ಪ್ರೀತಿಯೊಂದು ಸುಂದರ ಭಾವನೆ. ಮರೆಯಲಾಗದ ಮಧುರ ಅನುಭವ. ಎಲ್ಲರೂ ಪ್ರೇಮಕಥೆಗಳನ್ನು ಪ್ರೀತಿಸುತ್ತಾರೆ. ಆದರೆ ಗೆದ್ದ ಪ್ರೀತಿಗಿಂತ ಬಿದ್ದ ಪ್ರೀತಿಯೇ ಹೆಚ್ಚಿಗೆ ಪ್ರಖ್ಯಾತಿಯನ್ನು ಪಡೆಯುತ್ತದೆ. ಅಂಥದ್ದೇ ಬಿದ್ದು ಪ್ರಖ್ಯಾತಿ ಪಡೆದ ಪ್ರೇಮಕಥೆಗಳ ಗುಂಪಿಗೆ ಲೈಲಾ ಮಜನು ಪ್ರೇಮಕಥೆ ಸೇರಿಕೊಳ್ಳುತ್ತದೆ. ಲೈಲಾ ಮಜನುರದ್ದು ಒಂದು ಮಹಾನ್ ಹುಚ್ಚು ಪ್ರೇಮಕಥೆ.
ಸುಮಾರು 7ನೇ ಶತಮಾನದಲ್ಲಿ ಉತ್ತರ ಅರೇಬಿಯಾದ ಪೆನ್ಸಿಲೆನಿಯಾ ಎಂಬಲ್ಲಿ 'ಕಯಾಸ್ ಇಬ್ನ್ ಅಲ್ - ಮುಲ್ವಾಹಲ್' ಎಂಬ ನವ ತರುಣನಿದ್ದನು. ಆತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವನ ಮನಸ್ಸು ಹಾಗೂ ಮೆದುಳು ಎರಡೂ ಪರಿಪೂರ್ಣವಾಗಿ ಪಕ್ವವಾಗಿದ್ದವು. ಅವನಿಗೆ ಬದುಕು ಹೆಜ್ಜೆ ಹೆಜ್ಜೆಗೂ ಪಾಠ ಕಲಿಸಿರುವುದರಿಂದ ಆತ ಅನುಭವದ ಮೂರ್ತಿಯಾಗಿದ್ದನು. ಅವನ ಕಷ್ಟಗಳು ಅವನಿಗೆ ಬದುಕುವುದನ್ನು ಕಲಿಸಿದ್ದವು. ಆದರೆ ಆತ ಕಷ್ಟಗಳನ್ನು ದ್ವೇಷಿಸುತ್ತಿರಲಿಲ್ಲ. ಅದರ ಬದಲಾಗಿ ತನ್ನ ಜೀವನವನ್ನು ಪ್ರೀತಿಸುತ್ತಿದ್ದನು. ಜೀವನದ ಮೇಲಿನ ಪ್ರೀತಿಯಿಂದಾಗಿ ಅವನಲ್ಲೊಂದು ಕವಿ ಹೃದಯ ಜನ್ಮ ತಾಳಿತ್ತು. ಅವನೆದೆಯಿಂದ ಕವನಗಳು ನಿರಂತರವಾಗಿ ಕುಡಿಯೊಡೆಯಲು ಪ್ರಾರಂಭಿಸಿದವು. ಒಂದಿನ ಹೀಗೆಯೇ ಕವನಗಳನ್ನು ಕಟ್ಟುತ್ತಾ ಊರಲ್ಲಿ ಅಲೆಯುತ್ತಿರುವಾಗ ಆತನ ಕಣ್ಣಿಗೆ ಒಬ್ಬಳು ಸುಂದರವಾದ ನವ ತರುಣಿ ಬಿದ್ದಳು. ಅವಳೇ 'ಲೈಲಾ ಅಲ್ ಅಮಿರಿಯಾ'. ಲೈಲಾ ಒಂದು ಶ್ರೀಮಂತ ಕುಟುಂಬದ ಕನ್ಯೆಯಾಗಿದ್ದಳು. ಅವಳ ತಂದೆ ಅವಳನ್ನು ರಾಜಕುಮಾರಿಯಂತೆ ಬೆಳೆಸಿದ್ದರು. ಅವಳ ಮೇಲೆ ಕಯಾಸನಿಗೆ ಮನಸ್ಸಾಯಿತು. ಆತ ಅವಳನ್ನು ಕಂಡ ಕ್ಷಣದಿಂದಲೇ ಪ್ರೀತಿಸಲು ಪ್ರಾರಂಭಿಸಿದನು. ಬೀದಿ ಭೀಕಾರಿಯಂತಿದ್ದ ಕಯಾಸನಿಗೂ ರಾಜಕುಮಾರಿಯಂತಿದ್ದ ಲೈಲಾಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೂ ಕಯಾಸ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು.
