ಅಯೋಧ್ಯೆಯ ರಾಜ ಮಾರಿದತ್ತನು ಅತ್ಯಂತ ಕ್ರೂರ ವ್ಯಕ್ತಿತ್ವದವನಾಗಿದ್ದವು. ಆತ ಪ್ರಾಣಿಬಲಿ, ನರಬಲಿಗಳಿಗೆ ಹಿಂಜರಿಯುತ್ತಿರಲಿಲ್ಲ. ಆತ ಚಂಡಮಾರಿ ಯಾಗಕ್ಕೆ ನರಬಲಿ ಕೊಡುವುದಕ್ಕಾಗಿ ಎರಡು ಮುದ್ದಾದ ಹುಡುಗರನ್ನು ಎಳೆತರಿಸಿದ್ದನು. ಆಗ ಅವನು ಮಾಡುತ್ತಿರುವ ನರಬಲಿಯನ್ನು ತಡೆಯುವುದಕ್ಕಾಗಿ ಮತ್ತು ಅಹಿಂಸೆಯ ಮಹತ್ವವನ್ನು ವಿವರಿಸುವುದಕ್ಕಾಗಿ ಅಭಯರುಚಿ ಕುಮಾರ ಮಾರಿದತ್ತನಿಗೆ ಯಶೋಧರ ಚರಿತ್ರೆಯನ್ನು ಹೇಳುತ್ತಾನೆ. ಆ ಯಶೋಧರ ಚರಿತ್ರೆಯಲ್ಲಿ ಅಮೃತಮತಿಯ ಮನಚುಚ್ಚುವ ಅಕ್ರಮ, ಅಧಾರ್ಮಿಕ ಪ್ರಣಯ ಪ್ರಸಂಗವಿದೆ. ಈ ಪ್ರಣಯ ಪ್ರಸಂಗ ಜನ್ನನ ಯಶೋಧರ ಚರಿತ್ರೆಯಲ್ಲಿಯು ಸೊಗಸಾಗಿ ಮೂಡಿ ಬಂದಿದೆ.
ಯಶೋಧರ ಉಜ್ಜಯನಿಯ ರಾಜ ಯಶೌಘ ಮತ್ತು ಚಂದ್ರಮತಿಯ ಮಗನಾಗಿದ್ದಾನೆ. ಅವನ ಸ್ರುರದ್ರೂಪಿ ಮಡದಿಯೇ ಅಮೃತಮತಿ. ಯಶೋಧರ ಸಕಲ ಶಾಸ್ತ್ರ ಮತ್ತು ಶಸ್ತ್ರಗಳಲ್ಲಿ ಸಮರ್ಥನಾದಾಗ ರಾಜಾ ಯಶೌಘ ರಾಜ್ಯಭಾರದ ಜವಾಬ್ದಾರಿಯನ್ನು ಮಗ ಯಶೋಧರನಿಗೆ ವಹಿಸಿ ಕಾಡು ಸೇರಿದನು. ಯಶೋಧರ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಮರ್ಥವಾಗಿ ರಾಜ್ಯಭಾರ ಮಾಡಿಕೊಂಡಿದ್ದನು. ಅವನ ಸುಂದರವಾದ ಮಡದಿ ಅಮೃತಮತಿ ಅವನ ಮನಪ್ರಿಯೆಯಾಗಿದ್ದಳು. ಒಂದಿನ ರಾತ್ರಿ ರಾಜಾ ಯಶೋಧರ ಹಾಗೂ ಅಮೃತಮತಿ ತಮ್ಮ ಖಾಸಗಿ ಅರಮನೆಯಲ್ಲಿ ಏಕಾಂತದಲ್ಲಿದ್ದರು. ಅಮೃತಮತಿ ಯಶೋಧರನಿಂದ ಸಾಕಷ್ಟು ದೈಹಿಕ ಸುಖವನ್ನು ಬಯಸುತ್ತಿದ್ದಳು. ಆದರೆ ಆತ ಒಬ್ಬ ಸದ್ಗುಣಗಳಿರುವ ವ್ಯಕ್ತಿಯಾಗಿದ್ದನು. ಹೀಗಾಗಿ ಅಮೃತಮತಿ ಸಾತ್ವಿಕ ಗುಣಗಳನ್ನು ತುಂಬಿಕೊಂಡ ಗಂಡನಲ್ಲಿ ದೈಹಿಕ ಸುಖವನ್ನು ಅನುಭವಿಸದಾದಳು. ಅವಳಿಗೆ ಅವನಿಂದ ಸುಖ ಸಿಗದಾದಾಗ ಆಕೆ ಬೇಸರಗೊಂಡಳು. ಅದೇ ಸಮಯಕ್ಕೆ ಆಕೆಯ ಕಿವಿಗಳಿಗೆ ಗಜಶಾಲೆಯಿಂದ ಸೊಗಸಾದ ಹಾಡೊಂದು ಕೇಳಿಸಿತು. ರಾಣಿ ಅಮೃತಮತಿ ಆ ಕ್ಷಣದಲ್ಲಿಯೇ ಆ ಹಾಡನ್ನು ಹಾಡುತ್ತಿರುವ ಹಾಡುಗಾರನಿಗೆ ತನ್ನ ಮನಸ್ಸನ್ನು ಕೊಟ್ಟು ಬಿಟ್ಟಳು.
ಮರುದಿನ ಬೆಳಗಾದಾಗ ರಾಣಿ ಅಮೃತಮತಿ ತನ್ನ ಗೆಳತಿಗೆ ಗಜಶಾಲೆಗೆ ಹೋಗಿ ನಿನ್ನೆ ರಾತ್ರಿ ಹಾಡೇಳುತ್ತಿರುವ ಹಾಡುಗಾರನ ಪತ್ತೆ ಹಚ್ಚಿಕೊಂಡು ಬರಲು ಹೇಳಿದಳು. ಆಕೆಯ ಗೆಳತಿ ಗಜಶಾಲೆಗೆ ಹೋಗಿ ನೋಡಿದಾಗ ಆಕೆಗೆ ಆ ಹಾಡುಗಾರನ ಮೇಲೆ ಹೇಸಿಕೆಯಾಯಿತು. ಏಕೆಂದರೆ ಆತ ಗಜಶಾಲೆಯ ಮಾವುತ ಅಷ್ಟಾವಂಕನಾಗಿದ್ದನು. ಹೆಸರೇ ಹೇಳುವಂತೆ ಅವನ ದೇಹದ ಎಂಟು ಕಡೆಗಳಲ್ಲಿ ಗೂನುಗಳಿದ್ದವು. ಕೂಡಲೇ ಅಮೃತಮತಿಯ ಗೆಳತಿ ಅಲ್ಲಿಂದ ಮರಳಿ ನಗುತ್ತಾ ಅವಳಿಗೆ ಅಷ್ಟಾವಂಕನ ಬಗ್ಗೆ ತಿಳಿಸಿದಳು. ಆಕೆ ಅಮೃತಮತಿಗೆ "ನೀನು ನಿನ್ನೆ ರಾತ್ರಿ ಹಾಡು ಕೇಳಿದ್ದು ಗಜಶಾಲೆಯ ಮಾವುತ ಅಷ್ಟಾವಂಕನದ್ದು. ಆತ ನೋಡಲು ತುಂಬಾ ವಿಕಾರವಾಗಿದ್ದಾನೆ. ಆತ ರಾತ್ರಿ ಕುಡಿದು ಮನ ಬಂದಂತೆ ಕೀರುಚುತ್ತಾನೆ ಅದನ್ನೇ ನೀನು ಹಾಡೆಂದುಕೊಂಡಿರುವೆ ಅಷ್ಟೇ..." ಎಂದು ತಿಳಿಸಿ ಹೇಳುತ್ತಾಳೆ. ಆದರೂ ಅಮೃತಮತಿ ಅವಳ ಮಾತನ್ನು ಕೇಳುವುದಿಲ್ಲ. ಏಕೆಂದರೆ ಆಕೆ ಅವನ ಹಾಡನ್ನು ಕೇಳಿದ ಕ್ಷಣದಲ್ಲೇ ತನ್ನ ಮನಸ್ಸನ್ನು ಅವನಿಗೆ ಕೊಟ್ಟು ಬಿಟ್ಟಿರುತ್ತಾಳೆ. ತನ್ನ ಗೆಳತಿಯ ಮಾತನ್ನು ಲೆಕ್ಕಿಸದೇ ಅಮೃತಮತಿ ಅಷ್ಟಾವಂಕನನ್ನು ಭೇಟಿಯಾಗುತ್ತಾಳೆ. ಅಷ್ಟಾವಂಕ ಒಬ್ಬ ಕುರೂಪಿ, ಕುಡುಕ, ಕ್ರೂರ ಹಾಗೂ ಒರಟನೆಂದು ಗೊತ್ತಾದ ಮೇಲು ಆಕೆ ಅವನನ್ನು ಪ್ರೀತಿಸಲು ಮುಂದಾಗುತ್ತಾಳೆ. ಏಕೆಂದರೆ ಆಕೆ ದೇಹದ ಹಸಿವಿನಿಂದ ಬಳಲಿ ಬೆಂಡಾಗಿರುತ್ತಾಳೆ. ಆಕೆ ಅಷ್ಟಾವಂಕನನ್ನು ಪ್ರೀತಿಸುತ್ತಾಳೆ. ರಾಜಾ ಯಶೋಧರನ ಕಣ್ತಪ್ಪಿಸಿ ಅವನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸುತ್ತಾಳೆ.
