ಕೆಲವು ಸಲ ನಮ್ಮ ಕೆಲಸವಾಗಬೇಕಾದರೆ ನಾವು ಕತ್ತೆಗಳ ಕಾಲನ್ನು ಹಿಡಿಯಲೇಬೇಕಾಗುತ್ತದೆ. ಯಾಕೆಂದರೆ ಬೇರೆ ದಾರಿಯಿರುವುದಿಲ್ಲ. ಕೆಲವು ಸಲ ಎಷ್ಟೇ ದುಡ್ಡನ್ನು ಸುರಿದರೂ ಸಹ ನಮ್ಮ ಕೆಲಸಗಳು ಕೈಗೂಡುವುದಿಲ್ಲ. ಅಂಥ ಸಮಯದಲ್ಲಿ ನಾವು ಚಾಣಕ್ಯ ಕಲಿಸಿ ಕೊಟ್ಟ ನಾಲ್ಕು ಆಕರ್ಷಣಾ ಸೂತ್ರಗಳನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ ಅನಿಸುತ್ತದೆ...
೧) ಆಸೆಬುರುಕರ ಆಕರ್ಷಣಾ ಸೂತ್ರ :
ಹೆಚ್ಚಾಗಿ ಆಸೆಬುರುಕರು ಕಪಟಿಗಳಾಗಿರುತ್ತಾರೆ. ಅವರು ಬೇರೆಯವರ ಹಣ, ಹೆಂಡ, ಅಂತಸ್ತಿನ ಹಿಂದೆ ಅಲೆಯುತ್ತಿರುತ್ತಾರೆ. ಸದ್ಯಕ್ಕೆ ಬಹುಪಾಲು ಜನ ಸಂಪೂರ್ಣ ಸ್ವಾರ್ಥಿಗಳಾಗಿದ್ದಾರೆ. ಆ ಸ್ವಾರ್ಥದಿಂದಲೇ ಅವರಲ್ಲಿ ಆಸೆಬುರುಕತನ ಅಧಿಕವಾಗಿದೆ. ಸ್ವಾರ್ಥಿಗಳು ಸುಮ್ಮನೆ ಯಾರಿಗೂ ಸಹಾಯ ಮಾಡುವುದಿಲ್ಲ. ಸ್ವಾರ್ಥಿಗಳು ಸತ್ಕಾರ್ಯಗಳಿಗೆ ಸಾಥ್ ಕೊಡುವುದಿಲ್ಲ. ಇಂಥ ಆಸೆಬುರುಕರಿಂದ ನಮ್ಮ ಕೆಲಸವನ್ನು ಮಾಡಿಸಿಕೊಳ್ಳಬೇಕಾದರೆ ನಾವು ಅವರ ಸಣ್ಣಪುಟ್ಟ ಚಿಲ್ರೆ ಆಸೆಗಳನ್ನು ಈಡೇರಿಸಬೇಕಾಗುತ್ತದೆ. ಈ ಸ್ವಾರ್ಥಿಗಳಿಗೆ ಸ್ವಲ್ಪ ಸಂಪತ್ತಿನ ಆಸೆ ತೋರಿಸಿದರೆ ಸಾಕು, ಅವರು ಎಲ್ಲ ಕೆಲಸಗಳನ್ನು ನಿಯತ್ತಿನಿಂದ ಮಾಡುತ್ತಾರೆ. ಅದಕ್ಕಾಗಿ ಆಸೆಬುರುಕರಿಂದ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರಲ್ಲಿ ಹೆಚ್ಚಿನ ಆಸೆಗಳನ್ನು ಹುಟ್ಟಿಸಬೇಕು...
೨) ಅಹಂಕಾರಿಗಳ ಆಕರ್ಷಣಾ ಸೂತ್ರ :
ಸಾಮಾನ್ಯವಾಗಿ ಅಹಂಕಾರಿಗಳು ದುರಹಂಕಾರಿಗಳಾಗಿರುತ್ತಾರೆ. ಅವರಿಗೆ ಮೈತುಂಬ ಒಣ ಜಂಭವಿರುತ್ತದೆ. ಅವರಿಂದ ಕೆಲಸ ಮಾಡಿಸಿಕೊಳ್ಳುವುದು ಸುಲಭದ ಮಾತಲ್ಲ. ಅಹಂಕಾರಿಗಳ ಜೊತೆ ದೋಸ್ತಿ, ದುಶ್ಮನಿ ಎರಡೂ ಒಳ್ಳೆಯದಲ್ಲ. ಈ ಅಹಂಕಾರಿಗಳಿಗೆ ಹೊಗಳಿಕೆಯ ಹಸಿವಿರುತ್ತದೆ. ಪ್ರತಿಕ್ಷಣ ಇವರು ತಮ್ಮ ಹೊಗಳಿಕೆಗಳನ್ನು ಕೇಳಲು ಹಂಬಲಿಸುತ್ತಾರೆ. ಇಂಥ ಅಹಂಕಾರಿ ವ್ಯಕ್ತಿಗಳನ್ನು ಸುಮ್ಮನೆ ಹೊಗಳಿದರೆ ಸಾಕು ನಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಡುತ್ತಾರೆ. ಅಹಂಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರನ್ನು ಹೊಗಳಿ ಅಟ್ಟಕ್ಕೇರಿಸಬೇಕು. ಅರ್ಥಾತ್ ಅವರಿಗೆ ಹವಾ ಹಾಕಬೇಕು...
೩) ಮೂರ್ಖರ ಆಕರ್ಷಣಾ ಸೂತ್ರ :
ಮೂರ್ಖರಿಗೆ ಸ್ವಂತ ಬುದ್ಧಿಯಿರುವುದಿಲ್ಲ. ಜೊತೆಗೆ ಸಮಾಜದ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಅದಕ್ಕಾಗಿ ಇವರು ಬೇರೆಯವರಿಂದ ಬಿಟ್ಟಿ ಬುದ್ಧಿವಾದವನ್ನು ನಿರೀಕ್ಷಿಸುತ್ತಾರೆ. ಅದಕ್ಕಾಗಿ ಏನನ್ನೂ ಯೋಚಿಸದೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬಡಬಡಿಸುತ್ತಾರೆ. ಇಂಥವರಿಗೆ ಸ್ವಲ್ಪ ಬಿಟ್ಟಿಯಾಗಿ ಬುದ್ಧಿವಾದ ಹೇಳಿದರೆ ಸಾಕು ಇವರು ಗುಲಾಮರಂತೆ ನಮ್ಮ ಕೆಲಸಗಳನ್ನು ಚಾಚು ತಪ್ಪದೆ ಮಾಡುತ್ತಾರೆ. ಮೂರ್ಖರಿಂದ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದರೆ ಅವರಿಗೆ ಬಿಟ್ಟಿಯಾಗಿ ಬುದ್ಧಿವಾದವನ್ನು ಹೇಳಬೇಕು...
೪) ಜ್ಞಾನಿಗಳ ಆಕರ್ಷಣಾ ಸೂತ್ರ :
ಸುಳ್ಳು ನಾಟಕಗಳು, ಗಿಮಿಕಗಳು ಸಜ್ಜನರ ಮುಂದೆ ಪ್ರಯೋಜನಕ್ಕೆ ಬರುವುದಿಲ್ಲ. ಜ್ಞಾನಿಗಳು, ಸಜ್ಜನರು ಸತ್ಯಕ್ಕೆ ಮಾತ್ರ ಸಾಥ್ ಕೊಡುತ್ತಾರೆ. ಅದಕ್ಕಾಗಿ ಸಜ್ಜನರಿಂದ, ಜ್ಞಾನಿಗಳಿಂದ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದರೆ ನಾವು ಸತ್ಯವಂತರಾಗಬೇಕಾಗುತ್ತದೆ. ಯಾವುದೇ ಕಪಟ ವಂಚನೆಗಳಿಲ್ಲದೆ ಸತ್ಯ ನುಡಿದು ಅವರ ಭಾವನೆಗಳನ್ನು ಗೌರವಿಸಬೇಕಾಗುತ್ತದೆ...
ಈ ನಾಲ್ಕು ಆಕರ್ಷಣಾ ಸೂತ್ರಗಳನ್ನು ನಾನು ಚಾಣಕ್ಯ ನೀತಿಗಳಿಂದ ಕಲಿತಿರುವೆ. ಕೆಲವನ್ನು ಈಗಾಗಲೇ ಪ್ರಯೋಗಿಸಿರುವೆ. ಕೆಲವನ್ನು ಪ್ರಯೋಗಿಸಲು ಇನ್ನೂ ಅವಕಾಶ ಸಿಕ್ಕಿಲ್ಲ. ಕೊನೆಯದಾಗಿ ಚಾಣಕ್ಯ ಹೇಳಲು ಮರೆತ ಮಾತೊಂದಿದೆ, "ಹುಡುಗರಿಂದ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರ ಮನಸ್ಸಿಗೆ ಇಷ್ಟವಾಗುವಂತೆ ನಡೆದುಕೊಳ್ಳಬೇಕಾಗುತ್ತದೆ. ಅದೇ ಹುಡುಗಿಯರಿಂದ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರ ಮನಸ್ಸನ್ನು ಗೆಲ್ಲಬೇಕಾಗುತ್ತದೆ". ನನಗೆ ತಿಳಿದ ಮಟ್ಟಿಗೆ ಇವೆಲ್ಲ ಆಕರ್ಷಣಾ ಸೂತ್ರಗಳನ್ನು ನೀವು ನಿಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಿಮಗೆ ತಿಳಿಯದೇನೆ ಪ್ರಯೋಗಿಸುತ್ತೀರಿ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ ಮಾಡಿ...