ಸಾಮಾನ್ಯವಾಗಿ ಎಲ್ಲರಿಗೂ ಶ್ರೀಮಂತರಾಗುವ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪೇನಿಲ್ಲ. ಜೀವನದಲ್ಲಿ ಯಶಸ್ಸು ಅನ್ನೋದು ಸರಿಯಾದ ದಿಶೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟವರಿಗೆ ಮಾತ್ರ ಸಿಗುತ್ತದೆ. ಅದೃಷ್ಟವನ್ನು ನಂಬಿಕೊಂಡು ಕಾಲ ಕಳೆಯುವ ಮೂರ್ಖರಿಗೆ ಯಶಸ್ಸು ಹಗಲುಗನಸಿನಲ್ಲೂ ಸಿಗುವುದಿಲ್ಲ. ಸಾಧಿಸುವ ಹಂಬಲದಲ್ಲಿ ಹೊಸ ವರ್ಷಕ್ಕಿಂತ ಮುಂಚೆ ಹತ್ತಾರು ನಿಯಮಗಳನ್ನು ಮಾಡಿಕೊಳ್ಳುತ್ತೇವೆ. ಆದರೆ ಬಹುಬೇಗನೆ ಅವುಗಳನ್ನು ಮರೆತು ಮುಂದೆ ಸಾಗುತ್ತೇವೆ. ಕೊನೆಗೆ ಹೊಸ ವರ್ಷದ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಆದರೆ ನಾವು ಒಂಚೂರು ಬದಲಾಗಲ್ಲ. ನಮ್ಮ ಯೋಚನೆಗಳು ಬದಲಾಗಲ್ಲ. ನಾವು ನಮ್ಮ ಜೀವನದಲ್ಲಿ ಮೂರು ಬದಲಾವಣೆಗಳನ್ನು ಮಾಡಿಕೊಂಡರೆ ಖಂಡಿತವಾಗಿಯೂ ನಾವು ಯಶಸ್ಸಿನ ಹಾದಿಯಲ್ಲಿರುತ್ತೇವೆ. ಆ ಬದಲಾವಣೆಗಳು ಇಂತಿವೆ ;
೧) ಪರರ ನಿಂದನೆಯನ್ನು ಮಾಡಬೇಡಿ ;
ದಿನಾ ಬೆಳಗಾದಾಗಿನಿಂದ ಹಿಡಿದು ರಾತ್ರಿ ಹಾಸಿಗೆ ಸೇರುವ ತನಕ ನಾವು ಪರರನ್ನು ನಿಂದಿಸುತ್ತಲೇ ಇರ್ತೀವಿ. ನೇರವಾಗಿ ನಿಂದಿಸಲು ಸಾಧ್ಯವಾಗದಿದ್ದರೆ ಮನಸ್ಸಲ್ಲೇ ಮೂಗು ಮುರಿದು ಬೆನ್ನ ಹಿಂದೆ ಪರರನ್ನು ವಿನಾಕಾರಣ ತೆಗಳುತ್ತೇವೆ ಅಲ್ವಾ? ಒಂದು ಸಲ ಶಾಂತ ಚಿತ್ತದಿಂದ ಯೋಚಿಸಿ. ನೀವು ಪರರನ್ನು ನಿಂದಿಸುವುದರಿಂದ ನಿಮಗಾದ ಲಾಭಗಳೇನು? ಪರರನ್ನು ನಿಂದಿಸಿ ನಿಮಗೆ ಸಿಕ್ಕಿದ್ದೇನು? ಬೇರೆಯವರ ಬಗ್ಗೆ ಕೊಂಕು ಮಾತನಾಡಿ ನೀವು ಸಂಪಾದಿಸಿದ್ದೇನು? ಪರ ನಿಂದನೆ ಮಾಡಿದಷ್ಟು ನಿಮ್ಮಲ್ಲಿ ಕೆಟ್ಟ ಗುಣಗಳು ಹೆಚ್ಚಾಗುತ್ತವೆ. ನಿಮ್ಮ ಮಾನಸಿಕ ನೆಮ್ಮದಿ ನಾಶವಾಗುತ್ತದೆ. ನಿಮ್ಮ ನಿಂದನೆಯಿಂದ ನಿಮಗೆ ಶಕುನಿಯಂಥ ಗೆಳೆಯರು ಸಿಗುತ್ತಾರೆ. ಇದರಿಂದ ನಿಮಗೆ ಹಿತಶತ್ರುಗಳು ಹೆಚ್ಚಾಗಿ ನಿಮ್ಮ ಅವನತಿಗೆ ನೀವೇ ಕಾರಣಕರ್ತರಾಗುತ್ತಿರಿ. ಆದ್ದರಿಂದ ಈ ಕ್ಷಣದಿಂದಲೇ ಪರನಿಂದನೆ ಮಾಡುವುದನ್ನು ಬಿಟ್ಟು ಬಿಡಿ. ನಿಮ್ಮ ಅಮೂಲ್ಯ ಸಮಯವನ್ನು ನಿಮ್ಮ ಏಳ್ಗೆಗಾಗಿ ಬಳಸಿಕೊಳ್ಳಿ.... ಜೀವನದಲ್ಲಿ ಸಾಧಿಸುವುದು ಸಾಕಷ್ಟಿದೆ ಎಂಬುದನ್ನು ಮರೆಯಬೇಡಿ....
