ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada - radha krishna story in kannada
ಕೃಷ್ಣನಿಗೆ ರುಕ್ಮಿಣಿ ಸಮೇತ ಏಳು ಮಹಾರಾಣಿಯರಲ್ಲದೆ ಒಟ್ಟು 16,100 ಪತ್ನಿಯರಿದ್ದರು. 1,61,080 ಮಕ್ಕಳಿದ್ದರು. ಆದರೆ ಪ್ರೇಯಸಿ ಮಾತ್ರ ಒಬ್ಬಳೇ ಇದ್ದಳು. ಅವಳೇ ರಾಧೆ. ಕೃಷ್ಣನ ಮನಸ್ಸು ಸಂಪೂರ್ಣವಾಗಿ ರಾಧೆಯ ಸ್ವತ್ತಾಗಿತ್ತು. ರಾಧೆಯ ಹೆಸರಿಲ್ಲದೆ ಕೃಷ್ಣನ ಹೆಸರು, ಪ್ರಖ್ಯಾತಿ, ಫೋಟೋಗಳೆಲ್ಲವು ಅಪೂರ್ಣ. ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ. ಆದರೂ ಸಾವಿರಾರು ಪತ್ನಿಯರಿಗೆ ಸಿಗದ ಸ್ಥಾನ, ಗೌರವ, ಪ್ರಖ್ಯಾತಿ ರಾಧೆಗೆ ಸಿಕ್ಕಿದೆ.
ಬ್ರಂದಾವನದಲ್ಲಿ ಕೃಷ್ಣ ಕೊಳಲು ಬಾರಿಸಿದಾಗ ಬರೀ ಗೋವುಗಳಷ್ಟೇ ಬರುತ್ತಿರಲಿಲ್ಲ. ಅವುಗಳ ಜೊತೆಗೆ ಗೋಪಿಕೆಯರು ಸಹ ಬರುತ್ತಿದ್ದರು. ಅವರಲ್ಲಿ ಕೃಷ್ಣನ ಮನ ಕದ್ದವಳು ರಾಧೆ ಮಾತ್ರ. ಕೃಷ್ಣನ ನೀಲಿ ಮೈಬಣ್ಣ, ಬಾದಾಮಿ ಆಕಾರದ ಕಂಗಳು, ತಿಳಿ ಗುಲಾಬಿ ತುಟಿಗಳು, ಉಕ್ಕಿನಂಥ ಶರೀರ, ಕಪ್ಪು ಗುಂಗುರು ಕೂದಲುಗಳಲ್ಲಿ ಸಿಲುಕಿಸಿದ ನವಿಲು ಗರಿ, ತುಂಟತನವನ್ನು ನೋಡಿ ಎಲ್ಲ ಗೋಪಿಕೆಯರು ಅವನ ಮೇಲೆ ಮೋಹಿತರಾಗಿದ್ದರು. ಆದರೆ ರಾಧೆ ಮಾತ್ರ ಕೃಷ್ಣನ ಕೊಳಲ ಧ್ವನಿಗೆ ತನ್ನ ಮನಸ್ಸನ್ನು ಕಳೆದುಕೊಂಡಿದ್ದಳು. ಕೃಷ್ಣನ ಕೊಳಲ ನಾದಕ್ಕೆ ರಾಧೆ ನರ್ತಿಸುವಾಗ ಸ್ವರ್ಗದ ಸೊಬಗೆಲ್ಲವು ಬ್ರಂದಾವನದಲ್ಲಿ ಸೃಷ್ಟಿಯಾಗುತ್ತಿತ್ತು. ಪ್ರತಿ ಮನೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಕಳ್ಳ ಕೃಷ್ಣನ ಮನಸ್ಸನ್ನು ರಾಧೆ ಕದ್ದಿದ್ದಳು. ಕೃಷ್ಣ ಅವಳನ್ನು ಮದುವೆಯಾಗಲು ಬಯಸಿದಾಗ ಆಕೆ ಬಲವಾದ ಹಾಗೂ ಪವಿತ್ರವಾದ ಕಾರಣಗಳನ್ನಿಟ್ಟುಕೊಂಡು ಅವನನ್ನು ಮದುವೆಯಾಗಲು ನಿರಾಕರಿಸಿದಳು.
