ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು : Stories of Tenali Ramakrishna in Kannada - tenali rama stories in kannada
1) ಶ್ರೀಕೃಷ್ಣ ದೇವರಾಯನ ಪರೀಕ್ಷೆ : Stories of Tenali Ramakrishna in Kannada
ವಿಕಟಕವಿ ತೆನಾಲಿ ರಾಮಕೃಷ್ಣ ತನ್ನ ಹಾಸ್ಯಪ್ರಜ್ಞೆಯಿಂದ ವಿಜಯನಗರದ ಮಹಾನ್ ಸಾಮ್ರಾಟ ಶ್ರೀಕೃಷ್ಣ ದೇವರಾಯನಿಗೆ ಅತ್ಯಂತ ಹತ್ತಿರವಾದನು. ರಾಯ ಪ್ರತಿಯೊಂದಕ್ಕು ಅವನ ಸಲಹೆ ಕೇಳುವಷ್ಟು ಅವನ ಸ್ನೇಹ ಪಸರಿಸಿತ್ತು. ರಾಮಕೃಷ್ಣನಿಲ್ಲನಿದ್ದರೆ ರಾಯನ ಮನ ನೀರಿನಿಂದ ಆಚೆ ಬಂದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿತ್ತು. ಆದರೆ ರಾಮಕೃಷ್ಣನಿಗೆ ರಾಯನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಒಂದು ಉಪಾಯವನ್ನು ಹೆಣೆದನು. ಒಂದಿನ ಬೇಕಂತಲೆ ಅರಮನೆಗೆ ತಡವಾಗಿ ಹೋದನು. ರಾಯ ಅವನಿಗಾಗಿ ಕಾಯುತ್ತಾ ಕುಳಿತ್ತಿದ್ದನು. ಅವನು ಹೋಗುತ್ತಿದ್ದಂತೆಯೇ ರಾಯ ಅವನಿಗೆ "ನಾನು ಕಾಯುತ್ತಿರುತ್ತೇನೆ ಎಂಬುದು ಗೊತ್ತಿದ್ದರೂ ಯಾಕೆ ತಡವಾಗಿ ಬಂದೆ?" ಎಂದು ಕೇಳಿದನು. ಅದಕ್ಕೆ ರಾಮಕೃಷ್ಣ "ಹಾಗೇನಿಲ್ಲ ಪ್ರಭು, ನಿಮ್ಮನ್ನು ಕಾಯಿಸಿ ಬೇಸರಿಸುವಂಥ ಉದ್ದೇಶ ಖಂಡಿತವಿಲ್ಲ ಪ್ರಭು" ಎಂದು ಸಮಜಾಯಿಸಿ ನೀಡಿದನು. ಆದರೆ ಅವನ ಸಮಜಾಯಿಸಿಗೆ ಸುಮ್ಮನಾಗದೆ ರಾಯ ಅವನಿಗೆ "ಏಕೆ ತಡವಾಗಿ ಬಂದೆ?" ಎಂದು ಮರುಪ್ರಶ್ನಿಸಿದನು. ಆಗ ರಾಮಕೃಷ್ಣ "ಏನಿಲ್ಲ ಪ್ರಭು, ಯಾವುದೋ ಕಾರಣಕ್ಕೆ ಇವತ್ತು ಮುಂಜಾನೆ ಪಂಚಾಂಗವನ್ನು ನೋಡುತ್ತಿದ್ದೆ. ನನ್ನ ಭವಿಷ್ಯವನ್ನು ನೋಡಬೇಕನಿಸಿತು. ಅದಕ್ಕಾಗಿ ಗ್ರಹಗತಿಗಳನ್ನು ತಾಳೆ ಮಾಡಿ ನೋಡಿದೆ. ನೋಡಿದ ನಂತರ ನನ್ನೆದೆ ಒಡೆದು ಹೋಯಿತು. ಏಕೆಂದರೆ ಎರಡು ವಕ್ರ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿವೆ. ನನ್ನ ಸಾವು ಸಮೀಪಿಸುತ್ತಿದೆ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಎಂದು ಚಿಂತಿಸುತ್ತಿದ್ದೆ. ಸಮಯ ಸರಿದಿದ್ದೆ ಗೊತ್ತಾಗಲಿಲ್ಲ. ಅದಕ್ಕೆ ತಡವಾಗಿ ಬಂದೆ..." ಎಂದೇಳಿ ಕೊಂಚ ದು:ಖದಲ್ಲಿ ಮುಳುಗಿರುವಂತೆ ನಾಟಕವಾಡಿದನು. ಅವನ ನಾಟಕವನ್ನು ನಿಜವೆಂದು ನಂಬಿ ಶ್ರೀಕೃಷ್ಣ ದೇವರಾಯ ಆಘಾತಕ್ಕೊಳಗಾದನು. ಅವನ ಕೋಪ ಕೆಲವೇ ಕ್ಷಣಗಳಲ್ಲಿ ಕರಗಿತು. ಅವನಿಗೆ ರಾಮಕೃಷ್ಣನ ಮೇಲೆ ಕನಿಕರ ಹುಟ್ಟಿತು. ಅದೇ ಭರದಲ್ಲಿ ರಾಯ ರಾಮಕೃಷ್ಣನಿಗೆ "ಸಾವು ಯಾರನ್ನು ಬಿಟ್ಟಿಲ್ಲ. ಒಂದು ವೇಳೆ ನಿನಗೇನಾದರೂ ಆದರೆ ನಿನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮದಾಗುತ್ತದೆ. ನೀನು ಈ ವಿಷಯದ ಬಗ್ಗೆ ಚಿಂತಿಸದಿರು..." ಎಂದೇಳಿ ತನ್ನ ಅಭಯ ಹಸ್ತವನ್ನು ಚಾಚಿದನು. ರಾಮಕೃಷ್ಣ ರಾಯನಿಗೆ ವಂದಿಸಿ, ಎಲ್ಲ ಕಾರ್ಯಕಲಾಪಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ಸಮಾಧಾನದಿಂದ ಮನೆಗೆ ತೆರಳಿದನು.
ಮಾರನೇ ದಿನ ಕಾಕತಾಳೀಯವೆಂಬಂತೆ ತೆನಾಲಿ ರಾಮಕೃಷ್ಣನಿಗೆ ಜ್ವರ ಬಂದಿತು. ಅವನ ಹೆಂಡತಿ ಕಷಾಯ ಮಾಡಿಕೊಟ್ಟು, ಅವನ ಆರೈಕೆ ಮಾಡಿದರೂ ಸಹ ಅವನ ಜ್ವರ ಕಡಿಮೆಯಾಗಲಿಲ್ಲ. ಅವನು ಹಾಸಿಗೆಗೆ ಅಂಟಿಕೊಂಡೇ ಇರಬೇಕಾಯಿತು. ಈ ವಿಷಯ ಶ್ರೀಕೃಷ್ಣ ದೇವರಾಯನಿಗೆ ತಲುಪಿತು. ಆತನಿಗೆ ನಿನ್ನೆ ರಾಮಕೃಷ್ಣ ಹೇಳಿದ್ದು ನಿಜವೆನಿಸಿತು. ಕೂಡಲೇ ರಾಯ ತನ್ನ ಆಸ್ಥಾನದ ರಾಜ ವೈದ್ಯರನ್ನು ರಾಮಕೃಷ್ಣನ ಚಿಕಿತ್ಸೆಗೆ ಕಳುಹಿಸಿ ಕೊಟ್ಟನು. ಆದರೆ ಅವರ ಚಿಕಿತ್ಸೆಯಿಂದ ರಾಮಕೃಷ್ಣನಿಗೆ ಸ್ವಲ್ಪವೂ ಗುಣವಾಗಲಿಲ್ಲ. ಸುಳ್ಳೇಳಿದರ ತಪ್ಪಿಗೆ ನಿಜವಾಗಿಯೂ ಜ್ವರ ಬಂದು ಹಾಸಿಗೆ ಹಿಡಿಯುವಂತಾಯಿತು. ಅವನ ಅನಾರೋಗ್ಯ ರಾಯನ ಅಸಮಾಧಾನಕ್ಕೆ ಕಾರಣವಾಯಿತು. ಹೀಗೆ ಎರಡ್ಮೂರು ದಿನ ಗತಿಸುವಷ್ಟರಲ್ಲಿ ತೆನಾಲಿ ರಾಮಕೃಷ್ಣ ಜ್ವರದಿಂದ ಬಳಲಿ ತೀರಿ ಹೋದನು ಎಂಬ ಸುದ್ದಿ ರಾಜಧಾನಿಯ ತುಂಬೆಲ್ಲ ಹರಡಿತು. ರಾಮಕೃಷ್ಣನ ಅಕಾಲ ಮರಣದ ಅಶುಭ ಸುದ್ದಿ ಕೇಳಿ ರಾಯನ ಜಂಘಾಬಲವೇ ಉಡುಗಿ ಹೋಯಿತು. ಅವನ ಅಗಲಿಕೆ ರಾಯನ ಆತ್ಮಸ್ಥೈರ್ಯವನ್ನು ನಲುಗಿಸಿತು.
ತೆನಾಲಿ ರಾಮಕೃಷ್ಣನ ಮರಣ ವಾರ್ತೆಯಿಂದ ರಾಯ ಶೋಕ ಸಾಗರದಲ್ಲಿ ಮುಳುಗಿದನು. ಅದರಿಂದ ಹೊರಬಂದ ನಂತರ ಅವನಿಗೆ ತನ್ನ ಕರ್ತವ್ಯ ಪ್ರಜ್ಞೆ ಅರಿವಾಯಿತು. ಕೂಡಲೇ ಆತ ರಾಜಭಟರನ್ನು ಕರೆಯಿಸಿ ತೆನಾಲಿ ರಾಮಕೃಷ್ಣನ ಮನೆಗೆ ಹೋಗಿ ಅವನ ಸಂಪೂರ್ಣ ಸಂಪತ್ತನ್ನು ಸಂಗ್ರಹಿಸಿಕೊಂಡು ತರಲು ಹೇಳಿ ಕಳುಹಿಸಿದನು. ರಾಜಾಜ್ಞೆಯಂತೆ ರಾಜಭಟರು ರಾಮಕೃಷ್ಣನ ಮನೆಗೆ ಹೋದರು. ಕತ್ತಲಲ್ಲಿ ಕಣ್ಣೀರಾಕುತ್ತಾ ಕುಳಿತ್ತಿದ್ದ ಅವನ ಹೆಂಡತಿಯನ್ನು ಸಂತೈಸಿ ತಾವು ಬಂದ ಕಾರಣವನ್ನು ತಿಳಿಸಿದರು. ಆಗ ಅವನ ಮಡದಿ ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಎರಡು ದೊಡ್ಡ ಪೆಟ್ಟಿಗೆಗಳನ್ನು ತೋರಿಸಿದಳು. ಅವುಗಳ ಮೇಲೆ ದೊಡ್ಡದಾಗಿ ಬಂಗಾರ, ವಜ್ರ ವೈಢೂರ್ಯವೆಂದು ಬರೆದಿತ್ತು. ಕೂಡಲೇ ರಾಜಭಟರು ಅವುಗಳನ್ನು ಹೊತ್ತುಕೊಂಡು ಹೋಗಿ ರಾಯನ ಮುಂದಿಟ್ಟರು. ರಾಯ ಕುತೂಹಲದಿಂದ ಅವುಗಳನ್ನು ತೆರೆಯುವಂತೆ ಹೇಳಿದನು. ರಾಜಭಟರು ಪೆಟ್ಟಿಗೆಯನ್ನು ತೆಗೆದಾಗ ಅದರಿಂದ "ಜೈ ಕಾಳಿ..." ಎನ್ನುತ್ತಾ ತೆನಾಲಿ ರಾಮಕೃಷ್ಣ ಹೊರಬಂದನು. ರಾಮಕೃಷ್ಣನನ್ನು ನೋಡಿ ರಾಯನಿಗೆ ತನ್ನ ಮೇಲೆ ನಾಚಿಕೆಯಾಯಿತು. ಆತ "ರಾಮಕೃಷ್ಣ ನಾನು ಈ ಪೆಟ್ಟಿಗೆಗಳನ್ನು ತರಿಸಿದ ಉದ್ದೇಶವೆಂದರೆ ನಿನ್ನ ಸಂಪತ್ತನ್ನು ರಕ್ಷಿಸಲು ಅಷ್ಟೇ..." ಎಂದನು. ಅದಕ್ಕಾತ ನಗುತ್ತಾ "ಮಹಾಪ್ರಭುಗಳೇ, ನನಗಾಗಲೇ ಗೊತ್ತಿತ್ತು. ನನ್ನ ಮರಣದ ನಂತರ ನನ್ನೆಲ್ಲ ಸಂಪತ್ತು ರಾಜ ಬೊಕ್ಕಸಕ್ಕೆ ಸೇರುವುದೆಂದು. ಅದಕ್ಕೆ ನಾನು ಈ ರೀತಿ ನಿಮ್ಮನ್ನು ಪರೀಕ್ಷಿಸಿದೆ..." ಎಂದನು. ರಾಯನಿಗೆ ರಾಮಕೃಷ್ಣನಿಟ್ಟ ಪರೀಕ್ಷೆಯಲ್ಲಿ ತಾನು ಸೋತೆ ಎಂಬುದು ಗೊತ್ತಾಯಿತು. ಅಲ್ಲದೆ ಕಾಳಿಮಾತೆಯ ಕೃಪೆಯಿಂದ ರಾಮಕೃಷ್ಣನ ಜ್ವರ ಕಡಿಮೆಯಾದದ್ದು ಸಹ ಗೊತ್ತಾಯಿತು. ಅದಕ್ಕಾಗಿ ಸೋತ ತಪ್ಪಿಗೆ ರಾಯ ರಾಮಕೃಷ್ಣನನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ರಾಜ ಮರ್ಯಾದೆಯೊಂದಿಗೆ ಅವನ ಸಂಪತ್ತನ್ನು ಅವನ ಮನೆಗೆ ಹಿಂತಿರುಗಿಸಿದನು... To be Continued...
2) ಕಾಳಿಮಾತೆಯ ಅನುಗ್ರಹ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು : Tales of Tenali Ramakrishna in Kannada
ತೆನಾಲಿ ರಾಮಕೃಷ್ಣ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಗ್ರಾಮದವನು. ಅವನು ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ರಾಮಯ್ಯರನ್ನು ಕಳೆದುಕೊಂಡು ತಾಯಿ ಲಕ್ಷಮ್ಮರೊಂದಿಗೆ ತಾಯಿಯ ತವರೂರಾದ ತೆನಾಲಿಯಲ್ಲಿ ವಾಸಿಸುತ್ತಿದ್ದನು. ಅವನು ಶೈವನಾಗಿದ್ದರಿಂದ ಯಾವ ವೈಷ್ಣವ ವಿದ್ವಾಂಸನು ಸಹ ಅವನಿಗೆ ಶಿಕ್ಷಣವನ್ನು ನೀಡಲು ಮುಂದೆ ಬರಲಿಲ್ಲ. ರಾಮಕೃಷ್ಣನಲ್ಲಿ ಕಲಿಯುವ ಹಂಬಲವಿತ್ತು. ಆದರೆ ಅವನಿಗೆ ಕಲಿಸಲು ಗುರುಗಳು ಮುಂದಾಗಲಿಲ್ಲ. ಹೀಗಾಗಿ ವಿದ್ಯಾನುಗ್ರಹಕ್ಕಾಗಿ ಆತ ತನ್ನ ಕುಲದೇವತೆ ಕಾಳಿ ಮಾತೆಯನ್ನು ಪೂಜಿಸಲು ಪ್ರಾರಂಭಿಸಿದನು.
ಪ್ರತಿದಿನ ರಾಮಕೃಷ್ಣ ಬೆಳಿಗ್ಗೆ ಬೇಗನೆದ್ದು ಕಾಳಿಕಾ ದೇವಿ ದೇವಸ್ಥಾನದ ಪಕ್ಕದಲ್ಲಿದ್ದ ಕೊಳದಲ್ಲಿ ಸ್ನಾನ ಮಾಡಿ ಶುಚಿಯಾಗಿ ಸ್ವಚ್ಛ ಮನಸ್ಸಿನಿಂದ ದೇವಿಯ ದರ್ಶನ ಪಡೆಯುತ್ತಿದ್ದನು. ದೇವಿಯ ದರ್ಶನದಿಂದ ಅವನ ಮುಖದಲ್ಲಿನ ತೇಜಸ್ಸು ಇಮ್ಮಡಿಯಾಗುತ್ತಿತ್ತು. ಪ್ರತಿನಿತ್ಯ ದೇವಸ್ಥಾನಕ್ಕೆ ತೆರಳಿ ದೇವಿಯ ದರುಶನವನ್ನು ಪಡೆದುಕೊಳ್ಳುವುದು ರಾಮಕೃಷ್ಣನ ದಿನಚರಿಯಾಗಿತ್ತು. ಒಂದಿನ ಅವನಿಗೊಬ್ಬ ಸಾಧು ಸಿಕ್ಕನು.
ಸಾಧು : ಮಗು ನೀನು ಪ್ರತಿನಿತ್ಯ ಕಾಳಿಮಾತೆಯ ದರ್ಶನಕ್ಕೆ ಬರುತ್ತಿರುವೆಯಾ?
