ನನಗೆ ನಿಮ್ಮ ಜಗತ್ತನ್ನು ಗೆಲ್ಲುವ ಆಸೆಯಿಲ್ಲ. ಆದರೆ ನನಗೆ ನನ್ನ ಮನಸ್ಸಲ್ಲಿರುವವಳ ಮನಸ್ಸನ್ನು ಗೆಲ್ಲುವ ಮಹದಾಸೆಯಿದೆ. ಏಕೆಂದರೆ ಅವಳೇ ನನ್ನ ಜಗತ್ತು. ಪ್ರಪಂಚವನ್ನು ಗೆಲ್ಲಲು ತೋಳ್ಬಲ ಬೇಕು. ಆದರೆ ನಮ್ಮ ಮನಸ್ಸಲ್ಲಿರುವವರನ್ನು ಗೆಲ್ಲಲು ತಾಳ್ಮೆ ಎಂಬ ತಪಸ್ಸಿನ ಜೊತೆಗೆ ನಾನಾ ಕಸರತ್ತುಗಳನ್ನು ಮಾಡಬೇಕು. ನಮಗೆ ನಮ್ಮ ಜೀವನದಲ್ಲಿ ಯುದ್ಧ ಮಾಡಿ ಏನನ್ನೂ ಗೆಲ್ಲುವ ಅವಶ್ಯಕತೆ ಇಲ್ಲ. ಆದರೆ ನಮಗೆ ಮನಸ್ಸುಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಏಕೆಂದರೆ ಈ ಮನಸುಗಳ ಮುನಿಸಿನಿಂದಲೇ ನಮ್ಮ ಬದುಕು ನರಕವಾಗುತ್ತಿದೆ. ಈ ಅನಿವಾರ್ಯತೆಯಿಂದಾಗಿ ನಮಗೆ ಆವಾಗಾವಾಗ ಜಗತ್ತನ್ನು ಗೆಲ್ಲಲು ಹೊರಟ ಸಾಹಸಿ ಅಲೆಗ್ಸಾಂಡರ್ ತಪ್ಪದೇ ನೆನಪಾಗುತ್ತಾನೆ.
ಅಲೆಗ್ಸಾಂಡರ ಪ್ರಾಚೀನ ಗ್ರೀಸ ದೇಶದ ಮ್ಯಾಸಿಡೋನಿಯಾದ ಸಾಮ್ರಾಟ. ಅಲ್ಲದೆ ಅವನು ವಿಶ್ವವಿಖ್ಯಾತ ತತ್ವಜ್ಞಾನಿ ಅರಿಸ್ಟಾಟಲನ ಶಿಷ್ಯ. ಧೈರ್ಯ ಮತ್ತು ಸಾಹಸಕ್ಕೆ ಇನ್ನೊಂದು ಹೆಸರೇ ಅಲೆಗ್ಸಾಂಡರ್ ಎನ್ನಬಹುದು. 13ನೇ ವಯಸ್ಸಿನಲ್ಲಿಯೇ ಆತ ಒಂದು ಕೆರಳಿದ ಕುದುರೆಯನ್ನು ನಿಯಂತ್ರಿಸಿ ತನ್ನ ತಂದೆಯಿಂದ ಶಬ್ಬಾಷಗಿರಿಯನ್ನು ಪಡೆದುಕೊಂಡಿದ್ದ. ಅವನ ತಂದೆಯ ನಿಧನದ ನಂತರ ಅವನಿಗೆ ರಾಜ್ಯಭಾರವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಎದುರಾಯಿತು. ಅವನು 22ನೇ ವಯಸ್ಸಿನಲ್ಲಿ ಮೊದಲ ಯುದ್ಧವನ್ನು ಮಾಡಿ ವಿಜಯಶಾಲಿಯಾದನು. ಅವನಿಗೆ ಹೀಟಿರೋಕ್ರೊಮಿಯಾ ಇರಿಡಮ್ (Heterochromia Iridum) ಎಂಬ ರೋಗವಿತ್ತು. ಅದರಿಂದಾಗಿ ಅವನ ಒಂದು ಕಣ್ಣು ನೀಲಿಯಾಗಿದ್ದರೆ, ಮತ್ತೊಂದು ಕಣ್ಣು ಕಂದು ಬಣ್ಣದಾಗಿತ್ತು. ಅಲ್ಲದೆ ಅವನಿಗೆ ಐಲುರೋಫೋಬಿಯಾ (Ailurophobia) ಕೂಡ ಇತ್ತು. ಅಂದರೆ ಅವನು ಬೆಕ್ಕುಗಳಿಗೆ ಹೆದರುತ್ತಿದ್ದನು. ಆದರೂ ಆತ ಯುದ್ಧ ಮಾಡಿ ಈಡೀ ಜಗತ್ತನ್ನು ಗೆಲ್ಲಬೇಕು ಎಂಬ ಕನಸನ್ನು ಕಂಡನು.
ಅವನಿಗೆ ಜಗತ್ತು ಎಷ್ಟು ದೊಡ್ಡದಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಯಾಕೆಂದರೆ ಅವನ ಬಳಿ ಜಗತ್ತಿನ ನೀಲ ನಕ್ಷೆಯಿರಲಿಲ್ಲ. ಅವನ ಕಲ್ಪನೆಗಿಂತ ಈ ಜಗತ್ತು ವಿಶಾಲವಾಗಿತ್ತು. ಆದರೆ ಅವನ ಆತ್ಮವಿಶ್ವಾಸ ಅದಕ್ಕಿಂತಲೂ ವಿಶಾಲವಾಗಿತ್ತು. ಆತ ಯುದ್ಧಗಳ ಮೇಲೆ ಯುದ್ಧಗಳನ್ನು ಮಾಡುತ್ತಾ ಬಹುಪಾಲು ಜಗತ್ತಿನ ಮೇಲೆ ತನ್ನ ಸಂಪೂರ್ಣ ಹಿಡಿತವನ್ನು ಸಾಧಿಸಿ ಜಗತ್ತನ್ನು ಗೆಲ್ಲುವ ಕನಸನ್ನು ನನಸಾಗಿಸಿಕೊಂಡನು. ಸೋಲಿಲ್ಲದ ಈ ವಿಶ್ವವಿಜೇತ ಬದುಕಿದ್ದು ಕೇವಲ 32 ವರ್ಷಗಳು ಮಾತ್ರ. ಅವನು ಸತ್ತು ಎಷ್ಟೋ ವರ್ಷಗಳಾಗಿವೆ. ಆದರೂ ಸಾಹಸ ಮತ್ತು ದಿಗ್ವಿಜಯದ ವಿಷಯ ಬಂದಾಗ ಅವನ ಹೆಸರು ಜೋರಾಗಿ ಸದ್ದು ಮಾಡುತ್ತದೆ. ಅಂಥ ಮಹಾನ್ ಸಾಹಸಿ ಅಲೆಗ್ಸಾಂಡರನ ಕೆಲವು ಸಾಹಸಿ ಮಾತುಗಳು ಇಲ್ಲಿವೆ...
೧) ಕುರಿಯಿಂದ ಮುನ್ನಡೆಸಲ್ಪಟ್ಟ ಹುಲಿಗಳ ಸೈನ್ಯಕ್ಕೆ ನಾನು ಕಿಂಚಿತ್ತೂ ಹೆದರುವುದಿಲ್ಲ. ಆದರೆ ಹುಲಿಯಿಂದ ಮುನ್ನಡೆಸಲ್ಪಟ್ಟ ಕುರಿಗಳ ಸೈನ್ಯಕ್ಕೆ ನಾನು ಖಂಡಿತ ಹೆದರಬಲ್ಲೆ...
೨) ಪ್ರಯತ್ನಶಾಲಿ ವ್ಯಕ್ತಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ನಿರಂತರವಾಗಿ ಪ್ರಯತ್ನಿಸುವವನಿಗೆ ಯಾವುದು ಅಸಾಧ್ಯವಾಗಲು ಸಾಧ್ಯವಿಲ್ಲ...
೩) ಯಾವ ರೀತಿ ಸ್ವರ್ಗದಲ್ಲಿ ಇಬ್ಬರು ಸೂರ್ಯರು ಉದಯಿಸಲು ಸಾಧ್ಯವಿಲ್ಲವೋ ; ಅದೇ ರೀತಿ ಈ ಭೂಮಿ ಮೇಲೆ ಇಬ್ಬರು ಸಾಮ್ರಾಟರಿರಲು ಸಾಧ್ಯವಿಲ್ಲ. ಒಬ್ಬನೇ ಸಾಮ್ರಾಟನಿರಬೇಕು. ಅದು ನಾನೇ ಆಗಿರಬೇಕು...
೪) ನನಗೆ ಜನ್ಮ ಕೊಟ್ಟ ತಂದೆಗೆ ಹಾಗೂ ಜೀವನವನ್ನು ರೂಪಿಸಿಕೊಳ್ಳುವುದನ್ನು ಕಲಿಸಿದ ಗುರುವಿಗೆ ನಾ ಜೀವನಪೂರ್ತಿ ಆಭಾರಿಯಾಗಿರುವೆನು. ಉನ್ನತವಾಗಿರುವುದನ್ನು ಯೋಚಿಸಿದಾಗ ಮಾತ್ರ ನಾವು ಉನ್ನತವಾಗಿರುವುದನ್ನು ಸಾಧಿಸುತ್ತೇವೆ.
೫) ನಾನು ಗೆಲುವಿಗಾಗಿ ಯಾವತ್ತೂ ಮೋಸ ಮಾಡುವುದಿಲ್ಲ. ನಾನು ಗೆಲುವನ್ನು ಕದಿಯುವುದಿಲ್ಲ. ನಾನು ಗೆಲ್ಲಲಾಗದ ಎಷ್ಟೋ ಜಗತ್ತುಗಳು ಇನ್ನೂ ಬಾಕಿ ಉಳಿದಿವೆ...
೬) ಬೆಳಕನ್ನು ತರುವ ಪ್ರತಿವಸ್ತು ಸೂರ್ಯನಾಗಲು ಸಾಧ್ಯವಿಲ್ಲ... ಪ್ರತಿಯೊಂದರ ವರ್ತನೆಯು ಎಲ್ಲರ ಅದೃಷ್ಟವನ್ನು ಅವಲಂಬಿಸಿರುತ್ತದೆ... ನಿಜವಾದ ಸಾಹಸಿ ರಾಜ ಕೆಟ್ಟ ಸಂದೇಶ ತಂದ ದ್ಯೂತನನ್ನು ಸಾಯಿಸುವುದಿಲ್ಲ...
೭) ನಾವು ಯಾರಿಗೂ ಗುಲಾಮರಾಗಿರಬಾರದು. ನಾವು ಸ್ವತಂತ್ರವಾಗಿ ನಮ್ಮ ಬದುಕನ್ನು ನಿರ್ಭಯವಾಗಿ ಕಟ್ಟಿಕೊಳ್ಳಬೇಕು. ಯಾಕೆಂದರೆ ನಮಗೆಲ್ಲರಿಗೂ ಆ ಸಾಮರ್ಥ್ಯವಿದೆ...
೮) ನಿದ್ರೆ ಮತ್ತು ಸೆಕ್ಸಗಳೆರಡು ನಾನು ಅಮರನಲ್ಲ ಎಂಬುದನ್ನು ನನಗೆ ಆಗಾಗ ನೆನಪಿಸುತ್ತವೆ. ನಮ್ಮ ಸಮಯೋಚಿತ ವರ್ತನೆಯಿಂದ ನಮ್ಮಲ್ಲಿರುವ ದೋಷಗಳು ದೂರಾಗಬಹುದು...
೯) ಶ್ರಮ ಮತ್ತು ಅಪಾಯವು ವೈಭವದ ಬೆಲೆಯಾಗಿವೆ. ಆದರೆ ಧೈರ್ಯದಿಂದ ಬದುಕುವುದು ಮತ್ತು ಶಾಶ್ವತ ಖ್ಯಾತಿಯನ್ನು ಬಿಟ್ಟು ಸಾಯುವುದು ಸುಂದರ ವಿಷಯಗಳು...
೧೦) ನಿಜವಾದ ಪ್ರೀತಿಗೆ ಸುಖಾಂತ್ಯವಿಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ...
೧೧) ನಮ್ಮ ಖಡ್ಗದಿಂದ ನಾವು ಪಡೆದುಕೊಳ್ಳುವ ಯಾವುದೇ ಸ್ವಾಮ್ಯವು ಖಚಿತವಾಗಿ ಅಥವಾ ಶಾಶ್ವತವಾಗಿ ಇರಲಾರದು. ಆದರೆ ದಯೆ ಮತ್ತು ಪ್ರೀತಿಯಿಂದ ಪಡೆದ ಸ್ವಾಮ್ಯವು ನಿಶ್ಚಿತ ಮತ್ತು ಶಾಶ್ವತವಾಗಿ ಬಾಳಿಕೆ ಬರುವದು...
೧೧) ನನ್ನ ಸುತ್ತಮುತ್ತಲೂ ಹಲವಾರು ವೈದ್ಯರಿದ್ದರೂ ನಾನು ಸಾಯುತ್ತಿರುವೆ. ನಮ್ಮನ್ನು ಸಾವಿನ ದವಡೆಯಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ...
೧೨) ವಿಶಾಲವಾದ ಜಗತ್ತು ಸಹ ಸಾಲದವನಿಗೆ ಸತ್ತ ಮೇಲೆ ಒಂದು ಪುಟ್ಟ ಗೋರಿ ಸಾಕಾಗುತ್ತದೆ. ಇದೇ ಬದುಕಿನ ದೊಡ್ಡ ವಿಪರ್ಯಾಸ...
೧೩ ಹೆದರಿಕೊಂಡು ನೂರು ವರ್ಷ ಬದುಕುವುದಕ್ಕಿಂತ ಧೈರ್ಯವಾಗಿ ಒಂದು ದಿನ ಬದುಕುವುದು ಹೆಮ್ಮೆಯ ವಿಷಯ...
೧೪) ನಾನು ಒಳ್ಳೆಯ ಹೆಸರನ್ನು ಸಂಪಾದಿಸಲು ಎಷ್ಟು ಭಯಂಕರವಾದ ಕಷ್ಟಗಳನ್ನು ಎದುರಿಸಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು...
೧೫) ನಾನು ಸತ್ತ ಮೇಲೆ ನನ್ನ ಕೈಗಳನ್ನು ಎಲ್ಲರಿಗೂ ಕಾಣುವಂತೆ ಆಕಾಶದ ಕಡೆಗೆ ಮುಖ ಮಾಡಿ ಮಣ್ಣು ಮಾಡಿ. ನನ್ನ ಹೆಣವನ್ನು ವೈದ್ಯರಿಂದಲೇ ಸಮಾಧಿ ತನಕ ಹೊತ್ತುಕೊಂಡು ಹೋಗಲು ಹೇಳಿ. ನಾನು ಸಂಪಾದಿಸಿದ ಮುತ್ತು ರತ್ನಗಳನ್ನು ಅಲ್ಲೇ ಸುರಿಯಿರಿ. ಬರಿಗೈಯಲ್ಲಿ ಬಂದ ನಾನು ಬರಿಗೈಯಲ್ಲಿ ಹೋಗುತ್ತಿರುವುದು ಎಲ್ಲರಿಗೂ ಗೊತ್ತಾಗಲಿ...