ಸೋತಾಗ ಸ್ಪೂರ್ತಿಯಾಗುವ ಕವನಗಳು - ಬದುಕಿನ ಕವನಗಳು - ನಂಬಿಕೆ ಮತ್ತು ವಿಶ್ವಾಸ ಕವನಗಳು - kannada kavanagalu about life
೧) ಸಾಧನೆಯ ಗಾಳಿಪಟ
ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ
ಅದನ್ನು ಸಾಧಿಸುವ ಹಟ ನಿನ್ನದಾಗಲಿ...
ನಿಶ್ಚಲ ಹೃದಯವೇ ನಿನಗೆ ಬಲವಾಗಲಿ
ನಿಷ್ಕಪಟ ಪರಿಶ್ರಮವೇ ನಿನ್ನ ದೈವವಾಗಲಿ...
ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ
ಆ ನಂಬಿಕೆ ದುಷ್ಟ ಅಹಂಕಾರವಾಗದಿರಲಿ...
ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ
ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ...
ನಿನ್ನ ಕೀರ್ತಿ ಕೇಳಿ ನಿನ್ನ ತುಟಿಗಳು ನಿನ್ನೆದೆಗೆ
ನಾಟುವಂತೆ ನಗು ಬೀರಲಿ...
ಅನ್ಯರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ
ಇದೇ ನಿನ್ನ ಸಾಧನೆಯ ಗಾಳಿಪಟವಾಗಲಿ...
೨) ಬಾಳು ಬರೀ ಗೋಳಲ್ಲ... - Kannada Kavanagalu about Life
ಬಡತನವಿದ್ದರೂ ಕುಗ್ಗದಿರು
ಸಿರಿತನವಿದ್ದರೂ ಹಿಗ್ಗದಿರು
ಏನಾದರೂ ಬದುಕುವ ಛಲವನ್ನು ಬಿಡದಿರು.
ಬಡತನವೆಂದು ಶಾಪವಲ್ಲ
ಸಿರಿತನವೆಂದು ವರವಲ್ಲ
ಜೀವನದಲ್ಲಿ ಯಾವುದು ಶಾಶ್ವತವಲ್ಲ...
ಸೋಲಿಗೆ ಹೆದರಿ ಸಾಯದಿರು
ಗೆಲುವಿಗೆ ತುಂಬಾ ಖುಷಿ ಪಡದಿರು
ಏನಾದರೂ ಹತಾಶಭಾವ ತಳೆಯದಿರು
ಸೋಲೆಂದು ಶಿಕ್ಷೆಯಲ್ಲ
ಗೆಲುವೆಂದು ರಕ್ಷೆಯಲ್ಲ
ಹೋರಾಟದ ಬದುಕಲ್ಲಿ ಯಾವುದು ನಿಶ್ಚಯವಲ್ಲ...
ಸಂಕಷ್ಟ ಬಂದಾಗ ಅಳದಿರು
ಸಂತಸ ಬಂದಾಗ ಬಹಳ ನಗದಿರು
ಏನಾದರೂ ಬದುಕಿನ ಮೇಲೆ ಜಿಗುಪ್ಸೆ ಪಡದಿರು.
ಸಂಕಷ್ಟವೆಂದು ಸವಾಲಲ್ಲ
ಸಂತಸವೆಂದು ಅಚಲವಲ್ಲ
ನಮ್ಮಯ ಈ ಬಾಳು ಬರೀ ಗೋಳಲ್ಲ...
೩) ಭಾರವಾದ ಬದುಕು : Kannada Kavanagalu About Life
ಭಾರವಾಗುತ್ತಿದೆ ನಮ್ಮ ಸುಂದರವಾದ ಬದುಕು
ಹತ್ತಿರವಾಗುತ್ತಿದೆ ದು:ಖ ದುಮ್ಮಾನಗಳ ಸರಕು...
ಬದುಕು ಹರಿದರೂ ಮರೆಯಾಗುತ್ತಿಲ್ಲ ಥಳಕು
ಮೂಗು ತೂರಿಸುತ್ತಿದೆ ಸಂಕಷ್ಟದ ಮಿನುಕು...
ಏನಾದರೂ ನೀ ಕಾಣು ಧೈರ್ಯದ ಬೆಳಕು
ಬಿಟ್ಟು ಬಿಡು ನಿನ್ನ ಆಡಂಬರದ ಹುಳುಕು...
ಕೆಟ್ಟ ಕೆಲಸಕ್ಕೆ ನೀ ಕೊಡ್ಬೇಡ ಕುಮ್ಮಕ್ಕು
ಸ್ವಲ್ಪ ಕಮ್ಮಿ ಮಾಡ್ಕೋ ನಿನ್ನ ಆ ಧೀಮಾಕು...
ನೀ ತೊಳೆದುಕೋ ನಿನ್ನ ಮನದ ಕೊಳಕು
ಸೋಲಿನಲ್ಲೂ ಗೆಲುವಿನ ದಾರಿಯ ಹುಡುಕು...
ಯಶಸ್ಸಿನ ಕಲ್ಲಾಸಿಗೆಗೆ ನಿನ್ನ ಮನವ ನೂಕು
ದುರಾಸೆಗೆ ಹೇಳು "ಬೇಡಪ್ಪ ಸಾಕು"...
ಭವಿಷ್ಯದ ಬಾವಿಗೆ ನೀ ಯೋಚಿಸಿ ಇಣುಕು
ಆಗಲೇ ನೋಡು ನಿನ್ನದು ನೆಮ್ಮದಿಯ ಬದುಕು...
೪) ಮನುಜ ಮತದ ಹೂಬುಟ್ಟಿ
ನಿಮ್ಮ ಮನಬಂಧ ಮುಕ್ತವಾಗಲಿ
ಅಹಂಕಾರದ ಕದ ತಟ್ಟಿ...
ನಿಮ್ಮ ಮನ ಮಿನುಗುತಿರಲಿ
ದುರಾಸೆಯ ಕುದುರೆ ಕಟ್ಟಿ...
ನಿಮ್ಮ ಮನ ಬೆಳಗುತಿರಲಿ
ಪ್ರೀತಿ ಅಂತ:ಕರಣ ಹುಟ್ಟಿ
ನಿಮ್ಮ ಮನ ನಗುತಿರಲಿ
ರಾಗದ್ವೇಷಗಳ ನೆತ್ತಿ ಕುಟ್ಟಿ...
ನಿಮ್ಮ ಮನ ಮೆರೆಯುತಿರಲಿ
ಅಮಾನವೀಯತೆ ದೈತ್ಯನ ಮೆಟ್ಟಿ
ನಿಮ್ಮ ಮನವಾಗದಿರಲಿ
ಸ್ವಾರ್ಥ ತುಂಬಿದ ಕಸದ ತೊಟ್ಟಿ...
ನಿಮ್ಮ ಮನ ಹಸನಾಗಲಿ
ಉದಯವಾಗಿ ಮನುಜಮತದ ಹೂಬುಟ್ಟಿ...