ಮೂವರು ನವ ತರಣರು ವನವಿಹಾರಕ್ಕಾಗಿ ಕಾಡಿಗೆ ಹೋದರು. ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಅವರು ಸುತ್ತಾಡಿ ಸುಸ್ತಾದರು. ಅವರಿಗೆ ಅತೀವ ಬಾಯಾರಿಕೆಯಾಗಿತ್ತು. ಅದೇ ಸಮಯಕ್ಕೆ ಅವರ ಕಣ್ಣಿಗೆ ಸ್ಥೂಲಕೇಶ ಮಹರ್ಷಿಗಳ ಆಶ್ರಮ ಕಾಣಿಸಿತು. ಅವರು ಬಾಯಾರಿಕೆಯನ್ನು ಆರಿಸಿಕೊಳ್ಳಲು ಆ ಆಶ್ರಮಕ್ಕೆ ಕಾಲಿಟ್ಟರು. ಆಶ್ರಮದಲ್ಲಿ ಮಹರ್ಷಿಗಳಿರಲಿಲ್ಲ. ಬದಲಾಗಿ ಅವರ ಮಗಳು ಪ್ರಮದ್ವರಾ ಇದ್ದಳು. ಅವಳು ಗಾಯಕೊಂಡ ಪಕ್ಷಿಯ ಶೂಶ್ರುಸೆಯನ್ನು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಆ ಮೂವರು ತರುಣರಲ್ಲೊಬ್ಬ "ಕುಡಿಯಲು ಸ್ವಲ್ಪ ನೀರು ಸಿಗಬಹುದಾ?" ಎಂದು ಕೂಗಿದನು. ಅವನ ಕೂಗನ್ನು ಕೇಳಿಸಿಕೊಂಡ ನಂತರ ಪ್ರಮದ್ವರ ಕಂಕುಳಲ್ಲಿ ಕೊಡವನ್ನು ಹೊತ್ತುಕೊಂಡು ಬಳಕುತ್ತಾ ಹೊರ ಬಂದಳು. ಆ ಮೂವರಲ್ಲೊಬ್ಬ ಅವಳನ್ನು ತೀಕ್ಷವಾಗಿ ನೋಡುತ್ತಿದ್ದನು. ಅವನು ಏನು ಮಾತಾಡದೆ ಅವಳನ್ನೇ ಗಮನಿಸುತ್ತಿದ್ದನು. ಅವನೇ ರುರು. ಅವನ ನೋಟ ಅವಳ ಕೋಪಕ್ಕೆ ಕಾರಣವಾಗುವ ಮುಂಚೆಯೇ ಅವನ ಗೆಳೆಯ ರುರುವಿಗೆ ಎಚ್ಚರಿಸಿದನು. ಆಗ ಕನಸುಗಳ ನೆರಳಿನಿಂದ ಹೊರ ಬಂದ ರುರು ಬೊಗಸೆಯಲ್ಲಿ ನೀರನ್ನು ಕುಡಿದು ತನ್ನ ಬಾಯಾರಿಕೆಯನ್ನು ಈಡೇರಿಸಿಕೊಂಡನು. ಜೊತೆಗೆ ಪ್ರಮದ್ವರಾಳೊಂದಿಗೆ ಮಾತು ಬೆಳೆಸಲು "ನೀರು ತುಂಬಾ ಸಿಹಿಯಾಗಿದೆ" ಎಂದನು. ಆದರೆ ಆಕೆ "ನೀವು ಬಾಯಾರಿಕೆಯಿಂದ ಬಳಲಿ ಬಂದಿರುವಿರಿ. ಅದಕ್ಕೆ ನೀರು ಸಿಹಿಯೆನಿಸಿದೆ" ಎಂದೇಳಿ ಮಾತು ಮುಗಿಸಿದಳು. ಆಗ ಅವನ ಗೆಳೆಯರು "ನೀರು ಸಿಹಿಯಾಗಿದೆಯಾ ಅಥವಾ ನೀರು ಕೊಟ್ಟವರು ಸಿಹಿಯಾಗಿದ್ದಾರಾ? ಎಂದು ರಾಗವೆಳೆದು ರುರುವಿನ ಕಾಲೆಳೆದರು.