ಕಯಾಸ ತನ್ನ ಕನಸುಗಳ ಲೋಕದಲ್ಲಿ ಲೈಲಾಳನ್ನು ಕಲ್ಪಿಸಿಕೊಂಡು ಪ್ರೇಮ ಕವನಗಳನ್ನು ಬರೆಯಲು ಪ್ರಾರಂಭಿಸಿದನು. ಅವನ ಪ್ರೇಮಕವನಗಳಲ್ಲಿ ಲೈಲಾಳ ಹೆಸರು ಹಾಗೂ ಸೌಂದರ್ಯ ಪದೇಪದೇ ಸದ್ದು ಮಾಡತೊಡಗಿತು. ಅವನ ಪ್ರೇಮ ಕವನಗಳು ಪ್ರೇಮ ಬಾಣಗಳಂತೆ ಲೈಲಾಳ ಹೃದಯಕ್ಕೆ ತಾಕಿದವು. ಆಕೆ ಅವನ ಕವನಗಳನ್ನು ಮೆಚ್ಚಿ ಪ್ರೇಮಕವಿ ಕಯಾಸನನ್ನು ಪ್ರೀತಿಸಲು ಪ್ರಾರಂಭಿಸಿದಳು. ಅವನ ಪ್ರೇಮ ಕವನಗಳಿಂದಾಗಿ ಅವನ ಪ್ರೇಮಕಥೆ ಊರಲೆಲ್ಲ ಫೇಮಸ್ ಆಯ್ತು. ಅವನು ಹುಚ್ಚನಂತೆ ಲೈಲಾಳನ್ನು ಪ್ರೀತಿಸುವುದನ್ನು ಕಂಡ ಊರ ಜನ ಅವನನ್ನು ಲೈಲಾ ಮಜನು ಎಂದು ಕರೆಯತೊಡಗಿದರು. ಲೈಲಾ ಮಜನು ಎಂದರೆ ಲೈಲಾಳಿಂದ ಹುಚ್ಚನಾದವ ಎಂದರ್ಥ. ಅವನ ಗೆಳೆಯರು ಸಹ ಅವನನ್ನು ಲೈಲಾ ಮಜನು ಎಂದು ಕರೆದು ಅವನನ್ನು ಛೇಡಿಸಿದರು. ಆದರೆ ಆತ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪ್ರೇಮ ಕವನಗಳಲ್ಲಿ ಲೈಲಾಳನ್ನು ಆರಾಧಿಸಿದನು.
ಪ್ರೇಮ ಕವನಗಳ ನೆರಳಿನಲ್ಲಿ ಲೈಲಾ ಮತ್ತು ಕಯಾಸನ ಪ್ರೇಮಕಥೆ ಸಾಗಿತ್ತು. ಆದರೆ ಕಯಾಸ್ ಆತುರದಲ್ಲಿ ಲೈಲಾಳ ತಂದೆಗೆ "ಲೈಲಾಳನ್ನು ಕೊಟ್ಟು ಮದುವೆ ಮಾಡುವಿರಾ...?" ಎಂದು ಕೇಳಿ ದುಡುಕಿದನು. ಲೈಲಾಳ ತಂದೆ ಲೈಲಾಳನ್ನು ಕಯಾಸನಿಗೆ ಕೊಟ್ಟು ಮದುವೆ ಮಾಡಲು ಒಂಚೂರು ಒಪ್ಪಲಿಲ್ಲ. ಏಕೆಂದರೆ ಅವರ ಕಣ್ಣಲ್ಲಿ ಕಯಾಸ್ ಬರೀ ಕವನಗಳನ್ನು ಬರೆಯುತ್ತಾ ಕೆಲಸವಿಲ್ಲದೆ ಬೀದಿಬೀದಿ ಅಲೆಯುವ ಬೀದಿ ಭೀಕಾರಿಯಾಗಿದ್ದನು. ಅಂತಸ್ತಿನಲ್ಲಿ ಆತ ಅತ್ಯಂತ ಕೆಳಗಿರುವುದರಿಂದ ಹಾಗೂ ಅವನಿಗೆ ಯಾವುದೇ ಕೆಲಸ ಇರದಿರುವುದರಿಂದ ಲೈಲಾಳ ತಂದೆ ಅವನನ್ನು "ಕೆಲಸವಿಲ್ಲದೆ ಅಲೆಯುವ ನಿನ್ನ ಕವಿತೆಗಳಿಂದ ನನ್ನ ಮಗಳ ಹೊಟ್ಟೆ ತುಂಬಲ್ಲ..." ಎಂದು ಬೈದು ಬುದ್ಧಿವಾದ ಹೇಳಿ ಕಳುಹಿಸಿದರು. "ರಾಜಕುಮಾರಿಯಂತೆ ಸಾಕಿದ ಮಗಳನ್ನು ಬಡವರ ಮನೆಗೆ ಧಾರೆಯೆರೆದು ಕೊಡಲು ಯಾವ ತಂದೆಯು ಒಪ್ಪಲ್ಲ. ಕಯಾಸನ ಪ್ರೇಮ ಕವನಗಳು ತಂದೆಯ ದೃಷ್ಟಿಯಲ್ಲಿ ಪ್ರಯೋಜನಕ್ಕೆ ಬರಲ್ಲ..." ಎಂಬುದು ಗೊತ್ತಾದಾಗ ಲೈಲಾ ಊಟ ನೀರನ್ನು ಬಿಟ್ಟು ಮನೆಯಲ್ಲಿ ಮೌನ ಚಳುವಳಿಯನ್ನು ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ಬಲವಂತವಾಗಿ ಅವಳ ಮದುವೆಯನ್ನು 'ವರದ ಅಲ್ತಾಫಿ' ಎಂಬ ಶ್ರೀಮಂತ ವ್ಯಾಪಾರಿಯೊಡನೆ ಸದ್ದಿಲ್ಲದೆ ಮಾಡಿದರು. ಆಕೆ ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಮನೆ ಸೇರಿ ಕಣ್ಣೀರಲ್ಲಿ ಕೈ ತೊಳೆಯತೊಡಗಿದಳು. ಅವಳ ಗಂಡನಿಗೆ ಅವಳ ಪ್ರೇಮಕಥೆ ಗೊತ್ತಾದಾಗ ಆತ ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಬೆಳೆಸದೆ ಅಸಲಿ ಪುರುಷನೆನೆಸಿಕೊಂಡನು.