ಅಮೃತಮತಿ ದೇಹದ ಹಸಿವನ್ನು ಈಡೇರಿಸಿಕೊಳ್ಳಲು ಅಷ್ಟಾವಂಕನ ಜೊತೆಗೆ ಪ್ರೇಮ ಪ್ರಣಯ ಪ್ರಸಂಗಗಳನ್ನು ಧೈರ್ಯವಾಗಿ ಮುಂದುವರೆಸುತ್ತಾಳೆ. ಆದರೆ ಒಂದಿನ ರಾಣಿ ಅಮೃತಮತಿ ಹಾಗೂ ಗಜಶಾಲೆಯ ಮಾವುತ ಅಷ್ಟಾವಂಕನ ಅಕ್ರಮ ಸಂಬಂಧ ರಾಜಾ ಯಶೋಧರನಿಗೆ ಗೊತ್ತಾಗುತ್ತದೆ. ಆತ ರಾತ್ರಿ ಅವಳನ್ನು ಗುಟ್ಟಾಗಿ ಹಿಂಬಾಲಿಸುತ್ತಾನೆ. ರಾಣಿ ಅಮೃತಮತಿ ಗಜಶಾಲೆಗೆ ಹೋಗುತ್ತಾಳೆ. ಅಷ್ಟಾವಂಕ ಆಗಲೇ ಅವಳಿಗಾಗಿ ಬಹಳ ಸಮಯದಿಂದ ಕಾಯುತ್ತಾ ನಿಂತಿರುತ್ತಾನೆ. ಅಮೃತಮತಿ ಅವನ ಹತ್ತಿರ ಬಂದ ನಂತರ ಏರು ಧ್ವನಿಯಲ್ಲಿ ಆತ "ಯಾಕೆ ತಡವಾಗಿ ಬಂದೆ...?" ಎಂದು ಕೇಳುತ್ತಾನೆ. ಆಗಾಕೆ "ಎಲ್ಲರ ಕಣ್ತಪ್ಪಿಸಿ ಬರಲು ತಡವಾಯಿತು" ಎಂದು ಉತ್ತರಿಸುತ್ತಾಳೆ. ಅವಳ ಹಾರಿಕೆಯ ಉತ್ತರದಿಂದ ಅಷ್ಟಾವಂಕನ ಕೋಪ ಮತ್ತಷ್ಟು ಹೆಚ್ಚಾಗುತ್ತದೆ. ಆತ ಕೋಪದಲ್ಲಿ ಅಮೃತಮತಿಗೆ ಕೆಟ್ಟ ಶಬ್ದಗಳಿಂದ ತೆಗಳುತ್ತಾನೆ. ಆಗಾಕೆ ಅವನನ್ನು ಪರಿಪರಿಯಾಗಿ ಬೇಡಿಕೊಂಡು ಸಮಾಧಾನ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ಕೋಪದಲ್ಲಿ ಅವಳನ್ನು ಕಾಲಿನಿಂದ ಒದೆಯುತ್ತಾನೆ. ಅವಳ ತಲೆಗೂದಲುಗಳನ್ನು ಹಿಡಿದು ಎಳೆದಾಡುತ್ತಾನೆ. ಇಷ್ಟೆಲ್ಲ ಆದರೂ ಅಮೃತಮತಿ ಆ ಕ್ರೂರ ಕುರೂಪಿ ಅಷ್ಟಾವಂಕನನ್ನು ತನ್ನ ಸೆರಗು ಜಾರಿಸಿ ಸಂತೈಸುತ್ತಾಳೆ.
