60+ ವಿವೇಕಾನಂದರ ನುಡಿಮುತ್ತುಗಳು ವಿದ್ಯುತ ವಾಣಿ - 60+ Best Quotes of Swami Vivekananda in Kannada - 60+ swami vivekananda quotes in kannada
ಯುವಕರು ದೇಶದ ಆಧಾರಸ್ತಂಭ ಎಂಬ ನಂಬಿಕೆ ಸ್ವಾಮಿ ವಿವೇಕಾನಂದರದ್ದಾಗಿತ್ತು. ಅದು ನೂರಕ್ಕೆ ನೂರು ನಿಜವಾಗಿದೆ. ಆದರೆ ನಮ್ಮ ಯುವಕರು ಸರಿಯಾದ ಮಾರ್ಗದರ್ಶನವಿಲ್ಲದೆ ದಾರಿ ತಪ್ಪಿದ್ದಾರೆ. ದೇಶದ ಉದ್ಧಾರಕ್ಕಾಗಿ ಏನಾದರೂ ಒಂದು ಮಹತ್ಕಾರ್ಯವನ್ನು ಮಾಡುವ ಬದಲು ಮ್ಯುಜಿಕಲಿ(Musically)ಯಂಥ Useless ಆ್ಯಪಗಳಲ್ಲಿ ಟೈಮಪಾಸ ಮಾಡುತ್ತಿದ್ದಾರೆ. ದೇಶದಲ್ಲಿರುವ ಸಮಸ್ಯೆಗಳಿಗೆ ತಮ್ಮ ವೈಜ್ಞಾನಿಕ ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ತಾವೇ ದೊಡ್ಡದೊಡ್ಡ ಸಮಸ್ಯೆಗಳ ಸಾಗರವಾಗಿದ್ದಾರೆ. ಮೈಚಳಿ ಬಿಟ್ಟು ದುಡಿಯುವ ಬದಲು ಫೇಸ್ಬುಕಲ್ಲಿ ಮೈಮರೆತಿದ್ದಾರೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಚೈತನ್ಯದ ಚಿಲುಮೆ ಎಂಬುದರಲ್ಲಿ ಎರಡು ಮಾತಿಲ್ಲ. ನನ್ನ ಆದರ್ಶ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರು ಅಗ್ರಜರು. ನಮ್ಮ ದೇಶದ ಯುವಕರಿಗಾಗಿ ಅವರ ವಿದ್ಯುತ್ ವಾಣಿಯನ್ನು ಯಥಾವತ್ತಾಗಿ ಬರೆಯುತ್ತಿದ್ದೇನೆ. ಅದನ್ನು ಓದಿ ನೀವು ಜಾಗ್ರತರಾದರೆ ಸಾಕಷ್ಟೇ.
ವಿವೇಕಾನಂದರ ನುಡಿಮುತ್ತುಗಳು ವಿದ್ಯುತ ವಾಣಿ - swami vivekananda quotes in kannada
1) ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.
2) ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.
3) ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ.
4) ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.
5) ಶಕ್ತಿಯೆಲ್ಲ ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.
6) ನೀವು ಯಶಸ್ಸನ್ನು ಪಡೆಯಲು ಧೃಢ ಪ್ರಯತ್ನ ಮಾಡಬೇಕು, ಅಪಾರ ಇಚ್ಛಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ ಎನ್ನುತ್ತಾನವನು. ಇಂತಹ ಶಕ್ತಿಯನ್ನು, ಗಟ್ಟಿ ಗುಂಡಿಗೆಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.
7) ಸ್ವಾರ್ಥವೇ ಅಧರ್ಮ ; ನಿ:ಸ್ವಾರ್ಥವೇ ಧರ್ಮ. ಹೆಚ್ಚು ನಿ:ಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.
8) ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ.
9) ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟು ನಿಮಗೆ ಹೆಚ್ಚು ಬರುತ್ತದೆ.
10) ವಿಕಾಸವೇ ಜೀವನ ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
11) ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ. ಪರರ ಸೇವೆಗಾಗಿ ಸರ್ವಸ್ವವನ್ನು ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ.
12) ಬುದ್ಧಿ ಶ್ರೇಷ್ಠವಾದುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಪೂರ್ತಿ ಉಂಟಾಗುವುದು ಹೃದಯದ ಮೂಲಕ ; ಹೃದಯವೇ ಸ್ಪೂರ್ತಿಯ ಮೂಲ.
13) ವತ್ಸ ಪ್ರೀತಿಗೆ ಸೋಲೆಂಬುದಿಲ್ಲ ; ಇಂದೊ ನಾಳೆಯೊ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ.
14) ಜೀವನಾವಧಿ ಅಲ್ಪ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮ್ರತರು.
15) ಎದ್ದೇಳಿ ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.
16) ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆಗೆ ತಿರುಗಿಯೂ ನೋಡಬೇಡಿ.
17) ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.
18) ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.
19) ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು ಯಾವಾಗಲೂ ಜಯಿಸುತ್ತದೆ.
20) ಯಾರು ತನ್ನ ಹೃದಯದ ನೆತ್ತರದಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ.
21) ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ.
22) ನಿಮ್ಮ ಸೌಲಭ್ಯಗಳನ್ನು, ನಿಮ್ಮ ಸುಖಗಳನ್ನು, ನಿಮ್ಮ ಹೆಸರು, ಕೀರ್ತಿ ಸ್ಥಾನಮಾನಗಳನ್ನು, ಅಷ್ಟೇ ಏಕೆ ನಿಮ್ಮ ಜೀವಿತವನ್ನೇ ಬಲಿ ಕೊಟ್ಟು ಒಂದು ಮಾನವ ಸೇತುವೆಯನ್ನು ನಿರ್ಮಿಸಿ. ಅದರ ಮೂಲಕ ಲಕ್ಷಾಂತರ ಜನರು ಈ ಭವ ಜಲಧಿಯನ್ನು ದಾಟುವಂತಾಗಲಿ..
23) ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
24) ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ.
25) ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
26) ಹೇಡಿಗಳು, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನುಭೂತಿಯುಳ್ಳವರಾಗಿ.
27) ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು. ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.
28) ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.
29) ಶುದ್ಧಚಾರಿತ್ರ್ಯವೊಂದೇ ಕಷ್ಟಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.
30) ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ. ಮೊದಲು ಚಾರಿತ್ರ್ಯವನ್ನು ಬೆಳಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.
31) ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.
32) ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ. ಅವುಗಳನ್ನು ಹಗಲಿರುಳು ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.
33) ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.
34) ಯಾವಾಗಲೂ ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ.
35) ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ.
36) ಪರಿಸ್ಥಿತಿಗಳನ್ನು ಉತ್ತಮಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ.
37) ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠ ತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ. ೧) ಒಳಿತಿನ ಶಕ್ತಿಯಲ್ಲಿ ಧೃಢ ನಂಬಿಕೆ. ೨) ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ. ೩) ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.
38) ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು ಮಾಡಲಾರದು ಎಂಬುದು ನಿಶ್ಚಯ.
39) ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
40) ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ತಲೆಯ ಮೇಲೆ ಹೊತ್ತುಕೊಳ್ಳಿ.
41) ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ.
42) ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.
43) ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?
44) ಯಾವುದನ್ನು ಬಯಸಬೇಡಿ. ನಮ್ಮನ್ನು ದು:ಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.
45) ಇತರರ ಯೋಜನೆಯ ಮೇಲೆ ತಣ್ಣೀರೆರಬೇಡಿ. ನಿಂದನೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ. ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ.
46) ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.
47) ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ನೀವು ಪಾರಾಗಬಹುದು.
48) ಅಸೂಯೆ ಎಂಬುದು ಎಲ್ಲ ಗುಲಾಮರ ಹಾನಿಕರ ಲಕ್ಷಣ. ಅದೇ ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು ಯಾವಾಗಲೂ ತೊಡೆದು ಹಾಕಿ.
49) ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ. ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ.
50) ಸುಖವು ದು:ಖದ ಕಿರೀಟವನ್ನು ಧರಿಸಿ ಮಾನವನೆದುರಿಗೆ ಬಂದು ನಿಲ್ಲುತ್ತದೆ. ಯಾರಿಗೆ ಸುಖ ಬೇಕೋ ಅವರು ದು:ಖವನ್ನು ಸ್ವೀಕರಿಸಬೇಕು.
51) ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದು ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳು ಬಿದ್ದು ಹೋಗುತ್ತವೆ.
52) ಮಹಾ ಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.
53) ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ.
54) ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.
55) ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ.
56) ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವುದೇ ಪ್ರಯೋಜನಕ್ಕೆ ಬಾರದು.
57) ಯಾವುದಕ್ಕೂ ಅಂಜದಿರು ; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದು:ಖಗಳಿಗೂ ಮಹತ್ಕಾರಣ.
58) ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ. ದೇಶವನ್ನು ಈ ಎರಡು ಆದರ್ಶಗಳಲ್ಲಿ ತೊಡಗಿಸಿದರೆ ಉಳಿದೆಲ್ಲವೂ ತಾವೇ ಸರಿಯಾಗುತ್ತವೆ.
59) ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ, ದೈವದಲ್ಲಾಗಲಿ ನನಗೆ ನಂಬಿಕೆಯಿಲ್ಲ.
60) ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿಕೊಂಡು ಹೋಗಿ.
61) ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ. ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.