ಗಣಿತವೆಂದಾಕ್ಷಣ ಈಡೀ ವಿಶ್ವಕ್ಕೆ ತಕ್ಷಣ ನೆನಪಾಗುವ ಹೆಸರಿದ್ದರೆ ಅದು ಶ್ರೀನಿವಾಸ ರಾಮಾನುಜನ್. ಮೂರೇ ವರ್ಷ ಬದುಕಿದರೂ ನೂರು ವರ್ಷದ ಸಾಧನೆ ಮಾಡಬೇಕು ಎಂಬ ಉಕ್ತಿ ಅವರಿಗೆ ಸರಿ ಹೊಂದುತ್ತದೆ. ಕೇವಲ 32 ವರ್ಷ ಬದುಕಿದರೂ ಸಹ ಅವರು ಗಣಿತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಶ್ರೀನಿವಾಸ ರಾಮಾನುಜನರಿಗೆ ಗಣಿತ ಭಾಸ್ಕರ ಎನ್ನುತ್ತಾರೆ. ಅವರ ಜನ್ಮದಿನದ 125ನೇ ವರ್ಷಾಚರಣೆಯ ನೆನಪಿಗೋಸ್ಕರ 2012ನ್ನು ರಾಷ್ಟ್ರೀಯ ಗಣಿತ ವರ್ಷವೆಂದು ಘೋಷಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ.
ಗಣಿತ ಲೋಕದ ಸೂರ್ಯ ಶ್ರೀನಿವಾಸ ರಾಮಾನುಜನರು ಭಾರತದವರೆಂದು ಹೇಳಲು ಹೆಮ್ಮೆಯೆನಿಸುತ್ತದೆ. ಅವರ ಜೀವನ ಕಥೆಯನ್ನು ಎಳೆಎಳೆಯಾಗಿ ಗಮನಿಸುತ್ತಾ ಹೋದಂತೆ ನಮಗೆ ಗಣಿತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅವರ ಜೀವನ ಕಥೆಯನ್ನು ಚಿಕ್ಕದಾಗಿ ಪರಿಚಯಿಸುವ ಪ್ರಯತ್ನ ಇದಾಗಿದೆ.
ಭಾರತವು ಈ ಜಗತ್ತಿಗೆ ಕೊಡುಗೆಯಾಗಿ ನೀಡಿದ ಮೇರು ಗಣಿತಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನರು ಮೂಲತಃ ತಮಿಳುನಾಡಿನ ಕುಂಭಕೋಣಂನವರು. ಆದರೆ ಜನಿಸಿದ್ದು ಮದ್ರಾಸನಿಂದ 314 ಕಿಲೋಮೀಟರ್ ದೂರದಲ್ಲಿರುವ ಈರೋಡಾದ ಅಜ್ಜಿ ಮನೆಯಲ್ಲಿ. ಶೂನ್ಯವನ್ನು ಆವಿಷ್ಕರಿಸುವುದರ ಜೊತೆಗೆ ಆರ್ಯಭಟ, ಬ್ರಹ್ಮಗುಪ್ತ, ವರಾಹಮಿಹಿರ, ಭಾಸ್ಕರಾಚಾರ್ಯ, ಬೌಧಾಯನ, ಮಹಾವೀರಾಚಾರ್ಯ, ಶ್ರೀಧರಾಚಾರ್ಯರಂತ ಮಹಾನ ಗಣಿತಜ್ಞರನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಪರಂಪರೆ ಭಾರತಕ್ಕಿದೆ. ಈ ಪರಂಪರೆಗೆ ಇನ್ನೊಂದು ಅನರ್ಘ್ಯ ರತ್ನ ಶ್ರೀನಿವಾಸ ರಾಮಾನುಜನ್.
ರಾಮಾನುಜನರಿಗೆ ಬಾಲ್ಯದಲ್ಲಿಯೇ ಗಣಿತದಲ್ಲಿ ಅಪಾರ ಆಸಕ್ತಿಯಿತ್ತು. ಅವರು ಬಾಲ್ಯದಿಂದಲೇ ಗಣಿತದಲ್ಲಿ ಅಪಾರ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಾ ವಿಶ್ವ ವಿದ್ಯಾಲಯದಿಂದ ಯಾವುದೇ ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ ಸಹ ಲೋಕವಿಖ್ಯಾತವಾದ ಗಣಿತದ ಗಣಿಯವರು. ತಮಿಳುನಾಡಿನ ಈರೋಡನಲ್ಲಿ ಬಡಕುಟುಂಬದಲ್ಲಿ ಜನಿಸಿದ ರಾಮಾನುಜನ್ 12ನೇ ವಯಸ್ಸಿನಲ್ಲಿಯೇ ತ್ರಿಕೋನಮಿತಿಯ ಪರಿಕಲ್ಪನೆಯನ್ನು ಅಧ್ಯಯನ ಮಾಡಿ ಅಸಾಧಾರಣ ವ್ಯಕ್ತಿತ್ವವನ್ನು ಮೆರೆದರು. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಕೆಲಸಕ್ಕಾಗಿ ಅಲೆದಾಡುತ್ತಾ ಗಣಿತದ ಅಭ್ಯಾಸದಲ್ಲಿ ತೊಡಗುತ್ತಿದ್ದರು. ಅವರು ಸಂಖ್ಯಾಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಅನೇಕ ಸಂಕಲನ ಸೂತ್ರಗಳನ್ನು ಕಂಡು ಹಿಡಿದರು. ಗಣಿತದಲ್ಲಿನ ಅನೇಕ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರವನ್ನು ಕೊಟ್ಟು ಭಾರತದ ಭವ್ಯ ಗಣಿತ ಪರಂಪರೆಯನ್ನು ಮುಂದುವರೆಸಿದರು.
ಮದ್ರಾಸಿನ ಬಂದರಿನಲ್ಲಿ ಬಂದು ಹೋಗುವ ಹಡಗುಗಳಲ್ಲಿನ ಮೂಟೆಗಳ ಸರಬರಾಜಿನ ಲೆಕ್ಕವಿಟ್ಟು ತಿಂಗಳಿಗೆ 25 ರೂ ಸಂಬಳ ಪಡೆದು ರಾಮಾನುಜನ್ ಕಲ್ಲಾಸಿಗೆಯ ಮೇಲೆ ಜೀವನವನ್ನು ಸಾಗಿಸುತ್ತಿದ್ದರು. ಕೈಯಲ್ಲಿ ಕಾಸಿಲ್ಲದೆ ಪಾಟಿ ಹಲಗೆಯ ಮೇಲೆ ಗಣಿತದ ಸಂಶೋಧನಾ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ವಿಶೇಷ ಫಲಿತಾಂಶ ದೊರೆತಾಗ ಮಾತ್ರ ಅದನ್ನು ಹಾಳೆಯಲ್ಲಿ ದಾಖಲಿಸುತ್ತಿದ್ದರು. 1909ರಲ್ಲಿ ಜಾನಕಿ ಅಮ್ಮಾಳ ಎಂಬ ಯುವತಿಯೊಡನೆ ರಾಮಾನುಜನರ ವಿವಾಹವಾಯಿತು. ಸಂಪಾದನೆ ಮಾಡಲೇಬೇಕಾದ ಅಗತ್ಯತೆ ಹೆಚ್ಚಾಯಿತು. ರಾಮಾನುಜನರು ಧೈರ್ಯಗುಂದದೆ ಕೆಲಸ ಮಾಡುತ್ತಾ ತಮ್ಮ ಜೀವನದೊಂದಿಗೆ ಗಣಿತದ ಸಂಶೋಧನೆಯನ್ನು ಮುಂದುವರೆಸಿದರು.
ರಾಮಾನುಜನರಿಗೆ ಬಡತನ ಕ್ರೂರ ಶತ್ರುವಿನಂತೆ ಕಾಡಿತು. ತಮ್ಮಲ್ಲಿರುವ ಗಣಿತವನ್ನು ಕೊಲೆ ಮಾಡಲು ಮನಸ್ಸಾಗದೇ ಅವರು ಜೀವನವನ್ನು ಬಹಳಷ್ಟು ಚಾಲೆಂಜಿಂಗಾಗಿ ತೆಗೆದುಕೊಂಡರು. ಭಾರತದ ಸಂಶೋಧನಾ ಪತ್ರಿಕೆಗಳಲ್ಲಿ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿ ಯುರೋಪನ ಗಣಿತಜ್ಞರ ಗಮನವನ್ನು ಸೆಳೆದರು. ಮುಂದೆ ಶೇಷು ಅಯ್ಯರ ಎಂಬ ಹಿತೈಷಿ ಮೂಲಕ ಇಂಗ್ಲೆಂಡಿನ ಪ್ರಸಿದ್ಧ ಗಣಿತಜ್ಞರಾದ ಜಿ.ಎಚ್.ಹಾರ್ಡಿಯವರಿಗೆ 1913ರಲ್ಲಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿ ಪತ್ರ ಬರೆದರು. ಹಾರ್ಡಿ ಮೊದಲು ರಾಮಾನುಜನರ ಮೇಲೆ ಸಂಶಯ, ಅಪನಂಬಿಕೆ ತೋರಿದರೂ ಸಹ ಅವರ ಪ್ರತಿಭೆಗೆ ಮನಸೋತು ಅವರನ್ನು ಇಂಗ್ಲೆಂಡಿಗೆ ಆಮಂತ್ರಿಸಿದರು.
1914ರ ಮಾರ್ಚ ತಿಂಗಳಲ್ಲಿ ರಾಮಾನುಜನರು ಲಂಡನಿಗೆ ಹೋದರು. ಅಲ್ಲಿ ಉತ್ತಮ ದರ್ಜೆಯ 32 ಲೇಖನಗಳನ್ನು ಹಾರ್ಡಿ ಅವರ ನೆರವಿನಿಂದ ಪ್ರಕಟಿಸಿದರು. ರಾಮಾನುಜನರ ಕೀರ್ತಿ ಇಂಗ್ಲೆಂಡಿನಲ್ಲೆಲ್ಲ ಹಬ್ಬಿ ಫೆಬ್ರುಬರಿ 28, 1918ರಂದು ರಾಯಲ ಸೊಸೈಟಿಯ ಫೆಲೊಷಿಪಗೆ ಪಾತ್ರರಾದರು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆ ರಾಮಾನುಜನ ಅವರಿಗಿದೆ. 30ನೇ ವಯಸ್ಸಿನಲ್ಲಿ ಅಂಥ ಸಾಧನೆ ಮಾಡೋದು ಅಸಾಮಾನ್ಯವಾಗಿದೆ. ಅವಿಭಾಜ್ಯ ಸಂಖ್ಯೆಗಳು, ಪಾರ್ಟಿಷನ ಸಂಖ್ಯೆಗಳು, ರಾಮಾನುಜನ್ ಊಹೆಗಳು ಮುಂತಾದವೆಲ್ಲ ಅವರ ಮುಖ್ಯ ಕೊಡುಗೆಗಳಾಗಿವೆ.
"ನನ್ನ ಜೀವನದ ಪ್ರಮುಖ ಸಾಧನೆಯೆಂದರೆ ಶ್ರೀನಿವಾಸ ರಾಮಾನುಜನ ಎಂಬ ಗಣಿತ ರತ್ನವನ್ನು ಹೊಳೆಯುವಂತೆ ಮಾಡಿದ್ದು..." ಎಂದು ಹಾರ್ಡಿಯವರು ಹೇಳಿಕೊಂಡಿದ್ದಾರೆ. ಲಂಡನ್ನಿನ ವಾಸ್ತವ್ಯದಿಂದ ರಾಮಾನುಜನರ ಆರೋಗ್ಯ ಚಿಂತಾಜನಕವಾಯಿತು. ಅವರು ಸಸ್ಯಾಹಾರ ದೊರೆಯದೆ ಜೀವಸತ್ವಗಳ ಕೊರತೆಯಿಂದ ಹಾಗೂ ಕ್ಷಯ ರೋಗದಿಂದ ಬಳಲಿದರು.
ಇಂತಹ ಸಂದರ್ಭದಲ್ಲಿ ಒಮ್ಮೆ ಹಾರ್ಡಿಯವರು ರಾಮಾನುಜನರನ್ನು ಕಾಣಲು ಬಂದಾಗ "ಟ್ಯಾಕ್ಸಿಯಲ್ಲಿ ಬಂದೆ, ಟ್ಯಾಕ್ಸಿಯ ಸಂಖ್ಯೆ 1729 ತುಂಬಾ ನೀರಸವಾದ ಸಂಖ್ಯೆ ಎಂದು ಟೀಕಿಸಿದರು. ಆಗ ರಾಮಾನುಜನರು ಮುಗುಳ್ನಕ್ಕು ಥಟ್ಟನೆ "ಈ ಸಂಖ್ಯೆ ಎರಡು ಘನಗಳ ಮೊತ್ತವನ್ನು ಎರಡು ಬಗೆಗಳಲ್ಲಿ ಸೂಚಿಸುವ ಅತಿ ಚಿಕ್ಕ ಸಂಖ್ಯೆ" ಎಂದು ಉತ್ತರಿಸಿದರು. ಅವರ ಪ್ರತಿಭೆ ಕಂಡು ಹಾರ್ಡಿಯವರು ಬೆರಗಾದರು.
ಗಣಿತದ ಸೂರ್ಯ ಶ್ರೀನಿವಾಸ ರಾಮಾನುಜನರು 1919ರಲ್ಲಿ ಅತೀವ ಅನಾರೋಗ್ಯದಿಂದ ಭಾರತಕ್ಕೆ ಮರಳಿದರು. ಕಾಲಾಂತರದಲ್ಲಿ ಕುಂಭಕೋಣಂದಲ್ಲಿ 1920ರ ಏಪ್ರಿಲ್ 26ರಂದು ಗಣಿತ ಭಾಸ್ಕರ ಶ್ರೀನಿವಾಸ ರಾಮಾನುಜನ್ ಅಸ್ತಂಗತರಾದರು. ಗಣಿತವನ್ನೇ ತನ್ನ ಉಸಿರಲ್ಲಿ ಉಸಿರಾಗಿಸಿಕೊಂಡು ಗಣಿತ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಶ್ರೀನಿವಾಸ ರಾಮಾನುಜನರನ್ನು ನೆನೆಯುವುದಯ ನಮ್ಮೆಲ್ಲರ ಕರ್ತವ್ಯವಾಗಿದೆ.....