ಕಾಳಿಮಾತೆಯ ಆಜ್ಞೆಯಂತೆ ತೆನಾಲಿ ರಾಮಕೃಷ್ಣ ವಿಜಯನಗರದ ಸಾಮ್ರಾಟ ಶ್ರೀಕೃಷ್ಣ ದೇವರಾಯನನ್ನು ಭೇಟಿಯಾಗಿ ಅವನ ಆಸ್ಥಾನದಲ್ಲಿ ಆಶ್ರಯ ಪಡೆಯಲು ಹೊರಟನು. ತನ್ನೂರಾದ ತೆನಾಲಿಯ ಸಕಲ ಗ್ರಾಮಸ್ಥರಿಗೆ ಕಾಳಿಮಾತೆಯ ವರಪ್ರಸಾದದ ಬಗ್ಗೆ ಬಾಯ್ತುಂಬ ಹೇಳಿ ಖುಷಿಯಿಂದ ಊರು ಬಿಟ್ಟನು. ಸುಡುವ ಬಿಸಿಲನ್ನು ಲೆಕ್ಕಿಸದೇ ತಲೆ ಮೇಲೆ ಬಟ್ಟೆ ಗಂಟನ್ನು ಹೊತ್ತುಕೊಂಡು ತೆನಾಲಿ ರಾಮಕೃಷ್ಣ ವಿಜಯನಗರದ ರಾಜಧಾನಿ ಹಂಪಿಯನ್ನು ತಲುಪಿದನು. ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಮಹಾವೈಭವವನ್ನು ನೋಡಿ ಮಂತ್ರಮುಗ್ಧನಾದನು. ರಸ್ತೆ ಬದಿಯಲ್ಲಿ ಕುಳಿತು ಶೇರುಗಳಲ್ಲಿ ಬಂಗಾರ, ಮುತ್ತುರತ್ನ, ವಜ್ರ ವೈಢೂರ್ಯಗಳನ್ನು ಮಾರುತ್ತಿದ್ದ ವ್ಯಾಪಾರಿಗಳನ್ನು ನೋಡಿಯಾತ ಮೂಗಿನ ಮೇಲೆ ಬೆರಳಿಟ್ಟುಕೊಂಡನು. ರಾಜಧಾನಿಗೆ ಬಂದು ನಾಲ್ಕು ದಿನಗಳಾದರೂ ಅವನಿಗೆ ರಾಯರ ದರ್ಶನ ಮಾಡುವ ಸೌಭಾಗ್ಯ ಸಿಗಲಿಲ್ಲ. ಸರಿಯಾದ ಕಾರಣವಿಲ್ಲದೆ ಶ್ರೀಕೃಷ್ಣ ದೇವರಾಯನನ್ನು ಭೇಟಿಯಾಗುವುದು ಸುಲಭದ ಮಾತಾಗಿರಲಿಲ್ಲ. ಅವನು ಬಹಳಷ್ಟು ಸಲ ಅರಮನೆಯನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿ ಕಾವಲುಗಾರರಿಂದ ಬೈಯ್ಯಿಸಿಕೊಂಡು ಬಾಡಿ ಹೋದನು. ಶ್ರೀಕೃಷ್ಣ ದೇವರಾಯನನ್ನು ಹೇಗೆ ಭೇಟಿಯಾಗುವುದು ಎಂಬ ಚಿಂತೆ ಅವನ ನೆಮ್ಮದಿಯನ್ನು ಕಬಳಿಸಿತು. ದಾರಿ ತೋಚದೆ ಆತ ಕಾಳಿಮಾತೆಯನ್ನು ನೆನೆದಾಗ ಅವನಿಗೊಂದು ಉಪಾಯ ಹೊಳೆಯಿತು.