ರಾಧೆಗೆ 6 ವರ್ಷವಿದ್ದಾಗ ಆಯನ್ ಎಂಬುವ ಯೋಧನೊಂದಿಗೆ ಬಾಲ್ಯ ವಿವಾಹವಾಗಿತ್ತು. ಆದರೆ ಆತ ಮದುವೆಯಾದ ಒಂದು ವರ್ಷದೊಳಗೆ ಗತಿಸಿದನು. ಅನಂತರ ರಾಧೆ ಕೃಷ್ಣನಿಗೆ ಸಿಕ್ಕಳು. ಆಕೆ ಕೃಷ್ಣನಿಗಿಂತ ಮೂರ್ನಾಲ್ಕು ವರ್ಷ ದೊಡ್ಡವಳಾಗಿದ್ದಳು. ತನಗೆ ಈಗಾಗಲೇ ಮದುವೆಯಾಗಿರುವುದರಿಂದ ರಾಧೆ ತನ್ನ ಮೂರ್ಖ ಭಾವನೆಗಳನ್ನು ಬಚ್ಚಿಟ್ಟು ಕೃಷ್ಣನ ಮೇಲೆ ಪ್ರೇಮದ ಭಾವನೆಗಳನ್ನಷ್ಟೇ ಹೊಂದಿದಳು. ಅವಳು ಕೃಷ್ಣನನ್ನು ಪ್ರೀತಿಸಿದಳು. ಆದರೆ ತನಗೆ ಈಗಾಗಲೇ ಮದುವೆಯಾಗಿರುವುದರಿಂದ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಅಲ್ಲದೆ "ಕೃಷ್ಣ ರಾಜನಾಗುವವನು, ಆದರೆ ನಾನು ಗೋವುಗಳನ್ನು ಮೇಯಿಸುವ ಸಾಮಾನ್ಯ ಗೋಪಿಕೆ" ಎಂಬ ಕೀಳು ಭಾವನೆ ಅವಳ ಮನಸ್ಸಲ್ಲಿ ಮನೆ ಮಾಡಿತ್ತು.
ಈಗಾಗಲೇ ಮದುವೆಯಾಗಿದ್ದರು, ತಾನು ಸಾಮಾನ್ಯ ದನ ಕಾಯೋಳು ಎಂಬ ಭಾವನೆಯಿದ್ದರೂ ರಾಧೆ ಮನಸ್ಸು ಮಾಡಿದ್ದರೆ ಶ್ರೀಕೃಷ್ಣನನ್ನೇ ಮದುವೆಯಾಗುತ್ತಿದ್ದಳು. ಆದರೆ ಅವಳ ಪ್ರೇಮದ ಪರಿಕಲ್ಪನೆಯೇ ಬೇರೆಯಾಗಿತ್ತು. ರಾಧೆಯ ಹಾಗೂ ಕೃಷ್ಣನ ಮನಸ್ಸುಗಳು ಪರಸ್ಪರ ಮಿಲನವಾಗಿದ್ದವು. ಅವರಿಬ್ಬರು ಎರಡು ದೇಹ ಒಂದೇ ಮನಸ್ಸು ಎಂಬತ್ತಾಗಿದ್ದರು. ಅವರ ಮಿಲನವಾದ ಮನಸ್ಸುಗಳನ್ನು ಮದುವೆಯ ಬಂಧದಿಂದ ಇಲ್ಲವೇ ದೈಹಿಕ ಸಂಬಂಧದಿಂದ ಮಲಿನ ಮಾಡುವ ಆಸಕ್ತಿ ರಾಧೆಗೆ ಇರಲಿಲ್ಲ. ಅಲ್ಲದೇ ಮನಸ್ಸುಗಳ ಪ್ರೀತಿಗೆ ಮದುವೆಯ ಬೇಲಿ ಅನಾವಶ್ಯಕ ಎಂಬುದು ಅವಳ ಬಲವಾದ ನಂಬಿಕೆಯಾಗಿತ್ತು. ಅದಕ್ಕಾಗಿ ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ.
