ಪ್ರೇಮಿಗಳಿಗೆ ದೇವದಾಸನ ಹೆಸರು ಗೊತ್ತಿರದೆ ಇರಬಹುದು. ಆದರೆ ವಿರಹಿಗಳಿಗೆ ದೇವದಾಸನ ಹೆಸರು ಖಂಡಿತ ಗೊತ್ತಿರುತ್ತದೆ. ಹೃದಯ ಮುರಿದವರೆಲ್ಲ ದೇವದಾಸರೆ ಎಂಬ ಮಾತಿದೆ. ಎಲ್ಲರ ಮನ ಮುಟ್ಟಿದ ದೇವದಾಸನದ್ದು ನಿಜವಾದ ಪ್ರೇಮಕಥೆಯಲ್ಲ. ಅವನದ್ದು ಶರತ ಚಂದ್ರ ಚಟರ್ಜಿಯವರು 1900ರಲ್ಲಿ ಬೆಂಗಾಲಿಯಲ್ಲಿ ಬರೆದ ಕಾಲ್ಪನಿಕ ಪ್ರೇಮಕಥೆ. ದೇವದಾಸನ ಪ್ರೇಮಕಥೆ ಎಲ್ಲರ ಮನ ಕಲುಕಿದೆ. ಏಕೆಂದರೆ ಅದು ಸುಮಾರು 19 ಸಲ ವಿಭಿನ್ನ ಭಾಷೆಯ ಸಿನೆಮಾ ತೆರೆಯ ಮೇಲೆ ಮೂಡಿ ಬಂದಿದೆ. ದೇವದಾಸನ ಪ್ರೇಮಕಥೆ ಇಂತಿದೆ.
ಕಲ್ಕತ್ತಾ ಸಮೀಪದ ತಾಳಶೋನಪುರ ಎಂಬ ಹಳ್ಳಿಯಲ್ಲಿನ ಅಗರ್ಭ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಕುಟುಂಬದಲ್ಲಿ ದೇವದಾಸನ ಜನನವಾಯಿತು. ಅವನ ಗೆಳತಿಯೇ ಪಾರ್ವತಿ. ಎಲ್ಲರೂ ಅವಳನ್ನು ಪ್ರೀತಿಯಿಂದ ಪಾರು ಎಂದು ಕರೆಯುತ್ತಿದ್ದರು. ಅವಳು ದೇವದಾಸನ ಎದುರಿನ ಮನೆಯವಳು. ದೇವದಾಸ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಪರಿವಾರದ ವಂಶೋಧ್ಧಾರಕನಾಗಿದ್ದನು. ಆದರೆ ಅವನ ಬಾಲ್ಯದ ಗೆಳತಿ ಪಾರು ಒಂದು ಮಿಡಲ್ ಕ್ಲಾಸ್ ವ್ಯಾಪಾರಿ ಕುಟುಂಬದ ಮುದ್ದಿನ ಮಗಳಾಗಿದ್ದಳು. ಜಾತಿ ಅಂತಸ್ತನ್ನು ಮೀರಿ ಅವರಿಬ್ಬರ ಗೆಳೆತನ ಘಾಡವಾಗಿ ಬೆಳೆದಿತ್ತು. ಅವರಿಬ್ಬರ ಕುಟುಂಬಗಳ ಮಧ್ಯೆಯೂ ಒಂದು ಅನ್ಯೋನ್ಯತೆ ಇತ್ತು. ದೇವದಾಸನ ತಾಯಿ ಪಾರುವನ್ನು ಅತ್ಯಂತ ಇಷ್ಟಪಡುತ್ತಿದ್ದಳು. ಪಾರು ತನ್ನ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲಿಯೇ ಕಳೆಯುತ್ತಿದ್ದಳು. ದೇವದಾಸ ಅವಳೊಂದಿಗೆ ತುಂಟಾಟ ಆಡುತ್ತಾ ಅವಳನ್ನು ರೇಗಿಸುತ್ತಿದ್ದನು. ಈ ರೀತಿ ಬಾಲ್ಯದಲ್ಲಿಯೇ ದೇವದಾಸ ಹಾಗೂ ಪಾರುವಿನ ಮಧ್ಯೆ ಒಂದು ಮುರಿಯಲಾಗದ ಬೇಸುಗೆ ಬೆಳೆಯಿತು.
