ಅವತ್ತು ಗಟ್ಟಿ ಗುಂಡಿಗೆಯ ಹರೆಯದ ಹುಡುಗನ ಕಣ್ಣಲ್ಲಿ ಕಣ್ಣೀರ ಧಾರೆ ಜಲಪಾತದಂತೆ ಧುಮುಕುತ್ತಿತ್ತು. ಅವನೆದೆಯಲ್ಲಿನ ನೋವು, ಆಕ್ರೋಶ, ಹತಾಶೆಗಳೆಲ್ಲವು ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಸಿಡಿಲಿಗು ಹೆದರದ ಗುಂಡಿಗೆ ಒಂದು ಸಣ್ಣ ನಷ್ಟಕ್ಕೆ ನಲುಗಿ ಹೋಗಿತ್ತು. ಅವನಿಗೆ ಮುಂದೇನು ಮಾಡಬೇಕು ಎಂಬುದು ತೋಚದಾಗಿತ್ತು. ಕಾಲ ಕೆಳಗಿನ ನೆಲ ಕಳಚಿದಂತಾಗಿತ್ತು. ಆತ ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ಹಗುರಾಗಿಸಿಕೊಂಡು ಹೈವೇ ಪಕ್ಕದಲ್ಲಿ ಸುಮ್ಮನೆ ಸೋಂಬೆರಿಯಂತೆ ಕುಳಿತ್ತಿದ್ದನು. ಆತ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ. ಆದರೂ ಅವನಿಗೆ ಬಂದ ಸಂಕಷ್ಟ ಅವನ ಕೈಕಾಲುಗಳನ್ನು ಕಟ್ಟಿ ಹಾಕಿತ್ತು. ಅವನಿಗೆ ಜೀವದ ಮೇಲಿನ ಆಸೆಯೇ ಹೊರಟು ಹೋಗುವ ಹಂತಕ್ಕೆ ತಲುಪಿತ್ತು. ಅಷ್ಟರಲ್ಲಿ ಅವನಿಗೆ ಅವನ ಜೀವದ ಗೆಳತಿ ಆಕಾಂಕ್ಷಾಳ ಕರೆ ಬಂದಿತು. ಅವಳಿಗೆ ಅವನ ನೋವಿಗೆ ಕಾರಣವೇನೆಂಬುದು ಆಗಲೇ ಗೊತ್ತಾಗಿತ್ತು. ಆಕೆ "ದೋಸ್ತ ಬದುಕಲ್ಲಿ ಇವೆಲ್ಲ ಕಾಮನ್. ಸಕ್ಸೆಸನ್ನು ಸೆಲೆಬ್ರೆಟ್ ಮಾಡಬೇಕೆಂದರೆ ಇಂಥ ಸಂಕಷ್ಟಗಳು ಇರಲೇಬೇಕು ಬಿಡು. ಡೋಂಟ್ ವರಿ. ನಿನ್ನ ಬೆಂಬಲಕ್ಕೆ ನಾನಿದೀನಿ..." ಎಂದೇಳುತ್ತಿದ್ದಳು. ಅಷ್ಟರಲ್ಲಿ ಆತ ದು:ಖ ತಾಳಲಾರದೆ ಮತ್ತೊಮ್ಮೆ ಅತ್ತು ಬಿಟ್ಟನು. ಅವನಿಗೆ ಆತ್ಮೀಯರಂಥ ಇರುವುದು ಅವಳೊಬ್ಬಳೇ. ೧೨ ವರ್ಷದಿಂದ ಬೆಸ್ಟ್ ಫ್ರೆಂಡ್ ಅವಳು. ಅವನ ಪ್ರತಿ ಹೆಜ್ಜೆಗೆ ಹೆಗಲು ಕೊಟ್ಟವಳು ಅವಳೊಬ್ಬಳೇ. ಅವನ ಮುಖದಲ್ಲಿನ ಮಂದಹಾಸಕ್ಕೆ, ಎದೆಯಲ್ಲಿನ ಕಿಚ್ಚಿಗೆ ಸ್ಪೂರ್ತಿ ಅವಳೊಬ್ಬಳೇ. ಅವಳ ಸ್ಪೂರ್ತಿಯ ಮಾತುಗಳಿಂದ ಅವನು ಕಳೆದುಕೊಂಡಿದ್ದ ಆತ್ಮವಿಶ್ವಾಸ ಮತ್ತೆ ಅವನೆದೆ ಸೇರಿತು. ಆತ ನೋವಲ್ಲಿಯೂ ನಗುತ್ತಾ ಅವಳಿಗೆ ಥ್ಯಾಂಕ್ಸ್ ಹೇಳುತ್ತಾ ರಸ್ತೆ ಬದಿಯ ಚಹಾದಂಗಡಿಯಲ್ಲಿ ಚಹಾ ತೆಗೆದುಕೊಂಡು ಅದರೊಂದಿಗೆ ಸಿಗರೇಟ್ ಹೊತ್ತಿಸಿ ಹಳೆಯ ಟೆಶ್ನನಗಳಿಂದ ಹೊರಬಂದನು.