ರಾಮಕೃಷ್ಣ : ಹೌದು ಪೂಜ್ಯರೇ. ನಾನು ದಿನಾಲು ತಪ್ಪದೆ ತಾಯಿಯ ದರ್ಶನಕ್ಕೆ ಬರುತ್ತಿರುವೆ.
ಸಾಧು : ನಿನಗೆ ಕಾಳಿಮಾತೆಯಲ್ಲಿ ಅಷ್ಟೊಂದು ಭಕ್ತಿಯೇ?
ರಾಮಕೃಷ್ಣ : ಜಗದ ರಕ್ಷಕಿಯಾದ ಕಾಳಿಮಾತೆ ನನ್ನನ್ನು ರಕ್ಷಿಸುತ್ತಾ ಬಂದಿದ್ದಾಳೆ. ಹೀಗಿರುವಾಗ ಅವಳ ಮೇಲೆ ಭಕ್ತಿ ಇರದಿರುವುದೇ?
ಸಾಧು : ಮಗು ನೀನು ಅವಳನ್ನು ನೋಡಿರುವೆಯಾ?
ರಾಮಕೃಷ್ಣ : ಇಲ್ಲ ಪೂಜ್ಯರೇ. ಅವಳನ್ನು ನೋಡುವ ಭಾಗ್ಯ ನನ್ನ ಕಣ್ಣುಗಳಿಗೆ ಇಲ್ಲವೆನಿಸುತ್ತದೆ...
ಸಾಧು : ಹಾಗೇನ್ನದಿರು ಮಗು. ನೀನು ಅವಳ ಭಕ್ತ. ನಿನಗಾಗಿ ಅವಳು ಪ್ರತ್ಯಕ್ಷಳಾಗುತ್ತಾಳೆ. ನೀನೊಂದು ರಾತ್ರಿ ಕಾಳಿಮಾತೆಯ ಎದುರಲ್ಲಿ ಕುಳಿತು ಆರು ಕೋಟಿ ಸಲ ಅವಳನ್ನು ಭಕ್ತಿಭಾವದಿಂದ ಜಪಿಸು. ಆಗ ಕಾಳಿಮಾತೆ ನಿನ್ನೆದುರು ಪ್ರತ್ಯಕ್ಷಳಾಗುತ್ತಾಳೆ. ಅವಳನ್ನು ನೋಡಿ ಹೆದರದಿರು. ಏಕೆಂದರೆ ಅವಳಿಗೆ ಸಾವಿರ ಮುಖಗಳಿವೆ. ಅವಳ ಕೈಗಳಲ್ಲಿ ನೂರಾರು ಆಯುಧಗಳಿರುತ್ತವೆ. ಅರ್ಥವಾಯಿತೇ ಮಗು?
ರಾಮಕೃಷ್ಣ : ಆಯ್ತು ಪೂಜ್ಯರೇ. ಕಾಳಿಮಾತೆಯನ್ನು ನಾನು ದಿನನಿತ್ಯ ಪೂಜಿಸುತ್ತಾ ಬಂದಿರುವೆ. ನಾನು ಖಂಡಿತ ಹೆದರುವುದಿಲ್ಲ.
ಸಾಧು : ಹಾಗಾದರೆ ಮಗು ನೀನು ಕಾಳಿಮಾತೆಯ ದರ್ಶನ ಭಾಗ್ಯದಿಂದ ಪುನೀತನಾಗುತ್ತಿಯ. ತಪ್ಪದೆ ಅವಳ ಬಳಿ ಒಂದು ಒಳ್ಳೆಯ ವರವನ್ನು ಕೇಳಿಕೋ...
ಇಷ್ಟು ಹೇಳಿ ಸಾಧು ಹೊರಟು ಹೋದನು. ಅವನ ನಿರ್ಗಮನದ ನಂತರ ರಾಮಕೃಷ್ಣನಿಗೆ ಕಾಳಿಮಾತೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಹಂಬಲ ಹೆಚ್ಚಾಯಿತು. ಅವತ್ತಿನ ರಾತ್ರಿ ಆತ ಮನೆಗೆ ಹೋಗದೆ ಗರ್ಭಗುಡಿಯಲ್ಲಿದ್ದ ಕಾಳಿಮಾತೆಯ ದಿವ್ಯ ಮೂರ್ತಿಯ ಎದುರು ಕಾಳಿಮಾತೆಯನ್ನು ಭಕ್ತಿಯಿಂದ ಜಪಿಸಲು ಪ್ರಾರಂಭಿಸಿದನು. ಆತ ನಿರ್ಮಲ ಮನಸ್ಸಿನಿಂದ ಕಾಳಿಮಾತೆಯನ್ನು ಧ್ಯಾನಿಸುವುದರಲ್ಲಿ ಮಗ್ನನಾದನು. ಕತ್ತಲು ಕಳೆದು ಬೆಳಗಾಗಿದ್ದು ಅವನ ಅರಿವಿಗೆ ಬರಲೇ ಇಲ್ಲ. ಆತ ಭಕ್ತಿಯಲ್ಲಿ ಅಷ್ಟೊಂದು ಭಾವಪರವಶನಾಗಿದ್ದನು. ಬೆಳಗಾಗುವುದರಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದವಾಯಿತು. ದೇವಸ್ಥಾನದಲ್ಲಿದ್ದ ಘಂಟೆ, ಜಾಗಟೆಗಳು ತನ್ನಿಂದ ತಾನಾಗಿಯೇ ಬಾರಿಸಲು ಶುರುವಾದವು. ರಾಮಕೃಷ್ಣನನ್ನು ಯಾರೋ ಕೂಗಿ ಕರೆದಂತಾಯಿತು. ಆತ ಕಣ್ಬಿಟ್ಟು ನೋಡಿದಾಗ ಅವನಿಗೆ ಅಚ್ಚರಿ ಕಾದಿತ್ತು. ಸಾಧು ಹೇಳಿದಂತೆ ಸಾವಿರ ತಲೆಗಳುಳ್ಳ ಕಾಳಿಮಾತೆ ರೌದ್ರಾವತಾರದಲ್ಲಿ ಅವನೆದುರು ಪ್ರತ್ಯಕ್ಷಳಾಗಿದ್ದಳು. ಅವಳ ಕಂಗಳಲ್ಲಿ ಕೆಂಡದಂಥ ಕೋಪವಿತ್ತು. ಆದರೆ ರಾಮಕೃಷ್ಣ ಅವಳ ದಿವ್ಯ ಸ್ವರೂಪಕ್ಕೆ ಕಿಂಚಿತ್ತೂ ಹೆದರಲಿಲ್ಲ. ಅದರ ಬದಲಾಗಿ ಗಟ್ಟಿಯಾಗಿ ನಕ್ಕನು.
ಕಾಳಿಮಾತೆ : ರಾಮಕೃಷ್ಣ ಏನಿದು ನಿನ್ನ ಉದ್ಧಟತನ? ನಿನಗೆ ಸ್ವಲ್ಪವೂ ಭಯ ಭಕ್ತಿ ಇಲ್ಲವೇ?
ರಾಮಕೃಷ್ಣ : ಅಮ್ಮ ನಿನ್ನ ಮೇಲೆ ಭಕ್ತಿಯಿಲ್ಲದೆ, ನಿನ್ನನ್ನು ಭಜಿಸದೆ ನಾನು ಬದುಕಲು ಸಾಧ್ಯವೇ? ತಾಯಿ ನನಗೆ ನಿನ್ನ ಮೇಲೆ ಅಪಾರ ಭಕ್ತಿಯಿದೆ. ಆದರೆ ಎಳ್ಳಷ್ಟು ಭಯವಿಲ್ಲ...
ಕಾಳಿಮಾತೆ : ಏನು ಭಯವಿಲ್ಲವೇ? ಅದಕ್ಕೆ ನಕ್ಕೆಯಾ ನೀನು?
ರಾಮಕೃಷ್ಣ : (ಮತ್ತೆಮತ್ತೆ ನಗುತ್ತಾ) ಅಮ್ಮ ನಾನು ನಕ್ಕಿದ್ದು ನಿನ್ನ ನೋಡಿಯಲ್ಲ, ನಿನ್ನ ಕೈಗಳನ್ನು ನೋಡಿ...
ಕಾಳಿಮಾತೆ : ಏನು ನನ್ನ ಕೈಗಳನ್ನು ನೋಡಿ ನಗುತ್ತಿರುವೆಯಾ? ಏನಾಗಿದೆ ಅವುಗಳಿಗೆ?
ರಾಮಕೃಷ್ಣ : ತಾಯಿ ನಿನಗೆ ಸಾವಿರ ತಲೆಗಳಿದ್ದರೂ ಕೈಗಳು ಮಾತ್ರ ಎರಡೇ ಇವೆ. ಕೇವಲ ಒಂದು ತಲೆ ಇರುವ ನಾವೇ ನೆಗಡಿಯಾದಾಗ ಮೂಗನ್ನು ತೀಡಿತೀಡಿ ಸೋತು ಸುಣ್ಣವಾಗುತ್ತೇವೆ. ಆದರೆ ಸಾವಿರ ತಲೆಗಳಿರುವ ನೀನು, ಸಾವಿರ ಮೂಗುಗಳನ್ನು ಎರಡೇ ಕೈಗಳಿಂದ ಹೇಗೆ ಸಂಭಾಳಿಸುತ್ತಿಯಾ ಎಂಬುದನ್ನು ನೆನೆಸಿಕೊಂಡು ನಗು ಬಂತು ತಾಯಿ...
ಹೀಗೇಳಿ ರಾಮಕೃಷ್ಣ ಮತ್ತೆ ಜೋರಾಗಿ ನಕ್ಕನು. ಅವನ ಹಾಸ್ಯಪ್ರಜ್ಞೆಗೆ ಮನಸೋತು ಕಾಳಿಮಾತೆಯು ನಕ್ಕಳು.
ಕಾಳಿಮಾತೆ : ರಾಮಕೃಷ್ಣ ನೀನು ಎಲ್ಲರನ್ನು ನಗಿಸಲೇಂದೆ ಜನಿಸಿ ಬಂದಿರುವೆ. ನಿನ್ನ ಧೈರ್ಯ ಹಾಗೂ ಭಕ್ತಿಗಳೆರಡಕ್ಕು ನಾನು ಪ್ರಸನ್ನಳಾಗಿರುವೆ. ನೀನು ಸಾಮಾನ್ಯನಲ್ಲ. ಅದಕ್ಕಾಗಿ ನಾನು ನಿನಗೆ ಪ್ರೀತಿಯಿಂದ ಪರಮ ಶ್ರೇಷ್ಠವಾದ ವರವೊಂದನ್ನು ನೀಡುತ್ತಿರುವೆ. ನೀನು ಇನ್ಮುಂದೆ ಹೀಗೆಯೇ ಎಲ್ಲರನ್ನು ನಗಿಸುತ್ತಾ ವಿಕಟಕವಿ ಎಂದು ಪ್ರಸಿದ್ದನಾಗುವೆ. ನಿನ್ನ ಹಾಸ್ಯ ಕಲೆಯನ್ನು ನೊಂದ ಹೃದಯಗಳನ್ನು ನಗಿಸುವುದಕ್ಕಾಗಿ ಬಳಸಿಕೊಂಡು ಲೋಕಪ್ರಿಯನಾಗು. ಈಗಲೇ ನೀನು ಭವ್ಯವಾದ ವಿಜಯನಗರದ ಸಾಮ್ರಾಟ ಶ್ರೀಕೃಷ್ಣ ದೇವರಾಯನ ಆಸ್ಥಾನವನ್ನು ಸೇರಿಕೋ. ನಿನಗೆ ಶುಭವಾಗುವುದು ಎಂದು ಹಾರೈಸಿ ಕಾಳಿಮಾತೆ ಅದೃಶ್ಯಳಾದಳು.
3) ಮಹಾ ಮರಣದಂಡನೆ : ತೆನಾಲಿ ರಾಮಕೃಷ್ಣನ ಕಥೆಗಳು - Tales of Tenali Ramakrishna in Kannada
ಶ್ರೀಕೃಷ್ಣ ದೇವರಾಯನ ಆಸ್ಥಾನದ ಆಶ್ರಯ ಸಿಕ್ಕಿದ್ದರಿಂದ ತೆನಾಲಿ ರಾಮಕೃಷ್ಣ ಸಂತಸದ ಕಡಲಲ್ಲಿ ತೇಲಾಡುತ್ತಿದ್ದನು. ಆದರೆ ಶ್ರೀಕೃಷ್ಣ ದೇವರಾಯನಿಗೆ ತೆನಾಲಿ ರಾಮಕೃಷ್ಣನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಅರಮನೆಯ ದ್ವಾರ ಪಾಲಕರಿಗೆ ಆಮಿಷವೊಡ್ಡಿ ಅಕ್ರಮವಾಗಿ ಅರಮನೆ ಪ್ರವೇಶ ಮಾಡಿದ್ದನ್ನು ಘೋರ ಅಪರಾಧವೆಂದು ಪರಿಗಣಿಸಿ ತೆನಾಲಿ ರಾಮಕೃಷ್ಣನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದನು. ಜೊತೆಗೆ ಶಿರಚ್ಛೇದನ ಮಾಡಬೇಕೆಂದು ಆಜ್ಞಾಪಿಸಿದನು. ರಾಜಾಜ್ಞೆಯ ಮೇರೆಗೆ ಸೈನಿಕರು ರಾಮಕೃಷ್ಣನನ್ನು ಶಿರಚ್ಛೇದನ ಮಾಡುವುದಕ್ಕಾಗಿ ಕೋಟೆಯ ಹೊರಗಡೆ ಕರೆದುಕೊಂಡು ಹೋದರು. ತೆನಾಲಿ ರಾಮಕೃಷ್ಣನಿಗೆ ಇದು ರಾಯನ ಮಹಾ ಪರೀಕ್ಷೆಯೆಂಬುದು ಮನದಟ್ಟಾಯಿತು. ಅದಕ್ಕಾಗಿ ಆತ ಹೆದರದೆ ಮನದಲ್ಲಿ ಕಾಳಿಮಾತೆಯನ್ನು ನೆನೆಯುತ್ತಾ ಸಂತೋಷದಿಂದ ಸೈನಿಕರೊಂದಿಗೆ ಹೆಜ್ಜೆ ಹಾಕಿದನು.
ರಾಜಾಜ್ಞೆಯ ಅನುಸಾರ ಸೈನಿಕರು ರಾಮಕೃಷ್ಣನ ಶಿರಚ್ಛೇದನ ಮಾಡಲು ಮುಂದಾದಾಗ ರಾಮಕೃಷ್ಣ ತನ್ನ ಜಾಣ್ಮೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದನು.
ರಾಮಕೃಷ್ಣ : ಅಯ್ಯಾ ಸೈನಿಕರೇ, ನಾನು ಕುಲದಿಂದ ಬ್ರಾಹ್ಮಣ. ಹೀಗಾಗಿ ನಾನು ಹಾಗೆಯೇ ಸಾಯುವಂತಿಲ್ಲ. ಅದಕ್ಕಾಗಿ ನನಗೆ ಸ್ನಾನ ಮಾಡಿ, ಸಂಧ್ಯಾವಂದನೆ ಮಾಡಲು ಅವಕಾಶ ಮಾಡಿಕೊಡಿ.
ಸೈನಿಕರು : ಆಯ್ತು ರಾಮಕೃಷ್ಣ. ಸಾಯುವ ಅಪರಾಧಿಯ ಕೊನೆಯಾಸೆಗಳನ್ನು ಪೂರೈಸುವುದು ನಮ್ಮ ಕರ್ತವ್ಯ. ಬೇಗನೆ ನಿನ್ನಾಸೆಗಳನ್ನು ಪೂರೈಸಿಕೊಂಡು ಸಾಯಲು ಸಿದ್ಧನಾಗು...
(ಸೈನಿಕರು ಬಹಳಷ್ಟು ಜಾಗರೂಕತೆಯಿಂದ ತೆನಾಲಿ ರಾಮಕೃಷ್ಣನನ್ನು ಒಂದು ಸರೋವರಕ್ಕೆ ಕರೆದುಕೊಂಡು ಹೋದರು. ರಾಮಕೃಷ್ಣ ಸರೋವರದಲ್ಲಿ ಸ್ನಾನ ಮಾಡಿ ಶುಚಿಯಾದ ನಂತರ ಸಂಧ್ಯಾವಂದನೆ ಮಾಡಿದನು. ನಂತರ ಸೈನಿಕರು ಅವನನ್ನು ಕೊಲ್ಲಲು ಮುಂದಾದಾಗ ಆತ ಮತ್ತೆ ತನ್ನ ಬುದ್ಧಿವಂತಿಕೆಯನ್ನು ಪ್ರಯೋಗಿಸಿದನು.)
ರಾಮಕೃಷ್ಣ : ಅಯ್ಯಾ ಸೈನಿಕರೇ, ಸಂಧ್ಯಾವಂದನೆಯಾದ ನಂತರ ಊಟ ಮಾಡುವುದು ಬ್ರಾಹ್ಮಣರ ಪದ್ಧತಿ. ಹೀಗಾಗಿ ನೀವು ನನಗಾಗಿ ಊಟದ ಏರ್ಪಾಟು ಮಾಡುವಿರಾ? ನಾನು ಹಸಿವಿನಿಂದ ನರಳಿ ಸತ್ತರೆ ನಿಮಗೆ ನನ್ನ ಕರ್ಮ ತಟ್ಟುವುದು...
ಸೈನಿಕರು ರಾಮಕೃಷ್ಣನ ಕೋರಿಕೆಯಂತೆ ಅವನಿಗೆ ಹಣ್ಣು ಹಂಪಲುಗಳನ್ನು ನೀಡಿದರು. ಆತ ಅವುಗಳನ್ನು ಚೆನ್ನಾಗಿ ತಿಂದು ತೇಗಿದನು. ನಂತರ ಎಳೆ ನೀರುಗಳನ್ನು ಕುಡಿದು ಮಲಗಿದನು. ಸೈನಿಕರು ಅವನನ್ನು ಬಲವಂತವಾಗಿ ಎಬ್ಬಿಸಲು ಪ್ರಯತ್ನಿಸಿದಾಗ ಆತ "ಊಟವಾದ ನಂತರ ಸ್ವಲ್ಪ ನಿದ್ರಿಸುವುದು ಬ್ರಾಹ್ಮಣರ ಪದ್ಧತಿ. ಬ್ರಹ್ಮಹತ್ಯೆ ಮಹಾಪಾಪ. ನೀವು ಈಗಲೇ ನನ್ನ ಸಾಯಿಸಿದರೆ ಮಹಾ ಪಾಪವನ್ನು ಕಟ್ಟಿಕೊಳ್ಳುತ್ತಿರಾ..." ಎಂದೇಳಿ ಸೈನಿಕರನ್ನು ಹೆದರಿಸಿದನು. ಸೈನಿಕರು ಅವನನ್ನು ಸುಲಭವಾಗಿ ಕೊಲ್ಲಲಾಗುತ್ತಿಲ್ಲವಲ್ಲ ಎಂದು ಪರದಾಡುತ್ತಿರುವಾಗ ಆತ ಸ್ವಚ್ಛಂದವಾಗಿ ನಿದ್ರಿಸಿದನು. ನಂತರ ನಿದ್ದೆಯಿಂದೆದ್ದ ರಾಮಕೃಷ್ಣ ಸೈನಿಕರನ್ನು ಕರೆದು ರಾಜಾಜ್ಞೆಯನ್ನು ನೆರವೇರಿಸಲು ಹೇಳಿದನು.
ರಾಮಕೃಷ್ಣ : ಸೈನಿಕರೇ, ನೀವು ನನ್ನ ಕೊನೆಯಾಸೆಗಳನ್ನು ನೆರವೇರಿಸಿ ಮಹದುಪಕಾರವನ್ನು ಮಾಡಿರುವಿರಿ. ನಿಮ್ಮನ್ನು ಕಾಳಿಮಾತೆ ಚೆನ್ನಾಗಿಡುತ್ತಾಳೆ ಚಿಂತಿಸದಿರಿ.
ಸೈನಿಕರು : ನಿನ್ನ ರಗಳೆ ಸಾಕು ರಾಮಕೃಷ್ಣ. ಬೇಗನೆ ಸಾಯಲು ಸಿದ್ಧನಾಗು...
ರಾಮಕೃಷ್ಣ : ನೀವು ರಾಜಾಜ್ಞೆಯನ್ನು ನಿರಾತಂಕವಾಗಿ ನೆರವೇರಿಸಿ, ನಂದೇನು ಅಭ್ಯಂತರವಿಲ್ಲ. ಆದರೆ ನನ್ನದೊಂದು ಕೊನೆಯ ಕೋರಿಕೆಯಿದೆ.
ಸೈನಿಕರು : ಏನದು ಹೇಳಿ ಸಾಯಿ...
ರಾಮಕೃಷ್ಣ : ನಾನು ಸರೋವರದಲ್ಲಿ ಇಳಿದು ಎದೆಮಟ್ಟದ ನೀರಿನಲ್ಲಿ ನಿಂತುಕೊಂಡು ಕಣ್ಮುಚ್ಚಿ ಕಾಳಿಮಾತೆಯನ್ನು ನೆನೆಯುತ್ತೇನೆ. ಆಗ ನೀವಿಬ್ಬರು ಒಂದೇ ಏಟಿಗೆ ನನ್ನ ತಲೆಯನ್ನು ಕತ್ತರಿಸಿ ರಾಜಾಜ್ಞೆಯನ್ನು ಪೂರ್ಣಗೊಳಿಸಿ...
ತೆನಾಲಿ ರಾಮಕೃಷ್ಣ ಸರೋವರದಲ್ಲಿಳಿದು ಎದೆಮಟ್ಟದ ತನಕ ನೀರಲ್ಲಿ ನಿಂತುಕೊಂಡು ಕಣ್ಮುಚ್ಚಿ ಕಾಳಿಮಾತೆಯನ್ನು ನೆನೆಯಲು ಪ್ರಾರಂಭಿಸಿದನು. ಸೈನಿಕರು ಹರಿತವಾದ ಖಡ್ಗಗಳನ್ನು ಹಿಡಿದುಕೊಂಡು ರಾಮಕೃಷ್ಣನ ತಲೆಯನ್ನು ಕತ್ತರಿಸಲು ಸಿದ್ಧರಾದರು. ಸೈನಿಕರು ಖಡ್ಗವನ್ನು ಪ್ರಯೋಗಿಸುವ ಸಮಯಕ್ಕೆ ಸರಿಯಾಗಿ ರಾಮಕೃಷ್ಣ ನೀರಿನಲ್ಲಿ ಮುಳುಗಿದನು. ಸೈನಿಕರು ಗಾಳಿಯಲ್ಲಿ ಖಡ್ಗ ಬೀಸಿ ರಾಮಕೃಷ್ಣನನ್ನು ಕೊಲ್ಲಲಾಗದೆ ನಿರಾಶರಾದರು. ಒಂದೇ ಏಟಿನಲ್ಲಿ ರಾಮಕೃಷ್ಣನ ತಲೆ ತೆಗೆಯಬೇಕೆಂದು ಒಪ್ಪಂದವಾಗಿತ್ತು. ಆದರೆ ಒಂದೇ ಏಟಿನಲ್ಲಿ ಅವನ ತಲೆ ತೆಗೆಯುವಲ್ಲಿ ಸೈನಿಕರು ವಿಫಲರಾದರು. ಅದಕ್ಕಾಗಿ ಅವರು ಸಪ್ಪೆ ಮೋರೆ ಹಾಕಿಕೊಂಡು ಅರಮನೆಗೆ ಹಿಂತಿರುಗಿ ಶ್ರೀಕೃಷ್ಣ ದೇವರಾಯನಿಗೆ ನಡೆದ ಸಂಗತಿಯನ್ನು ವಿವರಿಸಿದರು. ರಾಯನಿಗೆ ರಾಮಕೃಷ್ಣನ ಜಾಣ್ಮೆಯನ್ನು ಕೇಳಿ ಖುಷಿಯಾಯಿತು. ಆದರೆ ಆತ ಅದನ್ನು ತೋರ್ಪಡಿಸದೆ ಕೋಪದಿಂದ "ರಾಜಾಜ್ಞೆ ಮೀರಿದ ರಾಜದ್ರೋಹಿಯನ್ನು ಬಂಧಿಸಿ ಅರಮನೆಯ ಆವರಣದಲ್ಲಿ ತಂದು ಆನೆಯ ಕಾಲಿನಿಂದ ತುಳಿಸಿ ಸಾಯಿಸಿ..." ಎಂದು ಗದರಿದನು.
ರಾಯನ ಆಜ್ಞೆಯನುಸಾರ ಸೈನಿಕರು ತೆನಾಲಿ ರಾಮಕೃಷ್ಣನನ್ನು ಬಂಧಿಸಿ ಅರಮನೆಯ ಆವರಣಕ್ಕೆ ತಂದರು. ನಂತರ ಒಂದು ದೊಡ್ಡ ಗುಂಡಿ ತೆಗೆದು ಅದರಲ್ಲಿ ರಾಮಕೃಷ್ಣನನ್ನು ಕೇವಲ ಕತ್ತು ಮಾತ್ರ ಕಾಣುವಂತೆ ಹೂಗಿದರು. ಸೈನಿಕರು ಆನೆಯನ್ನು ಕರೆ ತರುವುದಕ್ಕಾಗಿ ಗಜಶಾಲೆಗೆ ಹೋದರು. ರಾಮಕೃಷ್ಣ ತನ್ನ ಕುಲದೇವತೆ ಕಾಳಿಮಾತೆಯನ್ನು ನೆನೆಯುತ್ತಾ ಬಂದಿರುವ ಸಂಕಷ್ಟದಿಂದ ಪಾರಾಗಲು ದಾರಿಯನ್ನು ಯೋಚಿಸತೊಡಗಿದನು. ಅಷ್ಟರಲ್ಲಿ ಅವನ ಕಣ್ಣಿಗೆ ಬಟ್ಟೆ ಗಂಟುಗಳನ್ನು ಹೊತ್ತುಕೊಂಡು ಅವನ ಬಳಿಯಿಂದ ಹೋಗುತ್ತಿರುವ ಒಬ್ಬ ಗೂನು ಬೆನ್ನಿನ ಅಗಸ ಕಂಡನು. ರಾಮಕೃಷ್ಣನ ಅವಸ್ಥೆಯನ್ನು ಕಂಡು ಕನಿಕರದಿಂದ ಆ ಅಗಸ ಅವನನ್ನು ಮಾತಾಡಿಸಿದನು.
ಅಗಸ : ಯಾರಯ್ಯ ನೀನು? ಏನು ನಿನ್ನ ಈ ಅವಸ್ಥೆ?
ರಾಮಕೃಷ್ಣ : ನನ್ನ ಹೆಸರು ರಾಮಣ್ಣ ಅಂತಾ. ನಾನು ಕೂಡ ಅಗಸರವನೇ. ಪಕ್ಕದ ಊರಿನವನು...
ಅಗಸ : ಅದು ಸರಿ, ಏನಿದು ನಿನ್ನ ಅವಸ್ಥೆ? ಯಾಕೆ ಈ ರೀತಿ ಮಣ್ಣಲ್ಲಿ ಹೂತುಕೊಂಡಿರುವೆ?
ರಾಮಕೃಷ್ಣ : ಬಟ್ಟೆಗಳನ್ನು ಹೊತ್ತು ನಾನು ಸಹ ಗೂನು ಬೆನ್ನಿನವನಾಗಿದ್ದೆ. ನನ್ನ ಗೆಳೆಯನೊಬ್ಬ ಹೇಳಿದ ಹೀಗೆ ಮಣ್ಣಲ್ಲಿ ಹೂಗಿದುಕೊಂಡು ಎರಡ್ಮೂರು ಗಂಟೆ ನಿಂತರೆ ಬೆನ್ನಿನ ಗೂನು ಮಂಗಮಾಯವಾಗುವುದೆಂದು. ಅದಕ್ಕೆ ಈ ರೀತಿ ಮಣ್ಣಲ್ಲಿ ಹೂತುಕೊಂಡಿರುವೆ...
ಅಗಸ : ಅಯ್ಯಾ ರಾಮಣ್ಣ, ನಿನ್ನ ಮಾತು ನಿಜವೇ? ನಾನು ನಿಷ್ಠೆಯಿಂದ ರಾಜ ಪರಿವಾರದವರ ಬಟ್ಟೆಗಳನ್ನು ಶುಚಿಗೊಳಿಸುತ್ತಾ ನನ್ನ ಕಾಯಕವನ್ನು ಮಾಡುತ್ತಾ ಬಂದೆ. ಬಟ್ಟೆಗಳ ಭಾರದಿಂದ ನನ್ನ ಬೆನ್ನು ಬಾಗಿತು. ಎಲ್ಲರೂ ನನ್ನನ್ನು ಅಪಹಾಸ್ಯ ಮಾಡಿಕೊಂಡು ನಗುತ್ತಾರೆ. ನನಗೆ ಈ ಬೆನ್ನು ಗೂನು ವಾಸಿಯಾದರೆ ಸಾಕಷ್ಟೇ...
ರಾಮಕೃಷ್ಣ : ಚಿಂತಿಸಬೇಡ ಗೆಳೆಯ, ನಾನಿಗಾಗಲೇ ಎರಡ್ಮೂರು ಗಂಟೆಗಳಿಂದ ಮಣ್ಣಲ್ಲಿ ಹೂತುಕೊಂಡಿರುವೆ. ನನ್ನ ಬೆನ್ನು ನೆಟ್ಟಗಾಗಿದೆ. ನನ್ನ ಸುತ್ತಲಿರುವ ಮಣ್ಣನ್ನು ಅಗೆದು ನನ್ನನ್ನು ಹೊರತೆಗೆದ ನಂತರ ನೀನು ಮಣ್ಣಲ್ಲಿ ಹೂತುಕೋ. ನಿನ್ನ ಬೆನ್ನ ಗೂನು ಸಹ ಮಾಯವಾಗುತ್ತದೆ...
ರಾಮಕೃಷ್ಣನ ಮಾತುಗಳನ್ನು ಕೇಳಿ ಪೆದ್ದ ಅಗಸ ಅವನನ್ನು ಹೊರತೆಗೆದು ತಾನು ಮಣ್ಣಲ್ಲಿ ಹೂತುಕೊಂಡನು. ನಂತರ ತೆನಾಲಿ ರಾಮಕೃಷ್ಣ ಅವನ ಬಟ್ಟೆಗಳನ್ನು ಹೊತ್ತುಕೊಂಡು ಗೂನು ಬೆನ್ನಿನ ಅಗಸನಂತೆ ಅರಮನೆ ಕಡೆಗೆ ಹೊರಟನು. ಗೂನು ಬೆನ್ನಿನ ಅಗಸನಂತೆ ರಾಮಕೃಷ್ಣ ಅರಮನೆ ಪ್ರವೇಶಿಸಿ ರಾಜಪರಿವಾರದ ಉಸ್ತುವಾರಿ ಮುಖ್ಯಸ್ಥನಿಗೆ ತಂದ ಶುಚಿ ಬಟ್ಟೆಗಳನ್ನು ತಲುಪಿಸಿದನು. ಯಾರಿಗೂ ಸಹ ರಾಮಕೃಷ್ಣನ ಮೇಲೆ ಎಳ್ಳಷ್ಟು ಅನುಮಾನ ಬರಲಿಲ್ಲ. ಅವನ ನಟನೆ ಅಷ್ಟೊಂದು ನೈಜವಾಗಿತ್ತು.
ಸೈನಿಕರು ಗಜಶಾಲೆಯಿಂದ ಒಂದು ಆನೆ ತೆಗೆದುಕೊಂಡು ರಾಮಕೃಷ್ಣನನ್ನು ಹೂತಿದ್ದ ಸ್ಥಳದೆಡೆಗೆ ಬರತೊಡಗಿದರು. ಸೈನಿಕರೊಂದಿಗೆ ಬರುತ್ತಿದ್ದ ದೊಡ್ಡ ಆನೆಯನ್ನು ನೋಡಿ ಅಗಸ ಜೋರಾಗಿ ಕಿರುಚಿಕೊಳ್ಳಲು ಪ್ರಾರಂಭಿಸಿದನು. ಸೈನಿಕರಿಗೆ ಇದು ರಾಮಕೃಷ್ಣನ ಧ್ವನಿಯಲ್ಲವೆಂಬುದು ಖಾತ್ರಿಯಾಯಿತು. ಅದಕ್ಕವರು ಅವನ ಸನಿಹ ಹೋದರು. ಅವರಿಗೆ ಕಿರುಚುತ್ತಿರುವುದು ಅಮಾಯಕ ಅಗಸ ಎಂಬುದು ಗೊತ್ತಾಯಿತು. ಉಪಾಯದಿಂದ ಅಗಸನನ್ನು ಮಣ್ಣಿನ ಗುಂಡಿಯಲ್ಲಿ ಇಳಿಸಿ ಪರಾರಿಯಾದ ತೆನಾಲಿ ರಾಮಕೃಷ್ಣನ ಮೇಲೆ ಸೈನಿಕರು ಸಿಟ್ಟಾದರು. ಈ ಸಲವೂ ಆತ ಬದುಕುಳಿದನಲ್ಲವೆಂದು ಅವರು ಬೇಸರಿಸಿದರು. ಅವರು ಅರಮನೆಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಬೇಕು ಎನ್ನುವಷ್ಟರಲ್ಲಿ ಗುಪ್ತಚರರ ಮೂಲಕ ಶ್ರೀಕೃಷ್ಣ ದೇವರಾಯನಿಗೆ ತೆನಾಲಿ ರಾಮಕೃಷ್ಣ ಉಪಾಯದಿಂದ ಪಾರಾಗಿದ್ದು ಗೊತ್ತಾಗಿತ್ತು.
ಅರಮನೆಯಲ್ಲಿನ ಯಾರಿಗೂ ಸಹ ರಾಮಕೃಷ್ಣನ ಗುರುತು ಸಿಗಲಿಲ್ಲ. ಸೈನಿಕರು ಬಂದು ನಡೆದ ಸಂಗತಿಯನ್ನು ವಿವರಿಸುವಾಗ ತೆನಾಲಿ ರಾಮಕೃಷ್ಣ ತನ್ನ ನಿಜ ವೇಷದಲ್ಲಿ ಪ್ರತ್ಯಕ್ಷನಾದನು. ಅವನನ್ನು ನೋಡಿ ಸೈನಿಕರು ರಾಯನಿಗೆ ಅವನ ಕುಚೇಷ್ಟಗಳನ್ನು ವಿವರಿಸಿದರು. ರಾಜಾಜ್ಞೆಗೆ ಭಂಗ ಬರದಂತೆ ಉಪಾಯ ಮಾಡಿ ಪ್ರಾಣಾಪಾಯದಿಂದ ಪಾರಾದ ರಾಮಕೃಷ್ಣನ ಮೇಲೆ ರಾಯನಿಗೆ ಹೆಮ್ಮೆಯಿತ್ತು. ಆದರೂ ಆತ ರಾಮಕೃಷ್ಣನ ಕಾಲೆಳೆಯಲು ಕೋಪಿಸಿಕೊಂಡವನಂತೆ ನಟಿಸತೊಡಗಿದನು. ಆವಾಗ ರಾಮಕೃಷ್ಣ "ಪ್ರಭು,, ನಾನು ಕಾಳಿಮಾತೆಯ ಅನುಗ್ರಹದಿಂದ ನಿಮ್ಮ ಆಶ್ರಯ ಬಯಸಿ ಇಲ್ಲಿಗೆ ಬಂದಿರುವೆ. ನನಗೆ ನಿಮ್ಮ ಆಸ್ಥಾನದಲ್ಲಿ ವಿದೂಷಕನಾಗಿದ್ದುಕೊಂಡು ನಿಮ್ಮೆಲ್ಲರನ್ನು ರಂಜಿಸುವ ಮಹದಾಸೆಯಿದೆ. ಅದಕ್ಕೆ ಹೀಗೆ ಉಪಾಯದಿಂದ ನೀವು ವಿಧಿಸಿದ ಶಿಕ್ಷೆಯಿಂದ ಪಾರಾಗಿರುವೆ. ದಯವಿಟ್ಟು ನನ್ನನ್ನು ಕ್ಷಮಿಸಿ, ರಕ್ಷಿಸಿ..." ಎಂದೇಳಿ ರಾಯನ ಮನಗೆಲ್ಲಲು ಪ್ರಯತ್ನಿಸಿದನು. ರಾಮಕೃಷ್ಣನ ನಯವಿನಯತೆಗೆ, ಹಾಸ್ಯಪ್ರಜ್ಞೆಗೆ, ಜಾಣ್ಮೆಗೆ ಮನಸೋತು ಶ್ರೀಕೃಷ್ಣ ದೇವರಾಯ ತೆನಾಲಿ ರಾಮಕೃಷ್ಣನನ್ನು ಮನ್ನಿಸಿದನು. ರಾಯ ವಿಧಿಸಿದ ಮಹಾ ಮರಣದಂಡನೆಯ ಪರೀಕ್ಷೆಯಿಂದ ಪಾರಾದೆನಲ್ಲ ಎಂಬ ಸಂತಸದಲ್ಲಿ ರಾಮಕೃಷ್ಣ ನಗೆಹನಿಗಳನ್ನು ಹೇಳಿ ಆಸ್ಥಾನದಲ್ಲಿದ್ದ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದನು... To be Continued...
4) ಮಡಿಕೆ ಮುಖಧಾರಣೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Tales of Tenali Ramakrishna in Kannada
ತೆನಾಲಿ ರಾಮಕೃಷ್ಣ ತಾನಿಟ್ಟ ಮಹಾ ಮರಣದಂಡನೆ ಪರೀಕ್ಷೆಯಲ್ಲಿ ಉಪಾಯದಿಂದ ಪಾರಾಗಿ ಬಂದಾಗ ಶ್ರೀಕೃಷ್ಣ ದೇವರಾಯನಿಗೆ ಅವನನ್ನು ಆಸ್ಥಾನದ ವಿದ್ವಾಂಸನಾಗಿ ನೇಮಿಸಿದಕ್ಕೆ ಸಾರ್ಥಕವೆನಿಸಿತು. ಅದೇ ಖುಷಿಯಲ್ಲಿ ಆತ ತೆನಾಲಿ ರಾಮಕೃಷ್ಣನ ಮೇಲೆ ಹೆಚ್ಚಿನ ಪ್ರೀತಿ ಅಭಿಮಾನವನ್ನು ತೋರಿದನು. ಆದರೆ ತೆನಾಲಿ ರಾಮಕೃಷ್ಣನಿಗೆ ತಾನು ಆಸ್ಥಾನದ ವಿದ್ವಾಂಸ ಪದವಿಗೆ ಸೂಕ್ತನಾದವನಲ್ಲ ಎಂಬ ಕೊರಗಿತ್ತು. ಅದಕ್ಕಾಗಿ ಆತ ರಾಯನೊಂದಿಗೆ ತನ್ನ ಕೊರಗನ್ನು ಹಂಚಿಕೊಂಡನು.
ಶ್ರೀಕೃಷ್ಣ ದೇವರಾಯ : ರಾಮಕೃಷ್ಣ ನೀನೆಷ್ಟು ಚತುರನೆಂಬುದನ್ನು ನಾನು ನಿನ್ನನ್ನು ನೋಡಿದ ಮೊದಲ ನೋಟದಲ್ಲೇ ಪತ್ತೆ ಹಚ್ಚಿದ್ದೆ. ಆದರೂ ನಿನ್ನನ್ನು ಪರೀಕ್ಷಿಸಬೇಕೆಂದು ಕೆಲವು ಪರೀಕ್ಷೆಗಳನ್ನು ಒಡ್ಡಿದೆ. ನೀನು ಎಲ್ಲದರಲ್ಲೂ ಪಾಸಾದೆ. ನನ್ನ ಲೆಕ್ಕಾಚಾರ ಸುಳ್ಳಾಗಲಿಲ್ಲ. ನೀನು ನಮ್ಮ ಆಸ್ಥಾನದ ವಿದ್ವಾಂಸನಾಗಿರುವುದು ನಮ್ಮ ಅದೃಷ್ಟ...
ತೆನಾಲಿ ರಾಮಕೃಷ್ಣ : ಪ್ರಭು, ನಿಮ್ಮ ಆಶ್ರಯ ಸಿಕ್ಕಿದ್ದರಿಂದ ನನ್ನ ಜೀವನ ಧನ್ಯವಾಗಿದೆ. ಆದರೆ ನಾನೇನು ನಿಮ್ಮ ಆಸ್ಥಾನದ ವಿದ್ವಾಂಸನಾಗುವಷ್ಟು ಬುದ್ಧಿವಂತನಲ್ಲ. ನಾನೊಬ್ಬ ವಿಕಟ ಕವಿ. ನಾನು ಎಲ್ಲರನ್ನು ನಗಿಸಬಲ್ಲ ಕೋಡಂಗಿ ಅಷ್ಟೇ...
ರಾಮಕೃಷ್ಣನ ಪೆದ್ದು ಮಾತಿಗೆ ರಾಯನಿಗೆ ಸ್ವಲ್ಪ ಕೋಪ ಬಂದಿತು.
ಶ್ರೀಕೃಷ್ಣ ದೇವರಾಯ : ನಿನ್ನ ಜಾಣ್ಮೆಯನ್ನು ಮೆಚ್ಚಿಯೇ ನಾವು ನಿನಗೆ ಆಸ್ಥಾನದ ವಿದ್ವಾಂಸನ ಪದವಿಯನ್ನು ಕೊಟ್ಟಿರುವೆವು. ನಿನಗೆ ಆಸ್ಥಾನ ಪಂಡಿತನ ಪದವಿ ಬೇಡವಾದರೆ ನಾಳೆಯಿಂದ ನೀನು ನಮಗೆ ಮುಖ ತೋರಿಸಬೇಡ...
ಇಷ್ಟು ಹೇಳಿ ರಾಯ ವಿಶ್ರಾಂತಿಧಾಮಕ್ಕೆ ತೆರಳಿ ತನ್ನ ಪಟ್ಟದ ರಾಣಿಗೆ ತೆನಾಲಿ ರಾಮಕೃಷ್ಣನ ಜಾಣ್ಮೆಯನ್ನು ವಿವರಿಸಿದನು. ರಾಮಕೃಷ್ಣ ರಾಯನ ಕೋಪವನ್ನು ಹೇಗೆ ಕರಗಿಸುವುದು ಎಂಬ ಚಿಂತೆಯಲ್ಲಿ ಮನೆದಾರಿ ಹಿಡಿದನು.
ಮಾರನೇ ದಿನ ಎಂದಿನಂತೆ ರಾಜಸಭೆ ಆರಂಭವಾಯಿತು. ಎಲ್ಲರೂ ಸಭೆಗೆ ಹಾಜರಿದ್ದರು. ಆದರೆ ತೆನಾಲಿ ರಾಮಕೃಷ್ಣ ಸಭೆಗೆ ಗೈರು ಹಾಜರಾಗಿದ್ದನು. ಶ್ರೀಕೃಷ್ಣ ದೇವರಾಯನ ಕಣ್ಣುಗಳು ಅವನನ್ನೇ ಹುಡುಕಿದವು. ನಿನ್ನೆ ನಾನು ಮುಖ ತೋರಿಸಬೇಡ ಎಂದಿದ್ದಕ್ಕೆ ಮುನಿಸಿಕೊಂಡು ಆತ ಬಂದಿರಕ್ಕಿಲ್ಲವೆಂದು ರಾಯನ ಒಳ ಮನಸ್ಸು ಹೇಳಿತು. ಆದರೆ ರಾಮಕೃಷ್ಣ ಇಷ್ಟು ಸಣ್ಣ ವಿಷಯವನ್ನು ಗಂಭೀರವಾಗಿ ಪರಿಗಣಿಸುವವನಲ್ಲ. ಎಲ್ಲವನ್ನೂ ಹಾಸ್ಯವಾಗಿ ಸ್ವೀಕರಿಸುವ ಪ್ರವೃತ್ತಿ ಅವನದ್ದು ಎಂಬ ಸಮಾಧಾನದ ಮೇಲೆ ರಾಯ ಸಭೆಯ ಕಡೆಗೆ ಗಮನ ಹರಿಸಿದನು. ಅವಶ್ಯಕವಾದ ಎಲ್ಲ ವಿಷಯಗಳು ಸಭೆಯಲ್ಲಿ ಚರ್ಚಿತವಾದವು. ಸಭೆ ಮುಕ್ತಾಯದ ಹಂತಕ್ಕೆ ತಲುಪಿತು. ಆದರೂ ತೆನಾಲಿ ರಾಮಕೃಷ್ಣನ ಸುಳಿವಿಲ್ಲದಿದ್ದರಿಂದ ರಾಯ ಕಳವಳಕ್ಕೊಳಗಾದನು. ಬಹುಷ : ಆತ ನಿನ್ನೆ ನಾನು ಮುಖ ತೋರಿಸಬೇಡ ಎಂದಿದ್ದಕ್ಕೆ ನೊಂದಿರಬೇಕು ಎಂದು ಕೊರಗಿದನು. ಸಭೆ ಮುಕ್ತಾಯವಾಗುತ್ತಿದ್ದಂತೆಯೇ ರಾಯನ ಕಣ್ಣು ಮುಖ್ಯದ್ವಾರದ ಬಳಿ ನಿಂತಿದ್ದ ಓರ್ವ ವಿಚಿತ್ರ ವ್ಯಕ್ತಿಯ ಮೇಲೆ ಬಿದ್ದಿತು. ಕೂಡಲೇ ರಾಯ ಸನ್ನೆ ಮಾಡಿ ಆ ವ್ಯಕ್ತಿಯನ್ನು ಕರೆದನು.
ಆ ವ್ಯಕ್ತಿ ನಿಜಕ್ಕೂ ವಿಚಿತ್ರವಾಗಿದ್ದನು. ಏಕೆಂದರೆ ಮುಖಕ್ಕೆ ಮಣ್ಣಿನ ಮಡಿಕೆಯನ್ನು ಹಾಕಿಕೊಂಡಿದ್ದನು. ಕಣ್ಣು ಮತ್ತು ಬಾಯಿಗಳಿಗಾಗಿ ರಂಧ್ರಗಳನ್ನು ಕೊರೆದ ಮಡಿಕೆ ಅದಾಗಿತ್ತು. ಆತ ಆಸ್ಥಾನದಲ್ಲಿ ನಡೆದು ಬರುವಾಗ ಎಲ್ಲರ ದೃಷ್ಟಿ ಆ ವಿಚಿತ್ರ ವ್ಯಕ್ತಿಯ ಮೇಲೆಯೇ ಇತ್ತು. ಆ ವ್ಯಕ್ತಿ ಸಿಂಹಾಸದ ಮೇಲೆ ವಿರಾಜಮಾನನಾದ ಶ್ರೀಕೃಷ್ಣ ದೇವರಾಯನಿಗೆ ನಮಸ್ಕರಿಸಿ "ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲತೀಲಕ, ಶ್ರೀಶ್ರೀ ಶ್ರೀಕೃಷ್ಣ ದೇವರಾಯರಿಗೆ ಜಯವಾಗಲಿ..." ಎಂದನು. ರಾಯನಿಗೆ ಆ ವಿಚಿತ್ರ ವ್ಯಕ್ತಿಯ ಧ್ವನಿಯನ್ನು ಎಲ್ಲೋ ಕೇಳಿದಂತಾಯಿತು. ಅದಕ್ಕಾಗಿ ಆತ ಅವನನ್ನು ವಿಚಾರಿಸಿದನು.
ಶ್ರೀಕೃಷ್ಣ ದೇವರಾಯ : ಯಾರು ನೀನು? ಏನಿದು ಈ ವಿಚಿತ್ರ ವೇಷ?
ವಿಚಿತ್ರ ವ್ಯಕ್ತಿ : ನಾನು ನಿಮ್ಮ ಆಸ್ಥಾನದ ವಿಕಟಕವಿ.
ಶ್ರೀಕೃಷ್ಣ ದೇವರಾಯ : ನಮ್ಮ ಆಸ್ಥಾನದಲ್ಲಿ ಯಾರು ವಿಕಟ ಕವಿಗಳಿಲ್ಲವಲ್ಲ?.
ವಿಚಿತ್ರ ವ್ಯಕ್ತಿ : ಕ್ಷಮಿಸಿ ಪ್ರಭು, ನಾನು ನಿಮ್ಮ ಆಸ್ಥಾನದ ವಿದ್ವಾಂಸ ತೆನಾಲಿ ರಾಮಕೃಷ್ಣ.
ಶ್ರೀಕೃಷ್ಣ ದೇವರಾಯ : ಏನಿದು ನಿನ್ನ ವಿಚಿತ್ರ ವೇಷ?
ವಿಚಿತ್ರ ವ್ಯಕ್ತಿ : ಪ್ರಭು ನಿನ್ನೆ ನೀವು ಹೇಳಿದ ಆಜ್ಞೆಯನ್ನು ಪಾಲಿಸಲು ಇದೊಂದೆ ದಾರಿಯಿತ್ತು. ಮಣ್ಣಿನ ಮಡಿಕೆಯಾಕಿಕೊಂಡು ನಿಮಗೆ ಮುಖ ತೋರಿಸದೆ ಸಭೆಗೆ ಹಾಜರಾಗಿರುವೆ. ಜೊತೆಗೆ ನಿಮ್ಮಾಜ್ಞೆಯನ್ನು ಸಹ ನೆರವೇರಿಸಿರುವೆ....
ಮುಖಕ್ಕೆ ಮಣ್ಣಿನ ಮಡಿಕೆ ಹಾಕಿಕೊಂಡು ಬಂದಿರುವ ವಿಚಿತ್ರ ವ್ಯಕ್ತಿ ತೆನಾಲಿ ರಾಮಕೃಷ್ಣನೆಂದು ಗೊತ್ತಾದಾಗ ಸಭೆಯಲ್ಲಿ ನಗೆಯ ಕೋಲಾಹಲ ಸೃಷ್ಟಿಯಾಯಿತು. ತೆನಾಲಿ ರಾಮನ ಈ ವಿಚಿತ್ರ ಅವತಾರವನ್ನು ಕಂಡು ಎಲ್ಲರು ನಗಲು ಪ್ರಾರಂಭಿಸಿದರು. ತೆನಾಲಿ ರಾಮಕೃಷ್ಣನ ಹಾಸ್ಯಪ್ರಜ್ಞೆಗೆ ಮನಸೋತ ಶ್ರೀಕೃಷ್ಣ ದೇವರಾಯ ಅವನನ್ನು "ನಿಜವಾದ ವಿಕಟಕವಿ ಎಂದರೆ ನೀನೇ" ಎಂದು ಹೊಗಳಿ ಉಚಿತ ಬಹುಮಾನಗಳೊಂದಿಗೆ ಸನ್ಮಾನಿಸಿದನು. ತೆನಾಲಿ ರಾಮಕೃಷ್ಣ ಹೀಗೆಯೇ ತನ್ನ ಜಾಣ್ಮೆಯನ್ನು ಪ್ರದರ್ಶಿಸುತ್ತಾ, ಎಲ್ಲರನ್ನು ನಗಿಸುತ್ತಾ ಶ್ರೀಕೃಷ್ಣ ದೇವರಾಯನ ಆಸ್ಥಾನದ ಅಮೂಲ್ಯ ಹಾಸ್ಯ ರತ್ನವಾದನು.... To be Continued...
5) ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada
ಒಮ್ಮೆ ವಿಜಯನಗರದ ಪ್ರಖ್ಯಾತ ವ್ಯಾಪಾರಿ ಒಂದು ಒಂಟೆಯನ್ನು ಬಾಡಿಗೆ ತೆಗೆದುಕೊಂಡು ದೂರದ ಊರಿಗೆ ವ್ಯಾಪಾರಕ್ಕೆ ಹೋಗಿದ್ದನು. ಆ ಒಂಟೆಯ ಜೊತೆಗೆ ಅದರ ಮಾಲೀಕನು ಸಹ ಬಂದಿದ್ದನು. ಒಂದು ತಿಂಗಳ ನಂತರ ವ್ಯಾಪಾರಿ ಭರ್ಜರಿಯಾಗಿ ತನ್ನ ವ್ಯಾಪಾರವನ್ನು ಮುಗಿಸಿ ವಿಜಯನಗರಕ್ಕೆ ಮರಳಿ ಬಂದನು. ವ್ಯಾಪಾರಿ ತುಂಬಾ ಪ್ರಾಮಾಣಿಕನಾಗಿದ್ದನು. ಅವನ ಪ್ರಾಮಾಣಿಕತೆಯಿಂದಲೇ ಆತ ಲಕ್ಷ್ಮೀದೇವಿಯ ಕೃಪೆಗೆ ಪಾತ್ರನಾಗಿದ್ದನು. ವ್ಯಾಪಾರ ಮುಗಿಸಿ ಮನೆಗೆ ಬಂದ ವ್ಯಾಪಾರಿ ಒಂಟೆಯ ಮಾಲೀಕನಿಗೆ ಬಾಡಿಗೆಯನ್ನು ಕೊಡಲು ಹೋದನು. ಆದರೆ ಒಂಟೆಯ ಮಾಲೀಕ ಈಗ ಮುಂಚೆ ಹೇಳಿದ್ದಕ್ಕಿಂತ ದುಪ್ಪಟ್ಟು ಹಣವನ್ನು ಕೇಳತೊಡಗಿದನು. ಆಗ ವ್ಯಾಪಾರಿಗೂ ಹಾಗೂ ಒಂಟೆಯ ಮಾಲಿಕನಿಗೂ ಒಂದು ದೊಡ್ಡ ವಾಗ್ವಾದವಾಯಿತು. ವ್ಯಾಪಾರಕ್ಕೆಂದು ಹೋದಾಗ ವ್ಯಾಪಾರಿ ತನ್ನೆಲ್ಲ ಸರಕುಗಳನ್ನು ಒಂಟೆಯ ಮೇಲೆ ಹೇರಿದ್ದನು. ಅದಕ್ಕಾಗಿ ಒಂದು ಪಟ್ಟು ಬಾಡಿಗೆಯನ್ನು ಕೊಡಬೇಕು. ದಾರಿಮಧ್ಯೆದಲ್ಲಿ ಬಿಸಿಲಿನ ಬೇಗೆ ತಾಳಲಾರದೆ ವ್ಯಾಪಾರಿ ಒಂಟೆಯ ನೆರಳಿನಲ್ಲಿ ವಿಶ್ರಮಿಸುತ್ತಿದ್ದನು. ಅದಕ್ಕಾಗಿ ಇನ್ನೊಂದು ಪಟ್ಟು ಬಾಡಿಗೆ ಕೊಡಬೇಕು. ಈ ರೀತಿ ವ್ಯಾಪಾರಿ ತನಗೆ ಮುಂಚೆ ಹೇಳಿದ್ದಕ್ಕಿಂತ ಎರಡು ಪಟ್ಟು ಬಾಡಿಗೆ ಕೊಡಬೇಕು ಎಂಬುದು ಒಂಟೆಯ ಮಾಲೀಕನ ವಾದವಾಗಿತ್ತು. ಅವನ ಹುಚ್ಚು ವಾದ ವಿವಾದವಾಗಿ ನ್ಯಾಯಕ್ಕಾಗಿ ಶ್ರೀಕೃಷ್ಣ ದೇವರಾಯನ ಆಸ್ಥಾನವನ್ನು ಪ್ರವೇಶಿಸಿತು.
ವ್ಯಾಪಾರಿ ಮತ್ತು ಒಂಟೆ ಮಾಲೀಕರಿಬ್ಬರ ದೂರುಗಳನ್ನು ಆಲಿಸಿದ ಶ್ರೀಕೃಷ್ಣ ದೇವರಾಯನಿಗೆ ಹೇಗೆ ಈ ವಿಷಯವನ್ನು ಪರಿಹರಿಸಬೇಕು ಎಂಬುದು ತೋಚದಾಯಿತು. ಅದಕ್ಕಾಗಿ ಆತ ಈ ವಿವಾದವನ್ನು ಬಗೆಹರಿಸಲು ತನ್ನ ಆಸ್ಥಾನದ ಅಷ್ಟ ದಿಗ್ಜಗರಲ್ಲಿ ಒಬ್ಬರಾದ ವಿಕಟಕವಿ ತೆನಾಲಿ ರಾಮಕೃಷ್ಣನಿಗೆ ಹೇಳಿದನು. ರಾಮಕೃಷ್ಣ ತನ್ನದೇ ಆತ ರೀತಿಯಲ್ಲಿ ವಿಚಾರಣೆಯನ್ನು ಆರಂಭಿಸಿದನು. ರಾಮಕೃಷ್ಣ ಒಮ್ಮೆ ವ್ಯಾಪಾರಿ ಮತ್ತು ಒಂಟೆ ಮಾಲೀಕರ ಕಡೆಗೆ ತೀಕ್ಷ್ಣವಾಗಿ ನೋಡಿದನು.
ವ್ಯಾಪಾರಿ : ಪ್ರಭು, ನಾನು ಒಂಟೆಯ ಮಾಲೀಕನಿಂದ ಮೋಸ ಹೋಗಿರುವೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ.
ತೆನಾಲಿ ರಾಮಕೃಷ್ಣ : ಸುಮ್ಮನಿರಯ್ಯ ನೀನು, ಸುಮ್ಮನೆ ಗೋಳಾಡಬೇಡ. ಮೊದಲು ನಾನು ಒಂಟೆಯ ಮಾಲೀಕನನ್ನು ವಿಚಾರಿಸಬೇಕು. (ಒಂಟೆಯ ಮಾಲೀಕನ ಕಡೆಗೆ ನೋಡುತ್ತಾ) ಎಲ್ಲಿದೆಯಯ್ಯ ನೀನು ಬಾಡಿಗೆಗೆ ಕೊಟ್ಟ ಒಂಟೆ?
ಒಂಟೆಯ ಮಾಲೀಕ : ಪ್ರಭು ಬಾಡಿಗೆ ಕೊಟ್ಟ ಒಂಟೆಯನ್ನು ಅರಮನೆಯ ಆಚೆ ತಂದು ನಿಲ್ಲಿಸಿರುವೆ...
ರಾಮಕೃಷ್ಣ : ಸರಿ ಒಳ್ಳೆಯದಾಯಿತು. ನೀನು ಒಂಟೆಯನ್ನು ವ್ಯಾಪಾರಿಗೆ ಬಾಡಿಗೆ ನೀಡಿದ್ದೆ ಎಂಬುದನ್ನು ಸಾಬೀತುಪಡಿಸಲು ಅದನ್ನು ಸಭೆಗೆ ಕರೆತಂದಿರುವೆ.
(ನೋಡಲು ವಿಚಿತ್ರವಾಗಿ ಕಾಣುತ್ತಿದ್ದ ರಾಮಕೃಷ್ಣನನ್ನು ನೋಡಿ ಅವನನ್ನು ಅರೆಹುಚ್ಚನೆಂದು ಭಾವಿಸಿ ಒಂಟೆಯ ಮಾಲೀಕ ತನಗೆ ಎರಡು ಪಟ್ಟು ಬಾಡಿಗೆ ಬರುವುದು ಖಚಿತವೆಂದು ಒಳಗೊಳಗೆ ಹಿಗ್ಗಿದನು.)
ರಾಮಕೃಷ್ಣ : (ವ್ಯಾಪಾರಿಗೆ) ಮೊದಲು ಒಂಟೆಯನ್ನು ಮಾತ್ರ ಬಾಡಿಗೆ ಪಡೆದಿದ್ದೆ. ಅದೇ ರೀತಿ ಬಾಡಿಗೆ ನೀಡಲು ಒಪ್ಪಿಕೊಂಡಿದ್ದೆ. ಆದರೆ ನಂತರ ಬಿಸಿಲಿನ ಬೇಗೆ ತಾಳಲಾರದೆ ನೀನು ಅದರ ನೆರಳಿನಡಿಯಲ್ಲಿ ಸಾಕಷ್ಟು ಸಲ ವಿಶ್ರಾಂತಿ ಪಡೆದಿರುವೆ. ಇದು ನಿಜವೇ?
ವ್ಯಾಪಾರಿ : ಹೌದು ಪ್ರಭು...
ರಾಮಕೃಷ್ಣ : ಹಾಗಾದರೆ ನೀನು ನೆರಳಿನ ಬಾಡಿಗೆಯನ್ನು ಸಹ ಕಟ್ಟಬೇಕಲ್ಲವೇ?
ರಾಮಕೃಷ್ಣನ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬುದು ತೋಚದೆ ವ್ಯಾಪಾರಿ ತಲೆ ತಗ್ಗಿಸಿ ಸುಮ್ಮನೆ ನಿಂತನು. ಆದರೆ ಒಂಟೆಯ ಮಾಲೀಕ ತನಗೆ ಎರಡು ಪಟ್ಟು ಬಾಡಿಗೆ ಸಿಗುವುದೆಂದು ಬೀಗುತ್ತಿದ್ದನು. ಆಗ ರಾಮಕೃಷ್ಣ ಅವನ ಮೋಸವನ್ನು ಬಯಲಿಗೆಳೆದು ಅವನ ಸೊಕ್ಕನ್ನು ಮುರಿದನು.
ರಾಮಕೃಷ್ಣ : ಒಂಟೆಯನ್ನು ಎಲ್ಲಿ ಕಟ್ಟಿರುವೆ?
ಒಂಟೆಯ ಮಾಲೀಕ : ಅರಮನೆಯ ಹೊರಗಿನ ಉದ್ಯಾನದಲ್ಲಿ ಪ್ರಭು.
ರಾಮಕೃಷ್ಣ : ಸರಿಸರಿ ಹಾಗೆಯೇ ಅದೇ ಸ್ಥಳದಲ್ಲಿ ಆ ಒಂಟೆಯ ನೆರಳನ್ನು ಸಹ ತಂದು ಕಟ್ಟಿಬಿಡು.
ರಾಮಕೃಷ್ಣನ ಈ ಮಾತಿಗೆ ಒಂಟೆಯ ಮಾಲೀಕ ತಬ್ಬಿಬ್ಬಾಗಿ ಬೆವರಲು ಪ್ರಾರಂಭಿಸಿದನು. ಆಗ ಕೋಪದಿಂದ ರಾಮಕೃಷ್ಣ ಒಂಟೆಯ ಮಾಲೀಕನಿಗೆ "ಸುಮ್ಮನೆ ನಿಲ್ಲಬೇಡ. ಬೇಗನೆ ಹೋಗಿ ಒಂಟೆಯ ನೆರಳನ್ನು ತಂದು ಕಟ್ಟಿ ನಿನ್ನ ಬಾಡಿಗೆಯನ್ನು ತೆಗೆದುಕೊಂಡು ಹೋಗು. ಸುಮ್ಮನೆ ಸಮಯವನ್ನು ವ್ಯರ್ಥ ಮಾಡಬೇಡ..." ಎಂದು ಗದರಿದನು. ಒಂಟೆಯ ನೆರಳನ್ನು ತಂದು ಕಟ್ಟಲು ಸಾಧ್ಯವಿಲ್ಲ ಎಂಬುದು ಅರಿವಾದಾಗ ಮಾಲೀಕ ನಡಗಲು ಪ್ರಾರಂಭಿಸಿದನು. ರಾಮಕೃಷ್ಣ ಮತ್ತೊಮ್ಮೆ ಗದರಿದಾಗ ಒಂಟೆಯ ಮಾಲೀಕ ತಾನು ಮಾಡಿದ ಮೋಸವನ್ನು ಒಪ್ಪಿಕೊಂಡು ಕ್ಷಮೆ ಕೇಳಿದನು. ಆಗ ರಾಮಕೃಷ್ಣ ಅವನಿಗೆ ಅರ್ಥವಿರದ ನೆರಳಿನ ಬಾಡಿಗೆಯನ್ನು ಕೇಳಿ ವ್ಯಾಪಾರಿಗೆ ಕಿರುಕುಳ ಕೊಟ್ಟಿದ್ದಕ್ಕಾಗಿ, ರಾಜಸಭೆಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಿದನು. ಈ ರೀತಿ ರಾಮಕೃಷ್ಣ ಒಂಟೆಯ ಮಾಲೀಕನ ಸೊಕ್ಕನ್ನು ಮುರಿದು ವ್ಯಾಪಾರಿಗೆ ನ್ಯಾಯವನ್ನು ಕೊಡಿಸಿದನು. ರಾಮಕೃಷ್ಣನ ವಿವೇಚನಾತ್ಮಕ ನ್ಯಾಯ ತೀರ್ಮಾನಕ್ಕೆ ಶ್ರೀಕೃಷ್ಣ ದೇವರಾಯ ಮನಸೋತು ಅವನಿಗೆ ಬಂಗಾರದ ಹಾರವನ್ನು ಕಾಣಿಕೆಯಾಗಿ ನೀಡಿದನು.... To be Continued...
6) ಪರರ ಹೆಂಡತಿ ಪರಮ ಸುಂದರಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada
ಶ್ರೀಕೃಷ್ಣ ದೇವರಾಯ ಪ್ರಜಾಪ್ರಿಯ ರಾಜನಾಗಿದ್ದನು. ಆತ ವಿಜಯನಗರದ ಎಲ್ಲ ಪ್ರಜೆಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದನು. ಅದಕ್ಕಾಗಿ ಮಾರುವೇಷದಲ್ಲಿ ರಾಜಧಾನಿಯಲ್ಲಿ ಸಂಚರಿಸಿ ರಾಜ್ಯದ ಕುಂದುಕೊರತೆಗಳನ್ನು ಸ್ವತಃ ತಾನೇ ಖುದ್ದಾಗಿ ಪರಿಶೀಲಿಸುತ್ತಿದ್ದನು. ಹೀಗೆ ಒಮ್ಮೆ ಆತ ಮಾರುವೇಷದಲ್ಲಿ ಸಂಚರಿಸುತ್ತಿದ್ದಾಗ ಅವನಿಗೆ ತೆನಾಲಿ ರಾಮಕೃಷ್ಣನ ಮನೆ ಇಲ್ಲೇ ಸಮೀಪದಲ್ಲೇ ಇದೇ ಎಂಬುದು ಗೊತ್ತಾಯಿತು. ಕೂಡಲೇ ಆತ ಅವನ ಮನೆಗೆ ತೆರಳಿದನು. ಮನೆಯಲ್ಲಿ ರಾಮಕೃಷ್ಣನಿರಲಿಲ್ಲ. ಬದಲಾಗಿ ಅವನ ಅತ್ಯಂತ ಸುಂದರವಾದ ಹೆಂಡತಿಯಿದ್ದಳು. ಶ್ರೀಕೃಷ್ಣ ದೇವರಾಯ ತನ್ನ ಮಾರುವೇಷವನ್ನು ಕಳಚಿದಾಗ ಆಕೆ ಅವನನ್ನು ಗುರ್ತಿಸಿ ವಂದಿಸಿದಳು. ನಂತರ ಅವನನ್ನು ಉಚಿತಾಸನದಲ್ಲಿ ಕೂಡಿಸಿ ತಿಂಡಿತೀರ್ಥಗಳಿಂದ ಆದರಿಸಿದಳು. ರಾಯನಿಗೆ ರಾಮಕೃಷ್ಣನ ಹೆಂಡತಿ ಇಂಥ ಅಪ್ರತಿಮ ಚೆಲುವೆ ಎಂಬುದು ಗೊತ್ತಿರಲಿಲ್ಲ. ಆತ ಅದೇ ಯೋಚನೆಯಲ್ಲಿ ಮುಳುಗಿದ್ದನು. ಅಷ್ಟರಲ್ಲಿ ಮನೆಗೆ ಬಂದ ತೆನಾಲಿ ರಾಮಕೃಷ್ಣ ರಾಯನನ್ನು ತನ್ನ ಮನೆಯಲ್ಲಿ ನೋಡಿ ಆಶ್ಚರ್ಯಚಕಿತನಾದನು.
ತೆನಾಲಿ ರಾಮಕೃಷ್ಣ : ಮಹಾಪ್ರಭು, ತಾವೇನು ಇಲ್ಲಿ?
ಶ್ರೀಕೃಷ್ಣ ದೇವರಾಯ : ಹಾಗೆಯೇ ಮಾರುವೇಷದಲ್ಲಿ ಪ್ರಜೆಗಳ ಯೋಗಕ್ಷೇಮವನ್ನು ಪರೀಕ್ಷಿಸಲು ಹೊರಟಿದ್ದೆ. ನಿನ್ನನ್ನು ನೋಡಬೇಕೆನಿಸಿತು. ಅದಕ್ಕಾಗಿ ಬಂದೆ. ಯಾಕೆ ಬರಬಾರದಿತ್ತೆ?
ತೆನಾಲಿ ರಾಮಕೃಷ್ಣ : ಹಾಗೇನಿಲ್ಲ ಪ್ರಭು. ನೀವು ಬಂದದ್ದು ಬಡವನ ಮನೆಗೆ ಭಾಗ್ಯ ಬಂದಂತಾಯಿತು. ನಿಜವಾಗಿಯೂ ನಾನು ಭಾಗ್ಯಶಾಲಿ ಪ್ರಭು.. ನಾನಿಲ್ಲದಿರುವಾಗ ಏನಾದರೂ ವ್ಯತ್ಯಾಸವಾಗಿದ್ದರೆ ದಯವಿಟ್ಟು ಕ್ಷಮಿಸಿ ಪ್ರಭು.
ಶ್ರೀಕೃಷ್ಣ ದೇವರಾಯ : ಹಾಗೇನಿಲ್ಲ ರಾಮಕೃಷ್ಣ, ನಮ್ಮ ಉಪಚಾರದಲ್ಲಿ ಏನು ವ್ಯತ್ಯಾಸವಾಗಿಲ್ಲ. ನಿಜಕ್ಕೂ ನೀನು ಭಾಗ್ಯಶಾಲಿ. ನಿನಗೆ ತಕ್ಕ ಹೆಂಡತಿಯೇ ಸಿಕ್ಕಿದ್ದಾಳೆ. ರೂಪವತಿ, ಗುಣವತಿ, ವಿನಯವತಿಯಾಗುವ ಜೊತೆಗೆ ನಿನ್ನ ಮನೆಯ ಮಹಾಲಕ್ಮೀ ಆಗಿದ್ದಾಳೆ.
ಉಪಹಾರ ಇತ್ಯಾದಿಗಳೆಲ್ಲ ಮುಗಿದ ನಂತರ ತೆನಾಲಿ ರಾಮಕೃಷ್ಣ ಶ್ರೀಕೃಷ್ಣ ದೇವರಾಯನೊಡನೆ ಸಾವಕಾಶವಾಗಿ ಹೆಜ್ಜೆ ಹಾಕುತ್ತಾ ಅರಮನೆಯೆಡೆಗೆ ನಡೆದನು. ಮಾರ್ಗಮಧ್ಯದಲ್ಲಿ ರಾಯ ಮತ್ತೊಮ್ಮೆ ರಾಮಕೃಷ್ಣನ ಹೆಂಡತಿಯ ಸೌಂದರ್ಯವನ್ನು ಹೊಗಳಿದನು.
ಶ್ರೀಕೃಷ್ಣ ದೇವರಾಯ : ರಾಮಕೃಷ್ಣ ನೀನು ನಿಜಕ್ಕೂ ಅದೃಷ್ಟಶಾಲಿ. ನಿನಗೆ ಅಪ್ಸರೆಯಂಥ ಹೆಂಡತಿ ಸಿಕ್ಕಿದ್ದಾಳೆ. ಆಕೆ ಅಪ್ರತಿಮ ಚೆಲುವೆಯಾಗಿದ್ದಾಳೆ.
(ಸೌಂದರ್ಯ ಪ್ರಿಯನಾಗಿದ್ದ ಶ್ರೀಕೃಷ್ಣ ದೇವರಾಯ ನಿರ್ಮಲ ಮನಸ್ಸಿನಿಂದ ಹೀಗೆ ಹೇಳಿದನು.)
ತೆನಾಲಿ ರಾಮಕೃಷ್ಣ : ಹೌದು ಮಹಾಪ್ರಭು, ಲೋಕರೂಢಿಯಾದ ಮಾತೊಂದಿದೆ.
ಶ್ರೀಕೃಷ್ಣ ದೇವರಾಯ : ಯಾವ ಮಾತದು ರಾಮಕೃಷ್ಣ?
ತೆನಾಲಿ ರಾಮಕೃಷ್ಣ : ಪ್ರಭು "ಪರರ ಹೆಂಡತಿ ಪರಮ ಸುಂದರಿ..." ಎಂಬ ಮಾತು ಜನಜನಿತವಾಗಿದೆ. ಅಲ್ಲದೆ "ಯೌವ್ವನದಲ್ಲಿ ಕತ್ತೆಯೂ ಸುಂದರ ಯುವತಿಯಂತೆ ಕಾಣುತ್ತದೆ..." ಎಂಬ ಗಾದೆಯು ಇದೆಯಲ್ಲವೇ ಪ್ರಭು...?
ಶ್ರೀಕೃಷ್ಣ ದೇವರಾಯ : ಆದರೂ ನೀನು ಅದೃಷ್ಟವಂತನೇ ಬಿಡು. ನಿನಗೆ ಅಪ್ಸರೆಯಂಥ ಹೆಂಡತಿ ಸಿಕ್ಕಿದ್ದಾಳೆ.
ತೆನಾಲಿ ರಾಮಕೃಷ್ಣ : ಹಾಗೇನಿಲ್ಲ ಪ್ರಭು, ನಾನು ಅವಳನ್ನು ಮದುವೆಯಾದ ಹೊಸತರಲ್ಲಿ ಅವಳಂಥ ಸುಂದರಿ ಈಡಿ ರಾಜ್ಯದಲ್ಲೇ ಯಾರು ಇಲ್ಲ ಎಂದುಕೊಂಡಿದ್ದೆ. ಆದರೆ ಅರಮನೆಯಲ್ಲಿ ನಿಮ್ಮ ಗುಜರಾತಿ ರಾಣಿಯನ್ನು ನೋಡಿದಾಗ ನನ್ನ ಲೆಕ್ಕಾಚಾರ ತಲೆಕೆಳಗಾಯಿತು. ಅವರ ಸೌಂದರ್ಯದ ಮುಂದೆ ನನ್ನವಳು ಯಾವ ಲೆಕ್ಕ? ಮಹಾರಾಣಿಯವರನ್ನು ಒಮ್ಮೆ ನೋಡಿದರೆ ಮತ್ತೆಮತ್ತೆ ನೋಡಬೇಕೆನಿಸುತ್ತದೆ ಅಲ್ಲವೇ ಮಹಾಪ್ರಭು?
ಶ್ರೀಕೃಷ್ಣ ದೇವರಾಯ : ಹೌದು ರಾಮಕೃಷ್ಣ. ನೀನು ಹೇಳುವ ಮಾತು ನೂರಕ್ಕೆ ನೂರು ಸತ್ಯವಾಗಿದೆ. ತನ್ನ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಸಹ ಪರರ ಹೆಂಡತಿಯೇ ಪರಮ ಸುಂದರಿಯಂತೆ ಕಾಣುತ್ತಾಳೆ...
ತಾನು ಹೇಳಿದ್ದನ್ನು ಮಹಾರಾಜರು ತಪ್ಪಾಗಿ ಭಾವಿಸಿ ಕೋಪಿಸಿಕೊಳ್ಳಬಹುದು ಎಂಬ ಭಯದಲ್ಲಿ ರಾಮಕೃಷ್ಣ ತೆಪ್ಪಗೆ ಅವರೊಡನೆ ಹೆಜ್ಜೆ ಹಾಕಿದನು. ಮಹಾರಾಣಿಯನ್ನು ಅತಿಯಾಗಿ ಹೊಗಳಿದ್ದು ಸರಿಯಲ್ಲವೆಂದು ರಾಮಕೃಷ್ಣನಿಗೆ ತಡವಾಗಿ ಅರಿವಾಯಿತು. ಇಬ್ಬರಿಗೂ ತಮ್ಮತಮ್ಮ ತಪ್ಪಿನ ಅರಿವಾಗಿತ್ತು. ಅದಕ್ಕಾಗಿ ಇಬ್ಬರು ಮನಸ್ಸೊಳಗೆ "ಪರರ ಹೆಂಡತಿ ಪರಮ ಸುಂದರಿ..." ಎಂಬ ಮಿಥ್ಯವನ್ನು ಒಪ್ಪಿಕೊಂಡು ಅರಮನೆ ಪ್ರವೇಶಿಸಿದರು. ಅವತ್ತಿನ ದಿನ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದೆ ಪೇಚಿಗೆ ಸಿಲುಕಿದರು. ಆದರೆ ಮರುದಿನ ಎಲ್ಲವೂ ಸರಿಯಾಗಿತ್ತು... "ಪರರ ಹೆಂಡತಿ ಪರಮ ಸುಂದರಿ..." ಎಂಬ ಅಭಿಪ್ರಾಯ ನಿಮ್ಮಲ್ಲಿದ್ದರೆ ಪ್ಲೀಸ್ ಇವತ್ತೇ ಅದನ್ನ ಕಿತ್ತಾಕಿ. ನೀವು ಪರರನ್ನು ಪವಿತ್ರ ದೃಷ್ಟಿಯಿಂದ ನೋಡಿದರೆ ಮಾತ್ರ ಪರರು ನಿಮ್ಮವರನ್ನು ಪವಿತ್ರ ದೃಷ್ಟಿಯಿಂದ ನೋಡುತ್ತಾರೆ... To be Continued...
7) ಶ್ರೀಕೃಷ್ಣ ದೇವರಾಯನ ಪರೀಕ್ಷೆ : Stories of Tenali Ramakrishna in Kannada
ವಿಕಟಕವಿ ತೆನಾಲಿ ರಾಮಕೃಷ್ಣ ತನ್ನ ಹಾಸ್ಯಪ್ರಜ್ಞೆಯಿಂದ ವಿಜಯನಗರದ ಮಹಾನ್ ಸಾಮ್ರಾಟ ಶ್ರೀಕೃಷ್ಣ ದೇವರಾಯನಿಗೆ ಅತ್ಯಂತ ಹತ್ತಿರವಾದನು. ರಾಯ ಪ್ರತಿಯೊಂದಕ್ಕು ಅವನ ಸಲಹೆ ಕೇಳುವಷ್ಟು ಅವನ ಸ್ನೇಹ ಪಸರಿಸಿತ್ತು. ರಾಮಕೃಷ್ಣನಿಲ್ಲನಿದ್ದರೆ ರಾಯನ ಮನ ನೀರಿನಿಂದ ಆಚೆ ಬಂದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿತ್ತು. ಆದರೆ ರಾಮಕೃಷ್ಣನಿಗೆ ರಾಯನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಒಂದು ಉಪಾಯವನ್ನು ಹೆಣೆದನು. ಒಂದಿನ ಬೇಕಂತಲೆ ಅರಮನೆಗೆ ತಡವಾಗಿ ಹೋದನು. ರಾಯ ಅವನಿಗಾಗಿ ಕಾಯುತ್ತಾ ಕುಳಿತ್ತಿದ್ದನು. ಅವನು ಹೋಗುತ್ತಿದ್ದಂತೆಯೇ ರಾಯ ಅವನಿಗೆ "ನಾನು ಕಾಯುತ್ತಿರುತ್ತೇನೆ ಎಂಬುದು ಗೊತ್ತಿದ್ದರೂ ಯಾಕೆ ತಡವಾಗಿ ಬಂದೆ?" ಎಂದು ಕೇಳಿದನು. ಅದಕ್ಕೆ ರಾಮಕೃಷ್ಣ "ಹಾಗೇನಿಲ್ಲ ಪ್ರಭು, ನಿಮ್ಮನ್ನು ಕಾಯಿಸಿ ಬೇಸರಿಸುವಂಥ ಉದ್ದೇಶ ಖಂಡಿತವಿಲ್ಲ ಪ್ರಭು" ಎಂದು ಸಮಜಾಯಿಸಿ ನೀಡಿದನು. ಆದರೆ ಅವನ ಸಮಜಾಯಿಸಿಗೆ ಸುಮ್ಮನಾಗದೆ ರಾಯ ಅವನಿಗೆ "ಏಕೆ ತಡವಾಗಿ ಬಂದೆ?" ಎಂದು ಮರುಪ್ರಶ್ನಿಸಿದನು. ಆಗ ರಾಮಕೃಷ್ಣ "ಏನಿಲ್ಲ ಪ್ರಭು, ಯಾವುದೋ ಕಾರಣಕ್ಕೆ ಇವತ್ತು ಮುಂಜಾನೆ ಪಂಚಾಂಗವನ್ನು ನೋಡುತ್ತಿದ್ದೆ. ನನ್ನ ಭವಿಷ್ಯವನ್ನು ನೋಡಬೇಕನಿಸಿತು. ಅದಕ್ಕಾಗಿ ಗ್ರಹಗತಿಗಳನ್ನು ತಾಳೆ ಮಾಡಿ ನೋಡಿದೆ. ನೋಡಿದ ನಂತರ ನನ್ನೆದೆ ಒಡೆದು ಹೋಯಿತು. ಏಕೆಂದರೆ ಎರಡು ವಕ್ರ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿವೆ. ನನ್ನ ಸಾವು ಸಮೀಪಿಸುತ್ತಿದೆ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಎಂದು ಚಿಂತಿಸುತ್ತಿದ್ದೆ. ಸಮಯ ಸರಿದಿದ್ದೆ ಗೊತ್ತಾಗಲಿಲ್ಲ. ಅದಕ್ಕೆ ತಡವಾಗಿ ಬಂದೆ..." ಎಂದೇಳಿ ಕೊಂಚ ದು:ಖದಲ್ಲಿ ಮುಳುಗಿರುವಂತೆ ನಾಟಕವಾಡಿದನು. ಅವನ ನಾಟಕವನ್ನು ನಿಜವೆಂದು ನಂಬಿ ಶ್ರೀಕೃಷ್ಣ ದೇವರಾಯ ಆಘಾತಕ್ಕೊಳಗಾದನು. ಅವನ ಕೋಪ ಕೆಲವೇ ಕ್ಷಣಗಳಲ್ಲಿ ಕರಗಿತು. ಅವನಿಗೆ ರಾಮಕೃಷ್ಣನ ಮೇಲೆ ಕನಿಕರ ಹುಟ್ಟಿತು. ಅದೇ ಭರದಲ್ಲಿ ರಾಯ ರಾಮಕೃಷ್ಣನಿಗೆ "ಸಾವು ಯಾರನ್ನು ಬಿಟ್ಟಿಲ್ಲ. ಒಂದು ವೇಳೆ ನಿನಗೇನಾದರೂ ಆದರೆ ನಿನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮದಾಗುತ್ತದೆ. ನೀನು ಈ ವಿಷಯದ ಬಗ್ಗೆ ಚಿಂತಿಸದಿರು..." ಎಂದೇಳಿ ತನ್ನ ಅಭಯ ಹಸ್ತವನ್ನು ಚಾಚಿದನು. ರಾಮಕೃಷ್ಣ ರಾಯನಿಗೆ ವಂದಿಸಿ, ಎಲ್ಲ ಕಾರ್ಯಕಲಾಪಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ಸಮಾಧಾನದಿಂದ ಮನೆಗೆ ತೆರಳಿದನು.
ಮಾರನೇ ದಿನ ಕಾಕತಾಳೀಯವೆಂಬಂತೆ ತೆನಾಲಿ ರಾಮಕೃಷ್ಣನಿಗೆ ಜ್ವರ ಬಂದಿತು. ಅವನ ಹೆಂಡತಿ ಕಷಾಯ ಮಾಡಿಕೊಟ್ಟು, ಅವನ ಆರೈಕೆ ಮಾಡಿದರೂ ಸಹ ಅವನ ಜ್ವರ ಕಡಿಮೆಯಾಗಲಿಲ್ಲ. ಅವನು ಹಾಸಿಗೆಗೆ ಅಂಟಿಕೊಂಡೇ ಇರಬೇಕಾಯಿತು. ಈ ವಿಷಯ ಶ್ರೀಕೃಷ್ಣ ದೇವರಾಯನಿಗೆ ತಲುಪಿತು. ಆತನಿಗೆ ನಿನ್ನೆ ರಾಮಕೃಷ್ಣ ಹೇಳಿದ್ದು ನಿಜವೆನಿಸಿತು. ಕೂಡಲೇ ರಾಯ ತನ್ನ ಆಸ್ಥಾನದ ರಾಜ ವೈದ್ಯರನ್ನು ರಾಮಕೃಷ್ಣನ ಚಿಕಿತ್ಸೆಗೆ ಕಳುಹಿಸಿ ಕೊಟ್ಟನು. ಆದರೆ ಅವರ ಚಿಕಿತ್ಸೆಯಿಂದ ರಾಮಕೃಷ್ಣನಿಗೆ ಸ್ವಲ್ಪವೂ ಗುಣವಾಗಲಿಲ್ಲ. ಸುಳ್ಳೇಳಿದರ ತಪ್ಪಿಗೆ ನಿಜವಾಗಿಯೂ ಜ್ವರ ಬಂದು ಹಾಸಿಗೆ ಹಿಡಿಯುವಂತಾಯಿತು. ಅವನ ಅನಾರೋಗ್ಯ ರಾಯನ ಅಸಮಾಧಾನಕ್ಕೆ ಕಾರಣವಾಯಿತು. ಹೀಗೆ ಎರಡ್ಮೂರು ದಿನ ಗತಿಸುವಷ್ಟರಲ್ಲಿ ತೆನಾಲಿ ರಾಮಕೃಷ್ಣ ಜ್ವರದಿಂದ ಬಳಲಿ ತೀರಿ ಹೋದನು ಎಂಬ ಸುದ್ದಿ ರಾಜಧಾನಿಯ ತುಂಬೆಲ್ಲ ಹರಡಿತು. ರಾಮಕೃಷ್ಣನ ಅಕಾಲ ಮರಣದ ಅಶುಭ ಸುದ್ದಿ ಕೇಳಿ ರಾಯನ ಜಂಘಾಬಲವೇ ಉಡುಗಿ ಹೋಯಿತು. ಅವನ ಅಗಲಿಕೆ ರಾಯನ ಆತ್ಮಸ್ಥೈರ್ಯವನ್ನು ನಲುಗಿಸಿತು.
ತೆನಾಲಿ ರಾಮಕೃಷ್ಣನ ಮರಣ ವಾರ್ತೆಯಿಂದ ರಾಯ ಶೋಕ ಸಾಗರದಲ್ಲಿ ಮುಳುಗಿದನು. ಅದರಿಂದ ಹೊರಬಂದ ನಂತರ ಅವನಿಗೆ ತನ್ನ ಕರ್ತವ್ಯ ಪ್ರಜ್ಞೆ ಅರಿವಾಯಿತು. ಕೂಡಲೇ ಆತ ರಾಜಭಟರನ್ನು ಕರೆಯಿಸಿ ತೆನಾಲಿ ರಾಮಕೃಷ್ಣನ ಮನೆಗೆ ಹೋಗಿ ಅವನ ಸಂಪೂರ್ಣ ಸಂಪತ್ತನ್ನು ಸಂಗ್ರಹಿಸಿಕೊಂಡು ತರಲು ಹೇಳಿ ಕಳುಹಿಸಿದನು. ರಾಜಾಜ್ಞೆಯಂತೆ ರಾಜಭಟರು ರಾಮಕೃಷ್ಣನ ಮನೆಗೆ ಹೋದರು. ಕತ್ತಲಲ್ಲಿ ಕಣ್ಣೀರಾಕುತ್ತಾ ಕುಳಿತ್ತಿದ್ದ ಅವನ ಹೆಂಡತಿಯನ್ನು ಸಂತೈಸಿ ತಾವು ಬಂದ ಕಾರಣವನ್ನು ತಿಳಿಸಿದರು. ಆಗ ಅವನ ಮಡದಿ ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಎರಡು ದೊಡ್ಡ ಪೆಟ್ಟಿಗೆಗಳನ್ನು ತೋರಿಸಿದಳು. ಅವುಗಳ ಮೇಲೆ ದೊಡ್ಡದಾಗಿ ಬಂಗಾರ, ವಜ್ರ ವೈಢೂರ್ಯವೆಂದು ಬರೆದಿತ್ತು. ಕೂಡಲೇ ರಾಜಭಟರು ಅವುಗಳನ್ನು ಹೊತ್ತುಕೊಂಡು ಹೋಗಿ ರಾಯನ ಮುಂದಿಟ್ಟರು. ರಾಯ ಕುತೂಹಲದಿಂದ ಅವುಗಳನ್ನು ತೆರೆಯುವಂತೆ ಹೇಳಿದನು. ರಾಜಭಟರು ಪೆಟ್ಟಿಗೆಯನ್ನು ತೆಗೆದಾಗ ಅದರಿಂದ "ಜೈ ಕಾಳಿ..." ಎನ್ನುತ್ತಾ ತೆನಾಲಿ ರಾಮಕೃಷ್ಣ ಹೊರಬಂದನು. ರಾಮಕೃಷ್ಣನನ್ನು ನೋಡಿ ರಾಯನಿಗೆ ತನ್ನ ಮೇಲೆ ನಾಚಿಕೆಯಾಯಿತು. ಆತ "ರಾಮಕೃಷ್ಣ ನಾನು ಈ ಪೆಟ್ಟಿಗೆಗಳನ್ನು ತರಿಸಿದ ಉದ್ದೇಶವೆಂದರೆ ನಿನ್ನ ಸಂಪತ್ತನ್ನು ರಕ್ಷಿಸಲು ಅಷ್ಟೇ..." ಎಂದನು. ಅದಕ್ಕಾತ ನಗುತ್ತಾ "ಮಹಾಪ್ರಭುಗಳೇ, ನನಗಾಗಲೇ ಗೊತ್ತಿತ್ತು. ನನ್ನ ಮರಣದ ನಂತರ ನನ್ನೆಲ್ಲ ಸಂಪತ್ತು ರಾಜ ಬೊಕ್ಕಸಕ್ಕೆ ಸೇರುವುದೆಂದು. ಅದಕ್ಕೆ ನಾನು ಈ ರೀತಿ ನಿಮ್ಮನ್ನು ಪರೀಕ್ಷಿಸಿದೆ..." ಎಂದನು. ರಾಯನಿಗೆ ರಾಮಕೃಷ್ಣನಿಟ್ಟ ಪರೀಕ್ಷೆಯಲ್ಲಿ ತಾನು ಸೋತೆ ಎಂಬುದು ಗೊತ್ತಾಯಿತು. ಅಲ್ಲದೆ ಕಾಳಿಮಾತೆಯ ಕೃಪೆಯಿಂದ ರಾಮಕೃಷ್ಣನ ಜ್ವರ ಕಡಿಮೆಯಾದದ್ದು ಸಹ ಗೊತ್ತಾಯಿತು. ಅದಕ್ಕಾಗಿ ಸೋತ ತಪ್ಪಿಗೆ ರಾಯ ರಾಮಕೃಷ್ಣನನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ರಾಜ ಮರ್ಯಾದೆಯೊಂದಿಗೆ ಅವನ ಸಂಪತ್ತನ್ನು ಅವನ ಮನೆಗೆ ಹಿಂತಿರುಗಿಸಿದನು... To be Continued...
8) ಕಾಶ್ಮೀರಿ ಪಂಡಿತನ ಗರ್ವಭಂಗ - ತೆನಾಲಿರಾಮನ ಹಾಸ್ಯ ಕಥೆಗಳು - Stories of Tenali Ramakrishna in Kannada
ಒಮ್ಮೆ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಯಾವುದೇ ಮುನ್ಸೂಚನೆ ನೀಡದೆ ಒಬ್ಬ ಕಾಶ್ಮೀರಿ ಪಂಡಿತ ಬಂದನು . ಆತ ಬಹುಭಾಷಾ ಪಂಡಿತರಾಗಿದ್ದನು. ಅವನಿಗೆ ಹಲವಾರು ಭಾಷೆಗಳು ಬರುತ್ತಿದ್ದವು. ಅವನು ವೇದಗಳನ್ನು ಓದಿಕೊಂಡಿದ್ದನು. ವಿದ್ವಾಂಸನು ಕೂಡ ಆಗಿದ್ದನು. ಅವನು ಎಷ್ಟೋ ಬಿರುದುಗಳನ್ನು ಸಹ ಬಾಚಿಕೊಂಡಿದ್ದನು. ಜೊತೆಗೆ ಅನೇಕ ಪ್ರಶಸ್ತಿ ಪತ್ರಿಕೆಗಳನ್ನು ಸಹ ಮುಡಿಗೇರಿಸಿಕೊಂಡಿದ್ದನು. ರಾಜ ಮಹಾರಾಜರು ಅವನನ್ನು ಸನ್ಮಾನಿಸಿ ಅವನ ಪ್ರಶಂಸೆ ಮಾಡಿದ್ದರು. ಇಂತಹ ಪಂಡಿತ ತಮ್ಮ ಸ್ಥಾನಕ್ಕೆ ಬಂದಿದ್ದರಿಂದ ಶ್ರೀ ಕೃಷ್ಣ ದೇವರಾಯನಿಗೆ ಸಹಜವಾಗಿ ಸಂತೋಷವಾಗಿತ್ತು.
ಆದರೆ ಆ ಪಂಡಿತನನ್ನು ವಾದದಲ್ಲಿ ಸೋಲಿಸುವ ವಿದ್ವಾಂಸ ತಮ್ಮ ಆಸ್ಥಾನದಲ್ಲಿ ಯಾರೂ ಇಲ್ಲ ಎಂಬುದು ದೊರೆಗೆ ದುಃಖದ ವಿಷಯವಾಗಿತ್ತು. ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಪಂಡಿತರು ಕೇವಲ ಹೊಗಳು ಭಟ್ಟರಾಗಿದ್ದರು. ವಿದ್ಯಾ ಮದದಲ್ಲಿ ಮುಳುಗಿದ್ದರು. ಅವರು ಅಪ್ರತಿಮ ಬುದ್ಧಿವಂತರಾಗಿದ್ದರೂ ಸಹ ಶ್ರೀಕೃಷ್ಣ ದೇವರಾಯನಿಗೆ ಅವರ ಮೇಲೆ ಭರವಸೆ ಇರಲಿಲ್ಲ. ಅದಕ್ಕಾಗಿ ಆತ ಚಿಂತಿತನಾದನು.
ಶ್ರೀಕೃಷ್ಣ ದೇವರಾಯ ಕಾಶ್ಮೀರಿ ಪಂಡಿತನನ್ನು ಸತ್ಕರಿಸಿ ಅವನೊಂದಿಗೆ ವಾದ ಮಾಡಲು ಒಂದು ದಿನವನ್ನು ನಿಗದಿಪಡಿಸಿದನು. ವಾದದ ದಿನ ಹತ್ತಿರ ಬರುತ್ತಿದ್ದಂತೆ ರಾಯನ ಆಸ್ಥಾನದ ವಿದ್ವಾಂಸರು ನಡುಗಿ ಹೋದರು. ತಾವೇನಾದರೂ ಕಾಶ್ಮೀರಿ ಪಂಡಿತನ ಎದುರು ವಾದದಲ್ಲಿ ಸೋತರೆ ಮರ್ಯಾದೆ ಹೋಗುವುದರೊಂದಿಗೆ ರಾಯನ ಕೋಪಕ್ಕೆ ಗುರಿಯಾಗಬೇಕಾದೀತು ಎಂಬುದು ವಿದ್ವಾಂಸರಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿ ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ತೆನಾಲಿ ರಾಮಕೃಷ್ಣನ ಬಳಿ ಹೋದರು. ವಿದ್ವಾಂಸರು ರಾಮಕೃಷ್ಣನ ಬಳಿ ಕಾಶಿ ಪಂಡಿತರ ಮೇಲೆ ತಮಗಿರುವ ಭಯವನ್ನು ವ್ಯಕ್ತಪಡಿಸಿದರು. ಅದಕ್ಕೆ ರಾಮಕೃಷ್ಣ ನಗುತ್ತಾ "ಆಸ್ಥಾನದ ಮರ್ಯಾದೆಯನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲೇಯೂ ಇದೆ. ನೀವು ನಿಶ್ಚಿಂತರಾಗಿರಿ..." ಎಂದು ಹೇಳಿದನು. ತೆನಾಲಿ ರಾಮಕೃಷ್ಣ ವಿದ್ವಾಂಸರಿಗೆ ಬಂದಿರುವ ಅಪಾಯವನ್ನು ಉಪಾಯದಿಂದ ಬಗೆಹರಿಸುವುದಾಗಿ ಭರವಸೆ ನೀಡಿ ಅವರನ್ನು ಬೀಳ್ಕೊಟನು.
ಶ್ರೀಕೃಷ್ಣ ದೇವರಾಯ ನಿಗದಿಪಡಿಸಿದ್ದ ವಾದದ ದಿನ ಬಂದೇ ಬಿಟ್ಟಿತು. ವಿದ್ವಾಂಸರೆಲ್ಲ ಮುಂದೇನಾಗುತ್ತೋ ಎಂಬ ಭಯದಲ್ಲಿ ನಡುಗುತ್ತಿದ್ದರು. ಆದರೆ ಕಾಶ್ಮೀರಿ ಪಂಡಿತ ಮಾತ್ರ ತಾನೇ ಸರ್ವಶ್ರೇಷ್ಠ, ಸರ್ವೋತ್ತಮ ,ಸರಸ್ವತಿ ಪುತ್ರ ಎಂಬಂತೆ ಬೀಗುತ್ತಿದ್ದನು. ಅಷ್ಟ ಮದದಲ್ಲಿ ವಿದ್ಯಾ ಮದವೂ ಒಂದು ಎಂಬ ಮಾತು ಅವನ ನಡವಳಿಕೆಯಿಂದ ಪದೇಪದೇ ಸಾಬಿತಾಗುತ್ತಿತ್ತು. ವಾದದ ದಿನ ಕಾಶ್ಮೀರಿ ಪಂಡಿತ ಜಗತ್ತನ್ನೇ ಗೆದ್ದಂತೆ ಬೀಗುತ್ತಾ ತನ್ನ ಶಿಷ್ಯರೊಂದಿಗೆ ಆಸ್ಥಾನಕ್ಕೆ ಪ್ರವೇಶಿಸಿದನು. ಅವನ ಅಹಂಕಾರದ ಹೆಜ್ಜೆಗಳಿಂದ ವಿದ್ವಾಂಸರ ಎದೆಯಲ್ಲಿ ಆಗಲೆ ನಡುಕ ಶುರುವಾಗಿತ್ತು. ಕಾಶ್ಮೀರಿ ಪಂಡಿತ ವಿದ್ವಾಂಸರೆಡೆಗೆ ತಾತ್ಸಾರದಿಂದ ನೋಡುತ್ತಾ ಶ್ರೀ ಕೃಷ್ಣ ದೇವರಾಯನಿಗೆ ವಂದಿಸಿ ತನ್ನ ಆಸನದಲ್ಲಿ ಕುಳಿತುಕೊಂಡನು. ಇನ್ನೇನು ವಾದ ಪ್ರಾರಂಭವಾಗಲು ಕೆಲವೇ ಕೆಲವು ಕ್ಷಣಗಳು ಬಾಕಿ ಇದ್ದವು. ಆದರೂ ತೆನಾಲಿ ರಾಮಕೃಷ್ಣ ಬರದೇ ಇರುವುದರಿಂದ ವಿದ್ವಾಂಸರಲ್ಲಿ ಮತ್ತಷ್ಟು ಭಯ ಹೆಚ್ಚಾಯಿತು. ಅಷ್ಟರಲ್ಲೇ ತೆನಾಲಿ ರಾಮಕೃಷ್ಣ ದೊಡ್ಡ ವಿದ್ವಾಂಸನಂತೆ ವೇಷಭೂಷಣವನ್ನು ಧರಿಸಿ ಬಾಡಿಗೆ ಶಿಷ್ಯಂದಿರೊಂದಿಗೆ ಒಂದು ದೊಡ್ಡ ಗ್ರಂಥವನ್ನು ಹೊತ್ತುಕೊಂಡು ಆಸ್ಥಾನಕ್ಕೆ ಬಂದನು. ರಾಮಕೃಷ್ಣನ ಈ ಗತ್ತನ್ನು ನೋಡಿ ಶ್ರೀ ಕೃಷ್ಣ ದೇವರಾಯನಿಗೆ ನಗು ತಡೆದುಕೊಳ್ಳಲಾಗದೇ ಆತ ಗಂಭೀರವಾಗಿರುವ ರೀತಿ ನಟಿಸಿದನು. ಆಸ್ಥಾನದಲ್ಲಿ ರಾಮಕೃಷ್ಣನನ್ನು ನೋಡಿ ವಿದ್ವಾಂಸರಿಗೆ ಹೋದ ಜೀವ ಬಂದಂತಾಯಿತು. ರಾಮಕೃಷ್ಣ ಕಾಶ್ಮೀರಿ ಪಂಡಿತನೆಡೆಗೆ ವಾರೆಗಣ್ಣಿನಿಂದ ನೋಡುತ್ತಾ ರಾಯನಿಗೆ ಮನಸ್ಪೂರ್ವಕವಾಗಿ ನಮಿಸಿ ತನಗೆಂದು ನಿಗದಿಪಡಿಸಿದ್ದ ಆಸನದಲ್ಲಿ ಕೂತನು.
ಕಾಶ್ಮೀರಿ ಪಂಡಿತ ತೆನಾಲಿ ರಾಮಕೃಷ್ಣನೆಡೆಗೆ ವಕ್ರ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದನು. ಅಷ್ಟರಲ್ಲಿ ಶ್ರೀಕೃಷ್ಣ ದೇವರಾಯ ವಾದ ಪ್ರಾರಂಭವಾಗಲಿ ಎಂದು ಆದೇಶಿಸಿದನು. ಮೊದಲು ರಾಮಕೃಷ್ಣ ಕಾಶ್ಮೀರಿ ಪಂಡಿತನಿಗೆ "ಯಾವ ಗ್ರಂಥದ ಕುರಿತಾಗಿ ವಾದಿಸೋಣ..?" ಎಂದು ಕೇಳಿದನು. ಆಗ ಆತ "ಮೊದಲು ನಿಮ್ಮಿಂದಲೇ ವಾದ ಪ್ರಾರಂಭವಾಗಲಿ..." ಎಂದನು. ಆಗ ರಾಮಕೃಷ್ಣ ನಸು ನಗುತ್ತಾ "ನಿಮ್ಮಂಥ ದೊಡ್ಡ ಪಂಡಿತರೊಡನೆ ವಾದಿಸಲು ದೊಡ್ಡ ಗ್ರಂಥವನ್ನೇ ತರಬೇಕಾಯಿತು" ಎಂದೆನ್ನುತ್ತಾ ಒಂದು ದೊಡ್ಡ ಗ್ರಂಥವನ್ನು ತಂದು ಅವರಿಬ್ಬರ ಮಧ್ಯೆ ಇಟ್ಟನು. ಅದನ್ನು ನೋಡಿ ಕಾಶ್ಮೀರಿ ಪಂಡಿತ ದಂಗಾಗಿ "ಇದು ಯಾವ ಗ್ರಂಥ...?" ಎಂದು ತೊದಲುತ್ತಾ ಕೇಳಿದನು. ಆಗ ರಾಮಕೃಷ್ಣ ಇದು ಮಹಾನ್ ಗ್ರಂಥ. ಇದರ ಹೆಸರು "ತಿಲಕಾಷ್ಟ ಮಹಿಷ ಬಂಧನ" ಎಂದು ಹೇಳಿದನು. ಈ ಗ್ರಂಥದ ಹೆಸರನ್ನು ಕೇಳಿ ಕಾಶ್ಮೀರಿ ಪಂಡಿತ ನಿಂತ ಜಾಗದಲ್ಲೇ ಚಳಿಯಲ್ಲಿಯೂ ಕೂಡ ಬೆವತನು. ಏಕೆಂದರೆ ಆತ ಈ ಮೊದಲು ಈ ಗ್ರಂಥದ ಹೆಸರೇ ಕೇಳಿರಲಿಲ್ಲ. ಅವನಿಗೆ ಈ ಗ್ರಂಥ ಹೊಸದೆನಿಸಿತು. ಅವನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅದಕ್ಕಾಗಿ ಆತ ಒಂದು ದಿವಸದ ಸಮಯಾವಕಾಶವನ್ನು ಕೇಳಿ ಸಭೆಯಿಂದ ಹೊರ ನಡೆದನು. ಸಪ್ಪೆ ಮೋರೆ ಹಾಕಿಕೊಂಡು ಹೊರ ಹೋಗುತ್ತಿರುವ ಕಾಶ್ಮೀರಿ ಪಂಡಿತನನ್ನು ನೋಡಿ ರಾಮಕೃಷ್ಣ ಮನದಲ್ಲೇ ನಗಲು ಪ್ರಾರಂಭಿಸಿದನು. ಶ್ರೀಕೃಷ್ಣ ದೇವರಾಯನಿಗೆ ರಾಮಕೃಷ್ಣನ ಕರಾಮತ್ತು ಅರ್ಥವಾಯಿತು. ಕಾಶ್ಮೀರಿ ಪಂಡಿತ ತಾನು ತಂಗಿದ್ದ ಪ್ರವಾಸಿ ಸ್ಥಾನಕ್ಕೆ ತಲುಪಿ 'ತಿಲಕಾಷ್ಟ ಮಹಿಷ ಬಂಧನ' ಪುಸ್ತಕವನ್ನು ಹುಡುಕತೊದಡಗಿದನು. ರಾತ್ರಿಯೆಲ್ಲಾ ಹುಡುಕಿದರೂ ಅವನಿಗೆ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥ ಎಲ್ಲಿಯೂ ಸಿಗಲಿಲ್ಲ . ಕಾಶ್ಮೀರಿ ಪಂಡಿತನಿಗೆ ಈಗ ಏನು ಮಾಡುವುದು ಎಂಬುದು ತೋಚಲಿಲ್ಲ. ಹೀಗೆ ನಾಳೆ ರಾಜ್ಯಸಭೆಗೆ ಹೋಗಿ ರಾಮಕೃಷ್ಣನೊಂದಿಗೆ ವಾದಿಸಲು ಕುಳಿತರೆ ತನ್ನ ಮಾನ ಮರ್ಯಾದೆ ಹೋಗಬಹುದೆಂದು ಆತ ಮುಂಜಾನೆಯಾಗುವ ಮೊದಲೆ ಅಲ್ಲಿಂದ ಪರಾರಿಯಾದನು.
ಮಾರನೆ ದಿನ ಶ್ರೀಕೃಷ್ಣ ದೇವರಾಯನ ಸಹಿತ ಎಲ್ಲ ಆಸ್ಥಾನಿಕರು ಕಾಶ್ಮೀರಿ ಪಂಡಿತ ಮತ್ತು ತೆನಾಲಿ ರಾಮಕೃಷ್ಣರ ವಾದವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ತೆನಾಲಿ ರಾಮಕೃಷ್ಣ ಸರಿಯಾದ ಸಮಯಕ್ಕೆ ಆಸ್ಥಾನಕ್ಕೆ ಹಾಜರಾದನು. ಆದರೆ ಕಾಶ್ಮೀರಿ ಪಂಡಿತ ಸಮಯ ಮೀರಿ ಹೋದರೂ ಆಸ್ಥಾನಕ್ಕೆ ಹಾಜರಾಗಲೇ ಇಲ್ಲ. ಏಕೆಂದರೆ ಮುಂಜಾನೆಯೇ ಆತ ಹೇಳದೆ ಕೇಳದೆ ಪರಾರಿಯಾಗಿದ್ದನು. ರಾಮಕೃಷ್ಣನ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥಕ್ಕೆ ಹೆದರಿ ಕಾಶ್ಮೀರಿ ಪಂಡಿತ ರಾತ್ರೋರಾತ್ರಿ ಹೇಳದೆ ಕೇಳದೆ ಪರಾರಿಯಾಗಿದ್ದು ಗುಪ್ತಚರರಿಂದ ಶ್ರೀ ಕೃಷ್ಣ ದೇವರಾಯನಿಗೆ ತಲುಪಿತು. ಕಾಶ್ಮೀರಿ ಪಂಡಿತ ರಾತ್ರೋರಾತ್ರಿ ರಾಮಕೃಷ್ಣನ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥಕ್ಕೆ ಹೆದರಿ ಓಡಿ ಹೋಗಿದ್ದಾನೆ ಎಂಬುದು ತಿಳಿದ ನಂತರ ಆಸ್ಥಾನಿಕರೆಲ್ಲ ಆಶ್ಚರ್ಯಕ್ಕೆ ಒಳಗಾದರು. ಎಲ್ಲರಿಗೂ ರಾಮಕೃಷ್ಣ ತಂದ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥದಲ್ಲಿ ಏನಿದೆ ಎಂಬ ಕುತೂಹಲ ಹೆಚ್ಚಾಯಿತು. ಕುತೂಹಲ ತಾಳಲಾರದೆ ಶ್ರೀಕೃಷ್ಣ ದೇವರಾಯ "ಆ ಗ್ರಂಥದಲ್ಲಿ ಅಂಥದ್ದೇನಿದೆ?" ಎಂದು ರಾಮಕೃಷ್ಣನಿಗೆ ಕೇಳಿದನು. ಆಗ ಆತ ನಗುತ್ತಾ "ಮಹಾಪ್ರಭು ಈ ಗ್ರಂಥವನ್ನು ನೀವೇ ಮೊದಲು ತೆರೆದು ಓದಬೇಕಾಗಿ ವಿನಂತಿ" ಎಂದು ಹೇಳುತ್ತಾ ಅದನ್ನ ಅವನ ಕೈಗಿಟ್ಟನು. ರಾಯ ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಅದರಲ್ಲಿ ಗ್ರಂಥವಿರಲಿಲ್ಲ. ನಾಲ್ಕಾರು ಎಳ್ಳಿನ ಕಟ್ಟಿಗೆಗಳು ದನಕ್ಕೆ ಹಗ್ಗದಿಂದ ಕಟ್ಟಲ್ಪಟ್ಟಿದ್ದವು ಅಷ್ಟೇ. ರಾಯ ಅವನಿಗೆ "ಏನಿದು...?" ಎಂದು ಕೇಳಿದನು. ಆಗ ರಾಮಕೃಷ್ಣ ನಗುತ್ತಾ "ಪ್ರಭು ಇದೇ 'ತಿಲಕಾಷ್ಟ ಮಹಿಷ ಬಂಧನ' ಮಹಾಗ್ರಂಥ" ಎಂದನು. ರಾಯನಿಗೆ ಸಹಜವಾಗಿ ಇದು ಅರ್ಥವಾಗಲಿಲ್ಲ. ಆಗ ರಾಮಕೃಷ್ಣ "ಪ್ರಭು ತಿಲಕಾಷ್ಟ ಎಂದರೆ ಎಳ್ಳಿನ ಕಟ್ಟಿಗೆಗಳು, ಮಹಿಷ ಬಂಧನ ಎಂದರೆ ದನಕ್ಕೆ ಕಟ್ಟುವ ಹಗ್ಗ, ಎರಡೂ ಸೇರಿದಾಗ 'ತಿಲಕಾಷ್ಟ ಮಹಿಷ ಬಂಧನ' ಎಂದು ಹೇಳುತ್ತಾ ಮತ್ತೆ ಜೋರಾಗಿ ನಕ್ಕನು. ಎಲ್ಲರಿಗೂ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥದ ನಿಜವಾದ ಮಹಿಮೆ ಅರ್ಥವಾಯಿತು ಎಲ್ಲರು ಜೋರಾಗಿ ನಗಲು ಪ್ರಾರಂಭಿಸಿದರು. ಕಾಶ್ಮೀರಿ ಪಂಡಿತ ತಂದಿಟ್ಟ ಅಪಾಯದಿಂದ ಪಾರಾದೆವಲ್ಲ ಎಂದು ಆಸ್ಥಾನದ ವಿದ್ವಾಂಸರೆಲ್ಲ ನಿಟ್ಟುಸಿರು ಬಿಟ್ಟರು. ವಿಜಯನಗರದ ಮಾನ ಮರ್ಯಾದೆಯನ್ನು ಕಾಪಾಡಿದ್ದಕ್ಕಾಗಿ ತೆನಾಲಿ ರಾಮಕೃಷ್ಣನಿಗೆ ಶ್ರೀಕೃಷ್ಣ ದೇವರಾಯ ಪ್ರಶಂಸಿಸಿದನು. ಜೊತೆಗೆ ಬಹುಮಾನ ಕೊಟ್ಟು ಸತ್ಕರಿಸಿದನು. ಈ ರೀತಿ ತೆನಾಲಿ ರಾಮಕೃಷ್ಣ ತನ್ನ ಜಾಣ್ಮೆಯಿಂದ ಕಾಶ್ಮೀರಿ ಪಂಡಿತನ ಗರ್ವಭಂಗ ಮಾಡಿ ಅವನನ್ನು ಓಡಿಸಿ ವಿಜಯನಗರ ಸಾಮ್ರಾಜ್ಯದ ಘನತೆಯನ್ನು ಎತ್ತಿ ಹಿಡಿದನು... To be Continued...
9) ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada
ಶ್ರೀಕೃಷ್ಣ ದೇವರಾಯನ ಉತ್ತಮ ಆಡಳಿತದಿಂದಾಗಿ ವಿಜಯನಗರ ಸಾಮ್ರಾಜ್ಯ ಸಿರಿವಂತಿಕೆಯ ಉತ್ತುಂಗಕ್ಕೆ ತಲುಪಿತು. ರಾಜಧಾನಿ ಹಂಪಿಯಲ್ಲಿ ಸುವರ್ಣಯುಗ ನಿರ್ಮಾಣವಾಯಿತು. ಜನರೆಲ್ಲ ಷೇರುಗಳಲ್ಲಿ ಮುತ್ತು ರತ್ನಗಳನ್ನು ಮಾರುವಷ್ಟು ಶ್ರೀಮಂತರಾದರು. ಜೊತೆಗೆ ಆಸ್ಥಾನದಲ್ಲಿದ್ದ ವಿದ್ವಾಂಸರ ಬುದ್ಧಿಮತ್ತೆಯಿಂದಾಗಿ ವಿಜಯನಗರ ಸಾಮ್ರಾಜ್ಯದ ಕೀರ್ತಿ ಎಲ್ಲೆಡೆಗೆ ಹಬ್ಬಲು ಶುರುವಾಯಿತು. ಒಂದಿನ ಶ್ರೀ ಕೃಷ್ಣ ದೇವರಾಯನಿಗೆ ತನ್ನ ಆಸ್ಥಾನದಲ್ಲಿರುವ ವಿದ್ವಾಂಸರೆಲ್ಲರನ್ನು ಪರೀಕ್ಷಿಸುವ ಆಸೆಯಾಯ್ತು. ಅದಕ್ಕಾಗಿ ಆತ ಒಂದು ಸಭೆಯನ್ನು ಏರ್ಪಡಿಸಿದನು. ರಾಜಾಜ್ಞೆ ಮೇರೆಗೆ ಎಲ್ಲ ವಿದ್ವಾಂಸರು ಸಭೆಗೆ ಹಾಜರಾದರು. ಆಗ ಶ್ರೀಕೃಷ್ಣ ದೇವರಾಯ ಎಲ್ಲರ ಬುದ್ಧಿಮತ್ತೆ ಪರಿಕ್ಷೆಗಾಗಿ ಒಂದು ಪ್ರಶ್ನೆಯನ್ನು ಹಾಕಿದನು. "ವಿದ್ವಾಂಸರೇ ಕ್ಷತ್ರಿಯ ವೈಶ್ಯ ಹಾಗೂ ಶೂದ್ರರಿಗೆ ಬ್ರಾಹ್ಮಣರು ಪೂಜ್ಯರಾಗಿರುವಂತೆ ಬ್ರಾಹ್ಮಣರಿಗೆ ಪೂಜ್ಯವಾದದ್ದು ಯಾವುದು?" ಎಂಬ ಪ್ರಶ್ನೆಯನ್ನು ಶ್ರೀಕೃಷ್ಣ ದೇವರಾಯ ಕೇಳಿದನು. ಆಗ ವಿದ್ವಾಂಸರೆಲ್ಲರೂ ತಮ್ಮ ತಮ್ಮಲ್ಲೇ ಚರ್ಚಿಸತೊಡಗಿದರು. ಅವರ ಚರ್ಚೆಯಾದ ನಂತರ ಅವರೆಲ್ಲರು ಒಕ್ಕೊರಲಿನಿಂದ "ಮಹಾಪ್ರಭು ಗೋವು ಬ್ರಾಹ್ಮಣರಿಗೆ ಪೂಜ್ಯವಾದದ್ದು" ಎಂದು ಉತ್ತರಿಸಿದರು. ಆದರೆ ತೆನಾಲಿ ರಾಮಕೃಷ್ಣ ಏನನ್ನು ಉತ್ತರಿಸದೆ ಸುಮ್ಮನಿದ್ದನು. ಅವನನ್ನು ಗಮನಿಸಿದ ಶ್ರೀಕೃಷ್ಣ ದೇವರಾಯ "ಯಾಕೆ ರಾಮಕೃಷ್ಣ ನೀನೇನು ಉತ್ತರಿಸುವುದಿಲ್ಲವೇ..?" ಎಂದು ಪ್ರಶ್ನಿಸಿದನು. ಆಗ ರಾಮಕೃಷ್ಣ "ಮಹಾಪ್ರಭು ವಿದ್ವಾಂಸರು ಹೇಳಿದ್ದು ಸರಿಯಾಗಿದೆ. ಗೋವು ಎಲ್ಲರಿಂದಲೂ ಪೂಜಿಸಿಕೊಳ್ಳುತ್ತದೆ. ಮಾನವರಷ್ಟೆ ಅಲ್ಲದೇ ದೇವತೆಗಳು ಸಹ ಗೋವನ್ನು ಪೂಜಿಸುತ್ತಾರೆ" ಎಂದೇಳಿ ಸುಮ್ಮನಾದನು.
ಶ್ರೀಕೃಷ್ಣ ದೇವರಾಯನಿಗೆ ವಿದ್ವಾಂಸರನ್ನು ಮತ್ತಷ್ಟು ಪರೀಕ್ಷಿಸುವ ಮನಸ್ಸಾಯಿತು. ಅದಕ್ಕಾಗಿ ಆತ "ಹಾಗೋ ಸರಿ, ಎಲ್ಲರಿಂದಲೂ ಪೂಜಿಸಿಕೊಳ್ಳುವ ಪರಮ ಶ್ರೇಷ್ಟ ಗೋವಿನ ಚರ್ಮದ ಪಾದರಕ್ಷೆಗಳನ್ನು ಬ್ರಾಹ್ಮಣರೇಕೆ ತೊಡುವರು?" ಎಂಬ ಪ್ರಶ್ನೆಯನ್ನು ವಿದ್ವಾಂಸರ ಮುಂದಿಟ್ಟನು. ರಾಯ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ವಿದ್ವಾಂಸರೆಲ್ಲ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳತೊಡಗಿದರು. ಉತ್ತರ ಹೊಳೆಯದೆ ತೆಪ್ಪಗಿದ್ದುಬಿಟ್ಟರು. ಆಗ ರಾಯ ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದೆಂದು ಘೋಷಿಸಿದನು. ಆಗ ತೆನಾಲಿ ರಾಮಕೃಷ್ಣ "ಪ್ರಭು, ಬ್ರಾಹ್ಮಣರ ಪಾದಗಳೆಂದರೆ ಪುಣ್ಯಕ್ಷೇತ್ರಗಳಿದ್ದಂತೆ. ಸತ್ತ ಗೋವಿಗೆ ಮೋಕ್ಷ ಕೊಡಿಸುವುದಕ್ಕಾಗಿ ಬ್ರಾಹ್ಮಣರು ಆಕಳ ಚರ್ಮದ ಪಾದರಕ್ಷೆಗಳನ್ನು ಮೆಟ್ಟುತ್ತಾರೆ " ಎಂದೇಳಿದನು. ಅವನ ಉತ್ತರ ಸರಿಯಾಗಿತ್ತು. ಅವನ ಜಾಣ್ಮೆಗೆ ಶ್ರೀಕೃಷ್ಣ ದೇವರಾಯ ತಲೆದೂಗಿದನು. ಜೊತೆಗೆ ಸೂಕ್ತ ಬಹುಮಾನವನ್ನು ನೀಡಿ ಅವನನ್ನು ಸತ್ಕರಿಸಿದನು... The End...