ದೇವದಾಸ ಹಾಗೂ ಪಾರು ಇಬ್ಬರು ಒಬ್ಬರನ್ನೊಬ್ಬರನ್ನು ಬಿಟ್ಟಿರುತ್ತಿರಲಿಲ್ಲ. ಆದರೆ ಸಂದರ್ಭ ಅವರನ್ನು ಬೇರ್ಪಡಿಸಿತು. ದೇವದಾಸ ತನ್ನ ತಂದೆಯ ಒತ್ತಾಯದ ಮೇರೆಗೆ ಶಿಕ್ಷಣವನ್ನು ಪಡೆಯುವುದಕ್ಕಾಗಿ ಕಲ್ಕತ್ತಾಗೆ ತೆರಳಿದನು. ಆತ 13 ವರ್ಷಗಳ ಕಾಲ ಓದಿಗಾಗಿ ಅಲ್ಲಿಯೇ ಉಳಿದನು. ಪಾರು ದೇವದಾಸನಿಗಾಗಿ ಪ್ರತಿಕ್ಷಣ ಪರಿತಪಿಸುತ್ತಿದ್ದಳು. ಅವನ ನೆನಪಲ್ಲಿ ಉಸಿರಾಡುತ್ತಿದ್ದಳು. ಅವನು ಸಹ ಅವಳನ್ನು ಪತ್ರಗಳ ಮುಖಾಂತರ ನೆನಪಿಸಿಕೊಳ್ಳುತ್ತಿದ್ದನು. ಶಾರೀರಿಕವಾಗಿ ದೂರಾದರೂ ಮಾನಸಿಕವಾಗಿ ಅವರಿಬ್ಬರು ಹತ್ತಿರವಾಗುತ್ತಲೇ ಹೋದರು. ದೇವದಾಸ 13 ವರ್ಷಗಳ ನಂತರ ತನ್ನ ಓದನ್ನು ಮುಗಿಸಿ ಮರಳಿ ಹಳ್ಳಿಗೆ ಬಂದಾಗ ಅವನು ಸಂಪೂರ್ಣವಾಗಿ ಬದಲಾಗಿದ್ದನು. ಚಿಕ್ಕವನಿದ್ದಾಗ ಪೆದ್ದನಂತಾಡುತ್ತಿದ್ದ ಹುಡುಗ ಈಗ ಒಬ್ಬ ಸುಶಿಕ್ಷಿತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದನು. ಅದೇ ರೀತಿ ಪಾರು ಕೂಡ ಸಾಕಷ್ಟು ಬದಲಾಗಿದ್ದಳು.
ಎಷ್ಟೋ ವರ್ಷಗಳ ನಂತರ ದೇವದಾಸ ತನ್ನ ಪಾರುವನ್ನು ನೋಡಿದಾಗ ಆತ ಅಚ್ಚರಿಗೆ ಒಳಗಾದನು. ಏಕೆಂದರೆ ಅವನ ಬಾಲ್ಯದ ಸ್ನೇಹಿತೆ ಪಾರು ಈಗ ಸಾಕಷ್ಟು ಬದಲಾಗಿದ್ದಳು. ಬಾಲ್ಯದಲ್ಲಿ ಅವನೊಂದಿಗೆ ಯಾವುದೇ ಮುಜುಗುರ, ಹಿಂಜರಿಕೆ, ನಾಚಿಕೆಯಿಲ್ಲದೆ ತುಂಟಾಟವಾಡುತ್ತಿದ್ದ ಪಾರು ಈಗ ಎದೆಯೆತ್ತರಕ್ಕೆ ಬೆಳೆದು ನಿಂತ ಸುಂದರ ಯುವತಿಯಾಗಿದ್ದಳು. ಅವಳ ಸೌಂದರ್ಯವನ್ನು ಕಂಡಾಕ್ಷಣ ದೇವದಾಸ ತನ್ನನ್ನು ತಾನು ನಂಬದಾದನು. ಅವರಿಬ್ಬರೂ ಪರಸ್ಪರ ಅಪ್ಪಿಕೊಂಡರು. ಏಕಾಂತದಲ್ಲಿ ತಮ್ಮ ಯೋಗಕ್ಷೇಮ ವಿಚಾರಿಸಿಕೊಂಡರು. ಈಗವರಿಗೆ "ತಾವಿಬ್ಬರು ಬರೀ ಸ್ನೇಹಿತರಾಗಿ ಉಳಿದಿಲ್ಲ, ಯುವ ಪ್ರೇಮಿಗಳಾಗಿದ್ದೇವೆ..." ಎಂಬುದು ಅರಿವಾಯಿತು. ತನ್ನ ಬಾಲ್ಯದ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿರುವುದರಿಂದ ಪಾರು ಪ್ರಪಂಚವನ್ನೇ ಗೆದ್ದ ಖುಷಿಯಲ್ಲಿದ್ದಳು. ಅದೇ ರೀತಿ ದೇವದಾಸ ಕೂಡ ಅಪರೂಪದ ಸುಂದರಿ ತನ್ನ ಸಂಗಾತಿಯಾಗುವಳು ಎಂಬ ಸಂತಸದಲ್ಲಿ ತೇಲಾಡಿದನು.