ಅವನಿಗೆ ಓದಿನಲ್ಲಿ ಅತೀವ ಆಸಕ್ತಿಯಿತ್ತು. ಆದರೆ ಕಾಲೇಜು ಓದು ಅವನ ಗುರಿಗೆ ಪೂರಕವಾಗಿರಲಿಲ್ಲ. ಅದಕ್ಕಾಗಿ ಆತ ಓದನ್ನು ಸ್ವಲ್ಪ ನಿರ್ಲಕ್ಷಿಸಿ ತನ್ನಿಷ್ಟದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿದನು. ಯ್ಯುಟೂಬ ಗೂಗಲಗಳನ್ನು ಕಿತ್ತಾಕಿ ಹೊಸಹೊಸ ಸ್ಕೀಲಗಳನ್ನು ಕಲಿತನು. ಅದರ ಜೊತೆಗೆ ಪದವಿ ಕೂಡ ಮುಗಿಯಿತು. ಅವನಿಗೆ ಮುಂದೆ ಓದುವ ಮನಸ್ಸಿರಲಿಲ್ಲ. ಮನೆಯವರ ಒತ್ತಾಯಕ್ಕೆ ಓದಿ ಹಣವನ್ನು ವ್ಯಯಿಸುವ ಮುಠ್ಠಾಳತನ ಮಾಡುವ ಹುಡುಗ ಅವನಾಗಿರಲಿಲ್ಲ. ಅವನು ಮನೆಯವರ ಮನವೊಲಿಸಿ ತನ್ನಿಷ್ಟದ ಬ್ಯುಸಿನೆಸ್ ಮಾಡಲು ಮುಂದಾದನು. ಮನೆಯವರು ಸಂಗ್ರಹಿಸಿಟ್ಟ ಹಣವನ್ನು ಅವನಿಗೆ ನೀಡಿದರು. ಜೊತೆಗೆ ಸಂಬಂಧಿಕರು ಸಹ ಸಾಧ್ಯವಾದಷ್ಟು ಸಹಾಯ ಮಾಡಿದರು. ದೊಡ್ಡ ಪಟ್ಟಣದಲ್ಲಿ ದೊಡ್ಡ ಬಾಡಿಗೆ ಆಫೀಸ ಖರೀದಿಸುವಷ್ಟು ಹಣ ಅವನ ಬಳಿಯಿರಲಿಲ್ಲ. ಆತ ಆಫೀಸಿಗಾಗಿ ಬಿಲ್ಡಿಂಗ್ ಹುಡುಕುತ್ತಿರುವಾಗ ಅವನ ಅತೀ ಹತ್ತಿರದ ಸಂಬಂಧಿಯೊಬ್ಬರು ಬಂದು ನಮ್ಮ ಬಿಲ್ಡಿಂಗ್ ನಾಲ್ಕು ವರ್ಷದಿಂದ ಖಾಲಿ ಬಿದ್ದಿದೆ. ಸದ್ಯಕ್ಕೆ ನಮಗೇನು ದುಡ್ಡು ಕೊಡುವುದು ಬೇಡ, ಮುಂದೆ ನಿಮಗೆ ಸಕ್ಸೆಸ್ ಸಿಕ್ಕ ಮೇಲೆ ಖುಷಿಯಿಂದ ಸಾಧ್ಯವಾದಷ್ಟು ಕೊಡಿ ಎಂದೇಳಿದರು. ಅವರ ಮಾತನ್ನು ನಂಬಿ ಪಾಪ ಆ ಹುಡುಗ ೧೨ ಲಕ್ಷಕ್ಕೂ ಮೀರಿ ಸಾಲ ಮಾಡಿಕೊಂಡು ತನ್ನ ಬ್ಯುಸಿನೆಸ್ಸನ್ನು ಪ್ರಾರಂಭಿಸಿದನು. ಅವನ ಬ್ಯುಸಿನೆಸ್ ಸೂಪರಾಗಿ ಶುರುವಾಯಿತು. ಹಣ ಕೂಡ ಹರಿದು ಬರಲು ಪ್ರಾರಂಭವಾಯಿತು. ಅದಕ್ಕಾಗಿ ಅವನ ಮುಖದಲ್ಲಿ ನಗೆ ನಲಿದಾಡಿತು. ಆದರೆ ಅಷ್ಟರಲ್ಲಿ ಅವನಿಗೊಂದು ದೊಡ್ಡ ಆಘಾತ ಬಂದು ಎದೆಗಪ್ಪಳಿಸಿತು. ಆಫೀಸಗಾಗಿ ಬಿಲ್ಡಿಂಗ್ ನೀಡಿದ್ದವರು ದಿಢೀರನೆ ಬಂದು ಆಫೀಸ ಖಾಲಿ ಮಾಡಲು ಧರಣಿ ನಿಂತರು. ಅವನ ಕಾಲ ಕೆಳಗಿನ ನೆಲ ಒಮ್ಮೆಲೇ ಕೊಚ್ಚಿ ಹೋಯಿತು. ಅವನ ಕಣ್ಣಿನಿಂದ ಕಣ್ಣೀರಧಾರೆ ಜಲಪಾತದಂತೆ ಸುರಿಯಲು ಶುರುವಾಯಿತು. ಏಕೆಂದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಆತ ಬ್ಯುಸಿನೆಸ್ಸನ್ನು ಪ್ರಾರಂಭಿಸಿದ್ದನು. ಇದ್ದಕ್ಕಿದ್ದಂತೆ ಈ ರೀತಿ ಆಫೀಸ ಖಾಲಿ ಮಾಡಿ ಎಂದಾಗ ಅವನ ಆತ್ಮಸ್ಥೈರ್ಯ ಕುಸಿಯಿತು. ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದವಳು ಆ ಬಿಲ್ಡಿಂಗನ ಮಾಲಕಿ ಮನೆಹಾಳಿ. ಅವಳಿಗೆ ಮೊದಲಿನಿಂದಲೂ ಆ ಹುಡುಗನ ಮೇಲೆ ಜಲಸಿಯಿತ್ತು. ಅವನ ಯಶಸ್ಸು ಅವಳಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಆಕೆ ಬೇಕಂತಲೇ ತನ್ನ ಗಂಡನ ಕಡೆಯಿಂದ ಹೇಳಿಸಿ ಬಿಲ್ಡಿಂಗ ಕೊಟ್ಟು ಮತ್ತೆ ಕಿತ್ತುಕೊಳ್ಳುವ ನಾಟಕವಾಡಿ ತನ್ನ ಕುಟಿಲತೆಯಲ್ಲಿ ಯಶಸ್ವಿಯಾದಳು. ಅವಳ ಮೈಯಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಕೊಳಕುತನವೇ ತುಂಬಿತ್ತು. ಅವಳ ಒಣದ್ವೇಷಕ್ಕೆ ಆ ಹುಡುಗನ ಬ್ಯುಸಿನೆಸ್ ಹಾಡುಹಗಲೇ ನೆಲಕಚ್ಚಿತು. ಆತ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದನು.
ತನ್ನ ಜೀವದ ಗೆಳೆಯ ತನ್ನ ಹತ್ತಿರದ ಸಂಬಂಧಿಗಳ ಕುತಂತ್ರಕ್ಕೆ ಬಲಿಯಾಗಿ ಬೀದಿಗೆ ಬಂದಿರುವ ಸುದ್ದಿ ಕೇಳಿ ಆಕಾಂಕ್ಷಾಳ ಕಣ್ಣುಗಳು ಸಹ ತುಂಬಿ ಬಂದವು. ಆದರೆ ಅವಳು ಧೈರ್ಯ ಕಳೆದುಕೊಳ್ಳದೆ ಅವನನ್ನು ಸಂತೈಸಿದಳು. ಅವನಿಗೆ ಧೈರ್ಯ ತುಂಬಿ ಮತ್ತೆ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಲು ಹುರಿದುಂಬಿಸಿದಳು. ಅವಳ ಸ್ಪೂರ್ತಿದಾಯಕ ಮಾತುಗಳಿಂದ ಅವನ ಆತ್ಮವಿಶ್ವಾಸ ಹೆಚ್ಚಾಯಿತು. ಆತ ಸಂಬಂಧಿಕರು ಮಾಡಿದ ಕುಟಿಲತೆಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದನು. ತನ್ನನ್ನು ಕಾಲ ಕೆಳಗಾಕಿ ತುಳಿದವರನ್ನು ತಲೆತಗ್ಗಿಸಿ ನಿಲ್ಲುವಂತೆ ಮಾಡಲು ಪಣತೊಟ್ಟನು. ಮತ್ತೆ ಅಲ್ಲಿಇಲ್ಲಿ ಸಾಲ ಮಾಡಿ ಹೊಸ ಆಫೀಸಿನ್ನು ಖರೀದಿಸಿ ಮತ್ತೆ ಅದೇ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಿದನು. ಹೊರಗಿನ ಶತ್ರುಗಳೊಡನೆ ಹೋರಾಡಿ ಗೆಲ್ಲಬಹುದು. ಆದರೆ ಒಳಗಿನ ಹಿತಶತ್ರುಗಳನ್ನು ಗುರ್ತಿಸುವುದು ಸಹ ಸುಲಭವಲ್ಲ ಎಂಬುದು ಅವನಿಗೆ ಅರಿವಾಯಿತು. ರಣಹದ್ದುಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿರುವ ಒಂಟಿ ಗುಬ್ಬಚ್ಚಿಯಂತೆ ಅವನಾಗಿರುವಾಗ ಅವನಿಗೆ ಮಾನಸಿಕವಾಗಿ ಬೆಂಬಲ ನೀಡಿ ಮುಂದೆ ಸಾಗಲು ಸ್ಪೂರ್ತಿಯಾದ ಅವಳು ಮಾದರಿ ಗೆಳತಿಯಾದಳು. ಅವನ ಯಶಸ್ಸಿನ ಹಾದಿಗೆ ಆರಂಭದಲ್ಲೇ ಕಲ್ಲಾಕಿದ ಸಂಬಂಧಿಕರಲ್ಲಿನ ಕೊಳಕು ಹೆಣ್ಣು ಸಮಾಜದಲ್ಲಿ ಮಾನಗೇಡಿಯಾದಳು. ಅವನ ಯಶಸ್ಸನ್ನು ನೋಡಿ ಹೊಟ್ಟೆ ಉರಿದುಕೊಂಡು ಸಿಕ್ಕಲೆಲ್ಲ ಪರಚಿಕೊಂಡು ಹುಚ್ಚಿಯಾದಳು.
ಗೆಳೆಯರೇ, ಈ ನೈಜ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲ ನನಗಿರಲಿಲ್ಲ. ಆದರೆ ಈ ಕಥೆಯ ಕಥಾನಾಯಕನಂತೆ ಎಷ್ಟೋ ಜನ ಅಮಾಯಕರು ಮೋಸ ಹೋಗಿದ್ದಾರೆ. ನಮ್ಮ ದೇಶದ ಯುವಕರು ಬರೀ ನೌಕರಿಗಾಗಿ ನಾಯಿಯಂತೆ ಅಲೆಯುತ್ತಾರೆ. ಅಂಥದರಲ್ಲಿ ಧೈರ್ಯ ಮಾಡಿ ಸ್ವಂತ ಬ್ಯುಸಿನೆಸ್ ಪ್ರಾರಂಭಿಸಿದವರನ್ನು ಸ್ವಂತದ ಸಂಬಂಧಿಕರೇ ಹೊಸಕಿ ಹಾಕಲು ಶಕುನಿ ತಂತ್ರಗಳನ್ನು ಹೆಣೆಯುತ್ತಾರೆ. ಇದು ನಮ್ಮ ದೇಶದ ದೌರ್ಭಾಗ್ಯ. ಆದರೆ ನಾವು ಹೆದರಬಾರದು. ತುಳಿಯುವವರು, ತುಳಿದವರು ತಲೆಯೆತ್ತಿ ನೋಡುವಷ್ಟರ ಮಟ್ಟಿಗೆ ನಾವು ಬೆಳೆದು ನಿಲ್ಲಬೇಕು. ಸಾಧ್ಯವಾದರೆ ನೀವು ಒಂದು ಹೊಸ ಬ್ಯುಸಿನೆಸ್ಸನ್ನು ಪ್ರಾರಂಭಿಸಿ ಬಿಲೇನಿಯರಗಳಾಗಿ. ಸಾಧ್ಯವಾಗದಿದ್ದರೆ ನಿಮ್ಮ ಸುತ್ತಮುತ್ತ ಹೊಸದಾಗಿ ಬ್ಯುಸಿನೆಸ್ ಪ್ರಾರಂಭಿಸಿದ ನವ ಯುವಕರಿಗೆ ನೈತಿಕ ಬೆಂಬಲ ನೀಡಿ ಅವರನ್ನು ಪ್ರೋತ್ಸಾಹಿಸಿ Please. ಧನ್ಯವಾದಗಳು...