ಬಸವಣ್ಣನ ಕನಸು - ಬಸವ ಜಯಂತಿ ವಿಶೇಷ ಅಂಕಣ - Basav Jayanti wishes in Kannada - Basavanna Life Story in Kannada

ಕರುನಾಡಿನ ಇತಿಹಾಸದಲ್ಲಿ "ಕರ್ನಾಟಕದ ಮಾರ್ಟಿನ್ ಲೂಥರ್" ಎಂದು ಗುರುತಿಸಲ್ಪಟ್ಟ ಬಸವಣ್ಣನವರು ಜಾತೀಯತೆಯ ರುದ್ರ ಸಮಾಜವನ್ನು ಪಾತಾಳಕಟ್ಟಿ ವರ್ಣ ವರ್ಗರಹಿತ ಭದ್ರ ಸಮಾಜವನ್ನು ಕಟ್ಟ ಬಯಸಿದರು. ಜಾತೀಯತೆಯ ಸಂಕೋಲೆಯಲ್ಲಿ ಅಜ್ಞಾನಿಗಳಿಂದ ಬಳಲಿ ಬೆಂಡಾಗಿದ್ದ ಮುಗ್ಧ ಜನರನ್ನು ರಕ್ಷಿಸಬಲ್ಲ ನವ ಸಮಾಜ ನಿರ್ಮಾಣಕ್ಕೆ ತಮ್ಮ ಜೀವ ಮತ್ತು ಜೀವನಗಳೆರಡನ್ನು ಮುಡಿಪಾಗಿಟ್ಟರು. ಸಾರ್ವಜನಿಕ ಸೇವಾ ಜೀವನದ ತಳಹದಿಯ ಮೇಲೆ ಜಾತೀಯತೆಯ ಭೀತಿಯಿಲ್ಲದ ಸ್ವಚ್ಛ ಆತ್ಮಗಳ ಜೀವಂತಿಕೆಯಿಂದ ವರ್ಗರಹಿತ ಸಮಾಜದ ಜೀವ ನದಿ ಹರಿಸ ಬಯಸಿದರು.
ಹೊಸ ಸಮಾಜದ ನಿರ್ಮಾಣಕ್ಕಾಗಿ, ಹೊಸ ಹೊಸ ಮೌಲ್ಯಗಳನ್ನು ಶೋಧಿಸಿ ವಿಶ್ವಗುರುವಾದರು. ತಮ್ಮ ಕ್ರಾಂತಿಕಾರಕ ನುಡಿಗಳಿಂದ, ಅತ್ಯಾನುಭವವುಳ್ಳ ವಚನಗಳಿಂದ ಗಾವಿಲರ ಮದಗರ ಬಿಡಿಸಿದರು. "ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ" ಎಂದೇಳುತ್ತಾ ವರ್ಷಾಶ್ರಮದ ಅವಾಂತರದಲ್ಲಿ ನಲುಗಿದ್ದ ಸಮಾಜವನ್ನು ಉದ್ಧರಿಸಲು ಪಣತೊಟ್ಟು ಮಹಾ ಮಾನವತಾವಾದಿಯಾದರು. ಅಂಧಕಾರದ ಅಡುಗೆ ಮನೆಯಲ್ಲಿ ಜಾತೀಯತೆಯ ತಿಥಿಯೂಟ ಮಾಡುತ್ತಿದ್ದ ಮೇಲ್ವರ್ಗದವರಿಗೆ ಪರಸ್ಪರ ಬಾಂಧವ್ಯದ ಬೆಳಕನ್ನು ನೀಡಿ ಜಗಜ್ಯೋತಿಯಾದರು. ಅಸ್ಪಶ್ರ್ಯರ ಏಳ್ಗೆಗಾಗಿ ತಾವು ಭೇದಭಾವ ಮರೆತು ಎಲ್ಲ ವರ್ಗದವರೊಡನೆ ಬೆರೆತರು. ಅವರ ಸಮಕಾಲಿನ ಸಮಾಜದಲ್ಲಿ ಬೇರೂರಿದ್ದ ಅಂತಸ್ತು ಲಿಂಗಭೇದದ ಬೇತಾಳನನ್ನು ಕಟುವಾಗಿ ವಿರೋಧಿಸಿ ಅದಕ್ಕೆ ತಮ್ಮ ನವ ಸಮಷ್ಟಿಯಲ್ಲಿ ಆಸ್ಪದವಿಲ್ಲವೆಂದರು.

ತಾವು ಬಯಸಿದ ವರ್ಗ ವರ್ಣರಹಿತ ಸಮಾಜಕ್ಕೆ ಭದ್ರ ಅಡಿಪಾಯ ಹಾಕಬೇಕನ್ನುವಷ್ಟರಲ್ಲಿ ಶ್ರೀಶರಣ ಹರಳಯ್ಯನವರ ಮರಣದಂಡನೆಯಿಂದಾಗಿ ಕಲ್ಯಾಣ ಕ್ರಾಂತಿ ವಿಫಲವಾಯಿತು. ಇದು ವಿಧಿಯ ಘೋರ ಅಟ್ಟಹಾಸವೆಂದು ಹೇಳದೆ ಬೇರೆ ವಿಧಿಯಿಲ್ಲ. ತನ್ನ ಹುಟ್ಟು ಕುಲದ ನೆರಳನ್ನೇ ನಿರಾಕರಿಸಿ ಬಸವಣ್ಣನವರು ಮುನ್ನಡೆದಿದ್ದರು. ಯಜ್ಞೋಪವಿತ (ಜಂಗಮ ಧಾರಣೆ) ಬೇಡವೆಂದು ಮನೆ ತ್ಯಜಿಸಿದರು.
ವರ್ಣಾಶ್ರಮ ಪದ್ಧತಿಯ ಆಚರಣೆಯಿಂದ ಸಮಾಜ ವ್ಯವಸ್ಥೆ ಜಿಡ್ಡುಗಟ್ಟಿ ವಾಸನೆ ಹೊಡೆಯುತ್ತಿತ್ತು. ಇದರಿಂದ ಕೆಳವರ್ಗದವರಿಗೆ ಎಲ್ಲದರಲ್ಲಿಯೂ ವಂಚನೆಯಾಗುತ್ತಿತ್ತು. ಇದನ್ನು ಮನಗಂಡ ಬಸವಣ್ಣನವರು ಇದರ ವಿರುದ್ಧ ಸಿಡಿದೆದ್ದರು. ಕೆಳವರ್ಗದವರನ್ನು ಮೇಲೆತ್ತಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರು. ಇದರಿಂದ ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಮಡಿವಾಳ ಮಾಚಯ್ಯ ಮುಂತಾದ ಶಿವಶರಣರು ಬೆಳಕಿಗೆ ಬಂದರು. ಸಮಾಜದಲ್ಲಿದ್ದ ಮೇಲು ಕೀಳೆಂಬ ಭಾವನೆ ತೊಲಗಲು ಪ್ರಾರಂಭಿಸಿತು. ವೈದಿಕರ ಸ್ವಾರ್ಥ ಲಾಲಸೆಯಿಂದ ಸ್ತ್ರೀಯು ಯಾವುದೇ ಸ್ವಾತಂತ್ರ್ಯವಿಲ್ಲದೆ ನರಳುತ್ತಿದ್ದಳು. ಕಲ್ಯಾಣದಲ್ಲಿ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಅನುಭವವುಳ್ಳ ಅನುಭಾವರ ಅನುಭವ ಮಂಟಪದಿಂದ ಸ್ತ್ರೀಯರಿಗೆ ಮನುಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅವಕಾಶ ಸಿಕ್ಕಿತೆಂದರೂ ತಪ್ಪಾಗಲಾರದು. ಈ ಅನುಭವ ಮಂಟಪದಿಂದ ಅಕ್ಕ ಮಹಾದೇವಿ ಸೇರಿ ಹಲವಾರು ಶಿವಶರಣೆಯರು ಸ್ತ್ರೀಯರು ಎದುರಿಸುತ್ತಿದ್ದ ಶೋಷಣೆಯನ್ನು ಸಮಾಜಕ್ಕೆ ಪರಿಚಯಿಸಿದರು. ಅದರ ವಿರುದ್ಧ ಹೋರಾಟ ಆರಂಭಿಸಿದರು.