ರಾಧೆಯ ಮಾತನ್ನು ಮನ್ನಿಸಿ ಶ್ರೀಕೃಷ್ಣ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕಾಗಿ ಬ್ರಂದಾವನವನ್ನು ಬಿಟ್ಟು ದ್ವಾರಕೆಗೆ ಬಂದನು. ಆತ ರಾಜನಾದ ಮೇಲೆ ಮತ್ತೆ ಯಾವತ್ತೂ ಮರಳಿ ಬ್ರಂದಾವನಕ್ಕೆ ತೆರಳಲೇ ಇಲ್ಲ. ರಾಧೆ ತನ್ನ ಜೀವನದ ಪ್ರತಿ ಕ್ಷಣವನ್ನು ಶ್ರೀಕೃಷ್ಣನ ನೆನಪಲ್ಲಿ ಕಳೆದಳು. ರಾಜನಾದ ಮೇಲೆ ಕೃಷ್ಣನಿಗೆ ಸಾಕಷ್ಟು ಜವಾಬ್ದಾರಿಗಳಿರುವುದರಿಂದ ಆತ ರಾಧೆಯನ್ನು ಭೇಟಿಯಾಗಲಿಲ್ಲ. ಆದರೆ ಅವನ ಮನಸ್ಸು ಸಂಪೂರ್ಣವಾಗಿ ರಾಧೆಯಲ್ಲಿಯೇ ಇತ್ತು. ಅವರಿಬ್ಬರೂ ಶಾರೀರಿಕವಾಗಿ ದೂರಾಗಿದ್ದರೂ ಮಾನಸಿಕವಾಗಿ ಹತ್ತಿರವಾಗಿದ್ದರು. ರಾಧೆ ಒಂದಿನ ಹಾಲು ಕಾಯಿಸುವಾಗ ಕೈಜಾರಿ ಹಾಲನ್ನು ತನ್ನ ಕಾಲ ಮೇಲೆ ಸುರಿದುಕೊಂಡಳು. ಆದರೆ ಅವಳ ಬದಲಾಗಿ ಶ್ರೀಕೃಷ್ಣನ ಕಾಲ ಮೇಲೆ ಬೊಬ್ಬೆಗಳಾದವು. ಈ ಘಟನೆ ಸಾಕು ಅವರ ಪವಿತ್ರ ಪ್ರೇಮವನ್ನು ಅರಿಯಲು. ಅವರಿಬ್ಬರೂ ಆತ್ಮ ಸಂಗಾತಿಗಳಾಗಿದ್ದರು.
ರಾಧೆ ಎಷ್ಟು ಕಾದರೂ ಶ್ರೀಕೃಷ್ಣ ಬ್ರಂದಾವನಕ್ಕೆ ಬರಲೇ ಇಲ್ಲ. ಕೊನೆಗೆ ಮುದುಕಿಯಾದ ಮೇಲೆ ರಾಧೆ ಅವನನ್ನು ಹುಡುಕಿಕೊಂಡು ದ್ವಾರಕೆಗೆ ಬಂದಳು. ಕೊನೆಯ ಸಾರಿ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡಳು. ಕೊನೆಯ ಸಲ ಕೃಷ್ಣ ಅವಳಿಗಾಗಿ ಅವಳಿಷ್ಟದ ಕೊಳಲ ರಾಗವನ್ನು ನುಡಿಸಿ ತನ್ನ ಕೊಳಲನ್ನು ಮುರಿದು ಬೀಸಾಕಿದನು. ಅವನ ಕೊಳಲು ನಾದಕ್ಕೆ ನಾಲ್ಕು ಹೆಜ್ಜೆಗಳನ್ನು ಹಾಕಿ ನಗುನಗುತ್ತಾ ರಾಧೆ ಪ್ರಾಣ ಬಿಟ್ಟಳು.
"ಪ್ರೀತಿ ಎನ್ನುವುದು ಮನಸ್ಸುಗಳ ಮಾತೇ ಹೊರತು ಮೈಗಳ ಮಾತಲ್ಲ. ಪ್ರೀತಿಸಿದರೆ ಮದುವೆಯಾಗಬೇಕು ಇಲ್ಲವೇ ಸದಾ ಮೈಗಂಟಿಕೊಂಡಿರಬೇಕು ಎಂಬ ನಿಯಮವೇನಿಲ್ಲ. ಪ್ರೀತಿ ಎರಡು ಆತ್ಮಗಳ ಅನ್ಯೋನ್ಯತೆ. ಎರಡು ದೇಹಗಳು ಒಂದೇ ಆತ್ಮದಲ್ಲಿರುವುದೇ ನಿಜವಾದ ಪ್ರೀತಿ..." ಎಂಬುದನ್ನು ರಾಧೆ ನಮಗೆ ಕಲಿಸಿ ಕೊಟ್ಟಿದ್ದಾಳೆ. ದೈಹಿಕ ಸಂಬಂಧ ಬೆಳೆಸದೆ, ಸದಾ ಜೊತೆಗಿರದೆ ಮಾನಸಿಕವಾಗಿ ಪ್ರೀತಿಸಿ ಜಗತ್ತಿಗೆ ನಿಜವಾದ ಪ್ರೀತಿಯೆಂದರೆ ಏನು ಎಂಬುದನ್ನು ತೋರಿಸಿದ ರಾಧೆ ಸೂರ್ಯ ಚಂದ್ರರಿರುವರೆಗೂ ಅಜರಾಮರಳು. ಅವಳ ಪ್ರೇಮಕಥೆಯಿಂದ ಇವತ್ತಿನ ಪ್ರೇಮಿಗಳು ಕಲಿಯುವುದು ಸಾಕಷ್ಟಿದೆ. ಈ ಪ್ರೇಮಕಥೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ತಿಳಿಸಿ ಮತ್ತು ಇದನ್ನು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ...