ಮಹಾರಾಜನೇ ಎಲ್ಲರ ತಂದೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramkrishna in Kannada - tenali rama stories in kannada
ಶ್ರೀಕೃಷ್ಣ ದೇವರಾಯನ ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯದ ಕೀರ್ತಿ ದೇಶ ವಿದೇಶಗಳಿಗೆಲ್ಲ ಹಬ್ಬಿತ್ತು. ಅವನ ಆಡಳಿತದಲ್ಲಿ ಸುವರ್ಣಯುಗ ಸೃಷ್ಟಿಯಾಗಿತ್ತು. ರಾಜಧಾನಿ ಹಂಪಿಯಲ್ಲಿ ಜನ ಬಂಗಾರ, ಮುತ್ತುರತ್ನಗಳನ್ನು ಶೇರುಗಳಲ್ಲಿ ಮಾರುತ್ತಿದ್ದರು. ಆದರೂ ರಾಜ್ಯದಲ್ಲಿ ಬಡವರಿದ್ದರು. ರಾಜ್ಯ ಅಥವಾ ದೇಶ ಎಷ್ಟೇ ಶ್ರೀಮಂತವಾದರೂ ಅಲ್ಲಿ ಬಡವರು ಇದ್ದೇ ಇರುವರು. ಅಂಥ ಬಡವರಲ್ಲಿ ಅವಳು ಕೂಡ ಒಬ್ಬಳು. ವಿಜಯನಗರದ ಹೆಣ್ಣು ಮಗಳೊಬ್ಬಳು ವಯಸ್ಸಾದ ತಾಯಿಯನ್ನು ಮತ್ತು ಬೆಳೆಯುತ್ತಿರುವ ಮಕ್ಕಳನ್ನು ಸಾಕಲಾಗದೆ ವೈಶ್ಯವೃತ್ತಿಯನ್ನು ಆಯ್ಕೆಮಾಡಿಕೊಂಡಳು. ಅದು ಅವಳ ವಂಶಕ್ಕಂಟಿದ ಶಾಪವಾಗಿತ್ತು. ಅವಳ ಗಂಡನೆನಿಸಿಕೊಂಡವನು ಅವಳ ಸೌಂದರ್ಯವನ್ನು ಸವಿವುದಕ್ಕಾಗಿ ಅಷ್ಟೇ ಅವಳನ್ನು ಮದುವೆಯಾಗಿದ್ದನು. ಮನದಣಿಯುವವರೆಗೆ ಅವಳ ಸೌಂದರ್ಯವನ್ನು ಸವಿದು ಅವಳ ಕೈಗೆರಡು ಮಕ್ಕಳನ್ನು ಕೊಟ್ಟು ಹೇಳದೆ ಕೇಳದೆ ಫರಾರಿಯಾಗಿದ್ದನು. ದುಡಿದು ಸಾಕುವ ಗಂಡನಿಲ್ಲದೆ ಅವಳ ಬದುಕು ದುಸ್ತರವಾಯಿತು.

ವಯಸ್ಸಾದ ತಾಯಿಯನ್ನು, ಮಕ್ಕಳನ್ನು ಸಾಕುವುದಕ್ಕಾಗಿ ಈಗ ಅವಳಿಗೆ ಸೆರಗು ಹಾಸದೆ ಬೇರೆ ದಾರಿಯಿರಲಿಲ್ಲ. ಅವಳು ಮನಸಾಕ್ಷಿಗೆ ಮೋಸ ಮಾಡಿ ಮೈಮಾರಿಕೊಳ್ಳಲು ಸಿದ್ಧಳಾದಳು. ಅವಳ ದುರಾದೃಷ್ಟಕ್ಕೆ ಅವಳಿಗೆ ಶ್ರೀಕೃಷ್ಣ ದೇವರಾಯನ ಆಸ್ಥಾನದ ಒಬ್ಬ ಗಣ್ಯ ವ್ಯಕ್ತಿ ಗಿರಾಕಿಯಾಗಿ ಸಿಕ್ಕನು. ಆತ ಅವಳ ಸೌಂದರ್ಯಕ್ಕೆ ಸೋತು ದಿನಾ ಅವಳಂದವನ್ನು ಸವಿಯಲು ತಪ್ಪದೆ ಬರುತ್ತಿದ್ದನು. ಆದರೆ ಅವಳಿಗೆ ಬಿಡಿಗಾಸಿನ ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹಗಲು ರಾತ್ರಿಯೆನ್ನದೆ ಸಮಯ ಸಿಕ್ಕಾಗಲೆಲ್ಲ ಅವಳನ್ನು ಮನಸೋಯಿಚ್ಛೆ ಸುಖಿಸಿ ಅವಳಿಗೆ ಸಂಭಾವನೆ ಕೊಡದೆ ಸತಾಯಿಸುತ್ತಿದ್ದ. ಅವಳು ಸೆರಗುವೊಡ್ಡಿ ಅವನತ್ರ ಸಂಭಾವಣೆಗಾಗಿ ಕಣ್ಣೀರಿಟ್ಟಾಗ ಆತ "ನಾನು ರಾಯನ ಆಸ್ಥಾನದ ಗಣ್ಯ ವ್ಯಕ್ತಿ. ನಿನಗೆ ನನ್ನ ಬಳಿ ಹಣ ಕೇಳುವಷ್ಟು ಸೊಕ್ಕೆ? ಸುಮ್ಮನೆ ಸಹಕರಿಸದಿದ್ದರೆ ನಿನ್ನನ್ನು ರಾಜಸಭೆಗೆ ಎಳೆದು ತಂದು ಶಿಕ್ಷೆ ಕೊಡಿಸುವೆ..." ಎಂದು ಹೆದರಿಸುತ್ತಿದ್ದನು. ಅವನಿಗೆ ಹೆದರಿಯಾಕೆ ಸುಮ್ಮನೆ ಅವನು ಹೇಳಿದಂತೆ ಸಹಕರಿಸುತ್ತಿದ್ದಳು.
ದಿನ ಕಳೆದಂತೆ ಆಸ್ಥಾನದ ಆ ಗಣ್ಯವ್ಯಕ್ತಿ ಆ ವೈಶ್ಯಯನ್ನು ತನ್ನ ಶಾಶ್ವತ ಸೊತ್ತು ಎಂಬಂತೆ ಸುಖಿಸತೊಡಗಿದನು. ಅವಳೊಂದಿಗೆ ಸಾಕಾಗುವಷ್ಟು ಸುಖಿಸಿದರೂ ಅವಳಿಗೆ ಬಿಡಿಗಾಸನ್ನು ಕೊಡದೆ ಸತಾಯಿಸಲು ಪ್ರಾರಂಭಿಸಿದನು. ಅವಳು ತನಗೆ ಮಾತ್ರ ಸೀಮಿತವೆಂಬಂತೆ ನಡೆದುಕೊಂಡನು. ಅವಳು ತನ್ನ ವಯಸ್ಸಾದ ತಾಯಿಯನ್ನು, ಮಕ್ಕಳನ್ನು ಸಾಕುವುದಕ್ಕಾಗಿ ಸೆರಗು ಹಾಸುವ ವೃತ್ತಿಗೆ ಇಳಿದಿದ್ದಳು. ಅವಳಿಗೆ ಈಗ ಹಣದ ಅವಶ್ಯಕತೆ ಸಾಕಷ್ಟಿತ್ತು. ಆದರೆ ಮೊದಲ ಗಿರಾಕಿಯೇ ಅವಳಿಗೆ ಹಣ ಕೊಡದೆ ಹೆದರಿಸಿ ಕಿರುಕುಳ ಕೊಡಲು ಪ್ರಾರಂಭಿಸಿದಾಗ ಅವಳು ಕುಗ್ಗಿ ಹೋದಳು. ಅವಳಿಗೆ ಹೇಗೆ ತನ್ನ ಸಂಭಾವಣೆ ಪಡೆಯಬೇಕೆಂದು ತೋಚದಾಯಿತು. ಆಕೆ ಧೈರ್ಯ ಮಾಡಿ ಆ ಗಣ್ಯ ವ್ಯಕ್ತಿಯ ಜೊತೆಗೆ ಸಂಭಾವನೆ ಕೊಡುವಂತೆ ಜಗಳವಾಡಿದಳು. ಆದರೆ ಆತ "ಸುಮ್ಮನಿರದಿದ್ದರೆ ನಿನ್ನ ಅಕ್ರಮ ವ್ಯವಹಾರವನ್ನು ಬಯಲಿಗೆಳೆದು ಶಿಕ್ಷೆ ಕೊಡಿಸುವೆ..." ಎಂದೆಲ್ಲ ಹೇಳಿ ಅವಳನ್ನು ಮತ್ತಷ್ಟು ಹೆದರಿಸಿದನು. ಅವಳನ್ನು ಪದೇಪದೇ ಹೆದರಿಸಿ ತನಗಿಷ್ಟ ಬಂದಂತೆ ಅವಳನ್ನು ಬಳಸಿಕೊಂಡನು. ಅವಳು ಅವನಿಗೆ ಮಾತ್ರ ಸೀಮಿತವಾದಂತಾದಳು. ಅವಳಿಗೆ ಬೇರೆ ಗಿರಾಕಿಗಳನ್ನು ಹುಡುಕಿಕೊಳ್ಳುವುದು ಬಹಳ ಕಷ್ಟವಾಯಿತು. ಅವಳಂದಕ್ಕೆ ಬಹಳಷ್ಟು ಗಿರಾಕಿಗಳು ಬರಲು ಸಿದ್ದರಿದ್ದರು. ಆದರೆ ಅದಕ್ಕೂ ಆ ಗಣ್ಯವ್ಯಕ್ತಿ ಕಲ್ಲಾಕಿದನು. ಅದಕ್ಕಾಗಿ ಆಕೆ ಅವನಿಗೊಂದು ಗತಿ ಕಾಣಿಸಲೇಬೇಕು ಎಂದು ನಿರ್ಧರಿಸಿದಳು. ಅವನ ವಿರುದ್ಧ ದೂರು ನೀಡಬೇಕೆಂದು ಸಾಕಷ್ಟು ಬಾರಿ ಅರಮನೆಗೆ ಹೋದಳು. ಆದರೆ ಅವಳನ್ನು ದ್ವಾರಪಾಲಕರಿಗೆ ಒಳ ಬಿಡದೆ ಹೊರಗಟ್ಟಿದರು.
ಅವಳ ಎಲ್ಲ ಪ್ರಯತ್ನಗಳು ವಿಫಲವಾದಾಗ ಆಕೆಗೆ ತನ್ನ ಸಮಸ್ಯೆಗೆ ತೆನಾಲಿ ರಾಮಕೃಷ್ಣ ಪರಿಹಾರ ನೀಡಬಹುದುದೆಂಬ ಯೋಚನೆ ಹೊಳೆಯಿತು. ಅವಳ ಯೋಚನೆ ಸರಿಯಾಗಿತ್ತು. ಏಕೆಂದರೆ ತೆನಾಲಿ ರಾಮಕೃಷ್ಣ ದೀನ ದಲಿತರ, ಬಡವರ, ತುಳಿತಕ್ಕೊಳಗಾದವರ ಭಾಗ್ಯದಾತನಾಗಿದ್ದನು. ಅಲ್ಲದೆ ಅವನ ಬುದ್ಧಿವಂತಿಕೆಗೆ, ಚಮತ್ಕಾರದ ಮಾತುಗಳಿಗೆ ಅಸಾಧ್ಯವಾದದ್ದು ಯಾವುದು ಇರಲಿಲ್ಲ. ಇದನ್ನೆಲ್ಲ ಮನಗಂಡಿದ್ದರಿಂದಲೇ ಆ ವೈಶ್ಯ ಸಹಾಯಕ್ಕಾಗಿ ತೆನಾಲಿ ರಾಮಕೃಷ್ಣನ ಮೋರೆ ಹೋದಳು. ರಾತ್ರಿ ರಾಮಕೃಷ್ಣ ಊಟ ಮಾಡಿ ತನ್ನ ಹೆಂಡತಿಯೊಡನೆ ಮಾತನಾಡುತ್ತಾ ಕುಳಿತ್ತಿರುವಾಗ ಆಕೆ ಅವನ ಮನೆಗೆ ಹೋದಳು. ಹೀಗೆ ಹೇಳದೆ ಕೇಳದೆ ಅಪರಿಚಿತ ಹೆಣ್ಣೊಬ್ಬಳು ತನ್ನ ಮನೆಗೆ ಬಂದಿದ್ದು ಅವನಿಗೆ ವಿಚಿತ್ರವೆನಿಸಿತು. ಅವಳ ವೇಷಭೂಷಣಗಳನ್ನು ಗಮನಿಸಿದಾಗ ಅವಳು ಅಭಿಸಾರಿಕೆ ಎಂಬುದು ಅವನಿಗೆ ಖಾತ್ರಿಯಾಯಿತು. ಆಕೆ ಹೆದರುತ್ತಾ ಅವನ ಬಳಿ ಆಸ್ಥಾನದ ಗಣ್ಯ ವ್ಯಕ್ತಿ ಮಾಡುತ್ತಿರುವ ಸಣ್ಣ ಕೆಲಸವನ್ನೆಲ್ಲ ಬಾಯ್ಬಿಟ್ಟಳು. ಜೊತೆಗೆ ತನಗೆ ನ್ಯಾಯ ಕೊಡಿಸಬೇಕೆಂದು ಅಂಗಲಾಚಿದಳು. ಅವಳ ನೋವನ್ನರಿತ ರಾಮಕೃಷ್ಣ ಅವಳಿಗೆ ಸಹಾಯ ಮಾಡುವ ವಚನವಿಟ್ಟನು. ಈ ಸಂದರ್ಭದಲ್ಲಿ ಆತ ಆಕೆಗೆ ನೇರವಾಗಿ ಯಾವುದೇ ಸಹಾಯ ಮಾಡುವಂತಿರಲಿಲ್ಲ. ಆದರೆ ಆತ ಅವಳಿಗೆ ಅನೇರವಾಗಿ ಸಹಾಯ ಮಾಡಲು ಮುಂದಾದನು. ಆತ ಅವಳಿಗೆ "ನಾಳೆ ನೀನು ಅರಮನೆಗೆ ಹೋಗಿ ನೇರವಾಗಿ ರಾಯನ ಬಳಿ ನಡೆದ ಎಲ್ಲ ಸಂಗತಿಯನ್ನು ವಿವರಿಸಿ ಆ ಗಣ್ಯ ವ್ಯಕ್ತಿಯ ವಿರುದ್ಧವಾಗಿ ದೂರು ನೀಡುವಂತೆ" ಹೇಳಿ ಕಳುಹಿಸಿದನು.
ತೆನಾಲಿ ರಾಮಕೃಷ್ಣನ ಸಲಹೆಯ ಮೇರೆಗೆ ಆ ವೈಶ್ಯ ರಾಯನ ಆಸ್ಥಾನವನ್ನು ಪ್ರವೇಶಿಸಿ ರಾಯನಿಗೆ ಆಸ್ಥಾನದ ಒಬ್ಬ ಗಣ್ಯ ವ್ಯಕ್ತಿಯಿಂದಾದ ಅನ್ಯಾಯವನ್ನು ಹೇಳಿ ದೂರು ನೀಡಿದಳು. ಅವಳ ಸೌಂದರ್ಯ ರಾಯನನ್ನು ಸಹ ಸೆಳೆಯದೆ ಬಿಡಲಿಲ್ಲ. ಆತ ಅವಳೆಡೆಗೆ ಆಕರ್ಷಿತನಾದನು. ಆದರೆ ಅವನ ಕರ್ತವ್ಯ ಪ್ರಜ್ಞೆ ಅವನನ್ನು ನಿಯಂತ್ರಿಸಿತು. ಆತ ಸೌಂದರ್ಯ ಪ್ರಿಯನಾಗಿರುವುದರಿಂದಲೇ ಅವನಿಗೆ ಅನೇಕ ರಾಣಿಯರಿದ್ದರು. "ಆಳುವವರಿಗೆ ಅರವತ್ತು ಮಂದಿ ....ರು" ಎಂಬ ಮಾತು ರಾಯನಿಗೆ ಸರಿಹೊಂದುತ್ತಿತ್ತು. ಅಷ್ಟರಲ್ಲಿ ತೆನಾಲಿ ರಾಮಕೃಷ್ಣ ಆಸ್ಥಾನಕ್ಕೆ ಪ್ರವೇಶಿಸಿದನು. ಆತ ಏನು ಅರಿವಿಲ್ಲದವರಂತೆ ರಾಯನಿಗೆ ಆ ವೈಶ್ಯಯ ಬಗ್ಗೆ ವಿಚಾರಿಸಿದನು. ನಂತರ "ಪ್ರಭು ತಮ್ಮ ರಾಜ್ಯದಲ್ಲಿ ವೈಶ್ಯಗೂ ಇಂಥ ಘೋರ ಅನ್ಯಾಯವಾಗಿದೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಮತ್ತೊಂದಿಲ್ಲ..." ಎಂದೆಲ್ಲ ಹೇಳಿ ರಾಯನಿಗೆ ಅವಳ ಮೇಲೆ ಕನಿಕರ ಮತ್ತು ಆ ಗಣ್ಯ ವ್ಯಕ್ತಿಯ ಮೇಲೆ ದ್ವೇಷ ಹುಟ್ಟುವಂತೆ ಮಾಡಿದನು. ರಾಮಕೃಷ್ಣನ ಮಾತುಗಳಿಂದ ರಾಯನಿಗೆ ಅವಳ ಮೇಲೆ ಕನಿಕರ ಉಕ್ಕಿ ಬಂತು. ಆತ ಕೋಪದಲ್ಲಿ ಆ ಗಣ್ಯ ವ್ಯಕ್ತಿಯನ್ನು ಆಸ್ಥಾನಕ್ಕೆ ಕರೆಯಿಸಿ ತರಾಟೆಗೆ ತೆಗೆದುಕೊಂಡನು. ಅಲ್ಲದೇ ಈಗಲೇ ಅವಳಿಗೆ ಸಂಭಾವನೆ ಕೊಟ್ಟು ಕ್ಷಮೆ ಕೇಳುವಂತೆ ಆಜ್ಞಾಪಿಸಿದನು. ತನ್ನ ಸಣ್ಣತನ ಎಲ್ಲರೆದುರು ಬಯಲಾದಾಗ ಆ ಗಣ್ಯವ್ಯಕ್ತಿ ನಾಚಿ ಅವಳ ಸಂಭಾವನೆಯನ್ನು ಕೊಟ್ಟು ಕ್ಷಮೆ ಕೇಳಿದನು.
ತನ್ನ ಸಂಭಾವನೆ ಸಿಕ್ಕಿದ್ದರಿಂದ ಆ ವೈಶ್ಯ ಸಂತಸದಲ್ಲಿ ತೆನಾಲಿ ರಾಮಕೃಷ್ಣನಿಗೆ ಸಾಕಷ್ಟು ವಂದಿಸಿದಳು. ನಂತರ ರಾಯನಿಗೆ ಕೃತಜ್ಞತೆ ಸಲ್ಲಿಸಿ ಹೊರಡಲು ಸಿದ್ಧಳಾದಳು. ಆದರೆ ರಾಯನ ಮನಸ್ಸು ಅವಳೆಡೆಗೆ ಆಕರ್ಷಿತವಾಗಿತ್ತು. ಅವನಿಗೆ ಅವಳ ಮನೆ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಅವಸರದಲ್ಲಿ ಆತ ಅವಳಿಗೆ "ನಿನ್ನ ತಂದೆ ಯಾರು? ನಿಮ್ಮ ಮನೆ ಎಲ್ಲಿದೆ?" ಎಂದು ಕೇಳಿದನು. ವೈಶ್ಯವೃತ್ತಿ ಅವಳ ವಂಶಕ್ಕಂಟಿದ ಶಾಪವಾಗಿತ್ತು. ಅದಕ್ಕಾಗಿ ಅವಳು ನಾಚಿಕೆಯಿಂದ ತಲೆತಗ್ಗಿಸಿ ಕಾಲಿನಿಂದ ನೆಲ ಕೆರೆಯುತ್ತಾ ನಿಂತಳು. ಅವಳ ಸ್ಥಿತಿಯನ್ನು ಅರಿತ ರಾಮಕೃಷ್ಣ ರಾಯನಿಗೆ "ಪ್ರಭು, ಇದೇನಿದು? ಹೀಗೆ ಕೇಳುತ್ತಿರುವಿರಿ? ನೀವೇ ಅಲ್ಲವೇ ಅವಳ ತಂದೆ?" ಎಂದನು. ರಾಯನ ಮುಖ ಕೋಪದಿಂದ ಕೆಂಪೆರೀತು. ಅದನ್ನು ಗಮನಿಸಿದ ರಾಮಕೃಷ್ಣ "ಪ್ರಭು ತಪ್ಪಾಗಿ ತಿಳಿದುಕೊಳ್ಳಬೇಡಿ. ರಾಜ್ಯದ ಎಲ್ಲ ಪ್ರಜೆಗಳಿಗೆ ಆಳುವ ದೊರೆಯೇ ತಂದೆಯಲ್ಲವೇ? ದಿಕ್ಕಿಲ್ಲದ ಅನಾಥರಿಗೆ ನೀವೇ ತಂದೆಯಲ್ಲವೇ?" ಎಂದು ಕೇಳಿ ಸಂದರ್ಭವನ್ನು ತಿಳಿಗೊಳಿಸಿದನು. ಇದೇ ಸಂದರ್ಭದಲ್ಲಿ ಅವಳು ರಾಮಕೃಷ್ಣನ ಸನ್ನೆಯನ್ನು ಅರ್ಥಮಾಡಿಕೊಂಡು ರಾಯನಿಗೆ ನಮಸ್ಕರಿಸಿ ಅವನ ಆರ್ಶಿವಾದ ಪಡೆದುಕೊಂಡಳು. ಅವರಿಬ್ಬರ ಜೋಡಿ ನಾಟಕದಲ್ಲಿ ರಾಯ ಭಾವುಕನಾದನು. ಅವಳ ಮೇಲೆ ರಾಯನಿಗೆ ಹುಟ್ಟಿದ್ದ ವ್ಯಾಮೋಹ ಸುಟ್ಟು ಹೋಯಿತು. ಆತ ತನ್ನ ಮೇಲೆಯೇ ನಾಚಿಕೆ ಪಟ್ಟುಕೊಂಡನು. ಅದಕ್ಕೆ ಪರಿಹಾರವಾಗಿ "ಯಾರಲ್ಲಿ? ನನ್ನ ಮಗಳಿಗೆ ತವರು ಮನೆಯಿಂದ ಸಾಕಾಗುವಷ್ಟು ಹಣ, ಒಡವೆ, ಬಟ್ಟೆ, ಧಾನ್ಯ ಇತ್ಯಾದಿಗಳನ್ನು ಕೊಟ್ಟು ಮನೆಯವರೆಗೆ ಹೋಗಿ ಬಿಟ್ಟು ಬನ್ನಿ" ಎಂದೇಳಿ ತನ್ನ ಅರಮನೆಗೆ ಹೋದನು. ಆಕೆ ಮತ್ತೊಮ್ಮೆ ರಾಮಕೃಷ್ಣನಿಗೆ ವಂದಿಸಿ ಸಂತಸದಿಂದ ತನ್ನ ಮನೆಗೆ ತೆರಳಿದಳು... To be continued...
Click Here To Read Next Part ⇩⇩
ಶ್ರೀಕೃಷ್ಣ ದೇವರಾಯನ ಪರೀಕ್ಷೆ :(Click Here)
Click Here To Read Next Part ⇩⇩
ಶ್ರೀಕೃಷ್ಣ ದೇವರಾಯನ ಪರೀಕ್ಷೆ :(Click Here)