ಶ್ರೀಕೃಷ್ಣ ದೇವರಾಯ ಯಾವುದೋ ಒಂದು ಹಬ್ಬದ ನಿಮಿತ್ಯವಾಗಿ ಪರ ರಾಜ್ಯದಿಂದ ಒಂದು ನಾಟಕ ತಂಡವನ್ನು ಆಹ್ವಾನಿಸಿದ್ದನು. ಈ ವಿಷಯ ತಿಳಿದ ತೆನಾಲಿ ರಾಮಕೃಷ್ಣ ಆ ನಾಟಕ ತಂಡದಲ್ಲಿ ತಲೆಮರೆಸಿಕೊಂಡು ಅರಮನೆಯನ್ನು ಪ್ರವೇಶಿಸಿ ಶ್ರೀಕೃಷ್ಣ ದೇವರಾಯರನ್ನು ಭೇಟಿಯಾಗುವ ಉಪಾಯವನ್ನು ಹೆಣೆದನು. ಅದಕ್ಕಾಗಿ ಆತ ನಾಟಕದವರನ್ನು ಹೋಲುವ ಪಂಚೆ, ತಲೆಪೇಟ ಇತ್ಯಾದಿಗಳನ್ನು ಹುಡುಕಲು ಶುರು ಮಾಡಿದನು. ಅವನು ಅವುಗಳನ್ನು ಹುಡುಕಿಕೊಂಡು ಅರಮನೆ ಹತ್ತಿರ ಬರುವಷ್ಟರಲ್ಲಿ ಒಳಗಡೆ ನಾಟಕ ಪ್ರಾರಂಭವಾಗಿತ್ತು.
ರಾಮಕೃಷ್ಣ ಅವಸರವಾಗಿ ನಡೆಯುತ್ತಾ ಅರಮನೆಯ ಮುಖ್ಯದ್ವಾರದ ಬಳಿ ಬಂದನು. ಅವನನ್ನು ದ್ವಾರ ಪಾಲಕ ತಡೆದು ವಿಚಾರಿಸಿದನು. ಆಗ ರಾಮಕೃಷ್ಣ "ನಾನು ನಾಟಕದ ಪಾತ್ರಧಾರಿಗಳಲ್ಲೊಬ್ಬ. ನಾನು ತಯಾರಾಗಿ ಬರಲು ಸ್ವಲ್ಪ ತಡವಾಯಿತು. ದಯಮಾಡಿ ನನ್ನನ್ನು ಬೇಗನೆ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡು. ಈಗಾಗಲೇ ನಾಟಕ ಪ್ರಾರಂಭವಾಗಿದೆ. ನಾನು ನಾಟಕದ ಅತೀ ಮುಖ್ಯ ಪಾತ್ರಧಾರಿ..." ಎಂದೇಳಿದನು. ಆದರೆ ಅವನ ಕೋರಿಕೆಯನ್ನು ಮುಖ್ಯದ್ವಾರ ಪಾಲಕ ಮನ್ನಿಸಲಿಲ್ಲ. ಅದಕ್ಕಾಗಿ ಆತ ಅವನಿಗೆ ನಾಟಕದಲ್ಲಿ ನನಗೆ ಸಿಗುವ ಬಹುಮಾನದಲ್ಲಿ ಅರ್ಧದಷ್ಟನ್ನು ನಿನಗೆ ಕಾಣಿಕೆಯಾಗಿ ಕೊಡುವೆ ಎಂಬ ಆಮಿಷ ಒಡ್ಡಿದನು. ಅವನ ಆಮಿಷಕ್ಕೆ ಮರುಳಾಗಿ ಮುಖ್ಯ ದ್ವಾರಪಾಲಕ ಅವನಿಗೆ ಒಳ ಪ್ರವೇಶಿಸಲು ಅವಕಾಶ ಮಾಡಿಕೊಟ್ಟನು. ಆತ ಖುಷಿಯಿಂದ ಒಳ ಪ್ರವೇಶಿಸಿ ರಾಜಾರೋಷವಾಗಿ ನಾಟಕ ಪ್ರದರ್ಶನದ ರಂಗಮಂಟಪದೆಡೆಗೆ ನಡೆದು ಹೋಗುತ್ತಿರುವಾಗ ಅವನನ್ನು ಮತ್ತೊಬ್ಬ ದ್ವಾರಪಾಲಕ ತಡೆದು ವಿಚಾರಿಸಿದನು. ಆಗ ರಾಮಕೃಷ್ಣ ಅವನಿಗೂ ಅದೇ ಆಮಿಷವನ್ನು ಒಡ್ಡಿ ರಂಗಮಂಟಪವನ್ನು ಪ್ರವೇಶಿಸಿದನು.