೨) ಹಳೇ ನೆನಪುಗಳಿಂದ ಹೊರಬನ್ನಿ :
ನೆನಪುಗಳು ಯಾವಾಗಲೂ ನಂಜಾಗಿ ಕಾಡುತ್ತವೆ. ನೆನಪುಗಳಿಂದ ಕೆಲವು ಕ್ಷಣ ಖುಷಿ ಸಿಗಬಹುದು. ಆದರೆ ಬಹಳಷ್ಟು ಸಲ ನೆನಪುಗಳಿಂದ ದು:ಖವೇ ಸಿಗುತ್ತದೆ. ಎಲ್ಲ ತರಹದ ನೆನಪುಗಳಿಂದ ಹೊರಬನ್ನಿ. ಆದದ್ದಲ್ಲೆವ ಮರೆತು ಪ್ರತಿದಿನ ಹೊಸ ಜೀವನವೆಂದು ತಿಳಿದು ಮುಂದೆ ಸಾಗಿ. ಕೆಲ್ಸಕ್ಕೆ ಬಾರದ ನೆನಪುಗಳನ್ನು ಎದೆಲಿಟ್ಟುಕೊಂಡು ಕೊರಗಿ ಏನು ಪ್ರಯೋಜನ?. ನೆನಪು ಒಳ್ಳೆಯದಿರಲಿ ಅಥವಾ ಕೆಟ್ಟದಾಗಿರಲಿ ಅದನ್ನು ನೆನಪಲ್ಲಿಟ್ಟುಕೊಳ್ಳುವ ಅವಶ್ಯಕತೆ ಏನಿಲ್ಲ ಅಲ್ವಾ? ಹತ್ತನೇ ಕ್ಲಾಸಲ್ಲಿ ಫೇಲಾಗಿದ್ದೆ ಅಥವಾ 95% ಅಂಕ ಪಡೆದಿದ್ದೆ ಎಂದೇಳಿ ಈಗ ಜಂಭ ಕೊಚ್ಚಿಕೊಂಡೇನು ಲಾಭ? ನೆನಪುಗಳಿಂದ ನೆಮ್ಮದಿ ಸಿಗುವುದಿಲ್ಲ. ಆದ್ದರಿಂದ ನೆನಪುಗಳಿಂದ ಹೊರಬನ್ನಿ. ಪ್ರತಿದಿನ ಹೊಸದಿನವೆಂದು ತಿಳಿದು ಹೊಸ ಮೈಂಡಸೆಟನೊಂದಿಗೆ ನೆಮ್ಮದಿಯಾಗಿ ಕೆಲ್ಸ ಮಾಡಿ. ನೆನಪುಗಳಿಗೆ ಎಳ್ಳುನೀರು ಬಿಟ್ಟು ಜೀವನದಲ್ಲಿ ಪ್ರತಿದಿನ ಏನಾದರೂ ಹೊಸದನ್ನು ಸಾಧಿಸಲು ಪ್ರಯತ್ನಿಸಿ. ಸಾಧಿಸಲು ಸಾಧ್ಯವಾಗದಿದ್ದರೆ ಪ್ರತಿದಿನ ಏನಾದರೂ ಒಂದು ಹೊಸದನ್ನು ಕಲಿಯಲು ಪ್ರಯತ್ನಿಸಿ. ನೀವು ಹೊಸದನ್ನು ಕಲಿತಾಗಲೇ ಹೊಸದನ್ನು ಸಾಧಿಸುತ್ತಿರಿ. ನಿಜವಾದ ಕಲಿಕೆ ಕಾಲೇಜ ಬಿಟ್ಟ ನಂತರವೇ ಶುರುವಾಗೋದು ಎಂಬುದು ನೆನಪಿರಲಿ....