ಬಸವಣ್ಣನವರು ಜಾತೀಯತೆಯ ದುಷ್ಟನನ್ನು ಸ್ನೇಹ ಪ್ರೀತಿಯಿಂದ ಗೆಲ್ಲಲು ಅಂತರ ಜಾತಿಯ ವಿವಾಹದ ಪರಿಕಲ್ಪನೆಯನ್ನು ಸಮಾಜದ ಮುಂದಿಟ್ಟರು. ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿ ಅದನ್ನು ಕಾರ್ಯರೂಪಕ್ಕೆ ತಂದಾಗ ಇಡೀ ಸಮಾಜ ವ್ಯವಸ್ಥೆಯೇ ಅವರಿಗೆ ಎದುರಾಗಿ ನಿಂತು ಪ್ರತಿಭಟಿಸಿದಾಗ ಬಸವಣ್ಣನವರ ಕನಸು ನೂಚ್ಚು ನೂರಾಗಿ ಕಮರಿ ಹೋಯಿತು.
"ಬೆದಕಿದರೂ ಕೆದಕಿದರೂ ಸೌಜನ್ಯತೆಯಲ್ಲಿ ಹುರುಳಿಲ್ಲದ, ಎನ್ನ ಚಿತ್ತ ಗಮನಿಸಿದಾಗ ಒಬ್ಬನೂ ಕೆಟ್ಟ ಮನುಜನಿಲ್ಲದ, ಜಾತಿಯೆಂಬ ಪ್ರಯಳದ ಕಸವಿರದ, ಅಸ್ಪ್ರಶ್ಯತೆಯ ಕಟ್ಟಳೆಗಳಿಲ್ಲದ, ಮಡಿಮಡಿಯೆಂದು ಅಡಿಗಡಿಗೆ ಹಾರದ" ನವ ಸಮಾಜವನ್ನು ನಿರ್ಮಿಸಬೇಕೆಂಬ ಬಸವಣ್ಣನವರ ಕನಸು ಇಂದಿಗೂ ಕನಸಾಗೆ ಉಳಿದಿದೆ. ಗೆಳೆಯರೇ ಬಸವಣ್ಣನವರನ್ನು ಸೇರಿ ಎಲ್ಲ ಶಿವಶರಣರ ವಚನಗಳನ್ನೆಲ್ಲ ಸುವರ್ಣಾಕ್ಷರಗಳಲ್ಲಿ ಬರೆದಿಡಿ ಎಂದು ನಾನು ಹೇಳುವುದಿಲ್ಲ. ಆದರೆ ಅವರು ಹೇಳಿದ ಬಂಗಾರದಂಥ ಹಿತೋಪದೇಶಗಳನ್ನು ನಿಮ್ಮ ಚಿನ್ನದಂಥ ಮನಸ್ಸಲ್ಲಿ ಮುತ್ತಿನಂತೆ ಜೋಪಾನವಾಗಿರಿಸಿಕೊಂಡು ಅವರು ಕಂಡ ಕನಸ್ಸನ್ನು ನನಸಾಗಿಸಿದರೆ ಸಾಕು. ಅವರ ಕನಸ್ಸನ್ನು ನಿಮ್ಮ ಕನಸೆಂದು ಭಾವಿಸಿ ನನಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಪ್ಲೀಜ. ನಿಮಗೆಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಷಯಗಳು....
