ಎಷ್ಟೋ ಜನರ ಮನಸ್ಸಲ್ಲಿ "ನಮಗೆಲ್ಲ ಇದೆ ಅಂದ್ಮೇಲೆ ನಾವೇಕೆ ಶ್ರೀಮಂತರಾಗಬೇಕು?" ಎಂಬ ಯೋಚನೆಯಿದೆ. "ದುಡ್ಡಿನಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದ್ಮೇಲೆ ಯಾಕೆ ಬಹಳಷ್ಟು ದುಡ್ಡನ್ನು ಗಳಿಸಬೇಕು?" ಎಂಬ ಪ್ರಶ್ನೆಯು ಪೆದ್ದರ ಮನಸ್ಸಲ್ಲಿದೆ. ದುಡ್ಡಿನಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ನಿಜ. ಆದರೆ ದುಡ್ಡಿದ್ರೆ ನಮಗೆ ಬೇಕಾಗಿರುವುದನ್ನೆಲ್ಲ ಕೊಂಡುಕೊಂಡು ಸಂತೋಷವಾಗಿರಬಹುದು. ಸಂತೋಷವಾಗಿ ಬದುಕುವುದೊಂದು ಕಲೆ. ಅದನ್ನು ನಿಮಗೆ ಯಾರು ಕಲಿಸಲ್ಲ. ಬದುಕುವುದನ್ನು ನೀವೇ ಕಲಿಯಬೇಕು.
ಆ ದೇವರು ನಿಮಗೆ ಕೈಕಾಲು, ಕಣ್ಣು ಮೂಗು ಕಿವಿ ಬಾಯಿ ಮೆದುಳು ಇತ್ಯಾದಿಗಳನ್ನೆಲ್ಲ ಕೊಟ್ಟಿರುವುದು ನಿಮ್ಮ ಕಾಲ ಮೇಲೆ ನೀವು ನಿಲ್ಲುವುದಕ್ಕಾಗಿಯೇ ಹೊರತು ಬೇರೆಯವರ ಬಳಿ ಕೈ ಚಾಚಲು ಅಲ್ಲ. ಸರ್ಕಾರಿ ಮನೆ ಹಾಗೂ ಸವಲತ್ತುಗಳಿಗಾಗಿ ರಾಜಕಾರಣಿಗಳ ಕೈಬೀಸಿ ಮಾಡುವುದಕ್ಕಾಗಿ ದೇವರು ನಿಮಗೆ ಎಲ್ಲವನ್ನೂ ಕೊಟ್ಟಿಲ್ಲ. ನೀವು ಯಾರಿಗೂ ಕಮ್ಮಿಯಿಲ್ಲ. ನಿಮ್ಮಿಂದ ಎಲ್ಲವೂ ಸಾಧ್ಯವಿದೆ. ನೀವು ಮನಸ್ಸು ಮಾಡಿದರೆ ನೀವು ಅಂಬಾನಿಗಿಂತಲೂ ಶ್ರೀಮಂತರಾಗಬಹುದು. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಸಬಲರನ್ನಾಗಿ ಮಾಡಿರುವುದು ದುರ್ಬಲರ ಸಹಾಯ ಮಾಡುವುದಕ್ಕಾಗಿ, ಅಂಗವಿಕಲರ ಸಹಾಯ ಮಾಡುವುದಕ್ಕಾಗಿ. ಆದರೆ ನೀವು ಮಾಡುತ್ತಿರುವುದೇನು? ಕೈಕಾಲು ಎಲ್ಲ ನೆಟ್ಟಗಿದ್ದರೂ ಬಡತನದಲ್ಲಿ ಬಿದ್ದು ಒದ್ದಾಡುತ್ತಿರುವುದು. ಬಡತನಕ್ಕಿಂತ ಭೀಕರ ಶಾಪ ಮತ್ತೊಂದಿಲ್ಲ.
ನಿಮಗಾಗಿ ದುಡ್ಡು ಮಾಡಿಕೊಳ್ಳಲು ನಿಮಗಿಷ್ಟವಿಲ್ಲದಿದ್ದರೂ ದುರ್ಬಲರಿಗಾಗಿ ಸಹಾಯ ಮಾಡುವುದಕ್ಕಾದರೂ ಶ್ರೀಮಂತರಾಗಿ. ಸಿಕ್ಕಾಪಟ್ಟೆ ದುಡ್ಡು ಮಾಡಿ ಅನಾಥರ, ಅಂಗವಿಕಲರ ಸೇವೆ ಮಾಡಿ. ನಿಮ್ಮ ಹೊಟ್ಟೆ ತುಂಬಿದ ಮೇಲಾದರೂ ಹಸಿದವರಿಗೆ ಅನ್ನ ಹಾಕಿ. ಬೇರೆಯವರು ನಿಮ್ಮನ್ನು ತುಳಿಯಬಾರದೆಂದರೆ ನೀವು ಶ್ರೀಮಂತರಾಗಲೇಬೇಕು...
ಬಡತನ ನಿಮ್ಮ ಮನೆಯಲ್ಲಿಲ್ಲ, ನಿಮ್ಮ ಮನಸ್ಸಲ್ಲಿದೆ. ಬಿಲಗೇಟ್ಸ ಹೇಳುವಂತೆ ಬಡವರಾಗಿ ಹುಟ್ಟಿರುವುದು ನಿಮ್ಮ ತಪ್ಪಲ್ಲ. ಆದರೆ ನೀವು ಬಡವರಾಗಿ ಸತ್ತರೆ, ಅದು ಖಂಡಿತ ನಿಮ್ಮದೇ ತಪ್ಪು. ಈಗ ನಿಮಗೆ ಯಾಕೆ ಶ್ರೀಮಂತರಾಗಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಭಾವಿಸುವೆ. ನಿಮ್ಮನ್ನು ಯಾರು ತುಳಿಯಬಾರದೆಂದರೆ ನೀವು ಆರ್ಥಿಕವಾಗಿ ಬಲಿಷ್ಟರಾಗಲೇಬೇಕು. ಶ್ರೀಮಂತರಾಗಿರಿ. ಬೇರೆಯವರಿಗೆ ಸಹಾಯ ಮಾಡಿ. ನಿಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಿ. ನೀವು ಸಬಲರಾಗಿದ್ದರೆ ಮಾತ್ರ ಬೇರೆಯವರಿಗೆ ಸಹಾಯ ಮಾಡಬಹುದು. ಅದಕ್ಕಾಗಿ ಶ್ರೀಮಂತರಾಗಿ... All the Best...