ಮೊಘಲ ಸಾಮ್ರಾಟ ಅಕ್ಬರನ ಮಗನಾದ ಸಲೀಮ ಬಾಲ್ಯದಲ್ಲಿ ಅತ್ಯಂತ ತುಂಟ ಹಾಗೂ ಹಟಮಾರಿಯಾಗಿದ್ದನು. ಅವನ ಹಟಮಾರಿತನವನ್ನು ಹೋಗಲಾಡಿಸಲು ಅಕ್ಬರ ಅವನನ್ನು ದೂರದ ಸೇನಾ ಶಾಲೆಗೆ ಕಳುಹಿಸಿದನು. ಸಲೀಮ ಸೇನಾ ಶಾಲೆಯಲ್ಲಿ ತನ್ನ ಶಿಕ್ಷಣ ಹಾಗೂ ಶಸ್ತ್ರಾಭ್ಯಾಸವನ್ನು ಪೂರೈಸಿಕೊಂಡು 14 ವರ್ಷಗಳ ನಂತರ ಮರಳಿ ಬಂದನು. ತನ್ನ ಮಗ ಮನೆಗೆ ಬಂದ ಖುಷಿಯಲ್ಲಿ ಅಕ್ಬರ ತನ್ನ ಅರಮನೆಯಲ್ಲಿ ಒಂದು ದೊಡ್ಡ ಮುಜ್ರಾವನ್ನು (ಸಮಾರಂಭವನ್ನು) ಏರ್ಪಡಿಸಿದನು. ಆ ಸಮಾರಂಭದ ಆಕರ್ಷಣೆಯನ್ನು ಹೆಚ್ಚಿಸುವುದಕ್ಕಾಗಿ ತನ್ನ ನೆಚ್ಚಿನ ನರ್ತಕಿಯಾದ ನದಿರಾಳನ್ನು ಆಹ್ವಾನಿಸಿದನು. ನದಿರಾಳ ನಿಜವಾದ ಹೆಸರು "ಶರಿಫ ಊನ್ ನಿಸ್ಸಾ" ಎಂದಿತ್ತು. ಅವಳ ಸೌಂದರ್ಯ ಹಾಗೂ ನೃತ್ಯ ಕಲೆಯನ್ನು ಮೆಚ್ಚಿ ಜನ ಅವಳಿಗೆ ಅನಾರ್ಕಲಿ ಎಂಬ ಬಿರುದನ್ನು ಕೊಟ್ಟಿದ್ದರು. ಅನಾರ್ಕಲಿ ಎಂದರೆ ಸೌಂದರ್ಯದ ಮೊಗ್ಗು ಎಂದರ್ಥ. ಅನಾರ್ಕಲಿ ಅಕ್ಬರನ ನೆಚ್ಚಿನ ನರ್ತಕಿಯಾಗಿದ್ದಳು. ಹೀಗಾಗಿ ಅಕ್ಬರ ಸಮಾರಂಭದಲ್ಲಿ ಅವಳ ನೃತ್ಯವನ್ನು ಏರ್ಪಡಿಸಿದನು.
ಸಮಾರಂಭದಲ್ಲಿ ಅನಾರ್ಕಲಿಯ ಸೌಂದರ್ಯ ಹಾಗೂ ನೃತ್ಯ ಕಲೆಗಳನ್ನು ನೋಡಿ ಸಲೀಮ ಅವಳ ಮೇಲೆ ಮೋಹಿತನಾದನು. ಆತ ಅವಳನ್ನು ಆಳವಾಗಿ ಪ್ರೀತಿಸಲು ಪ್ರಾರಂಭಿಸಿದನು. ಆದರೆ ಅನಾರ್ಕಲಿ ಅವನಿಂದ ದೂರ ಉಳಿಯಲು ಪ್ರಯತ್ನಿಸಿದಳು. ಏಕೆಂದರೆ ಆಕೆ ಬರೀ ನೃತ್ಯಗಾರ್ತಿಯಾಗಿರಲಿಲ್ಲ. ಅವಳು ನಗರದ ಪ್ರಮುಖ ವೈಷ್ಯ ಸಹ ಆಗಿದ್ದಳು. ಅವಳಿಗೆ ತನ್ನ ಯೋಗ್ಯತೆ ಏನೆಂಬುದು ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಆಕೆ ಅವನಿಂದ ದೂರ ಉಳಿಯಲು ಸಾಕಷ್ಟು ಪ್ರಯತ್ನ ಪಟ್ಟಳು. ಆದರೆ ಸಲೀಮ ಅವಳ ಬೆನ್ನು ಬಿಡಲಿಲ್ಲ. ಆತ ಅವಳನ್ನು ಭೇಟಿಯಾಗುವುದಕ್ಕಾಗಿ, ಅವಳೊಂದಿಗೆ ಸೇರುವುದಕ್ಕಾಗಿ ಎಲ್ಲ ಸರ ಹದ್ದುಗಳನ್ನು ಮೀರಿದನು. ಕೊನೆಗೆ ಆಕೆ ಅವನ ಪ್ರೀತಿಗೆ ಶರಣಾದಳು. ಸಲೀಮ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾ ಸಾಗಿದನು. ಆದರೆ ಅಕ್ಬರನಿಗೆ ಗೊತ್ತಾದರೆ ತನ್ನ ಪ್ರಾಣಕ್ಕೆ ಸಂಚಕಾರ ಬರುವುದೆಂದು ಹೆದರಿ ಅನಾರ್ಕಲಿ ತನ್ನ ಪ್ರೀತಿಯನ್ನು ಬಚ್ಚಿಡುವ ಹರಸಾಹಸ ಮಾಡಿದಳು.
ಒಂದಿನ ಸಲೀಮ ಅನಾರ್ಕಲಿಯ ಪ್ರೀತಿ ಅಕ್ಬರನ ಕಿವಿಗೆ ತಲುಪಿತು. ತನ್ನ ಮಗ ಸಲೀಮ ವೈಷ್ಯ ಅನಾರ್ಕಲಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಮಾತನ್ನು ಅವನಿಂದ ಸುಲಭವಾಗಿ ಅರಗಿಸಿಕೊಳ್ಳಲಾಗಲಿಲ್ಲ. ಏಕೆಂದರೆ ಎಲ್ಲರಂತೆ ಅವನು ಸಹ ಅನಾರ್ಕಲಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದನು. ಅಕ್ಬರ ಸಲೀಮನನ್ನು ಕರೆದು ಅನಾರ್ಕಲಿಯಿಂದ ದೂರ ಉಳಿಯಲು ಹೇಳಿದನು. ಆದರೆ ಸಲೀಮ ಅವನ ಮಾತನ್ನು ಧಿಕ್ಕರಿಸಿ ಮತ್ತೆ ಗುಟ್ಟಾಗಿ ಅನಾರ್ಕಲಿಯೊಂದಿಗೆ ಸಂಬಂಧ ಬೆಳೆಸಿದನು. ಇದರಿಂದ ಕೆರಳಿದ ಅಕ್ಬರ ಅನಾರ್ಕಲಿಯನ್ನು ಸಲೀಮನ ಕಣ್ಣುಗಳಿಂದ ಅಡಗಿಸಿ ರಹಸ್ಯ ಬಂಧನದಲ್ಲಿ ಇರಿಸಿದನು. ಈ ವಿಷಯ ತಿಳಿದ ಸಲೀಮ ತನ್ನ ತಂದೆ ಅಕ್ಬರನ ಮೇಲೆ ಯುದ್ಧ ಸಾರಿದನು. ಆದರೆ ಅಕ್ಬರನ ಬೃಹತ ಸೇನೆ ಸಲೀಮನ ಸಣ್ಣ ಸೇನೆಯನ್ನು ಸುಲಭವಾಗಿ ಬಗ್ಗು ಬಡಿಯಿತು. ಅಕ್ಬರ್ ಸಲೀಮನನ್ನು ಬಂಧಿಸಿ ಮರಣ ದಂಡನೆ ವಿಧಿಸಿದನು.