ದಿನಗಳು ಕಳೆದಂತೆ ದೇವದಾಸ ಹಾಗೂ ಪಾರುವಿನ ಪ್ರೀತಿ ಒಂದು ಪರದೆಯನ್ನು ದಾಟಿ ಮುಂದೆ ಸಾಗಿತು. ಆಕೆ ಚಿಕ್ಕ ವಯಸ್ಸಿನಂತೆಯೇ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲೇ ಕಳೆಯಲು ಪ್ರಾರಂಭಿಸಿದಳು. ಅವಳು ದೇವದಾಸನ ಕಣ್ಣುಗಳಲ್ಲಿ ತನ್ನ ಮೇಲಿರುವ ಪ್ರೀತಿಯನ್ನು ನೋಡುತ್ತಾ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅವನ ಜೊತೆ ಕಿತ್ತಾಡುತ್ತಾ, ಕೋಪಿಸಿಕೊಂಡಂತೆ ನಾಟಕವಾಡುತ್ತಾ ತನ್ನನ್ನು ತಾನು ಮರೆತು ಬಿಡುತ್ತಿದ್ದಳು. ದೇವದಾಸ ಅವಳ ಮುದ್ದಾದ ನಗುವಿಗೆ ಮನಸೋತು ಮಗುವಿನಂತೆ ಅವಳನ್ನೇ ನೋಡುತ್ತಾ ಏನೇನೋ ಕಲ್ಪಿಸಿಕೊಳ್ಳುತ್ತಾ ಮೈಮರೆಯುತ್ತಿದ್ದನು. ಅವಳ ಮಡಿಲಲ್ಲಿ ಮಲಗಿಕೊಂಡು ಅವಳ ಸ್ಪರ್ಷಯನ್ನು ಸವಿಯುತ್ತಾ, ಅವಳ ಮುದ್ದಾದ ಮಾತುಗಳನ್ನು ಕೇಳುತ್ತಾ ನಿದ್ರೆಗೆ ಜಾರುತ್ತಿದ್ದನು. ಅವರಿಬ್ಬರ ಮನೆ ಎದುರು ಬದುರಾಗಿರುವುದರಿಂದ ಅವರಿಬ್ಬರಿಗೂ ಸುಲಭವಾಗಿ ಸಿಗಲು ಸಾಧ್ಯವಾಗುತ್ತಿತ್ತು. ಹೀಗಾಗಿ ಅವರಿಬ್ಬರ ಪ್ರೀತಿ ಸುಸೂತ್ರವಾಗಿ ಮುಂದೆ ಸಾಗಿತ್ತು.
ಯಾರ ಅಡ್ಡಿ ಆತಂಕವಿಲ್ಲದೆ ದೇವದಾಸ ಹಾಗೂ ಪಾರುವಿನ ಪ್ರೀತಿ ರಹಸ್ಯವಾಗಿ ಮುಂದೆ ಸಾಗಿತ್ತು. ಆದರೆ ಅವರ ಪ್ರೀತಿ ಪಾರುವಿನ ತಾಯಿಗೆ ಗೊತ್ತಾಯಿತು. ಅವಳ ತಾಯಿ ಅವಳ ಪ್ರೀತಿಯನ್ನು ಪ್ರೋತ್ಸಾಹಿಸಿದರು. ಏಕೆಂದರೆ ತಮ್ಮ ಮಗಳು ದೇವದಾಸನನ್ನು ಇಷ್ಟಪಡುತ್ತಿದ್ದಾಳೆ ಎಂಬುದು ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಅದಕ್ಕಾಗಿ ಅವರು ಪಾರುವಿನ ಪ್ರೀತಿಗೆ ಪ್ರೋತ್ಸಾಹ ನೀಡಿದರು. ತಡಮಾಡದೆ ತಮ್ಮ ಮಗಳ ಮದುವೆಯನ್ನು ದೇವದಾಸನೊಂದಿಗೆ ನೆರವೇರಿಸಿ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸನ್ನು ಕಂಡರು. ಪಾರುವಿನ ತಾಯಿ ಬೆಂಗಾಲಿ ಸಂಪ್ರದಾಯದಂತೆ ದೇವದಾಸನ ತಾಯಿ ಹರಿಮತಿಗೆ ತಮ್ಮ ಮಗಳನ್ನು ನಿಮ್ಮನೆ ಸೊಸೆಯಾಗಿಸಿಕೊಳ್ಳುವಂತೆ ಕೇಳಿಕೊಂಡರು. ದೇವದಾಸ ಹಾಗೂ ಪಾರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದನ್ನು ಹೇಳಿ ಅವರಿಬ್ಬರ ಮದುವೆಯ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ದೇವದಾಸನ ತಾಯಿ ಪಾರುವನ್ನು ತಮ್ಮ ಮನೆ ಸೊಸೆಯಾಗಿಸಿಕೊಳ್ಳಲು ಹಿಂದೇಟು ಹಾಕಿದರು. ಅವರಿಗೆ ತಮಗಿಂತಲೂ ಅಂತಸ್ತಿನಲ್ಲಿ, ಜಾತಿಯಲ್ಲಿ ಕೀಳಾಗಿರುವ ವ್ಯಾಪಾರಿಗಳ ಮನೆ ಮಗಳನ್ನು ತಮ್ಮ ಮನೆ ತುಂಬಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಅವರು ಪಾರುವಿನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರು. ಜೊತೆಗೆ ಪಾರುವನ್ನು "ಹೀನ ಕುಲದವಳು, ನಡತೆಗೆಟ್ಟವಳು, ವ್ಯಾಪಾರಿ ವಂಶಸ್ಥಳು" ಎಂದೆಲ್ಲ ಹೀಯಾಳಿಸಿ ಅವಮಾನಿಸಿದರು. ದೇವದಾಸನ ತಂದೆ ನಾರಾಯಣ ಮುಖರ್ಜಿ "ನಮ್ಮ ಅಂತಸ್ತಿಗೆ ತಕ್ಕಷ್ಟು ವರದಕ್ಷಿಣೆಯನ್ನು ಕೊಡುವ ಯೋಗ್ಯತೆ ನಿಮಗಿಲ್ಲ..." ಎಂದು ಅವಮಾನಿಸಿ ಕಳುಹಿಸಿದರು. ಪಾರುವಿನ ತಾಯಿ ಇಂಥ ಉತ್ತರವನ್ನು ದೇವದಾಸನ ಮನೆಯಿಂದ ನಿರೀಕ್ಷಿಸಿರಲಿಲ್ಲ. ಅವಮಾನವಾದ ಕೋಪದಲ್ಲಿ ಪಾರುವಿನ ತಂದೆ ನೀಲಕಂಠ ಚಕ್ರವರ್ತಿಯವರು ಪಾರುವಿಗೆ ಒಂದೊಳ್ಳೆ ಶ್ರೀಮಂತ ವರನನ್ನು ಹುಡುಕಿ ಅವಳ ಮದುವೆಯ ಸಿದ್ಧತೆಗಳನ್ನು ಪ್ರಾರಂಭಿಸಿದರು.
ತರಾತುರಿಯಲ್ಲಿ ಸಾಗುತ್ತಿರುವ ತನ್ನ ಮದುವೆ ಸಿದ್ಧತೆಗಳನ್ನು ನೋಡಿ ಪಾರು ಗಾಬರಿಯಾದಳು. ಅವಳಿಗೆ ದೇವದಾಸನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗುವ ಮನಸ್ಸಿರಲಿಲ್ಲ. ಆಕೆಗೆ ದೇವದಾಸನ್ನು ಬಿಟ್ಟು ಖುಷಿಯಾಗಿರುವಷ್ಟು ಶಕ್ತಿಯೂ ಇರಲಿಲ್ಲ. ಅದಕ್ಕಾಗಿ ಆಕೆ ಧೈರ್ಯ ಮಾಡಿ ಎಲ್ಲರ ಕಣ್ತಪ್ಪಿಸಿ ಮಧ್ಯ ರಾತ್ರಿ ಎರಡು ಗಂಟೆಗೆ ಗುಟ್ಟಾಗಿ ದೇವದಾಸನನ್ನು ಭೇಟಿಯಾದಳು. ಅವನಿಗೆ ತನ್ನ ಪ್ರೀತಿಯನ್ನು ಮನಮುಟ್ಟುವಂತೆ ಹೇಳಿದಳು. ಆದರೆ ದೇವದಾಸ ಮೌನವಾಗಿದ್ದನು. ಏಕೆಂದರೆ ಅವನಿಗೆ ತನ್ನ ಮನೆಯವರೊಂದಿಗೆ ಮಾತಾಡಿ ತಮ್ಮಿಬ್ಬರ ಮದುವೆಗೆ ಒಪ್ಪಿಗೆ ಪಡೆದುಕೊಳ್ಳುವಷ್ಟು ಧೈರ್ಯವಿರಲಿಲ್ಲ. ಪಾರುವಿನ ಮನೆಯಲ್ಲಿ ಯಾವುದೇ ತಕರಾರುಗಳಿರಲಿಲ್ಲ. ಆದರೆ ದೇವದಾಸನ ಮನೆಯಲ್ಲಿ ಅವರ ಪ್ರೀತಿಗೆ ತೀವ್ರ ವಿರೋಧವಿತ್ತು. ಮನೆಯವರನ್ನು ವಿರೋಧಿಸಿ ಪಾರುವನ್ನು ಮದುವೆಯಾಗುವುಷ್ಟು ಭಂಡು ಧೈರ್ಯ ದೇವದಾಸನ ಎದೆಯಲ್ಲಿರಲಿಲ್ಲ. ಪಾರು ಅವನೊಂದಿಗೆ ಓಡೋಗಿ ಮದುವೆಯಾಗಲು ಸಹ ಸಿದ್ಧಳಿದ್ದಳು. ಆದರೆ ಆತ ಹೆದರು ಪುಕ್ಕಲಾಗಿದ್ದನು. ಆತ ಅವಳನ್ನು ಸಮಾಧಾನ ಮಾಡಿ ಅವಳನ್ನು ಮನೆಗೆ ಕಳುಹಿಸಿದನು. ಮರುದಿನ ತಮ್ಮಿಬ್ಬರ ಮದುವೆಗೆ ತನ್ನ ತಂದೆಯ ಮನವೊಲಿಸಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿ ಸೋತನು. ಅವನ ಮನೆಯವರಿಗೆ ಮಗನ ಖುಷಿಗಿಂತ ಜಾತಿ ಹಾಗೂ ಅಂತಸ್ತಿನ ಅಹಂಕಾರವೇ ಹೆಚ್ಚಾಗಿತ್ತು.
ತನ್ನ ಮನೆಯವರ ಮನವೊಲಿಸುವಲ್ಲಿ ವಿಫಲನಾದಾಗ ದೇವದಾಸನಿಗೆ ಪಾರುವಿಗೆ ಮುಖ ತೋರಿಸುವ ಧೈರ್ಯವಾಗಲಿಲ್ಲ. ಅದಕ್ಕಾಗಿ ಆತ ಅವಳಿಗೆ ಹೇಳದೆ ಕೇಳದೆ ರಾತ್ರೋರಾತ್ರಿ ಕಲ್ಕತ್ತಾಗೆ ಹಾರಿ ಹೋದನು. ಒಂದೆರಡು ದಿನ ಬಿಟ್ಟು ಅವಳಿಗೆ "ನಮ್ಮ ಮದುವೆಗೆ ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದಕ್ಕಾಗಿ ನಾವಿಬ್ಬರೂ ನಮ್ಮ ಪ್ರೀತಿಯನ್ನು ಮರೆತು ಬರೀ ಸ್ನೇಹಿತರಾಗಿ ಇರೋಣ..." ಎಂದೇಳಿ ಪತ್ರ ಬರೆದನು. ಅವನ ಪತ್ರವನ್ನು ಓದಿ ಪಾರು ಕಂಗಾಲಾದಳು. "ನಾನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ದೇವದಾಸ ಇಷ್ಟೊಂದು ಹೇಡಿಯೇ?" ಎಂದವಳು ನೊಂದಕೊಂಡಳು. ಅದೇ ನೋವಲ್ಲಿ ಅವಳು ತನ್ನ ತಂದೆ ತೋರಿಸಿದ ಹುಡುಗನೊಂದಿಗೆ ಮದುವೆಯಾಗಲು ಮೌನ ಸಮ್ಮತಿ ಸೂಚಿಸಿದಳು. ಆದರೆ ಅವಳ ಮನಸ್ಸು ದೇವದಾಸನಿಗಾಗಿ ಹಾತೊರೆಯುತ್ತಿತ್ತು. ಅವಳ ಮದುವೆಯ ಸಿದ್ಧತೆಗಳೆಲ್ಲ ಭರದಿಂದ ಸಾಗಿದವು. ಅತ್ತ ಕಡೆ ದೇವದಾಸನಿಗೆ ತಡವಾಗಿ ಜ್ಞಾನೋದಯವಾಯಿತು. ನಾನೀಗ ಸುಮ್ಮನಿದ್ದರೆ ಪಾರುವನ್ನು ಶಾಶ್ವತವಾಗಿ ಕಳೆದುಕೊಳ್ಳುವೆ ಎಂಬ ಭಯ ರಾತ್ರೋರಾತ್ರಿ ಅವನನ್ನು ಮತ್ತೆ ಅವನ ಊರಿಗೆ ಎಳೆದುಕೊಂಡು ಬಂದಿತು.
ಪಾರುವಿನ ಮದುವೆಯ ಒಂದು ದಿನ ಮುಂಚಿತವಾಗಿ ದೇವದಾಸ ಅವಳನ್ನು ಒಂಟಿಯಾಗಿ ಭೇಟಿಯಾದನು. "ನಾನೀಗ ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವೆ. ನಾವಿಬ್ಬರೂ ಓಡೋಗಿ ಮದುವೆಯಾಗೋಣ..." ಎಂದೇಳಿದನು. ಆದರೆ ಅವನ ಮಾತಿಗೆ ಪಾರು ಸೊಪ್ಪಾಕಲಿಲ್ಲ. ದೇವದಾಸನನ್ನು ಮತ್ತೆ ಬಯಸಿ ಅವಳ ತಂದೆತಾಯಿಗಳ ಮಾನವನ್ನು ಹರಾಜಾಕುವ ಕೆಟ್ಟ ಆಸೆ ಅವಳಲ್ಲಿ ಈಗ ಬರಲಿಲ್ಲ. ಅದಕ್ಕಾಗಿ ಆಕೆ ಅವನ ಬೇಜಾವಬ್ದಾರಿತನ ಮತ್ತು ಹೇಡಿತನವನ್ನು ನಿಂದಿಸಿ ಅವನ ಕೋರಿಕೆಯನ್ನು ತಳ್ಳಿ ಹಾಕಿದಳು. ದೇವದಾಸ ತನ್ನನ್ನು ಮದುವೆಯಾಗುವಂತೆ ಪಾರುವನ್ನು ನಾನಾ ರೀತಿಯಲ್ಲಿ ಕೇಳಿಕೊಂಡನು. ಆದರೆ ಅವಳ ಮನಸ್ಸಿಗ ಕಲ್ಲಾಗಿತ್ತು.
ದೇವದಾಸ ಎಷ್ಟೇ ಬೇಡಿಕೊಂಡರೂ ಪಾರು ಅವನೊಂದಿಗೆ ಮದುವೆಯಾಗಲು ಒಪ್ಪಲಿಲ್ಲ. ಅವಳ ನಿರ್ಧಾರ ಸರಿಯಾಗಿತ್ತು. ಏಕೆಂದರೆ ಮನೆ ಮುಂದೆ ಮದುವೆಯ ದಿಬ್ಬಣ ಬಂದು ನಿಂತಾಗ ಹೇಳದೆ ಕೇಳದೆ ಓಡಿ ಹೋದವನ ಜೊತೆ ಓಡಿ ಹೋಗುವುದು ಸರಿಯಲ್ಲ ಎಂಬುದು ಅವಳಿಗೆ ಚೆನ್ನಾಗಿ ಅರಿವಾಗಿತ್ತು. ಆಕೆ ಅವನಿಂದ "ಸಾಯುವುದರ ಒಳಗೊಮ್ಮೆ ನನ್ನನೊಮ್ಮೆ ನನ್ನ ಮನೆಯಲ್ಲಿ ಬಂದು ನೋಡು..." ಎಂದು ಭಾಷೆ ತೆಗೆದುಕೊಂಡು ಅವನನ್ನು ತರಾಟೆಗೆ ತೆಗೆದುಕೊಂಡು ಮಾತಿನಿಂದ ಚುಚ್ಚಿ ಸಾಯಿಸಿ ಕಳುಹಿಸಿದಳು. ದೇವದಾಸನ ಹೇಡಿತನ ಹಾಗೂ ಅವನ ಮನೆಯವರು ಮಾಡಿದ ಅವಮಾನದ ಸೇಡಿನಿಂದ ಬೇರೆ ಹುಡುಗನೊಂದಿಗೆ ಮದುವೆಯಾಗಿ ಊರು ಬಿಟ್ಟಳು. ಅವಳ ನೆನಪಲ್ಲಿ ಕೊರಗುತ್ತಾ ಮನೆಯವರೊಂದಿಗೆ ಜಗಳವಾಡಿಕೊಂಡು ದೇವದಾಸ ಸಹ ಊರು ಬಿಟ್ಟು ಕಲ್ಕತ್ತಾ ಸೇರಿಕೊಂಡನು.
ದೇವದಾಸನ ಮೇಲಿನ ಸೇಡಿನಿಂದಾಗಿ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಿ ಆಕೆ ದೊಡ್ಡ ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಳು. ಏಕೆಂದರೆ ಅವಳ ಗಂಡ ಭುವನ ಚೌದರಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದರು. ತನಗಿಂತಲೂ ವಯಸ್ಸಿನಲ್ಲಿ ಹನ್ನೆರಡು ವರ್ಷ ದೊಡ್ಡವನಾದ ಅರ್ಧ ಮುದುಕನೊಂದಿಗೆ ಹಾಸಿಗೆ ಹಂಚಿಕೊಂಡು ಸಂಸಾರ ಮಾಡಲು ಆಕೆ ಸಿದ್ಧಳಿದ್ದಳು. ಆದರೆ ಅವಳ ಗಂಡ ಸತ್ತು ಹೋದ ಮೊದಲ ಹೆಂಡತಿಯ ನೆನಪಲ್ಲಿ ನಾಸ್ತಿಕನಾಗಿದ್ದನು. ಆತ ಅವಳ ಸೌಂದರ್ಯದಲ್ಲಿ ಆಸಕ್ತಿ ತೋರಿಸದೇ ಅವಳನ್ನು ಮೂಲೆಗುಂಪು ಮಾಡಿದನು. ಅವಳು ಅವನ ಮಕ್ಕಳ ಸಾಕು ತಾಯಿಯಾಗಷ್ಟೇ ಇರಬೇಕಾಯಿತು. ಅವಳ ಗಂಡ ಜಮೀನುದಾರಿಯನ್ನು ನೋಡಿಕೊಳ್ಳುತ್ತಾ ಅವಳಿಂದ ಬಹುದೂರವೇ ಇರುತ್ತಿದ್ದನು. ಆದರೆ ಆಕೆ ತನ್ನ ಮಾಜಿ ಪ್ರಿಯಕರ ದೇವದಾಸನ ನೆನಪುಗಳಲ್ಲಿ ನರಕಯಾತನೆಯನ್ನು ಅನುಭವಿಸಲು ಪ್ರಾರಂಭಿಸಿದಳು. ದೇವದಾಸನ ನೆನಪುಗಳ ನಿರಂತರ ದಾಳಿಯ ಜೊತೆಗೆ ಹಿಂಸಿಸುವ ಹರೆಯದ ಆಸೆಗಳು ಅವಳನ್ನು ಹಣ್ಣಾಗಿಸಿದನು. ಆಕೆ ಪ್ರೇಮ ವೈರಾಗ್ಯವನ್ನು ಕೊಲ್ಲಲು ಗಂಡನ ತೋಳಿನಾಸರೆಯನ್ನು ಬಯಸಿದಳು. ಆದರೆ ಅವಳಿಗೆ ಅದರ ಬದಲಾಗಿ ಗಂಡನಿಂದಲೂ ವೈರಾಗ್ಯ ಸಿಕ್ಕಾಗ ಆಗ ಮಾನಸಿಕವಾಗಿ ಕುಸಿದು ಬಿದ್ದಳು. ಅವಳ ಗಂಡನ ಸಂಪತ್ತಿನಂತೆ ಅವಳ ಸೌಂದರ್ಯವೂ ಸಹ ನಶ್ವರವಾಯಿತು. ದೇವದಾಸನನ್ನು ಮರೆಯಲಾಗದೆ ಆಕೆ ಮನಶಾಂತಿಗಾಗಿ ಪೂಜಾ ಪಾಠಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕಾಲವನ್ನು ನೂಕತೊಡಗಿದಳು.
ಮನಸ್ಸಿಲ್ಲದ ಮದುವೆಯಾಗಿ ಪಾರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಳು. ಅತ್ತ ಕಡೆ ಕಲ್ಕತ್ತಾದಲ್ಲಿ ದೇವದಾಸ "ತನ್ನ ಹೇಡಿತನದಿಂದಾಗಿ ಮನಸ್ಸಲ್ಲಿರುವವಳನ್ನು ಮದುವೆಯಾಗದೆ ಬೇರೆಯವನಿಗೆ ಬಿಟ್ಟು ಕೊಟ್ಟೆನಲ್ಲ" ಎಂದು ಕೊರಗಲು ಪ್ರಾರಂಭಿಸಿದನು. ಅವನು ಎಷ್ಟೇ ಪ್ರಯತ್ನಿಸಿದರೂ ಪಾರುವಿನ ಗುಂಗಿನಿಂದ ಹೊರಬರಲು ಅವನಿಗೆ ಸಾಧ್ಯವಾಗಲಿಲ್ಲ. ಬೇಡವೆಂದರೂ ಬೆನ್ನಟ್ಟಿ ಬರುವ ಅವಳ ನೆನಪುಗಳಿಂದ ತಪ್ಪಿಸಿಕೊಳ್ಳಲಾಗದೆ ಆತ ಕುಡಿಯಲು ಪ್ರಾರಂಭಿಸಿದನು. ಕುಡಿತದ ಜೊತೆಜೊತೆಗೆ ಸಿಗರೇಟ್ ಸುಂದರಿಯನ್ನು ಸಹ ತುಟಿಗಂಟಿಸಿಕೊಂಡನು. ಇಷ್ಟಾದರೂ ಅವನ ವಿರಹ ಕೊನೆಯಾಗಲಿಲ್ಲ. ಅವನ ಗೆಳೆಯ ಚುನ್ನಿಲಾಲನಿಂದಾಗಿ ಆತ ಚಂದ್ರಮುಖಿ ಎಂಬ ವೈಷ್ಯೆಯ ಸೆರಗಲ್ಲಿ ಸಿಲುಕಿಕೊಂಡನು. ಆತ ಮಿತಿ ಮೀರಿ ಕುಡಿಯುತ್ತಾ, ಲೆಕ್ಕವಿಲ್ಲದಷ್ಟು ಸಿಗರೇಟಗಳನ್ನು ಸುಡುತ್ತಾ ಚಂದ್ರಮುಖಿಯ ಸೆರಗಿಗೆ ಸುತ್ತಿಕೊಂಡು ಅವಳ ಮನೆಯಲ್ಲಿಯೇ ಬಿದ್ದಿರಲು ಶುರುಮಾಡಿದನು. ಆತ ಚಂದ್ರಮುಖಿಯಲ್ಲಿಯೆ ತನ್ನ ಪಾರುವನ್ನು ಕಾಣಲು ಪ್ರಾರಂಭಿಸಿದನು.
ದೇವದಾಸ ಚಂದ್ರಮುಖಿಯನ್ನು ಪಾರು ಅಂತ ಭಾವಿಸಿ ಅವಳೊಂದಿಗೆ ಪ್ರೀತಿ ಮಾತುಗಳನ್ನಾಡುವಾಗ ಆಕೆ ಅವನಿಗೆ ಮನಸೋತಳು. ಆಕೆ ಅವನನ್ನು ಪ್ರೀತಿಸತೊಡಗಿದಳು. ಆಕೆ ಅವನ ಮನಸ್ಸಲ್ಲಿರುವ ಪಾರುವನ್ನು ಕಿತ್ತಾಕಿ ತಾನು ಅವನ ಮನಸೇರಲು ಸಾಕಷ್ಟು ಪ್ರಯತ್ನಿಸಿದಳು. ಆದರೆ ಅವನ ಮನಸ್ಸಲ್ಲಿ ಬರೀ ಪಾರುವಿಗೆ ಮಾತ್ರ ಜಾಗವಿತ್ತು. ಆಕೆ ಅವನ ದುಶ್ಚಟಗಳನ್ನು ಬಿಡಿಸಲು ಪ್ರಯತ್ನಿಸಿದಳು. ಆದರೆ ಏನು ಪ್ರಯೋಜನವಾಗಲಿಲ್ಲ. ದೇವದಾಸ ಪಾರುವಿನ ನೆನಪಲ್ಲಿ ಲೆಕ್ಕವಿಲ್ಲದಷ್ಟು ಕುಡಿದು ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸಿಕೊಂಡನು. ತಾನಿನ್ನು ಜಾಸ್ತಿ ದಿನ ಬದುಕಲ್ಲ ಎಂಬುದು ಖಾತ್ರಿಯಾದಾಗ ಆತನಿಗೆ ಪಾರುವಿಗೆ ಕೊಟ್ಟ ಮಾತು ನೆನಪಾಯಿತು. ಕೊಟ್ಟ ಮಾತಿನಂತೆ ಕೊನೆಯ ಸಲ ಪಾರುವನ್ನು ನೋಡಲು ಆತ ಅವಳ ಊರಿಗೆ ಹೋದನು. ಆದರೆ ಅವಳನ್ನು ನೋಡಲಾಗದೆ ಅವಳ ಮನೆ ಎದುರಿಗೇನೆ ಪ್ರಾಣ ಬಿಟ್ಟನು. ಅವನ ಸಾವಿನ ಸುದ್ದಿ ಕೇಳಿ ಅವನನ್ನು ನೋಡಲು ಪಾರು ಓಡೋಡಿ ಬರುವಾಗ ಅವಳ ಮನೆಯವರು ಅವಳನ್ನು ತಡೆದರು. ಆಕೆ ಎಷ್ಟೇ ಬೇಡಿಕೊಂಡರೂ ದೇವದಾಸನನ್ನು ನೋಡಲು ಅವಳ ಮನೆಯವರು ಅವಕಾಶ ಮಾಡಿಕೊಡಲಿಲ್ಲ. ಅತಿಯಾಗಿ ಪ್ರೀತಿಸಿ ಆತ ಅವಳ ಮನೆ ಬಾಗಿಲಲ್ಲಿ ಸತ್ತನು. ಸತ್ತ ಪ್ರಿಯಕರನ ಮುಖವನ್ನು ನೋಡಲಾಗದೆ ಪಾರು ಇದ್ದು ಸತ್ತಂತೆ ಬದುಕಿ ಸತ್ತಳು...
ಈ ದೇವದಾಸನದ್ದು ಕಾಲ್ಪನಿಕ ಕಥೆಯಾದರೂ ಅವನಿನ್ನು ಎಲ್ಲ ವಿರಹಿಗಳ ಉಸಿರಲ್ಲಿ ಹೊಗೆಯಾಗಿಕೊಂಡು ಬದುಕಿದ್ದಾನೆ. ಪ್ರೀತಿಸಿದವಳನ್ನು ಪಡೆದುಕೊಳ್ಳಲಾಗದ ಹೇಡಿ ದೇವದಾಸನಿಗಾಗಿ ಕೊರಗಬೇಕೋ ಅಥವಾ ಸಂದರ್ಭಕ್ಕೆ ಶರಣಾಗಿ ನಾಸ್ತಿಕನನ್ನು ಮದುವೆಯಾಗಿ ನರಕಯಾತನೆಯನ್ನು ಅನುಭವಿಸಿದ ಪ್ರೇಮ ಸುಂದರಿ ಪಾರುಗಾಗಿ ಕೊರಗಬೇಕೋ ಎಂಬುದು ತಿಳಿಯಲ್ಲ. ಇದಿಷ್ಟು ದೇವದಾಸನ ಪ್ರೇಮಕಥೆ. ಇಷ್ಟವಿದ್ದರೆ ಈ ಪ್ರೇಮಕಥೆಯನ್ನು ನಿಮ್ಮ ಮಾಜಿ ಪ್ರೀತಿಪಾತ್ರರೊಡನೆ ಶೇರ್ ಮಾಡಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...