ಇತ್ತೀಚಿಗೆ ನನಗೆ ತುಂಬಾನೆ ಬೇಜಾರು
ಯಾಕಂದ್ರೆ ಈ ಭೂಮಿಯೀಗ ಬಂಜರು.
ಎಲ್ಲಿ ಕಟ್ಟಿಕೊಳ್ಳಲಿ ನನ್ನ ನೆಮ್ಮದಿಯ ಸೂರು?
ನನಗೆ ಎಲ್ಲಿಯೂ ಕಾಣುತ್ತಿಲ್ಲ
ನಿಜವಾದ ಸ್ನೇಹ ಪ್ರೀತಿ ಒಂಚೂರು...
ಯಾರನ್ನು ನಂಬಲಿ?
ಯಾರನ್ನು ಬಿಡಲಿ?
ಯಾರನ್ನು ಪ್ರೀತಿಸಲಿ?
ಯಾರನ್ನು ದ್ವೇಷಿಸಲಿ?
ಯಾರಿಗಾಗಿ ಬದುಕಲಿ?
ಯಾರಿಗಾಗಿ ಸಾಯಲಿ?
ಯಾವುದನ್ನು ನೆನೆಯಲಿ?
ಯಾವುದನ್ನು ಮರೆಯಲಿ?
ಯಾರೊಡನೆ ಬದುಕ ಸಾಗಿಸಲಿ?
ನನ್ನ ಬದುಕಾಗಿದೆ ಈಗ ಬಂಜರು
ಅದಕ್ಕೆ ನನಗೆ ಎಲ್ಲರ ಮೇಲೆ
ವಿಪರೀತ ಬೇಜಾರು...
೨) ಲಂಚಾವತಾರ...
ಲಂಚಾವತಾರ ತುಂಬಾ ಭಯಂಕರ
ಲಂಚಕ್ಕೆ ಬೆಚ್ಚಿ ಬಿದ್ದ ಶಿವಶಂಕರ
ನೀವಾಗದಿರಿ ಲಂಚದ ಕಿಂಕರ
ಭ್ರಷ್ಟರಿಗೆ ಹೇಳಿರಿ ದೊಡ್ಡ ಧಿಕ್ಕಾರ...
ತೋರಿ ದೇಶದೆಡೆಗೆ ಸ್ವಲ್ಪ ಮಮಕಾರ
ಸರ್ಕಾರಿ ಕೆಲ್ಸದಿಂದ ಆಗ್ಬೇಡಿ ಸಾಹುಕಾರ
ಕೇಳಿಸಿರಿ ಸ್ವಚ್ಛ ಕರ್ಮದ ಓಂಕಾರ
ಮೊಳಗಿಸಿರಿ ನಿರ್ಮಲ ಭಾರತದ ಝೇಂಕಾರ...
ಸ್ವಚ್ಛವಾಗಿದ್ದರೆ ಆಯ್ದ ಸರ್ಕಾರ
ಮಾತ್ರ ಹಾಕಿರಿ ಅದಕ್ಕೆ ಜೈಜೈಕಾರ
ಸರ್ಕಾರವೇ ನಡೆಸಿದರೆ ಭ್ರಷ್ಟಾಚಾರ
ತೋರಿಸಿರಿ ಪ್ರಜಾಪ್ರಭುತ್ವದ ಅಧಿಕಾರ...
ಮಾಡಿರಿ ಅಭಿವೃದ್ಧಿಯ ಕನಸಿನ ಸಾಕಾರ
ರಾತ್ರಿಯಲ್ಲೂ ನಡೆಯಲಿ ಸ್ವಚ್ಛ ವ್ಯವಹಾರ
ಅಡ್ಡದಾರಿ ವಿರುದ್ಧ ಎತ್ತಿ ಚಕಾರ
ಮೇಲೆ ಬನ್ನಿ ಸುರಿಸಿ ನಿಮ್ಮ ಸ್ವಂತ ಬೆವರ...
೩) ಸಮಯ ಸಾಧಕರು...
"ಅನುಭವವಿರುವಲ್ಲಿ ಅಮೃತವಿದೆ"
ಎಂದರು ಬಲ್ಲವರು...
"ಅತೀಯಾದರೆ ಅಮೃತವೂ ವಿಷ"
ಎಂದರು ದಿವಿಜರು...
"ಮಿತವಾದರೆ ವಿಷವೂ ಅಮೃತ"
ಎಂದರು ಮಹಾಂತರು...
"ದುರಾಸೆಯೆ ದು:ಖಕ್ಕೆ ಮೂಲ"
ಎಂದರು ಜ್ಞಾನಿಯರು...
"ಪ್ರೀತಿಗೆ ಎಂದೂ ಸಾವಿಲ್ಲ"
ಎಂದರು ಪ್ರೇಮಿಯರು...
"ನೀವು ಸಾಕಾಗುವಷ್ಟು ಹೇಳಿ.
ಆದರೆ ನಾವು ಸತ್ರೂ ಕೇಳಲ್ಲ"
ಎಂದರು ಗಾವಿಲರು...
"ಹೇಳೋದು ಸುಲಭ. ಆದರೆ ಆಚರಣೆ
ದುರ್ಲಭವೆಂದು ತಿಳಿದು ಸುಮ್ಮನಿರಿ"
ಎಂದರು ಸಮಯಸಾಧಕರು...