೩) ನೆಪಗಳನ್ನು ಹೇಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ :
ನಾವು ನಮ್ಮಿಂದ ಸಾಧ್ಯವಾಗದ ಎಲ್ಲ ಕೆಲಸಗಳಿಗೆ ಒಂದಲ್ಲ ಒಂದು ನೆಪ ಹೇಳುತ್ತೇವೆ. ನಮಗೆ ವಹಿಸಿದ ಕೆಲಸ ಸ್ವಲ್ಪ ಕಷ್ಟವಾಗುವಂತೆ ಕಂಡರೆ ಯಾವುದಾದರೂ ಒಂದು ನೆಪ ಹೇಳಿ ಆ ಕೆಲಸವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇವೆ. ಮೈಮುರಿದು ದುಡಿದಾಗಲೇ ಮನೆತುಂಬ ಐಸಿರಿ ಬರುವುದು. ಹಾಗೇ ಸುಮ್ಮನೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಕಾಲಿಡಲ್ಲ. ಕಷ್ಟಪಟ್ಟು ಬೆವರು ಸುರಿಸಿದಾಗಲೆ ದುಡ್ಡು ನಮ್ಮ ಕೈಗೆ ಮುತ್ತಿಡೋದು. ನೆಪಗಳನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಂಡು ದೂರ ಓಡುವುದರಿಂದ ನಾವೇ ಮೈಗಳ್ಳರಾಗುತ್ತೇವೆ, ಆಲಸಿಗಳಾಗುತ್ತೇವೆ. ಯಶಸ್ಸು ಮೈಗಳ್ಳರ ಸ್ನೇಹವನ್ನು ತಪ್ಪಿಯೂ ಮಾಡುವುದಿಲ್ಲ. ಆದ್ದರಿಂದ ನೆಪಗಳನ್ನು ಹೇಳುವುದನ್ನು ಮತ್ತು ಹುಡುಕುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ನಿಮ್ಮಿಂದ ಸಾಧ್ಯವಾಗದ ಅಪೂರ್ಣ ಕೆಲಸಗಳಿಗೆ ಬೇರೆಯವರನ್ನು ನಿಂದಿಸಬೇಡಿ. ನಿಮ್ಮಿಂದಾಗದ ಕೆಲಸಗಳಿಗೆ ನೆಪಗಳನ್ನು ಹೇಳಿ ನಿಮಗೆ ನೀವೇ ವಂಚನೆ ಮಾಡಿಕೊಳ್ಳಬೇಡಿ. ಕುಂಟು ನೆಪಗಳನ್ನು ಹೇಳಿ ಜಾರಿಕೊಳ್ಳುವುದರ ಬದಲು ನಿಮ್ಮ ಜವಾಬ್ದಾರಿಗಳನ್ನು ನೀವೇ ಹೊತ್ತುಕೊಂಡು ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ....
ಈ ಮೂರು ಕೆಲಸಗಳನ್ನು ಮಾಡುವುದರಿಂದ ತಕ್ಷಣವೇ ನಿಮಗೆ ಯಶಸ್ಸು ಸಿಗಲಿಕ್ಕಿಲ್ಲ. ಆದರೆ ಮುಂದೆ ಒಂದಲ್ಲ ಒಂದಿನ ನಿಮಗೆ ನೀವು ಬಯಸಿದ ಯಶಸ್ಸು ಸಿಕ್ಕೆ ಸಿಗುತ್ತದೆ.. ಗುಡ್ ಲಕ್, ದೊಡ್ಡ ಕನಸುಗಳನ್ನು ಕಾಣಿ, ಧೈರ್ಯವಾಗಿ ಮುನ್ನುಗ್ಗಿ ....