
"ಮಿನುಗುತ್ತಾ ಬರಲಿ ದೀಪಾವಳಿ
ಮಾಸಿದ ಬದುಕಿಗೆ ತರಲಿ ತಂಗಾಳಿ
ಮರೆಯಾಗಲಿ ಹಣದುಬ್ಬರದ ಬಿರುಗಾಳಿ
ಲಕ್ಷ್ಮೀದೇವಿಯೇ ನೀ ಮಾಡದಿರು ಚಳುವಳಿ
ಹರಸು ನೀ ನೀಡುತ್ತಾ ಸಂತಸದ ಬಳುವಳಿ
ದೂರವಾಗಿಸು ಬಡತನದ ಪಾತಳಿ
ಮುದುಡಲಿ ಅಂಧಕಾರದ ಹಾವಳಿ
ದಿವಾಳಿಯಾಗದಿರಲಿ ಬರುವ ದೀಪಾವಳಿ
ಅರಳಲಿ ಬಾಳಲಿ ನಗೆಯ ಓಕಳಿ..."

ಹೀಗಂತಾ ಹಾಡುತ್ತಾ, ಸಾವಿರಾರು ಕನಸುಗಳನ್ನು ಕಾಣುತ್ತಾ ದೀಪಾವಳಿಯನ್ನು ಬರ ಮಾಡಿಕೊಳ್ಳುವ ಜನರು ಅನೇಕರಿದ್ದಾರೆ. ಬರುವ ದೀಪಾವಳಿ ದಿವಾಳಿಯಾದ ಎಷ್ಟೋ ಜೀವಗಳಿಗೆ ಖುಷಿಯ ಓಕಳಿಯನ್ನು ನೀಡಲಿ ಎಂಬುದೇ ನಮ್ಮಯ ಆಶಯ. ಬಹಳಷ್ಟು ಜನರಿಗೆ ಒಂದು ಸಾಮಾನ್ಯ ತಪ್ಪು ಪರಿಕಲ್ಪನೆ ಇರುತ್ತದೆ. ಅದೇನೆಂದರೆ ಬಡತನದಲ್ಲಿ ಸುಖವಿಲ್ಲ, ಸಿರಿತನದಲ್ಲಿ ಸುಖವಿದೆಯೆಂದು. ಬಡತನವನ್ನು ದ್ವೇಷಿಸದೆ ಸಾಧ್ಯವಾದಷ್ಟು ಪ್ರೀತಿಸಿ, ಸಿರಿತನವನ್ನು ಸಂಪಾದಿಸಲು ಪ್ರಯತ್ನಿಸಿ. ಅದಿಲ್ಲ ಇದಿಲ್ಲ ಎಂದು ಕೊರಗುವ ಬದಲು ಇದ್ದ್ರಲ್ಲೇ ಹಂಚಿಕೊಂಡು ಜೀವನಕ್ಕೆ ಮೆರಗು ಮೂಡಿಸಿಕೊಂಡು ಹಂತಹಂತವಾಗಿ ಸ್ವಪ್ರಯತ್ನದಿಂದ ಏಕಾಂಗಿಯಾಗಿ ಮುಂದೆ ಬನ್ನಿ. ಬಡತನದಲ್ಲಿ ಬರೀ ಕಷ್ಟಕೋಟಲೆ ಇದೆಯೆಂದು ನೀವು ತಿಳಿದಿದ್ದರೆ ಅದು ನಿಮ್ಮ ಮೂರ್ಖತನ. ಬಡತನದಲ್ಲಿ ಅರಳುವ ಪ್ರತಿಭೆ, ಸಿಗುವ ಅನಂತ ನೆಮ್ಮದಿ, ಚಿಕ್ಕ ಚಿಕ್ಕ ಸಂಗತಿಗಳಲ್ಲಿ ಸಿಗುವ ಸಂತಸ ನೀವು ಕಾಣುವ ಸಿರಿತನದಲ್ಲಿ ಸಿಗಲ್ಲ ಎಂಬುದು ಎಷ್ಟೋ ಮಂದಿಯ ಅನುಭವಕ್ಕೆ ಬಂದಿರಬಹುದು.

ಬಡವರಾಗಿ ಹುಟ್ಟೋದು ಶಾಪವಲ್ಲ. ಆದರೆ ಬಡವರಾಗಿ ಸಾಯೋದು ಖಂಡಿತ ಶಾಪವೇ...! ಎಲ್ಲರ ಬದುಕಿನಲ್ಲಿ ಖುಷಿಯ ಓಕಳಿ ನೀಡುವ ದೀಪಾವಳಿ ಬಂದೇ ಬರುತ್ತೆ. ಅದನ್ನು ದಿವಾಳಿಯಾಗದ ಹಾಗೆ ಬರ ಮಾಡಿಕೊಳ್ಳುವುದು ಒಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಂಡ ಕಲಾವಿದ ಮಾತ್ರ ಸಮಾಜದಲ್ಲಿ ಭದ್ರವಾದ ನೆಲೆಯೊಂದಿಗೆ ಸಂತೋಷದಿಂದ ಇರಬಲ್ಲ.
ಧನಿಕರ ಮನೆಯಲ್ಲಿ ಕೇಳುವುದಕ್ಕೂ ಮುಂಚೇನೆ ನೆಮ್ಮದಿಯೊಂದನ್ನು ಬಿಟ್ಟು ಉಳಿದೆಲ್ಲವು ಕಾಲಡಿಗೆ ಬಂದು ಬಿದ್ದಿರುತ್ತವೆ. ಆದರೆ ಅವುಗಳಿಂದೇನು ಪ್ರಯೋಜನವಿಲ್ಲ. ಬಡವರ ಮನೇಲಿ ಹಾಗಲ್ಲ ಆಡಂಬರ ಒಂದನ್ನು ಬಿಟ್ಟು ಬೆಲೆ ಕಟ್ಟಲಾಗದ ನೆಮ್ಮದಿ, ಸುಖ, ಸಂತೋಷ, ಆರೋಗ್ಯ ಎಲ್ಲವೂ ಕಾಲು ಕಟ್ಟಿಕೊಂಡು ಬಿದ್ದಿರುತ್ತವೆ. ಅದನ್ನು ಸ್ವೀಕರಿಸಿ ಸಂತಸ ಪಡುವ ಸಂಯಮ ನಮ್ಮಲ್ಲಿರಬೇಕಷ್ಟೆ..!!

ಬಡತನವಿದ್ದರೂ ನಂದ ಗೋಕುಲದಂತಿರುವ ಮನೆಯಲ್ಲಿ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಮಡದಿ, ಮಕ್ಕಳು ಹೀಗೆ ಎಲ್ಲರೂ ಜೊತೆಗೂಡಿ ಸಂಭ್ರಮದಿಂದ ದೀಪಾವಳಿ ಆಚರಿಸುವುದರಲ್ಲಿ ಸಿಗುವ ಸಂತಸ ಹಾಗೂ ನೆಮ್ಮದಿ ಸಿರಿತನದ ಅರಮನೆಯಲ್ಲಿ ಬೇವರ್ಷಿಗಳಂತೆ ಬರೀ ಹೆಂಡ್ತಿ ಮಕ್ಕಳೊಂದಿಗೆ ಆಚರಿಸೋದ್ರಲ್ಲಿ ಸಿಗಲ್ಲ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೇನೆ ಕಾಣುತ್ತೆ ಎಂಬುದನ್ನು ಅರಿಯಲು ವಿಫಲವಾದ ನಿಮ್ಮ ಕಣ್ಣುಗಳಿಗೆ ಸಿರಿತನ ಸುಖದ ಸುಪ್ಪತ್ತಿಗೆಯಂತೇನೆ ಕಾಣುತ್ತದೆ. ಆದರೆ ಹತ್ತಿರ ಹತ್ತಿರ ಹೋಗಿ ನೋಡಿದಾಗ ಅದು ಬರೀ ಜಂಜಡ, ಮೋಸ, ಹತಾಶೆ ತುಂಬಿದ ನೆಮ್ಮದಿ ರಹಿತ ಅಬೆಪಾರಿಯ ಮುಳ್ಳಿನ ಕಲ್ಲಾಸಿಗೆ ಎಂಬುದು ನಿಮಗೆ ಸ್ಪಷ್ಟವಾಗುವುದರಲ್ಲಿ ಸಂಶಯವಿಲ್ಲ.

ಬಡತನದಲ್ಲಿ ಹುಟ್ಟಿ ಬೆಳೆದವರು ಬದುಕುವುದನ್ನು ಕಲಿತಿರುತ್ತಾರೆ. ಸಿರಿತನದಲ್ಲಿ ಹುಟ್ಟಿ ಬೆಳೆದವರು ಕೆದಕುವುದನ್ನು ರೂಢಿಸಿಕೊಂಡಿರುತ್ತಾರೆ. ಬಡತನದಲ್ಲಿ ಹುಟ್ಟಿ, ಬದುಕುವುದನ್ನು ಕಲಿತು, ಇಷ್ಟಪಟ್ಟು ದುಡಿದು ಸಿರಿವಂತರಾಗಿರಿ. ಸಿರಿವಂತರಾದರೂ ಸರಿಯಾಗಿ ಸರಳತೆಯಿಂದ ಬಡವರಂತೆ ಬಾಳಲು ಪ್ರಯತ್ನಿಸಿ. ಏಕೆಂದರೆ ಬಡತನದಲ್ಲಿನ ಕುಂದು ಕೊರತೆಗಳು ಕಲಿಸುವ ಪಾಠಗಳನ್ನು ವಿಶ್ವದ ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಸುವುದಿಲ್ಲ.
ಬಡತನದಲ್ಲಿ ಬೆಂದವರು, ಜೀವನದಲ್ಲಿ ಸೋತವರು, ಪ್ರೀತಿಯಲ್ಲಿ ಮೋಸ ಹೋದವರು, ಸ್ನೇಹದಲ್ಲಿ ಸವೆದವರು ಚಿಂತಿಸಿ ಕಾಲಹರಣ ಮಾಡುವ ಅವಶ್ಯಕತೆಯಿಲ್ಲ. ಬದುಕು ಬರಿಬಾದ ಆದಷ್ಟು ಜಗತ್ತು ಅರ್ಥವಾಗುತ್ತಾ ಸಾಗುತ್ತೆ. ನಿಮ್ಮ ಯಶಸ್ಸಿನ ಹಾದಿಯಲ್ಲಿ ನಿಮ್ಮ ಪರಿಶ್ರಮಕ್ಕೆ ಸೋತು ಒಂದಿನ ಜಗತ್ತೇ ನಿಮಗೆ ದಾರಿ ಬಿಡುತ್ತೆ.

ಆಯ್ತು ಗೆಳೆಯರೇ, ಖುಷಿಯಿಂದ ಬರುವ ದೀಪಾವಳಿಯನ್ನು ಖುಷಿಯಿಂದ ಅಪ್ಪಿಕೊಂಡು ಬರಮಾಡಿಕೊಳ್ಳಿ. ಲಕ್ಷ್ಮೀದೇವಿಯನ್ನು ಆರಾಧಿಸಿ ಧನವಂತರಾಗಿ, ಸರಸ್ವತಿಯನ್ನು ಸ್ತುತಿಸಿ ವಿದ್ಯಾವಂತರಾಗಿ. ನಿಮ್ಮ ಜೀವನದಲ್ಲಿ ಬಂದ ಸಾಲು ಸಾಲು ಸಂಕಷ್ಟಗಳನ್ನು ಮೆಟ್ಟಿ ಯಶಸ್ಸಿನ ಮೆಟ್ಟಿಲುಗಳನ್ನೇರಲು ಸಾಲು ಸಾಲು ದೀಪಗಳು ಸ್ಪೂರ್ತಿಯಾಗಲಿ... ನಿಮ್ಮ ಬದುಕು ಬೆಳಕಾಗಲಿ... ಹ್ಯಾಪಿ ದೀಪಾವಳಿ.....
