ಒಂದಿನ ರಾವಣ ತನ್ನ ರಾಕ್ಷಸ ಸೈನ್ಯವನ್ನು ತೆಗೆದುಕೊಂಡು ಸ್ವರ್ಗವನ್ನು ಗೆಲ್ಲಲು ಹೊರಟನು. ಅವರೆಲ್ಲರು ಸ್ವರ್ಗಕ್ಕೆ ಹೋಗುವಾಗ ಕೈಲಾಸ ಪರ್ವತವನ್ನು ತಲುಪಿದಾಗ ರಾತ್ರಿಯಾಗಿತ್ತು. ಅದಕ್ಕಾಗಿ ರಾವಣ ರಾಕ್ಷಸ ಸೈನ್ಯದೊಂದಿಗೆ ಕೈಲಾಸ ಪರ್ವತದಲ್ಲಿ ವಸತಿ ಹೂಡಿದನು. ಕೊರೆಯುವ ಚಳಿಯಲ್ಲಿ ಕೈಲಾಸ ಪರ್ವತ ಅವನನ್ನು ಆಕರ್ಷಿಸಿತು. ಆಗಸದಲ್ಲಿ ಫಳಫಳನೆ ಹೊಳೆಯುವ ಚಂದ್ರನನ್ನು ನೋಡುತ್ತಾ ರಾವಣ ಅರ್ಧರಾತ್ರಿಯನ್ನು ಕಳೆದನು. ರಾವಣನ ಮನಸ್ಸಲ್ಲಿಗ ಕಾಮ ಭಾವನೆ ಉದಯಿಸಿತ್ತು. ಕಾಕತಾಳೀಯವೆಂಬಂತೆ ಅವನ ಕಣ್ಣಿಗೆ ಆಕಾಶದಲ್ಲಿ ಚಲಿಸುತ್ತಿರುವ ಸುಂದರವಾದ ಅಪ್ಸರೆ ರಂಭೆ ಕಾಣಿಸಿದಳು. ರಂಭೆ ಅಪ್ಸರೆಯರ ರಾಣಿಯಾಗಿದ್ದಳು. ಅವಳ ಸೌಂದರ್ಯಕ್ಕೆ ಆಕರ್ಷಿತನಾಗಿ ರಾವಣ ರಂಭೆಯನ್ನು ಅಡ್ಡಗಟ್ಟಿದನು. ತಂಗಾಳಿಯ ಹಿನ್ನೆಲೆ ಸಂಗೀತದ ಜೊತೆಗೆ ಚಂದ್ರನ ಪ್ರೇಮದ ಬೆಳಕಿನಲ್ಲಿ ರಂಭೆಯನ್ನು ಕಂಡ ರಾವಣನ ಮನಸ್ಸಲ್ಲಿ ಕಾಮದ ಸುನಾಮಿ ಎದ್ದಿತು. ಆತ ಅವಳನ್ನು ದೈಹಿಕ ಸುಖಕ್ಕಾಗಿ ಪೀಡಿಸಲು ಪ್ರಾರಂಭಿಸಿದನು.
ರಂಭೆ ಈ ರಾತ್ರಿಯ ಸಮಯದಲ್ಲಿ ತನ್ನ ಪ್ರಿಯತಮ ನಳಕುಬೇರನ ಕಡೆಗೆ ಹೊರಟಿದ್ದಳು. ಆದರೆ ದುರಾದೃಷ್ಟಕ್ಕೆ ರಾವಣನ ಕೈಯಲ್ಲಿ ಸಿಕ್ಕಿಹಾಕಿಕೊಂಡಳು. ರಾವಣ ಅವಳನ್ನು ಬಲವಂತ ಮಾಡತೊಡಗಿದಾಗ ಆಕೆ ಅವನಿಗೆ "ನಾನು ನಿನಗೆ ಸೊಸೆ ಸಮಾನ. ದಯಮಾಡಿ ನನ್ನನ್ನು ಬಿಟ್ಟು ಬಿಡು..." ಎಂದು ಬೇಡಿಕೊಂಡಳು. ಆಗ ರಾವಣ ರಂಭೆಗೆ "ನೀನೇಗೆ ನನಗೆ ಸೊಸೆಯಾಗುವೆ...?" ಎಂದು ಪ್ರಶ್ನಿಸಿದನು. ಆಗ ರಂಭೆ "ನಾನು ನಿನ್ನ ಸೋದರ ಕುಬೇರನ ಮಗನಾದ ನಳಕುಬೇರನನ್ನು ಪ್ರೀತಿಸುತ್ತಿರುವೆ. ಅವನನ್ನೇ ಮದುವೆಯಾಗಲಿರುವೆ. ಹೀಗಾಗಿ ನಾನು ನಿನಗೆ ಸೊಸೆ ಸಮಾನಳು. ನೀನು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಲಾರೆ. ದಯಮಾಡಿ ನನ್ನನ್ನು ಬಿಟ್ಟು ಬಿಡು..." ಎಂದು ಮತ್ತೆ ಬೇಡಿಕೊಂಡಳು. ಆಗ ರಾವಣ ನಗುತ್ತಾ "ಇಂಥ ನಿಯಮಗಳೆಲ್ಲ ಪತಿವ್ರತೆಯರಿಗೆ ಮಾತ್ರ ಅನ್ವಯಿಸುತ್ತವೆ. ಆದರೆ ನೀನೇನು ಪತಿವ್ರತೆಯಲ್ಲ. ನೀನು ದೇವೆಂದ್ರನ ಆಸ್ಥಾನದಲ್ಲಿ ನೃತ್ಯ ಮಾಡುತ್ತಾ, ಋಷಿಗಳ ತಪಸ್ಸನ್ನು ಕೆಡಿಸುವ ಅಪ್ಸರೆಯಷ್ಟೇ. ನಿನಗೆ ಮದುವೆ ಗಂಡಂದಿರೆಲ್ಲ ಶೋಭಿಸುವುದಿಲ್ಲ..." ಎಂದೇಳಿ ರಾವಣ ರಂಭೆಯನ್ನು ತನ್ನೆಡೆಗೆ ಎಳೆದುಕೊಂಡನು. ಅವಳನ್ನು ಬಲವಂತವಾಗಿ ಬಳಸಿಕೊಂಡ ನಂತರ ಅವಳನ್ನು ಖುಷಿಯಿಂದ ಬಿಳ್ಕೊಟ್ಟನು.
ರಾವಣನಿಂದ ಅತ್ಯಾಚಾರಕ್ಕೊಳಗಾದ ರಂಭೆ ಅಳುತ್ತಾ ತನ್ನ ಪ್ರಿಯಕರ ನಳಕುಬೇರನ ಬಳಿ ಹೋಗಿ ರಾವಣನ ದುಷ್ಟ ಕಾರ್ಯದ ಬಗ್ಗೆ ವಿವರಿಸಿದಳು. ರಾವಣನ ಅನಾಚಾರವನ್ನು ಕೇಳಿ ನಳಕುಬೇರ ಕೆರಳಿ ಕೆಂಡಾಮಂಡಲವಾದನು. ಆದರೆ ನೇರವಾಗಿ ರಾವಣನ ಮೇಲೆ ಸೇಡು ತೀರಿಸಿಕೊಳ್ಳುವಷ್ಟು ಶಕ್ತಿ ಅವನಲ್ಲಿರಲಿಲ್ಲ. ಅದಕ್ಕಾಗಿ ಆತ ರಾವಣನಿಗೆ "ಇನ್ಮುಂದೆ ರಾವಣ ಯಾವುದೇ ಪರಸ್ತ್ರೀಯನ್ನು ಬಲವಂತವಾಗಿ ಮುಟ್ಟಕೂಡದು, ಅಲ್ಲದೇ ಅವರನ್ನು ಅಪಹರಿಸಿ ತನ್ನ ಅರಮನೆಯಲ್ಲಿ ಇಡಕೂಡದು. ಒಂದು ವೇಳೆ ರಾವಣ ಪರಸ್ತ್ರೀಯನ್ನು ಬಲವಂತವಾಗಿ ಮುಟ್ಟಿದರೆ ಇಲ್ಲವೇ ಅಪಹರಿಸಿ ಅರಮನೆಯಲ್ಲಿ ಬಂಧಿಸಿಟ್ಟರೆ ಅವನ ತಲೆ ನೂರು ಹೋಳಾಗಿ ಛಿದ್ರಛಿದ್ರವಾಗಿ ಒಡೆದು ಹೋಗಲಿ..." ಎಂದು ಶಾಪವನ್ನು ಕೊಟ್ಟನು. ರಂಭೆಯನ್ನು ಬಲವಂತವಾಗಿ ಅನುಭವಿಸಿದ್ದಕ್ಕಾಗಿ ರಾವಣ ನಳಕುಬೇರನ ಶಾಪಕ್ಕೆ ತುತ್ತಾದನು. ಸಹಜವಾಗಿ ರಾವಣ ಋಷಿಗಳ, ದೇವತೆಗಳ, ನಾಗಗಳ, ಮನುಷ್ಯರ ಸುಂದರ ಪತ್ನಿಯರನ್ನು ಅಪಹರಿಸಿ ಅವರನ್ನು ಬಲವಂತವಾಗಿ ಅನುಭವಿಸುತ್ತಿದ್ದನು. ಆದರೆ ಈಗ ನಳಕುಬೇರ ಕೊಟ್ಟ ಶಾಪದಿಂದ ರಾವಣನ ಕೆಟ್ಟ ಪ್ರವೃತ್ತಿ ಅಂತ್ಯವಾಯಿತು. ಆದರೆ ರಾವಣ ಮತ್ತೆ ತನ್ನ ಕೆಟ್ಟ ಚಾಳಿಯನ್ನು ಮುಂದುವರೆಸಿದನು. ರಾಮನ ಕಣ್ತಪ್ಪಿಸಿ ಸಂನ್ಯಾಸಿಯ ಮಾರುವೇಷ ಧರಿಸಿ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಬಂದನು. ಆದರೆ ರಂಭೆಯ ಕಾರಣಕ್ಕೆ ನಳ ಕುಬೇರ ಕೊಟ್ಟ ಶಾಪಕ್ಕೆ ಹೆದರಿ ಸೀತೆಯನ್ನು ಮುಟ್ಟದೆ ಬಿಟ್ಟನು. ಅಲ್ಲದೇ ಅವಳನ್ನು ಅರಮನೆಯ ಬದಲಾಗಿ ಅಶೋಕ ವನದಲ್ಲಿ ಬಂಧಿಸಿಟ್ಟನು...
ರಂಭೆಯಿಂದಾಗಿ ಶಾಪಗ್ರಸ್ತನಾದಾಗಲೇ ರಾವಣ ಬುದ್ಧಿ ಕಲಿತಿದ್ದರೆ ಅವನು ರಾಮನಿಂದ ಸಾಯುತ್ತಿರಲಿಲ್ಲ. ಆದರೆ ಅವನು ಬುದ್ಧಿ ಕಲಿಯಲಿಲ್ಲ. ಇದಿಷ್ಟು ರಂಭೆಯ ಶಾಪದ ಕಥೆವ್ಯಥೆ. ಈ ಅಂಕಣ ನಿಮ್ಮಗಿಷ್ಟವಾಗಿದ್ದರೆ ತಪ್ಪದೇ ಇದನ್ನು ಲೈಕ ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...