1) ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣುಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ
ಭ್ರಾಂತಿ ಎಂಬ ತಾಯಿ.
ತೊಟ್ಟಿಲು ಮುರಿದು, ನೇಣು ಹರಿದು
ಜೋಗುಳ ನಿಂದಲ್ಲದೇ ಗುಹೇಶ್ವರನೆಂಬ ಲಿಂಗವ ಕಾಣಬಾರದು...
2) ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯೆಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರಾ...
3) ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು
ಬಾಯಿಯಿಲ್ಲದೆ ರುಚಿ ಭಾವನೇ ಖರ್ಪರವಾಗಿ
ಪರಮದೇಹಿ ಎಂದು ಬೇಡುವ ಪರಮನ ತೋರಯ್ಯಾ ಗುಹೇಶ್ವರಾ...
4) ಪೃಥ್ವಿಯನೆಲೆಗಳೆದ ಸ್ಥಾವರಂಗಳಿಲ್ಲ
ಅಪ್ಪುವನಲೆಗಳೆದ ತೀರ್ಥಯಾತ್ರೆಗಳಿಲ್ಲ
ಅಗ್ನಿಯನಲೆಗಳೆದ ಹೋಮಸಮಾಧಿಗಳಿಲ್ಲ
ವಾಯುವಿನಲೆಗಳೆದ ನೇಮ ನಿತ್ಯಂಗಳಿಲ್ಲ
ಆಕಾಶವನಲೆಗಳೆದ ಧ್ಯಾನ ಮಾನಂಗಳಿಲ್ಲ
ಗುಹೇಶ್ವರ ನೆಂದರಿದಾಗ ಇನ್ನಾವಂಗವೂ ಇಲ್ಲ.
5) ಕಲ್ಲಮನೆಯ ಮಾಡಿ, ಕಲ್ಲದೇವರ ಮಾಡಿ,
ಆ ಕಲ್ಲು ಕಲ್ಲಮೇಲೆ ಕಡೆದರೆ ದೇವರೆತ್ತ ಹೋದರೋ?
ಲಿಂಗ ಪ್ರತಿಷ್ಟೆಯ ಮಾಡಿದವರಿಗೆ
ನಾಯಕ ನರಕ ಗುಹೇಶ್ವರಾ...
6) ಹಗಲನಿರುಳ ಮಾಡಿ, ಇರುಳ ಹಗಲಮಾಡಿ,
ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವಮಾಡಿ,
ಭಕ್ತನ ಭವಿಯ ಮಾಡಿ, ಭವಿಯಭಕ್ತನ ಮಾಡಿ,
ನುಡಿವವನ ಮಾತ ಕೇಳಲಾಗದು ಗುಹೇಶ್ವರಾ...
7) ಅಗ್ನಿಗೆ ತಂಪುಂಟೇ? ವಿಷಯಕ್ಕೆ ರುಚಿಯುಂಟೇ?
ಕಂಗಳಿಗೆ ಮರೆಯುಂಟೇ? ಹೇಳಾ ಲಿಂಗವೇ?
ದಾಳಿಕಾರಂಗೆ ಧರ್ಮವುಂಟೆ?
ಕಂಗಳಿಗೆ ಕರುಳುಂಟೆ? ಗುಹೇಶ್ವರಾ
ನಿಮ್ಮ ಶರಣರು ಮೂರು ಲೋಕವರಿಯೆ ನಿಶ್ಚಟರಯ್ಯಾ...
8) ಮಂತ್ರ ಕಲಿತಡೇನು?
ಪುನರುಚ್ಚರಣೆ ಮಾಡಿದಲ್ಲದೆ ಸಿದ್ಧಿಸದು.
ಮದ್ದನರಿದು ಫಲವೇನು?
ಪ್ರಯೋಗಿಸಿಕೊಂಡಲ್ಲದೇ ರೋಗ ಮಾಣದು.
ಲಿಂಗವರಿನದಡೇನು?
ನೆನೆದಲ್ಲದೇ ಸಿದ್ಧಿಸದು ಕಾಣಾ ಗುಹೇಶ್ವರಾ...
9) ತನ್ನಮುಟ್ಟಿ ನೀಡಿದುದೇ ಪ್ರಸಾದ,
ತನ್ನ ಮುಟ್ಟದೆ ನೀಡಿದುದೇ ಓಗರ,
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ,
ಇದು ಕಾರಣ ಇಂತಪ್ಪ ಭ್ರತ್ಯಾಚಾರಿಗಲ್ಲದೇ
ಪ್ರಸಾದವಿಲ್ಲ ಗುಹೇಶ್ವರಾ...
10) ನಾನು ಘನ ತಾನು ಘನವೆಂಬ ಹಿರಿಯರುಂಟೆ?
ಜಗದೊಳಗೆ ಹಿರಿಯರ ಹಿರಿಯತನ ದಿಂದೇನಾಯಿತ್ತು?
ಹಿರಿಕಿರಿದೆಂಬ ಶಬ್ದವಡಗಿದರೆ
ಆತನೇ ಶರಣ ಗುಹೇಶ್ವರಾ...
11) ಎಸೆಯದಿರು ಎಸೆಯದಿರು ಕಾಮಾ
ನಿನ್ನ ಬಾಣ ಹುಸಿಯಲೇಕೋ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಇದು ಸಾಲದೇ ನಿನಗೆ?
ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳ ಕಾಮಾ...
12) ಅನುಭಾವದಿಂದ ಹುಟ್ಟಿತ್ತು ಲಿಂಗ,
ಅನುಭಾವದಿಂದ ಹುಟ್ಟಿತ್ತು ಜಂಗಮ,
ಅನುಭಾವದಿಂದ ಹುಟ್ಟಿತ್ತು ಪ್ರಸಾದ,
ಅನುಭಾವದನುವಿನಲ್ಲಿ ಗುಹೇಶ್ವರ ಲಿಂಗವನುಪಮಸುಖಿ...
13) ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ವ
ತಾಳೇಷ್ಟ್ರ ಸಂಪುಟವೆಂಬುದೇ ನಾದಬಿಂದು.
ಕಳಾತೀತ ಗುಹೇಶ್ವರ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ...
14) ಶಬ್ದ ಸೂತಕವೆಂಬರು ಶಬ್ದಕ್ಕೆ ಸೂತಕವುಂಟೇ?
ತನ್ನ ಸಂದೇಹವಲ್ಲದೇ ಗಾಳಿಗೆ ಧೂಳಿ ಲೇಪವಪ್ಪುದೇ?
ಗುಹೇಶ್ವರ ಲಿಂಗಕ್ಕೆ ಆಭಾವವಿಲ್ಲಾ ಸಂಗನ ಬಸವಣ್ಣ...
15) ಪೃಥ್ವಿಯನತಿಗಳೆದು ಅಪ್ಪುವಿಲ್ಲ,
ಅಪ್ಪುವಿನತಿಗಳೆದು ಅಗ್ನಿಯಿಲ್ಲ,
ಅಗ್ನಿಯನತಿಗಳೆದು ವಾಯುವಿಲ್ಲ,
ವಾಯುವಿನತಿಗಳೆದು ನಾದವಿಲ್ಲ,
ಬಿಂದುವಿನತಿಗಳೆಂದು ಕಳೆಯಿಲ್ಲ,
ಕಳೆಯನತಿಗಳೆದು ಆತ್ಮವಿಲ್ಲ,
ಆತ್ಮನತಿಗಳೆಂದು ಗುಹೇಶ್ವರನೆಂಬ ಲಿಂಗವಿಲ್ಲ...
16) ಗಗನದ ಮೇಘಂಗಳೆಲ್ಲಾ ಸುರಿದವು ಭೂಮಿಯ ಮೇಲೆ
ಭೂಮಿ ದಣಿಯುಂಟು ಸಸಿಗಳೆಲ್ಲಾ ಬೆಳೆದವು
ಬಹು ವಿಕಾರದಿಂದ ಬೆಳೆದ ಸಸಿಯ ವಿಕಾರನೆಂದು
ಗ್ರಹಿಸುವ ಕಾಮವಿಕಾರಿಗಳು ಲಿಂಗವನೆತ್ತ ಬಲ್ಲರು ಗುಹೇಶ್ವರಾ?
17) ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ,
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ,
ಕಾಮ ಗುರಿಯಾಗಿ ಬೆಂದುಹೋದವರ ಕಂಡೆ,
ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ...
18) ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಗೆ ಸತ್ತುದು ಕೋಟಿ
ಗುಹೇಶ್ವರಾ ನಿಮಗಾಗಿ ಸತ್ತವರನಾರೆನೂ ಕಾಣೆ...
19) ಎಣ್ಣೆ ಬೇರೆ, ಬತ್ತಿ ಬೇರೆ ಎರಡು ಕೂಡಿಸೊಡರಾಯಿತು.
ಪುಣ್ಯ ಬೇರೆ ಪಾಪ ಬೇರೆ, ಎರಡು ಕೂಡಿ ಒಡಲಾಯಿತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.
ಕಾಯಾಗುವಳಿದು, ಮಾಯಾಜ್ಯೋತಿ.
ವಾಯುವ ಕೂಡದ ಮುನ್ನ.
ಭಕ್ತಿಯ ಮಾಡಬಲ್ಲಾತನೇ ದೇವ ಗುಹೇಶ್ವರಾ...
20) ಧ್ಯಾನ ಸೂತಕ, ಮೌನ ಸೂತಕ,
ಜಪ ಸೂತಕ, ಅನುಷ್ಟಾನ ಸೂತಕ.
ಗುಹೇಶ್ವರನೆಂಬ ಲಿಂಗವ ನರಿದ ಬಳಿಕ
ಸೂತಕ ಹಿಂಗಿತ್ತು ಯಥಾಸ್ವೇಚ್ಛೆ...
21) ಕಣ್ಣು ಕಂಡಲ್ಲದೇ ಮನ ನೆನೆಯದು,
ಆ ಮನ ನೆನೆದಲ್ಲಿಗೆ ಕಾಲು ನಡೆವುದು,
ಕಾಲು ನಡೆದಲ್ಲದೇ ಕಾರ್ಯವಾಗದು.
ಕಾಲೆಂದರೆ ನೀ ಚಲಿಸುವ ವರ್ತನೆ,
ಆ ವರ್ತನಾಚಾರವೆಲ್ಲವು ಲಿಂಗವು,
ಇದು ಕಾರಣ ಲಿಂಗವಹಿಂಗಿದ ಮಾಟ
ಮೀಸಲಿಲ್ಲದ ಮನೆದೇವರ ಹಬ್ಬದಂತೆ.
ನಮ್ಮ ಗುಹೇಶ್ವರ ಲಿಂಗಕ್ಕೆ
ಇದೇ ದೇಹ ಶೌಚ ಕೇಳಾ ಚಂದಯ್ಯ...
22) ಕಾಡುಗಿಚ್ಚೆಂದರೆ ಅಡವಿಯೆ ಗುರಿ,
ನೀರುಗಿಚ್ಚೆಂದರೆ ಸಮುದ್ರವೆ ಗುರಿ,
ಒಡಲುಗಿಚ್ಚೆಂದರೆ ಆತನುವೆ ಗುರಿ,
ಕಾಲಾಗ್ನಿಯೆಂದರೆ ಲೋಕಂಗಳೇ ಗುರಿ,
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದರೆ ನಿಂದಕರೆ ಗುರಿ,
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ ನಾನು ಗುರಿಯಲ್ಲ ಕೇಳಾ... ..
23) ಬ್ರಹ್ಮ ಘನವೆಂದರೆ ಬ್ರಹ್ಮನ ನುಂಗಿತ್ತು ಮಾಯೆ,
ವಿಷ್ಣು ಘನವೆಂದರೆ ವಿಷ್ಣುವ ನುಂಗಿತ್ತು ಮಾಯೆ,
ರುದ್ರಘನವೆಂದಡೆ ರುದ್ರನ ನುಂಗಿತ್ತು ಮಾಯೆ,
ತಾ ಘನವೆಂದರೆ ತನ್ನ ನುಂಗಿತ್ತು ಮಾಯೆ,
ಸರ್ವವೂ ನಿನ್ನ ಮಾಯೆ,
ಒಬ್ಬರನೊಳಕೊಂಡಿತ್ತೇ? ಹೇಳಾ ಗುಹೇಶ್ವರ...
24) ಕಾಲುಗಳೆರಡೂ ಗಾಲಿ ಕಂಡಯ್ಯಾ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವರು ಐವರು
ಒಬ್ಬರಿಗೊಬ್ಬರು ಸಮವಿಲ್ಲಯ್ಯಾ
ಅದರಿಚ್ಚೆಯನರಿದು ಹೊಡೆಯದಿದ್ದರೆ
ಅದರಚ್ಚು ಮುರಿಯಿತ್ತು ಗುಹೇಶ್ವರಾ...
25) ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹೊಡೆವವರಿಗೆ
ಇಷ್ಟಾರ್ಥ ಸಿದ್ಧಿಯಲ್ಲಿಯದೋ?
ಅದೆಲ್ಲಿಯದೋ ಲಿಂಗ? ಅದೆಲ್ಲಿಯದೋ ಜಂಗಮ?
ಅದೆಲ್ಲಿಯದೋ ಪಾದೋದಕ ಪ್ರಸಾದ?
ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು ಗುಹೇಶ್ವರ ನಿಮ್ಮಾಣೆ..
26) ಬೆಟ್ಟಕ್ಕೆ ಚಳಿಯಾದೆಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆಯಿದ್ದರೆ ಏನ ನುಡಿಸುವರಯ್ಯಾ?
ಭಕ್ತನ ಭವಿಯೊಡನೆ ಏನನ ನುಪಮಿಸುವೆನಯ್ಯಾ ಗುಹೇಶ್ವರಾ?
27) ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಟಿ
ತರ್ಕವೆಂಬುದು ಟಗರ ಹೋರಾಟ
ಭಕ್ತಿಯೆಂಬುದು ತೋರೆಂಬ ಲಾಭ
ಗುಹೇಶ್ವರನೆಂಬುದು ಮೀರಿದ ಘನವು...
28) ವೇದ ವೇಧಿಸಲರಿಯದೇ ಕೆಟ್ಟೆವು
ಪುರಾಣ ಪೂರೈಸಲರಿಯದೇ ಕೆಟ್ಟೆವು
ಶಾಸ್ತ್ರ ಸಾಧಿಸಲರಿಯದೇ ಕೆಟ್ಟೆವು
ಹಿರಿಯರು ತಮ್ಮ ತಾವರಿಯದೇ ಕೆಟ್ಟರು
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು
ನಿಮ್ಮನೆತ್ತ ಬಲ್ಲರು ಗುಹೇಶ್ವರ?
29) ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು
ಎಲ್ಲಿ ಚುಂಬಿಸಿದರೂ ಇನಿದಹುದು
ಒಳ್ಳೆಯ ಬೇವಿನ ಹಣ್ಣನ್ನು ಮೆಲ್ಲನೆ
ಚುಂಬಿಸಿದರೆ ಇನಿದಹುದೇ?
ಎಲ್ಲ ವಿದ್ಯೆಯನು ಬಲ್ಲವೆಂಬರು
ಅವರು ಸಲ್ಲದೇ ಹೋದರಯ್ಯಾ ಗುಹೇಶ್ವರಾ...
30) ನಾನೆಂಬುದು ಪ್ರಮಾಣ
ನೀನೆಂಬುದು ಪ್ರಮಾಣ
ಸ್ವಯಂವೆಂಬುದು ಪ್ರಮಾಣ
ಪರವೆಂಬುದು ಪ್ರಮಾಣ
ಪ್ರಮಾಣವೆಂಬುದು ಪ್ರಮಾಣ
ಗುಹೇಶ್ವರನೆಂಬುದು ಅಪ್ರಮಾಣ...
31) ಆದಿ ಅನಾದಿ ಒಂದಾದಂದು
ಸೂರ್ಯ ಚಂದ್ರರೊಂದಾದಂದು
ಧರೆಯಾಕಾಶ ಒಂದಾದೊಂದು
ಗುಹೇಶ್ವರ ಲಿಂಗ ನಿರಾಳನು...
32) ತಾಯಿ ತಂದೆಯಿಲ್ಲದ ಕಂದಾ
ನಿನಗೆ ನೀನೇ ಹುಟ್ಟಿದೆಯಲ್ಲಾ
ನಿನ್ನ ಪರಿಣಾಮವೇ ನಿನಗೆ ಪ್ರಾಣ
ತೃಪ್ತಿಯಾಗಿರ್ದೆಯಲ್ಲಾ
ಬೇಧಕರಿಗೆ ಅಬೇಧ್ಯನಾಗಿ
ನಿನ್ನ ನೀನೇ ಬೆಳಗುತಿರ್ದೆಯಲ್ಲಾ
ನಿನ್ನ ಚಾರಿತ್ರ್ಯ ನಿನಗೆ ಸಹಜ ಗುಹೇಶ್ವರ...
33) ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ನಿಶ್ಯಬ್ದದಂತೆ
ಗುಹೇಶ್ವರ ನಿಮ್ಮ ಶರಣ ಸಂಬಂಧ...
34) ಸತ್ತು ಹುಟ್ಟಿ ಕೆಟ್ಟವರೆಲ್ಲರೂ ದೇವಲೋಕಕ್ಕೆ
ಹೋದರೆಂಬ ಬಾಲಭಾಷೆಯ ಕೇಳಲಾಗದು
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರ...
35) ಪಾತಾಳದಿಂದತ್ತತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊರಗಣ ಹೊರಗನು ಅರಿಯಬಲ್ಲವರಿಲ್ಲ
ಹಿಂದಣ ಹಿಂದನು ಮುಂದಣ ಮುಂದನು
ತಂದೆ ತೋರಿದನು ನಮ್ಮ ಗುಹೇಶ್ವರನು...
36) ಸಾವ ಜೀವಕ್ಕೆ ಗುರುಬೇಡ
ಸಾಯದ ಜೀವಕ್ಕೆ ಗುರುಬೇಡ
ಗುರುವಿಲ್ಲದೇ ಕೂಡಲ್ಲಿಕ್ಕೆ ಬಾರದು
ಇನ್ನಾವ ಠಾವಿಂಗೆ ಗುರುಬೇಕು?
ಸಾವ ಜೀವ ಸಂಬಂಧದ ಠಾವ
ತೋರ ಬಲ್ಲಾತನೇ ಗುರು ಗುಹೇಶ್ವರನು...
37) ಕೋಪ ತಾಪಮಂ ಬಿಟ್ಟು,
ಭ್ರಾಂತಿ ಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೇ ಮರುಳುಗಳಿರಾ
ಇಂತಿ ಷಡುಲೊಭದ ರುಚಿ ಹಿಂಗಿ
ಜಂಗಮವಾದದಲ್ಲದೇ ಭವಹಿಂಗದು ಕಾಣಾ ಗುಹೇಶ್ವರಾ...
38) ಅರಸುತಿಹ ಬಳ್ಳಿ ಕಾಲ ಸುತ್ತಿತೆಂಬಂತೆ
ಬಯಸುವ ಬಯಕೆ ಕೈಸಾರಿದಂತೆ
ಬಡವ ನಿಧಾನವ ನಡಹಿ ಕಂಡಂತೆ
ನಾನರಸುತ್ತಲತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರವಿನ ಹರುವ ಕಂಡೆ ನೋಡಾ
ಎನ್ನ ಒಳಹೊರಗೆ ಎಡೆದೆಂಹಿಲ್ಲದೆ
ಥಳಥಳಿಸಿ ಹೊಳೆಯುತ್ತಿಪ್ಪ
ಅಖಂಡ ಜ್ಯೋತಿಯ ಕಂಡೆ ನೋಡಾ.
ಕುರುಹಳಿದ ಕರಸ್ಥಲದ ನಿಬ್ಬೆರಗಿನ
ನೋಟದ ಎನ್ನ ಪರಮ ಗುರುವ
ಕಂಡು ಬದುಕಿದೆನು ಕಾಣಾ ಗುಹೇಶ್ವರಾ...
39) ಬಿರುಗಾಳಿ ಬೀಸಿ ಮರ ಮುರಿವಂತಹ ಸುಳಿಹ ಸುಳಿಯದೇ;
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು.
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದರೆ ನೆಟ್ಟಗೆ ಭಕ್ತನಾಗಿ ನಿಲಬೇಕು.
ಸುಳಿದು ಜಂಗಮವಾಗಲರಿಯದ ನಿಂದು ಭಕ್ತನಾಗಲರಿಯದ
ಉಭಯ ಭ್ರಷ್ಟರನೇನೆಂಬೆ ಗುಹೇಶ್ವರಾ...