ಅಮೃತಮತಿ ತಾನು ಒಬ್ಬ ರಾಜನ ಮಡದಿಯೆಂಬುದನ್ನು ಮರೆತು ಕೀಳು ಮಾವುತನೊಂದಿಗೆ ಗಜಶಾಲೆಯಲ್ಲಿ ಬೆತ್ತಲಾಗುತ್ತಾಳೆ. ಇಷ್ಟಾದರೂ ಒರಟ ಅಷ್ಟಾವಂಕನ ಕೋಪ ಸಂಪೂರ್ಣವಾಗಿ ತಣ್ಣಗಾಗಿರುವುದಿಲ್ಲ. ಆತ ಅಮೃತಮತಿಯ ಕೋಮಲವಾದ ಶರೀರವನ್ನು ತನ್ನ ಒರಟಾದ ಬೆರಳುಗಳಿಂದ ಪರಚುತ್ತಾನೆ. ಅವಳ ನಾಜೂಕಾದ ಕೆನ್ನೆ, ಕತ್ತು, ಕಿವಿ, ತುಟಿಗಳನ್ನು ಕಚ್ಚುತ್ತಾನೆ. ಅವಳನ್ನು ಹಿಂಸಿಸುತ್ತಾ ಅವಳನ್ನು ವಿಕೃತವಾಗಿ ಕಾಮಿಸುತ್ತಾನೆ. ಆದರೂ ಅಮೃತಮತಿ ಅವನ ಈ ವಿಕೃತತೆಯನ್ನು ಆನಂದಿಸುತ್ತಿರುತ್ತಾಳೆ. ಈ ಕ್ರೂರ ಸನ್ನಿವೇಶವನ್ನು ನೋಡುತ್ತಾ ನಿಂತಿದ್ದ ರಾಜಾ ಯಶೋಧರನ ಕಣ್ಣಲ್ಲಿ ಕಣ್ಣೀರು ಕಾಲು ಚಾಚುತ್ತದೆ. ಜೊತೆಗೆ ತನ್ನ ಮುದ್ದಿನ ಮಡದಿಯ ಮೇಲೆ ಅಸಹ್ಯವಾಗುತ್ತದೆ. ಆತ ಕೋಪದಲ್ಲಿ ಅವರಿಬ್ಬರನ್ನು ಕೊಲ್ಲುವುದಕ್ಕಾಗಿ ತನ್ನ ಖಡ್ಗವನ್ನು ಹೊರ ತೆಗೆಯುತ್ತಾನೆ. ಆದರೆ ಹಿಂಸೆ ಜೈನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಸುಮ್ಮನೆ ತನ್ನ ಅರಮನೆಗೆ ಮರಳುತ್ತಾನೆ.
ರಾಣಿ ಅಮೃತಮತಿ ಹಾಗೂ ಅಷ್ಟಾವಂಕನ ವಿಚಿತ್ರ ಅಕ್ರಮ ಪ್ರಣಯವನ್ನು ಕಂಡು ರಾಜಾ ಯಶೋಧರ ಮಾನಸಿಕ ಆಘಾತಕ್ಕೆ ಒಳಗಾಗಿರುತ್ತಾನೆ. ಅದೇ ಸಮಯದಲ್ಲಿ ಅವನ ಸಪ್ಪೆ ಮುಖವನ್ನು ನೋಡಿ ಅವನ ತಾಯಿ ಅವನ ಈ ಮೌನಕ್ಕೆ ಕಾರಣವೇನೆಂದು ಕೇಳುತ್ತಾಳೆ. ಆಗಾತ ಒಂದು ಭಯಂಕರವಾದ ಕೆಟ್ಟ ಕನಸ್ಸನ್ನು ಕಂಡೆ ಅಷ್ಟೇ ಎಂದೇಳಿ ಜಾರಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಅವನ ತಾಯಿ "ಆ ಕನಸ್ಯಾವುದು...?" ಎಂದು ಕೇಳುತ್ತಾಳೆ. ಆಗ ರಾಜಾ ಯಶೋಧರ "ಸುಂದರವಾದ ರಾಜ ಹಂಸವೊಂದು ಕೊಚ್ಚೆಯಲ್ಲಿ ಬಿದ್ದು ಹೊರಳಾಡುತ್ತಿರುವುದನ್ನು ಕಂಡೆ..." ಎಂದೇಳಿ ಅಲ್ಲಿಂದ ಹೋಗುತ್ತಾನೆ. ಅವನ ತಾಯಿ ಜೋತಿಷಿಗಳನ್ನು ಕರೆಯಿಸಿ ತಮ್ಮ ಮಗನ ನೆಮ್ಮದಿ ತಿಂದ ಆ ಕನಸಿಗೆ ಪರಿಹಾರವೆನೆಂದು ಕೇಳುತ್ತಾರೆ. ಆಗ ಜೋತಿಷಿಗಳು "ಒಂದು ಹುಂಚವನ್ನು ಬಲಿ ಕೊಡಿ. ಎಲ್ಲವೂ ಸರಿ ಹೋಗುತ್ತದೆ..." ಎಂದೇಳುತ್ತಾರೆ. ಆದರೆ ಅಹಿಂಸಾ ವಾದಿಯಾದ ರಾಜಾ ಯಶೋಧರ ಹುಂಜವನ್ನು ಬಲಿ ಕೊಡಲು ಒಪ್ಪುವುದಿಲ್ಲ. ಅದಕ್ಕಾಗಿ ಹಿಟ್ಟಿನ ಹುಂಜವನ್ನು ಮಾಡಿ ಬಲಿಕೊಟ್ಟು ಬಂದಿರುವ ಸಮಸ್ಯೆಯನ್ನು ಪರಿಹರಿಸುವ ನಿರ್ಧಾರ ಅಂತಿಮವಾಗುತ್ತದೆ. ಅದರಂತೆ ಒಂದು ಹಿಟ್ಟಿನ ಹುಂಜವನ್ನು ಮಾಡಿ ಅದನ್ನು ಬಲಿಕೊಡಲು ಸಕಲ ಸಿದ್ಧತೆಗಳಾಗುತ್ತವೆ. ಆದರೆ ಆ ಹಿಟ್ಟಿನ ಹುಂಜದ ಅಂದಕ್ಕೆ ಆಕರ್ಷಿತವಾಗಿ ಒಂದು ಆತ್ಮ ಅದರಲ್ಲಿ ಬಂದು ಸೇರಿಕೊಳ್ಳುತ್ತದೆ. ಅದನ್ನರಿಯದೆ ರಾಜಾ ಯಶೋಧರ ಆ ಹಿಟ್ಟಿನ ಹುಂಜವನ್ನು ತನ್ನ ಖಡ್ಗದಿಂದ ಕತ್ತರಿಸುತ್ತಾನೆ. ಆಗ ಅದರಲ್ಲಿದ್ದ ಆತ್ಮ ರಕ್ತ ಕಾರಿಕೊಂಡು ಹೊರ ಬೀಳುತ್ತದೆ. ಅದನ್ನು ನೋಡಿದ ಯಶೋಧರ ನನ್ನಿಂದ ಪ್ರಾಣಿ ಹಿಂಸೆಯಾಯಿತೆಂದು ಭಾವಿಸಿ ಪ್ರಾಯಶ್ಚಿತ್ತಕ್ಕಾಗಿ ಕಾಡಿಗೆ ಹೋಗಲು ನಿರ್ಧರಿಸುತ್ತಾನೆ.