ರಂಗಮಂಟಪದಲ್ಲಿ ಪಾತ್ರಧಾರಿಗಳು "ಗೋಪಿಕೃಷ್ಣ ವಿಲಾಸ" ಎಂಬ ನಾಟಕವನ್ನು ಅತ್ಯದ್ಭುತವಾಗಿ ಪ್ರದರ್ಶಿಸುತ್ತಿದ್ದರು. ಏಕಾಗ್ರತೆಯಿಂದ ಮೈಮರೆತು ನಾಟಕವನ್ನು ನೋಡುತ್ತಿದ್ದ ಶ್ರೀಕೃಷ್ಣ ದೇವರಾಯನನ್ನು ನೋಡಿ ತೆನಾಲಿ ರಾಮಕೃಷ್ಣ ಸಂತಸದ ಕಡಲಲ್ಲಿ ತೇಲಾಡಲು ಪ್ರಾರಂಭಿಸಿದನು. ಎಲ್ಲ ಜನ ಅತ್ಯಂತ ಕುತೂಹಲದಿಂದ ನಾಟಕವನ್ನು ವೀಕ್ಷಿಸುತ್ತಿದ್ದರು. ಆದರೆ ರಾಮಕೃಷ್ಣ ಮಾತ್ರ ಕಾವಲುಗಾರರನ್ನು, ಅಂಗರಕ್ಷಕರನ್ನು ಮೀರಿ ಹೇಗೆ ಶ್ರೀಕೃಷ್ಣ ದೇವರಾಯನನ್ನು ಭೇಟಿಯಾಗುವುದು ಎಂಬ ಯೋಚನೆಯಲ್ಲಿದ್ದನು. ನಾಟಕ ಮುಗಿಯುವ ಸಮಯ ಬಂದರೂ ಅವನ ಯೋಚನೆ ಮುಗಿಯಲಿಲ್ಲ. ಅವನಿಗೆ ಏನು ಮಾಡಬೇಕು ಎಂಬುದು ತೋಚಲಿಲ್ಲ. ಗೊಂದಲದಲ್ಲಿ ಆತ ಶ್ರೀಕೃಷ್ಣ ಪಾತ್ರಧಾರಿಯ ಬೆನ್ನಿಗೆ ಕೋಲಿನಿಂದ ಹೊಡೆದು ಮನಬಂದಂತೆ ನರ್ತಿಸಲು ಪ್ರಾರಂಭಿಸಿದನು. ಅವನ ಹೊಡೆತಕ್ಕೆ ಶ್ರೀಕೃಷ್ಣ ಪಾತ್ರಧಾರಿ ಕೆಳಗುರುಳಿ ನರಳಲು ಪ್ರಾರಂಭಿಸಿದರೆ, ಅಲ್ಲಿ ನೆರೆದಿದ್ದ ಜನರೆಲ್ಲ ತೆನಾಲಿ ರಾಮಕೃಷ್ಣನ ವಿಚಿತ್ರ ವೇಷಭೂಷಣ, ವಿಚಿತ್ರ ಕುಣಿತವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಗತೊಡಗಿದರು. ಶ್ರೀಕೃಷ್ಣ ದೇವರಾಯ ಸಹ ನಕ್ಕು ಸುಸ್ತಾದನು.
ಎಲ್ಲರು ನಗೆಗಡಲಲ್ಲಿ ತೇಲಾಡುತ್ತಿರುವಾಗ ಮಹಾಮಂತ್ರಿ ರಂಗಮಂಚವನ್ನೇರಿ ಮಾತಾಡಲು ಪ್ರಾರಂಭಿಸಿದನು . ಎಲ್ಲರನ್ನು ರಂಜಿಸಿ ನಗೆಗಡಲಲ್ಲಿ ತೇಲುವಂತೆ ಮಾಡಿದ ತೆನಾಲಿ ರಾಮಕೃಷ್ಣನಿಗೆ ಬಹುಮಾನ ನೀಡುವಂತೆ ಕೇಳಿಕೊಂಡನು. ಅದಕ್ಕೆ ಶ್ರೀಕೃಷ್ಣ ದೇವರಾಯ ತಲೆಯಾಡಿಸುವ ಮೂಲಕ ಸಮ್ಮತಿಸಿದನು. ಆದರೆ ನಾಟಕ ತಂಡದ ನಾಯಕ "ಅವನ್ಯಾರೋ ಅವಿವೇಕಿ ಮಧ್ಯ ಪ್ರವೇಶಿಸಿ ನಮ್ಮ ನಾಟಕವನ್ನು ಕೆಡಿಸಿದ್ದಾನೆ. ಹೋಗಿಹೋಗಿ ನೀವು ಅವನಿಗೆ ಬಹುಮಾನ ನೀಡಲು ಮುಂದಾಗಿರುವಿರಲ್ಲ ಮಹಾಮಂತ್ರಿಗಳೇ, ಇದು ನ್ಯಾಯವೇ?" ಎಂದೇಳಿ ತೆನಾಲಿ ರಾಮಕೃಷ್ಣನ ಅಸಲಿ ಬಣ್ಣವನ್ನು ಬಯಲು ಮಾಡಿದನು. ಎಲ್ಲರ ಮನಗೆದ್ದ ಈ ವಿಚಿತ್ರ ವೇಷಧಾರಿ ನಾಟಕ ತಂಡದ ಸದಸ್ಯನಲ್ಲ ಎಂದು ಗೊತ್ತಾದಾಗ ಶ್ರೀಕೃಷ್ಣ ದೇವರಾಯನ ಮುಖದಲ್ಲಿದ್ದ ಮಂದಹಾಸ ಮಾಯವಾಗಿ ಗಾಂಭೀರ್ಯದ ಗೆರೆಗಳು ಮೂಡಿದವು. ಆತ ಕೋಪದಲ್ಲಿ ತೆನಾಲಿ ರಾಮಕೃಷ್ಣನನ್ನು ತರಾಟೆಗೆ ತೆಗೆದುಕೊಂಡನು.
ಶ್ರೀಕೃಷ್ಣ ದೇವರಾಯ : ಯಾರಲ್ಲಿ...? ನಾಟಕದಲ್ಲಿ ಅನುಮತಿಯಿಲ್ಲದೆ ನುಗ್ಗಿ ಅದರ ಸೊಬಗನ್ನು ಕೆಡಿಸಿದ ಈ ಅವಿವೇಕಿಯನ್ನು ಕೂಡಲೇ ಬಂಧಿಸಿ... (ತಕ್ಷಣವೇ ಇಬ್ಬರು ಕಾವಲುಗಾರರು ತೆನಾಲಿ ರಾಮಕೃಷ್ಣನನ್ನು ಬಂಧಿಸಿ ರಾಯನ ಮುಂದೆ ತಂದು ನಿಲ್ಲಿಸಿದರು.
ಶ್ರೀಕೃಷ್ಣ ದೇವರಾಯ : (ತೆನಾಲಿ ರಾಮಕೃಷ್ಣನ ಕಡೆಗೆ ಕೋಪದಿಂದ ನೋಡುತ್ತಾ) ಯಾರು ನೀನು?
ತೆನಾಲಿ ರಾಮಕೃಷ್ಣ : ಪ್ರಭು, ನನ್ನ ಹೆಸರು ರಾಮಕೃಷ್ಣ. ನಾನು ಆಂಧ್ರಪ್ರದೇಶದ ತೆನಾಲಿ ಗ್ರಾಮದವನು.
ಶ್ರೀಕೃಷ್ಣ ದೇವರಾಯ : ಅನುಮತಿ ಇಲ್ಲದೆ ಅಕ್ರಮವಾಗಿ ಅರಮನೆಯನ್ನು ಪ್ರವೇಶಿಸಿರುವುದಲ್ಲದೆ ನಾಟಕವನ್ನು ಭಂಗಗೊಳಿಸಿರುವೆ. ನಿನಗೆ ಇಲ್ಲೇನು ಕೆಲಸ?
ತೆನಾಲಿ ರಾಮಕೃಷ್ಣ : ಪ್ರಭು, ನಾನು ಕಾಳಿಮಾತೆಯ ವರಪುತ್ರ. ನಾನೊಬ್ಬ ವಿಕಟ ಕವಿ. ಕಾಳಿಮಾತೆಯ ಅನುಗ್ರಹದಿಂದ ನಿಮ್ಮ ಆಸ್ಥಾನದಲ್ಲಿ ಆಶ್ರಯ ಬಯಸಿ ನಿಮ್ಮೆಡೆಗೆ ಬಂದಿರುವೆ. ನಿಮ್ಮನ್ನು ಭೇಟಿಯಾಗಲು ಕಾವಲುಗಾರರು ಅವಕಾಶ ಮಾಡಿಕೊಡದಿದ್ದರಿಂದ ಹೀಗೆ ಮಾಡಿರುವೆ. ದಯವಿಟ್ಟು ಕ್ಷಮಿಸಿ ಪ್ರಭು...
ಶ್ರೀಕೃಷ್ಣ ದೇವರಾಯನಿಗೆ ತೆನಾಲಿ ರಾಮಕೃಷ್ಣನ ವಿಚಿತ್ರ ವೇಷಭೂಷಣದಂತೆಯೇ ಅವನ ಮಾತುಗಳು ಸಹ ವಿಚಿತ್ರವಾಗಿ ಕಂಡವು. ಅದಕ್ಕಾಗಿ ರಾಯನಿಗೆ ಅವನ ಮಾತುಗಳಲ್ಲಿ ಭರವಸೆ ಮೂಡಲಿಲ್ಲ. ಆದ್ದರಿಂದ ರಾಯ ಅವನಿಗೆ ೫೦ ಛಡಿ ಏಟುಗಳ ಶಿಕ್ಷೆಯನ್ನು ವಿಧಿಸಿದನು. ರಾಯನ ಆದೇಶದ ಅನುಸಾರವಾಗಿ ಇಬ್ಬರು ಕಾವಲುಗಾರರು ತೆನಾಲಿ ರಾಮಕೃಷ್ಣನಿಗೆ ಛಡಿ ಶಿಕ್ಷೆಯನ್ನು ನೀಡಲು ಮುಂದಾದರು. ಅಷ್ಟರಲ್ಲಿ ರಾಮಕೃಷ್ಣ ತನ್ನ ಜಾಣತನವನ್ನು ತೋರಿದನು.
ತೆನಾಲಿ ರಾಮಕೃಷ್ಣ : ಪ್ರಭು ನೀವು ವಿಧಿಸಿದ ಶಿಕ್ಷೆಯನ್ನು ನಾನು ಬಹುಮಾನವೆಂದು ತಿಳಿದು ಸ್ವೀಕರಿಸುವೆ. ಆದರೆ ನನ್ನದೊಂದು ಚಿಕ್ಕ ಕೋರಿಕೆಯಿದೆ.
ಶ್ರೀಕೃಷ್ಣ ದೇವರಾಯ : ಆಗಲಿ ಅದೇನೆಂಬುದನ್ನು ಹೇಳು.
ತೆನಾಲಿ ರಾಮಕೃಷ್ಣ : ನಾನು ಅರಮನೆಯನ್ನು ಪ್ರವೇಶಿಸುವಾಗ ಮುಖ್ಯ ಮತ್ತು ಒಳ ದ್ವಾರ ಪಾಲಕರಿಬ್ಬರು ನನ್ನನ್ನು ತಡೆದು, ನನಗೆ ಒಳ ಪ್ರವೇಶಿಸಲು ಅನುಮತಿ ನೀಡುವುದಕ್ಕಾಗಿ ನನಗೆ ಸಿಗುವ ಬಹುಮಾನದಲ್ಲಿನ ಅರ್ಧ ಪಾಲನ್ನು ಕೇಳಿದ್ದಾರೆ. ಅವರಿಗೆ ನಾನು ಮಾತನ್ನು ನೀಡಿರುವೆ. ಹೀಗಾಗಿ ನನಗೆ ಸಿಗಬೇಕಾದ ೫೦ ಛಡಿ ಏಟುಗಳನ್ನು ಸರಿಸಮವಾಗಿ ಅರ್ಧಭಾಗವನ್ನಾಗಿಸಿ ಆ ಇಬ್ಬರು ದ್ವಾರ ಪಾಲಕರಿಗೆ ನೀಡಬೇಕೆಂದು ಕೇಳಿಕೊಳ್ಳುವೆ ಅಷ್ಟೇ ಪ್ರಭು...
ತೆನಾಲಿ ರಾಮಕೃಷ್ಣನ ಈ ಜಾಣತನದ ಮಾತುಗಳನ್ನು ಕೇಳಿ ಶ್ರೀಕೃಷ್ಣ ದೇವರಾಯ ದಂಗಾದನು. ಜೊತೆಗೆ ತನ್ನ ರಾಜ್ಯದಲ್ಲಿ ತನ್ನ ಕಣ್ಣಿಗೆ ಮಣ್ಣೆರಚಿ ಭ್ರಷ್ಟಾಚಾರ ಮಾಡುತ್ತಿದ್ದ ಆ ಇಬ್ಬರು ದ್ವಾರ ಪಾಲಕರಿಗೆ ಶಿಕ್ಷೆ ನೀಡಿ ಅವರನ್ನು ಕೆಲಸದಿಂದ ವಜಾಗೊಳಿಸಿದನು. ನಂತರ ತೆನಾಲಿ ರಾಮಕೃಷ್ಣನ ಹಾಸ್ಯಪ್ರಜ್ಞೆ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿ ಅವನನ್ನು ಅಪ್ಪಿಕೊಂಡು ಉಚಿತವಾಗಿ ಸನ್ಮಾನಿಸಿದನು. ಜೊತೆಗೆ ತೆನಾಲಿ ರಾಮಕೃಷ್ಣನನ್ನು ತನ್ನ ಆಸ್ಥಾನದಲ್ಲಿರುವ ಅಷ್ಟದಿಗ್ಜಗರಲ್ಲಿ ಒಬ್ಬರೆಂದು ಘೋಷಿಸಿದನು. ಶ್ರೀಕೃಷ್ಣ ದೇವರಾಯನ ಆಸ್ಥಾನದ ಆಶ್ರಯ ಸಿಕ್ಕ ಖುಷಿಯಲ್ಲಿ ತೆನಾಲಿ ರಾಮಕೃಷ್ಣ ಆನಂದಭಾಷ್ಪಗಳನ್ನು ಸುರಿಸಿದನು. ಈ ಸಂದರ್ಭದಲ್ಲಿ ತನ್ನ ಜೀವನಕ್ಕೆ ದಾರಿ ತೋರಿಸಿದ ಕಾಳಿ ಮಾತೆಯನ್ನು ಮನಸ್ಸಲ್ಲೇ ನೆನೆಯುತ್ತಾ ಆತ ಮನೆಯ ದಾರಿ ಹಿಡಿದನು... To be Continued...
Click Here To Read Next Part ⇩
ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna (Click Here)
Click Here To Read Next Part ⇩
ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna (Click Here)