ಜಾತಿ ಒಂದೇ ಆದರೂ ಅಂತಸ್ತಿನ ಅಸಮಾನತೆಯಿಂದಾಗಿ ಕಯಾಸನ ಪ್ರೀತಿ ಲೈಲಾಳ ಬಲವಂತದ ಮದುವೆಯಲ್ಲಿ ಸದ್ದಿಲ್ಲದೆ ಬಲಿಯಾಯಿತು. ಯಾವಾಗ ಲೈಲಾಳ ಮದುವೆಯ ಸುದ್ದಿ ಕಯಾಸನ ಕಿವಿಗೆ ಬಿತ್ತೋ ಆಗವನ ಮನಸ್ಸು ಮುರಿದು ನೂಚ್ಚು ನೂರಾಯಿತು. ಆತ ನಿಂತ ಜಾಗದಲ್ಲಿಯೇ ಕುಸಿದು ಬಿದ್ದನು. ಆತ ಸುಧಾರಿಸಿಕೊಂಡ ನಂತರ ಊರ ಬಿಟ್ಟು ಸಮೀಪದ ಮರಭೂಮಿಯಲ್ಲಿ ಲೈಲಾಳನ್ನು ಹುಡುಕುತ್ತಾ ಅಲೆಯಲು ಶುರುಮಾಡಿದನು. ಅವನಿಗೆ ಲೈಲಾ ಎಲ್ಲಿದ್ದಾಳೆ ಎಂಬುದೇ ಗೊತ್ತಿರಲಿಲ್ಲ. ಆದರೂ ಆತ ಅವಳನ್ನು ದಿಕ್ಕು ದೆಸೆಯಿಲ್ಲದೆ ಹುಡುಕುತ್ತಾ ಹೊರಟನು. ಅವನ ಮನೆಯವರು ಅವನನ್ನು ಎಲ್ಲೆಡೆಗೆ ಹುಡುಕಾಡಿ ಸುಸ್ತಾದರು. ಅವನಿನ್ನೂ ಮರಳಿ ಬರಲ್ಲವೆಂದು ಅವನ ಶ್ರಾದ್ಧ ಆಚರಿಸಿದರು. ಆದರೆ ಕಯಾಸ ಕಂಡಕಂಡ ಕಲ್ಲುಗಳ ಮೇಲೆ ಮತ್ತು ಮರಭೂಮಿಯ ಮರಳಿನಲ್ಲಿ ಕೋಲಿನಿಂದ ಕವಿತೆಗಳನ್ನು ಬರೆಯುತ್ತಾ, ಲೈಲಾಳನ್ನು ಹುಡುಕುತ್ತಾ ಹಾಗೆಯೇ ಗೊತ್ತು ಗುರಿಯಿಲ್ಲದೆ ಮುಂದೆ ಸಾಗಿದನು.
ಲೈಲಾಳ ಹುಡುಕಾಟದಲ್ಲಿ ಅಲೆದು ಕಯಾಸ ವಿಶಾಲವಾದ ಮರಭೂಮಿ ಪಾಲಾದನು. ಲೈಲಾ ಕೂಡ ಅವನ ನೆನಪುಗಳಲ್ಲಿ ನರಳಿ ತನ್ನ ಕೊನೆಯ ದಿನಗಳನ್ನು ಹತ್ತಿರವಾಗಿಸಿಕೊಂಡಳು. ಕಯಾಸನಿಂದ ದೂರಾಗಿ ದೂರದ ಗಂಡನ ಮನೆಗೆ ಬಂದಾಗ ಲೈಲಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹಾಸಿಗೆ ಹಿಡಿದಳು. ಅವಳ ಮನೋ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ ಅವಳ ಗಂಡ ಅವಳನ್ನು ಇರಾಕಗೆ ಕರೆದುಕೊಂಡು ಹೋದನು. ಆದರೆ ಅವಳ ಮನೋರೋಗ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಯಿತು. ಕೊನೆಗಾಕೆ ಕಯಾಸನ ನೆನಪುಗಳ ನೋವನ್ನು ತಾಳಲಾರದೇ ಎದೆಯೊಡೆದುಕೊಂಡು ಪ್ರಾಣ ತ್ಯಾಗ ಮಾಡಿದಳು.