ಯಶೋಧರ ಹುಂಜವನ್ನು ಬಲಿ ಕೊಡಲು ಮಾಡಿದ ಯಾಗದ ಹಿಂದಿರುವ ಕಾರಣ ತಿಳಿದು ಅಮೃತಮತಿ ಅವನ ಮೇಲೆ ಹಲ್ಲು ಕಿರಿಯುತ್ತಾಳೆ. ಸುಂದರವಾದ ರಾಜ ಹಂಸವೊಂದು ಕೊಚ್ಚೆಯಲ್ಲಿ ಹೊರಳಾಡುತ್ತಿರುವುದನ್ನು ಕಂಡೆ ಎಂದೇಳಿದ ಮಾತಲ್ಲಿ ನಾನೇ ಆ ರಾಜ ಹಂಸ ಎಂಬುದನ್ನು ಅಮೃತಮತಿ ಸುಲಭವಾಗಿ ಅರಿಯುತ್ತಾಳೆ. ಅಲ್ಲದೆ ಆಕೆಗೆ ಅಷ್ಟಾವಂಕನೊಂದಿಗೆ ಬೆಳೆಸಿದ ಅಕ್ರಮ ಸಂಬಂಧ ಯಶೋಧರನಿಗೆ ಗೊತ್ತಾಗಿದೆ ಎಂಬುದು ಸಹ ತಿಳಿಯುತ್ತದೆ. ಅದಕ್ಕಾಗಿ ಆಕೆ ರಾಜಾ ಯಶೋಧರನನ್ನು ಕೊಲ್ಲಲು ಸಂಚು ರೂಪಿಸುತ್ತಾಳೆ. ಆ ಸಂಚಿನಂತೆ ನಯವಾಗಿ ಮಾತನಾಡುತ್ತಾ ಯಶೋಧರನಿಗೆ ಹಾಗೂ ಅವನ ತಾಯಿಗೆ ಊಟ ಬಡಿಸುವ ನೆಪದಲ್ಲಿ ಅವರಿಬ್ಬರಿಗೆ ವಿಷ ಉಣಿಸಿ ಸಾಯಿಸುತ್ತಾಳೆ. ಜೈನ ಧರ್ಮವನ್ನು ಅನುಸರಿಸಿ ಅಹಿಂಸೆಯನ್ನು ಪಾಲಿಸಿದ ರಾಜಾ ಯಶೋಧರ ತನ್ನ ಮನಪ್ರಿಯ ನಡತೆಗೆಟ್ಟ ಮಡದಿಯಿಂದಲೇ ಕೊಲೆಯಾಗುತ್ತಾನೆ. ಅವನ ಸಾವಿನ ನಂತರವೂ ಕಾಮಕ್ಕಾಗಿ ಕ್ರೂರಳಾದ ಕೆಟ್ಟ ಹೆಣ್ಣಾದ ಅಮೃತಮತಿ ಅಷ್ಟಾವಂಕನೊಂದಿಗೆ ಅದೇ ರೀತಿ ಅಕ್ರಮ ಸಂಬಂಧವನ್ನು ಮುಂದುವರೆಸಿ ಸಾವಿನ ನಂತರ ಧೂಮಪ್ರಭೆ ಎಂಬ ನರಕಕ್ಕೆ ಹೋಗಿ ನರಳುತ್ತಾಳೆ.
ಅಹಿಂಸಾ ವಾದಿಯಾದ ಯಶೋಧರನ ಚರಿತ್ರೆಯನ್ನು ಕೇಳಿದ ನಂತರ ಅಯೋಧ್ಯೆಯ ರಾಜ ಮಾರಿದತ್ತ ನರಬಲಿ ಮತ್ತು ಹಿಂಸೆಯಿಂದ ಹಿಂದೆ ಸರಿಯುತ್ತಾನೆ. ಚಂಡಮಾರಿ ಯಾಗಕ್ಕಾಗಿ ಆತ ಸೆರೆ ಹಿಡಿದಿದ್ದ ಅಮಾಯಕ ಹುಡುಗರನ್ನು ಬಿಡುಗಡೆಗೊಳಿಸುತ್ತಾನೆ. ಇಷ್ಟು ದಿನ ತಾನು ಮಾಡಿದ ಹಿಂಸೆಗೆ ಪ್ರಾಯಶ್ಚಿತ್ತವಾಗಿ ಅಹಿಂಸಾ ವಾದವನ್ನು ಒಪ್ಪಿಕೊಂಡು ಕಾಡಿಗೆ ತೆರಳುತ್ತಾನೆ. ಇದಿಷ್ಟು ಯಶೋಧರ ಚರಿತ್ರೆಯಲ್ಲಿ ಬರುವ ಅಮೃತಮತಿಯ ಅಕ್ರಮ ಪ್ರಣಯ ಪ್ರಸಂಗ. ಪ್ರೇಮಕ್ಕೆ ಕಣ್ಣಿಲ್ಲವೆಂಬುದು ಜಗಜ್ಜಾಹೀರಾದ ಮಾತು. ಆದರೆ ಕಾಮಕ್ಕೂ ಕಣ್ಣಿಲ್ಲವೆಂಬುದು ಅಮೃತಮತಿಯಿಂದ ಜಗಜ್ಜಾಹೀರಾಗುವ ಮಾತು. ಅಮೃತಮತಿಯಂಥ ಕೆಟ್ಟ ಕಾಮುಕಿ ಯಾರಿಗೂ ಮಡದಿಯಾಗಿ ಸಿಗದಿರಲಿ ಎಂಬ ಆಶಯ ನನ್ನದು. ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ...