೆ ಮತ್ತು ಅವರ ಮುಖವಾಡಗಳೆರಡಕ್ಕೂ ಗೌರವ ನೀಡುವುದಕ್ಕಾಗಿ ಅವರನ್ನು ಬಹುವಚನಗಳಲ್ಲಿ ಕರೆಯುತ್ತಾರೆ.
೧೦) ರಾಜಾ💕ರಾಣಿ
ರಾಜಾ : ನಮ್ಮ ಹಿರಿಯರು ಹುಡುಗರ ಮೇಲೆ ತುಂಬಾ ದೌರ್ಜನ್ಯ ಮಾಡಿದ್ದಾರೆ ಕಣೇ.!
ರಾಣಿ : ಯಾಕೋ? ಮತ್ತೇನೋ ನಿನ್ನ ರಗಳೆ?
ರಾಜಾ : ಹಿರಿಯರು ಹುಡುಗಿಯರಿಗೆ ಹೊಸಬಟ್ಟೆ ಖರೀದಿ ಮಾಡಿ ಸಿಹಿ ತಿನ್ನುವ ಪಂಚಮಿಗಳಂಥ ಹಬ್ಬಗಳನ್ನು ಮಾಡಿದ್ದಾರೆ. ಆದ್ರೆ ಹುಡುಗರಿಗಾಗಿ ಹಳೇ ಹರಕಲು ಬಟ್ಟೆ ಹಾಕಿಕೊಂಡು ಬರೀ ಬಾಯಿ ಬಡಿದುಕೊಂಡು ಸಾಯುವ ಹೋಳಿಯಂಥ ಹಬ್ಬ ಮಾಡಿದ್ದಾರೆ. ಇದು ಅನ್ಯಾಯವಲ್ಲವೇ?
೧೧) ರಾಜಾ💕ರಾಣಿ
ರಾಣಿ : ಚಿತ್ರರಂಗದಲ್ಲಿ ಒಳ್ಳೆ ಅವಕಾಶ ಸಿಗಬೇಕಾದ್ರೆ ಮೊದಲೇನು ಮಾಡಬೇಕು?
ರಾಜಾ : ಹುಡುಗರು ಮೊದಲು ನೆಗೆಟಿವ್ ಪಾತ್ರ ಮಾಡ್ಬೇಕು. ಹುಡುಗಿಯರು ಐಟಂ ಸಾಂಗಿಗೆ ಹೆಚ್ಚೆ ಹಾಕಬೇಕು.
೧೨) ರಾಜಾ💕ರಾಣಿ
ರಾಜಾ : ಭಾರತದ ಏಳ್ಗೆಗೆ ಮಾರಕರಾದವರು ಯಾರು?
ರಾಣಿ : ಸ್ವಾರ್ಥ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಕಳಂಕಿತ ಕಾಮಿ ಸ್ವಾಮಿಗಳು ಹಾಗೂ ಹಗಲೊತ್ತು ಮಲಗುವ ಪ್ರಜೆಗಳು ...
೧೩) ರಾಜಾ💕ರಾಣಿ
ಒಂದಿನ ಶಿಕ್ಷಕರು ಹಂದಿಗಳ ಬಗ್ಗೆ ಕೇವಲವಾಗಿ ಮಾತನಾಡಿದರು. ಆಗ
ರಾಜಾ : ಸರ್ ಹಂದಿಗಳ ಬಗ್ಗೆ ಅಷ್ಟು ಹಗುರವಾಗಿ ಮಾತಾಡಬೇಡಿ. ಅವು ವೇತನ ಪಡೆಯದೆ ಎಲ್ಲ ಗ್ರಾಮಗಳನ್ನು ಸ್ವಚ್ಛಗೊಳಿಸಿ, ಸ್ವಚ್ಛತೆ ಕಾಪಾಡುವ ಸ್ವಯಂಘೋಷಿತ ಗ್ರಾಮ ಸೇವಕರು ...
೧೪) ರಾಜಾ💕ರಾಣಿ
ರಾಣಿ : ದೇವರು ಯಾಕೆ ನಮ್ಮ ಕಣ್ಣಿಗೆ ಕಾಣುವುದಿಲ್ಲ?
ರಾಜಾ : ಈ ಸ್ವಾರ್ಥ ಮನುಷ್ಯರು ದೇವರಿಗೆ ಉದ್ದಿನಕಡ್ಡಿ, ಎಣ್ಣೆದೀಪ ಹಚ್ಚಿ ಹೆದರಿಸುವುದಲ್ಲದೆ ಘಂಟೆ ಬಾರಿಸಿ ನಿದ್ರಾಭಂಗ ಮಾಡಿ, ಕೋಟ್ಯಾಂತರ ಕೋರಿಕೆಗಳನ್ನು ಕೇಳಿ ಪೀಡಿಸುವುದರಿಂದ ಆತ ನಮ್ಮ ಕಣ್ಣಿಗೆ ಕಾಣುವುದಿಲ್ಲ.
೧೫) ರಾಜಾ💕ರಾಣಿ
ರಾಣಿ : ಕಲಿಯುಗದ ಹರಿಶ್ಚಂದ್ರರು ಯಾರು?
ರಾಜಾ: ಮೊಬೈಲ್ ಇಲ್ಲದವರು ಮತ್ತು ಹಗಲಿರುಳು ಕುಡಿಯುವ ಕುಡುಕರು ....
ರಾಣಿ : ಸರ್ಕಾರ ಬಾರಗಳಿಗೆ ಅನುಮತಿ ಕೊಡಲು ಕಾರಣವೇನು?
ರಾಜಾ : ನೊಂದವರ ಮನಶಾಂತಿಗಾಗಿ ಮತ್ತು ಸತ್ಯವಂತರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ....
೧೬) ರಾಜಾ💕ರಾಣಿ
ರಾಜಾ : ಹುಟ್ಟೋಕೂ ಔಷಧಿಯಿದೆ. ಸಾಯೋಕ್ಕೂ ಸಾವಿರಾರು ಔಷಧಿಗಳಿವೆ. ನಗೋಕೆ ನೈಟ್ರಸ್ ಆಕ್ಸೈಡ್ ಇದೆ. ಅಳೋಕೆ ಗ್ಲಿಸರಿನ್ ಇದೆ. ಆದ್ರೆ ಸಂತೋಷದಿಂದ ಇರೋಕೆ ಯಾವುದೇ ಔಷಧಿಗಳಿಲ್ಲ ಯಾಕೆ?
ರಾಣಿ : ಇಲ್ಲ ಅಂತಾ ಯಾರ ಹೇಳಿದ್ದು? ಸಂತೋಷವಾಗಿರೋಕೆ ಸ್ನೇಹ ಪ್ರೀತಿಗಳೆಂಬ ಔಷಧಿಗಳಿವೆ. ಆದ್ರೆ ಈ ಔಷಧಿಗಳನ್ನು ಸರಿಯಾದ ಸಮಯಕ್ಕೆ ಕೊಡೊ ವೈದ್ಯರು ಕಮ್ಮಿಯಿದ್ದಾರಷ್ಟೇ...
೧೭) ರಾಜಾ💕ರಾಣಿ
ರಾಣಿ : ದಿನಾಲು ಸುಪ್ರಭಾತದಂತೆ ಅತ್ಯಾಚಾರದ ಅಪವಾರ್ತೆಗಳು ಕಿವಿಗೆ ಬೀಳುತ್ತಿದ್ದರೂ ಯಾಕೆ ರಕ್ಷಣಾ ವ್ಯವಸ್ಥೆ ಸುಮ್ನಿದೆ?
ರಾಜಾ : ಕಾಮುಕರು ದುಷ್ಟ ಕೌರವರಂತೆ ಬಲಿಷ್ಟರಾಗಿದ್ದಾರೆ. ಭುಜಬಲವುಳ್ಳ ಪಾಂಡವರಂಥ ಪ್ರಜೆಗಳು ತಲೆತಗ್ಗಿಸಿಕೊಂಡು ನೀಸ್ಸಾಯಕರಾಗಿ ಬದುಕುತ್ತಿದ್ದಾರೆ. ರಾಜ್ಯಸೂತ್ರಗಳನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದ್ದ ಸರ್ಕಾರ ದೃತರಾಷ್ಟ್ರನಂತೆ ಕುರುಡಾಗಿದೆ. ಕೊನೆಯಲ್ಲಾದರೂ ಅಬಲೆಯರನ್ನು ರಕ್ಷಿಸಬೇಕಿದ್ದ ಕಾನೂನೆಂಬ ಶ್ರೀಕೃಷ್ಣ ಹಣವಂತರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾನೆ.
೧೮) ರಾಜಾ💕ರಾಣಿ
ರಾಜಾ : ಇಂದಿನ ಶಿಕ್ಷಣ ಪದ್ಧತಿ ಹೇಗಿದೆ?
ರಾಣಿ : ಯಾರನ್ನೋ ಪ್ರೀತಿಸಿ ಇನ್ಯಾರನ್ನೋ ಮದುವೆಯಾಗುವ ರೀತಿಯಿದೆ...
೧೯) ರಾಜಾ💕ರಾಣಿ
ರಾಣಿ : ಮೈಮುರಿದು ಬೆವರು ಸುರಿಸಿ ದುಡಿದು ನಿಯತ್ತಾಗಿ ಸಂಪಾದಿಸಿ ನಿಯತ್ತಾಗಿ ಬದುಕೋ ಬದಲು ಯಾಕೆ ಜನ ರಾಕ್ಷಸರಂತೆ ಇನ್ನೊಬ್ಬರ ಕೊಲೆ ಮಾಡಿ ಬದುಕುತ್ತಿದ್ದಾರೆ?.
ರಾಜಾ : ಆ ರಾಕ್ಷಸರು ವಿಶ್ವೇಶ್ವರಯ್ಯನವರು ಹೇಳಿದ "ದುಡಿ, ಮೈಮುರಿದು ದುಡಿ, ತೃಪ್ತಿಯಾಗೊವರೆಗೆ ದುಡಿ" ಎಂಬ ಮಾತನ್ನು ಅಪಾರ್ಥ ಮಾಡಿಕೊಂಡಿದ್ದಾರೆ.
೨೦) ರಾಜಾ💕ರಾಣಿ
ರಾಜಾ : ಯಾವಾಗಲೂ ಫೇಸ್ಬುಕ್ಕಲ್ಲೇ ಇರ್ತಿಯಲ್ಲಾ ಕೆಲ್ಸಾ ಇಲ್ವಾ?
ರಾಣಿ : 12ನೇ ಶತಮಾನದಲ್ಲಿ ವಚನ ಸಾಹಿತ್ಯ,
16ನೇ ಶತಮಾನದಲ್ಲಿ ದಾಸ ಸಾಹಿತ್ಯ.
ಈಗ 21ನೇ ಶತಮಾನದಲ್ಲಿ ನನ್ನಿಂದ ಫೇಸ್ಬುಕ್ ಸಾಹಿತ್ಯ. ನಾನು ಫೇಸ್ಬುಕ್ ಸಾಹಿತಿ..
೨೧) ರಾಜಾ💕ರಾಣಿ
ರಾಜಾ : ಸ್ವಚ್ಛ ಭಾರತ ಅಭಿಯಾನದ ಬಗ್ಗೆ ನಿನ್ನ ಅಭಿಪ್ರಾಯವೇನು?
ರಾಣಿ : ಮೊದಲು ರಾಜಕಾರಣಿಗಳ ಮನಸ್ಸು ಮತ್ತು ಕೈಗಳು ಸ್ವಚ್ಛವಾಗಲಿ. ಆಮೇಲೆ ತಾನಾಗಿಯೇ ಭಾರತ ಸ್ವಚ್ಛ ಭಾರತವಾಗುತ್ತದೆ.
೨೨) ರಾಜಾ💕ರಾಣಿ
ರಾಜಾ : ಯಾಕೆ ನೀನು ದಿನಪತ್ರಿಕೆಗಳನ್ನು ಓದೊದನ್ನ ಬಿಟ್ಟಿದೀಯಾ?
ರಾಣಿ : ಇವತ್ತಿನ ಸುದ್ದಿ ಪತ್ರಿಕೆಗಳು ಸುದ್ದಿ ಕೊಡ್ತಿಲ್ಲ, ಬರೀ ರದ್ದಿ ಕೊಡ್ತಿವೆ. ಬರೀ ಕೆಟ್ಟ ಸುದ್ದಿ, ಸುಳ್ಳು ಸುದ್ದಿಗಳ ಜೊತೆಗೆ ರಾಜಕಾರಣಿಗಳ ಹುಟ್ಟುಹಬ್ಬಗಳ ಜಾಹೀರಾತುಗಳೇ ಹೆಚ್ಚು. ಬರೀ ರದ್ದಿ...!!