ರುರು ಪ್ರಮದ್ವರಾಳಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದನು. ಅದರೆ ಮನಸ್ಸು ಕೇಳದೆ ಮತ್ತೆ ಮತ್ತೆ ಆಶ್ರಮದ ಕಡೆಗೆ ಹಿಂತಿರುಗಿ ನೋಡಿದನು. ಪ್ರಮದ್ವರೆ ಅವನನ್ನು ಮರೆಯಲ್ಲಿ ನಿಂತುಕೊಂಡು ಗಮನಿಸುತ್ತಿದ್ದಳು. ರುರು ಪ್ರಮದ್ವರೆಗೆ ಮನಸೋತಿದ್ದನು. ಆತ ಮೊದಲ ನೋಟದಲ್ಲೇ ಅವಳಿಗೆ ತನ್ನ ಮುದ್ದು ಮನಸ್ಸನ್ನು ಕೊಟ್ಟು ಬಿಟ್ಟಿದ್ದನು. ರುರು ಮನೆಗೆ ಬಂದ ನಂತರ ಬರೀ ಅವಳನ್ನೇ ನೆನಪಿಸಿಕೊಂಡು ಒಬ್ಬನೇ ನಗುತ್ತಿದ್ದನು. ಅದನ್ನು ಗಮನಿಸಿದ ಅವನ ಗೆಳೆಯರು ಅವನ ತಂದೆಗೆ ಪ್ರಮದ್ವರೆಯ ವಿಷಯ ತಿಳಿಸಿದರು. ರುರು ಸಹ ತನ್ನ ತಂದೆ ಪ್ರಮತಿಗೆ ಇರೋ ಪ್ರೀತಿಯ ವಿಷಯವನ್ನು ತಿಳಿಸಿದನು. ರುರುವಿನ ತಂದೆ ಪ್ರಮತಿಯು ಪ್ರಮದ್ವರೆಯ ತಂದೆಯಾದ ಸ್ಥೂಲಕೇಶರೊಂದಿಗೆ ಮಾತಾಡಿ ಅವರಿಬ್ಬರ ಮದುವೆಯನ್ನು ನಿಶ್ಚಯಿಸಿದರು. ತಮ್ಮ ಮಕ್ಕಳ ಮದುವೆ ನಿಶ್ಚಯವಾದ ಖುಷಿಯಲ್ಲಿ ಅವರಿಬ್ಬರು ಒಂದು ಚಿಕ್ಕ ಮನೋರಂಜನಾ ಸಮಾರಂಭವನ್ನು ಆಚರಿಸಿದರು. ಆದರೆ ಯುವ ಪ್ರೇಮಿಗಳು ಅವರ ಕಣ್ತಪ್ಪಿಸಿ ಮದುವೆಗೂ ಮುಂಚೆಯೇ ತಮ್ಮ ಕಣ್ಣಾಮುಚ್ಚಾಲೆ ಆಟಗಳನ್ನು ಪ್ರಾರಂಭಿಸಿದರು. ಪ್ರಮದ್ವರೆ ಮಾತಲ್ಲಿ ಮನೆ ಕಟ್ಟಿದರೆ, ರುರು ಮುತ್ತಲ್ಲಿ ಮಳೆ ಬರಿಸಿದನು.
ಮದುವೆ ನಿಶ್ಚಯವಾದ ಒಂದು ದಿನಕ್ಕಿಂತ ಮುಂಚೆ ಪ್ರಮದ್ವರಾ ತನ್ನ ಗೆಳತಿಯರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಳು. ಆಗವಳು ಹೆಜ್ಜೆ ತಪ್ಪಿ ತನ್ನ ಪಾಡಿಗೆ ಸಾಗಿದ್ದ ನಾಗರಹಾವಿನ ಮೇಲೆ ಕಾಲಿಟ್ಟಳು. ತನ್ನನ್ನು ಘಾಸಿಗೊಳಿಸಿದ್ದರಿಂದ ಗಾಬರಿಗೊಂಡ ಹಾವು ಅವಳನ್ನು ಕಚ್ಚಿ ಪೊದೆಯಲ್ಲಿ ಮಾಯವಾಯಿತು. ನೋವು ತಾಳಲಾರದೆ ಅವಳು ಜೋರಾಗಿ ಕಿರುಚುತ್ತಾ ಬಿರುಗಾಳಿಗೆ ಮುರಿದು ಬೀಳುವ ಮರದಂತೆ ನೆಲಕ್ಕುರುಳಿದಳು. ತಕ್ಷಣವೇ ಅವಳ ಗೆಳತಿಯರು ಅವಳನ್ನು ಆಶ್ರಮಕ್ಕೆ ಕರೆದುಕೊಂಡೋಗಿ ಅವಳಿಗೆ ಚಿಕಿತ್ಸೆ ಮಾಡಿದರು. ಅವಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದರು. ಆದರೆ ಪ್ರಮದ್ವರಾ ಬದುಕುಳಿಯಲು ಸಾಧ್ಯವಾಗಲಿಲ್ಲ. ಆಕೆ ಶಾಶ್ವತವಾಗಿ ಮಲಗಿಕೊಂಡಳು.