ಲೈಲಾಳ ಅಕಾಲಿಕ ಸಾವಿನ ಸುದ್ದಿ ಅವಳೂರಿಗೆ ತಲುಪಿದಾಗ ಕಯಾಸನ ಗೆಳೆಯರು ಅವನಿಗಾಗಿ ಬಹಳಷ್ಟು ಹುಡುಕಾಡಿದರು. ಆದರೆ ಆತ ಅವರಿಗೆ ಸಿಗಲಿಲ್ಲ. ಕೆಲವು ದಿನಗಳು ಕಳೆದ ನಂತರ ಅವನ ಮೃತ ಶರೀರ ಲೈಲಾಳ ಗೋರಿಯ ಪಕ್ಕದಲ್ಲಿ ಕಂಡು ಬಂದಿತು. ಆತ ಅವಳನ್ನು ಹುಡುಕಿಕೊಂಡು ಇರಾಕಿಗೆ ಬರುವಷ್ಟರಲ್ಲಿ ಅವಳು ಗೋರಿ ಸೇರಿದ್ದಳು. ಅದನ್ನು ತಿಳಿದ ಕಯಾಸ ಅವಳ ಗೋರಿ ಪಕ್ಕದಲ್ಲಿದ್ದ ಕಲ್ಲುಗಳ ಮೇಲೆ ಅವಳಿಗಾಗಿ ಮೂರು ಸಾಲಿನ ಪ್ರೇಮ ಕವನವೊಂದನ್ನು ಬರೆದು ಕಣ್ಮುಚ್ಚಿದ್ದನು.
ಕಯಾಸ ಲೈಲಾಳನ್ನು ಪ್ರೀತಿಸುತ್ತಾ ಹುಚ್ಚನಾಗಿ ಊರ ಜನರಿಂದ ಲೈಲಾಮಜನು ಎಂಬ ಬಿರುದನ್ನು ಪಡೆದುಕೊಂಡರೂ ಅವಳೊಂದಿಗೆ ಬಾಳಿ ಬದುಕಲಾರದೆ ದುರಂತ ಸಾವಿಗೆ ಶರಣಾದನು. ಪ್ರೇಮ ಕವನಗಳೇ ಅವನ ಆಸ್ತಿಯಾಗಿದ್ದವು. ಲೈಲಾಳ ಕಣ್ಣಿಗೆ ಅಮೂಲ್ಯವಾಗಿ ಕಂಡ ಅವನ ಪ್ರೇಮ ಕವನಗಳು ಅವಳ ತಂದೆಯ ಕಣ್ಣಿಗೆ ಕೇವಲವಾಗಿ ಕಂಡವು. ಒಂದು ವೇಳೆ ಲೈಲಾಳಿಗೆ ಅಮೂಲ್ಯವಾಗಿ ಕಂಡ ಕಯಾಸನ ಕವನಗಳು ಅವಳ ತಂದೆಗೂ ಅಮೂಲ್ಯವಾಗಿ ಕಂಡಿದ್ದರೆ ಆತನಿಗೆ ಲೈಲಾ ಸಿಗುತ್ತಿದ್ದಳು. ಆತ ಕೊನೆಯ ಸಲ ಲೈಲಾಳಿಗಾಗಿ ಅವಳ ಗೋರಿಯ ಕಲ್ಲುಗಳ ಮೇಲೆ ಬರೆದ "ಲೈಲಾ ಹಾದು ಹೋದ ಈ ಗೋಡೆಗಳ ಮೂಲಕ ನಾನು ಹಾದು ಹೋಗುತ್ತೇನೆ. ಲೈಲಾ ಚುಂಬಿಸಿದ ಈ ಗೋಡೆಗಳನ್ನು ನಾನು ಚುಂಬಿಸುತ್ತೇನೆ. ಇದು ಗೋಡೆಗಳ ಮೇಲಿರುವ ಪ್ರೇಮವಲ್ಲ. ಆ ಗೋಡೆಗಳ ಮಧ್ಯೆ ಮಲಗಿರುವ ಲೈಲಾಳ ಮೇಲಿರುವ ಪ್ರೇಮ" ಎಂಬ ಕವನ ನನ್ನನ್ನು ಇಂದಿಗೂ ಕಾಡುತ್ತದೆ. ಇದಿಷ್ಟು ಲೈಲಾ ಮಜುನುವಿನ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ.
Note : This love story is inspired by Love poems written by Persian poet Nizami Ganjavi.