ತನ್ನ ಪ್ರಿಯಕರ ಮಾಡಿಕೊಂಡ ಅನಾಹುತದಿಂದ ಅನಾರ್ಕಲಿ ವಿಚಲಿತಳಾದಳು. ಆಕೆ ಅಕ್ಬರನ ಬಳಿ ಹೋಗಿ ಸಲೀಮನನ್ನು ಕ್ಷಮಿಸಿ ಸಾಯಿಸದೇ ಸುಮ್ಮನೆ ಬಿಡಲು ಅಂಗಲಾಚಿ ಬೇಡಿಕೊಂಡಳು. ಅದಕ್ಕೆ ಅಕ್ಬರ್ "ನೀನು ಅವನಿಂದ ಶಾಶ್ವತವಾಗಿ ದೂರಾಗಲು ಒಪ್ಪಿದರೆ ನಾನು ಅವನನ್ನು ಕ್ಷಮಿಸುವೆ" ಎಂದೇಳಿದನು. ಅದಕ್ಕಾಗಿ ಅನಾರ್ಕಲಿ ಒಪ್ಪಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದಳು. ಅಕ್ಬರ್ ಹೇಳಿದಂತೆ ಸಲೀಮನಿಂದ ಶಾಶ್ವತವಾಗಿ ದೂರಾಗಲು ಮುಂದಾದಳು. ಸಲೀಮನ ತಲೆಯಿಂದ ಅನಾರ್ಕಲಿಯನ್ನು ಕೊಲ್ಲುವುದಕ್ಕಾಗಿ ಅಕ್ಬರ ಅವಳನ್ನು ಒಂದು ಗುಮ್ಮಟದಲ್ಲಿ ಸಲೀಮನ ಕಣ್ಣೆದುರಿಗೇನೆ ಜೀವಂತ ಸಮಾಧಿ ಮಾಡಿದನು. ಅವಳು ಸತ್ತಳೆಂದು ತಿಳಿದು ಸಲೀಮ ಸ್ವಲ್ಪ ದಿನ ಕೊರಗಿ ಅವಳನ್ನು ಮರೆತು ಬಿಟ್ಟನು. ಆದರೆ ಅವನೆಂದುಕೊಂಡಂತೆ ಅನಾರ್ಕಲಿ ಸತ್ತಿರಲಿಲ್ಲ. ಆಕೆ ಅಕ್ಬರನ ಯೋಜನೆಯಂತೆ ಒಂದು ರಹಸ್ಯ ಮಾರ್ಗದ ಮೂಲಕ ಗುಮ್ಮಟದಿಂದ ಹೊರಬಂದು ದೇಶ ಬಿಟ್ಟು ಪಲಾಯನ ಮಾಡಿದ್ದಳು. ಪ್ರಿಯಕರನ ರಕ್ಷಣೆಗಾಗಿ ಆಕೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಆಕೆ ಶಾಶ್ವತವಾಗಿ ದೇಶಾಂತರ ಹೋದಳು. ಆಕೆ ಮರಳಿ ಯಾವತ್ತೂ ಬರಲಿಲ್ಲ.
ಅನಾರ್ಕಲಿಯ ಅಗಲಿಕೆಯಿಂದ ಭಗ್ನಪ್ರೇಮಿಯಾದ ಸಲೀಮ ಅಕ್ಬರನ ನಿಧನಾನಂತರ ಮೊಘಲ ಸಾಮ್ರಾಟ ಜಹಾಂಗೀರನಾದನು. ಅವನು ಸಾಯುವಾಗ ಅವನ ತುಟಿಗಳ ಮೇಲೆ ಅನಾರ್ಕಲಿಯ ಹೆಸರಿತ್ತು. ಇದಿಷ್ಟು ಸಲೀಮ ಅನಾರ್ಕಲಿಯ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವೀಟರಗಳಲ್ಲಿ ನನ್ನನ್ನು ಫಾಲೋ ಮಾಡಿ...