ನಾಳೆ ತನ್ನ ಮಡದಿಯಾಗಬೇಕಿದ್ದ ಪ್ರೇಯಸಿ ಪ್ರಮದ್ವರಾ ಸಾವಿನ ಬಾಯಿಗೆ ಆಹಾರವಾದಾಗ ರುರುವಿನ ಆಹಾಕಾರ ಮುಗಿಲು ಮುಟ್ಟಿತು. ಆತ ಜೋರಾಗಿ ಎದೆ ಬಡಿದುಕೊಂಡು ಅಳಲು ಪ್ರಾರಂಭಿಸಿದನು. ಅವಳ ಅಳು ಅಲ್ಲಿದ್ದವರ ಕರುಳನ್ನು ಕಿತ್ತಿತ್ತು. ಆತ ಕ್ರೂರ ವಿಧಿಯ ಮೇಲೆ ಕೀರುಚಾಡಲು ಪ್ರಾರಂಭಿಸಿದನು. ಬೇಕಾದರೆ ತನ್ನ ತಪೋಶಕ್ತಿ ಹಾಗೂ ಪ್ರಾಣವನ್ನು ತೆಗೆದುಕೊಂಡು ಪ್ರಮದ್ವರೆಯನ್ನು ಬದುಕಿಸುವಂತೆ ಆತ ಕೀರುಚತೊಡಗಿದನು. ಅವನ ಅಳಲನ್ನು ನೋಡಲಾಗದೆ "ರುರು ನಿನ್ನ ಪ್ರೀತಿಗೆ ಯಮಧರ್ಮರಾಜಾ ಪ್ರಸನ್ನನಾಗಿದ್ದಾನೆ. ನೀನು ನಿನ್ನ ಅರ್ಧಾಯುಷ್ಯವನ್ನು ಪ್ರಮದ್ವರೆಗೆ ಧಾರೆಯೆರೆದರೆ ಅವಳು ಬದುಕಬಹುದು..." ಎಂದು ಆಕಾಶವಾಣಿಯಾಯಿತು. ಆತ ಯೋಚಿಸದೆ ತನ್ನ ಅರ್ಧಾಯುಷ್ಯವನ್ನು ತ್ಯಾಗ ಮಾಡಿ ಪ್ರಮದ್ವರೆಯನ್ನು ಬದುಕಿಸಿಕೊಂಡನು. ಪ್ರೀತಿಸಿದವಳಿಗಾಗಿ ಅರ್ಧಾಯುಷ್ಯ ತ್ಯಾಗ ಮಾಡಿ ರುರು ಅವಳೊಂದಿಗೆ ಮಿಕ್ಕ ಜೀವನವನ್ನು ಸುಖವಾಗಿ ಜೀವಿಸಿ ಮಾದರಿ ಪ್ರೇಮಿಯಾದನು...
ಮನಸ್ಸು ಮಾಡಿದರೆ ರುರು ಮಡಿದ ಪ್ರಮದ್ವರೆಯನ್ನು ಮರೆತುಬಿಟ್ಟು ಮತ್ತೆ ಬೇರೆಯವಳನ್ನು ಪ್ರೀತಿಸಬಹುದಿತ್ತು. ಆತ ಅವಳನ್ನೇನು ಮದುವೆಯಾಗಿರಲಿಲ್ಲ. ಆದರೂ ಆತ ಪ್ರೀತಿಸಿದವಳಿಗಾಗಿ ತನ್ನ ಅರ್ಧಾಯುಷ್ಯವನ್ನು ತ್ಯಾಗ ಮಾಡಿದನು. ಆದರೆ ರುರುವಿನ ಕಥೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಎಲ್ಲರಿಗೂ ಸತಿ ಸಾವಿತ್ರಿ ಗೊತ್ತು. ಆದರೆ ರುರು ಗೊತ್ತಿಲ್ಲ. ರುರು ಹಾಗೂ ಪ್ರಮದ್ವರೆಯರ ಪ್ರೇಮಕಥೆ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಒಂದು ಅಮರ ಪ್ರೇಮಕಥೆ. ಈ ಪ್ರೇಮಕಥೆಯನ್ನು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ...